HomeUncategorizedಇರುವೆ ದಾರಿ

ಇರುವೆ ದಾರಿ

- Advertisement -
- Advertisement -

ಡಾ.ವಿನಯಾ ಒಕ್ಕುಂದ |

ಒಂದೆರಡು ವರ್ಷಗಳ ಹಿಂದಿನ ಮಾತು. ನಮ್ಮೂರಿಗೆ ಹೋದಾಗ ಅಚ್ಚರಿ ಕಾದಿತ್ತು. ಯಾವತ್ತೂ ಮಠಗಳನ್ನು, ಮಠಾಧೀಶರನ್ನು ನೆಚ್ಚದ, ‘ಗುರುವಿಲ್ಲದ ಜಾತಿಯ ಜನ’ರು ಚರಿತ್ರೆಯಲ್ಲಿ ನಡೆದು ಬಂದ ಧಾರ್ಮಿಕ ಸ್ಥಿತ್ಯಂತರಗಳಿಗೆ ಒಡ್ಡಿಕೊಳ್ಳುತ್ತ ಮೀನು ತಿನ್ನುವುದನ್ನು ಬಿಡಲಾಗದೆ ಜಾತಿಯನ್ನೇ ಬಿಡುತ್ತ ಬಂದವರು- ಈಗ ತಂತಮ್ಮ ಮನೆಗಳಲ್ಲಿ ಗೋಕರ್ಣದ ಸ್ವಾಮಿಯ ಫೋಟೋವನ್ನು ಹಾಕಿಕೊಂಡಿದ್ದರು. ಶಾಸ್ತ್ರೋಕ್ತವಾದ ದೀಕ್ಷೆ ಇತ್ಯಾದಿ ನಡೆದಿರಲಿಲ್ಲ ಅಷ್ಟೇ. ಅದೇ ಆಗ ಸ್ವಾಮಿಯ ಮೇಲೆ ರಾಮಕಥಾ ಗಾಯಕಿಯ ಕೇಸ್ ಫೈಲ್ ಆಗಿತ್ತು. ಮಧ್ಯಾಹ್ನ ಮನೆಯ ಜಗಲಿಯಲ್ಲಿ ಸೇರಿದ್ದ ಸೋದರತ್ತೆಯಂದಿರು, ಅಮ್ಮ, ದೊಡ್ಡಮ್ಮ, ಅಕ್ಕಂದಿರು… ಹೀಗೆ ಜೀವಸಂಬಂಧದ ಸಂತೆಯಲ್ಲಿ ಆ ಅತ್ಯಾಚಾರದ ವಿಷಯವನ್ನು ಮಾತಿಗಿಟ್ಟೆ. ‘ಹಾಳಾಗ್ಲಿ ತಂಗಿ, ನೀ ಇರೂದೇ ಒಂದ್ ದಿನ. ನಿಂದೂ ನಮ್ದೂ ಸುದ್ದಿ ಮಾತಾಡಕೊಳ್ವಾ. ಊರ ಉಸಾಬರಿ ನಮಗೆಂತಕೆ’ ಅಂತ, ಕನ್ನಡ ಶಾಲೆ ನಿವೃತ್ತ ಶಿಕ್ಷಕಿಯಾಗಿದ್ದ ನನ್ನ ಅತ್ತೆ, ವಿಷಯವನ್ನೇ ಒತ್ತುವರಿ ಮಾಡಲು ನೋಡಿದ್ದರು. ನಾನೂ ಹಾಗೆ ಬಡಪೆಟ್ಟಿಗೆ ವಿಷಯವನ್ನು ಸಡಿಲ ಬಿಡುವವಳಾಗಿರಲಿಲ್ಲ. ಅಷ್ಟೊತ್ತಿಗೆ ಅಲ್ಲಿಗೆ ಬಂದ ನನ್ನ ತಂದೆ ಅಂಗಳದ ಆರಾಮ ಕುರ್ಚಿಯ ಮೇಲೆ ಕೂಡುತ್ತ, “ಅಯ್ಯೋ, ಇವ್ರದೇನ್ ಕೇಳ್ತಿ. ಆ ಸ್ವಾಮಿ ಇವ್ರದೆಲ್ಲ ಅಡ್ರೆಸ್ ತಕಂಡ ಮಠದಲ್ಲಿ ಅದೂ ಇದೂ ಕಾರ್ಯಕ್ರಮ ಅಂತ ಪತ್ರ-ಫೋನು ಮಾಡ್ಸೂದು ಸಾಕ, ಇವ್ರೆಲ್ಲ ನೆಂಟರ ಮನಿಗೆ ಹೋದ್ಹಾಂಗೆ ಸಿಂಗಾರಾಕಂಡ ಹೋಗೂದೂ ಸಾಕ್. ಶಿವರಾತ್ರಿ ನಾಟಕ ನೋಡೂಕೆ ಹೋಗೂ ಉಮೇದಿಗಿಂತ ಹೆಚ್ಚೇ ಆಗೀದ ಥೊ…” ಅಂತ ತಮ್ಮೊಳಗಿನ ಅಸಮಾಧಾನವನ್ನು ಹೊರಹಾಕಿದ್ದರು. ನಿವೃತ್ತಿಯ ದಿನಗಳನ್ನು ಕಳೆಯುತ್ತಿದ್ದ ಈ ಸುಶಿಕ್ಷಿತ ಹೆಂಗಸರ ವಿರಾಮವನ್ನು ಸ್ವಾಮಿಯೋ, ಸ್ವಾಮಿಯ ಸುಪರ್ದಿಯಲ್ಲಿರೋ ಮಠವೋ ಚೆನ್ನಾಗಿ ಬಳಕೆ ಮಾಡಿಕೊಳ್ಳುತ್ತಿದ್ದುದು ತಿಳಿಯಿತು. ಅತ್ಯಾಚಾರದ ಪ್ರಕರಣದ ಬಗ್ಗೆ ಘನಘೋರ ಚರ್ಚೆಗಳೆಲ್ಲ ಮುಕ್ತಾಯದ ಹಂತಕ್ಕೆ ಬರುತ್ತಿದ್ದಂತೆಯೇ ನನ್ನ ಅತ್ತೆ- “ತಂಗಿ, ನಿಮ್ಮಮ್ಮನೇ ಮಠಕೆ ಕಾಯಚೀಲಾ ತುಂಬ್ ತುಂಬ್ ಸಾಗ್ಸೀದ. ನಾ ಕೊಡಲಿಲ್ಲಪ್ಪ” ಎಂದು ತನ್ನ ಜಾಣತನ ಹೇಳಿಕೊಂಡಳು. ‘ನಾ ಬ್ಯಾಡಂದ್ರೂ ಕೇಳುವವರ್ಯಾರ್ ನನ್ ಮಾತ್ನ?” ಅಂತ ಅಪ್ಪನೂ ದನಿಗೂಡಿಸಿಯಾಯಿತು. “ನಮಗೇನ್ ಗೊತ್ತಪಾ- ಸ್ವಾಮಿ ಗನಾಂವಾ ಅಂದ್ಕಂಡೇ ಇದ್ದವ್ರ ನಾವ್. ಹಾಳಾಗ್ಲಪ ಅದೇನೋ ಅಂತರಲ್ಲ ಯಾವ ಹುತ್ತದಲ್ಲಿ ಯಾವ ಹಾವೋ..?” ಅಂತ ದೊಡ್ಡತ್ತೆ ವಿಷಯ ಬರಕಾಸ್ತುಗೊಳಿಸಿದಾಗ ಹೊತ್ತು ಕಂತುತ್ತಿತ್ತು. ಮುಂದಿನ 5-6 ತಿಂಗಳ ನಂತರ ಊರಿಗೆ ಹೋದಾಗ ಯಾವ ಸಂಬಂಧಿಕರ ಮನೆಯಲ್ಲೂ ಸ್ವಾಮಿಯ ಫೋಟೊ ಕಾಣಲಿಲ್ಲ. ಕಾಯಿ ಸಪ್ಲೈ ಆಗುವುದೂ ನಿಂತಿತ್ತು. ಮತ್ತೆ ಇವರ್ಯಾರೂ ತಂಡತಂಡವಾಗಿ ಮಠಕ್ಕೆ ಹೋಗಿ ಬಂದಿರಲಿಲ್ಲ. ಆದರೆ, ಮೀನು ತಿನ್ನುವ ಜಾತಿಯ ಜನ ಎಂಬ ಬ್ರಾಹ್ಮಣರ ಹೀಯಾಳಿಕೆ ಸಹಿಸಿ ಸಹಿಸಿ ಸಾಕಾಗಿದ್ದವರೀಗ ಸಾಂಸ್ಕøತಿಕವಾಗಿ ಮೇಲ್ದರ್ಜೆಗೇರುತ್ತಿದ್ದೇವೆ ಎಂಬ ಖುಷಿಯಲ್ಲಿದ್ದರು. ಆ ಖುಷಿಗೆ ಧೋಕಾ ಆಗಿತ್ತು. ಈ ಹೀಗವರು ಮಠದ ಸಂಬಂಧ ಕಡಿದುಕೊಳ್ಳಲು ಕಾರಣ, ಸ್ವಾಮೀಜಿಯ ಮೇಲಿನ ಆರೋಪದ ಚರ್ಚೆ ಚಾಲ್ತಿಯಲ್ಲಿದ್ದುದೂ ಇರಬಹುದು. ಆದರೆ ಆ ಸಂಜೆಯ ಮನೆ ಜಗುಲಿಯ ಮಾತುಕತೆಯ ಪರಿಣಾಮವೂ ಪ್ರಭಾವ ಬೀರಿತ್ತು ಎನ್ನುವುದರಲ್ಲಿ ಸಂಶಯವಿರಲಿಲ್ಲ.
ಈ ಘಟನೆ, ನನ್ನೊಳಗೂ ಸಣ್ಣ ಕದಲುವಿಕೆಗೆ ಕಾರಣವಾಗಿತ್ತು. ನಾವುಗಳು, ನಮ್ಮ ಸಮುದಾಯಗಳೊಂದಿಗೆ ಬೆರೆತಿಲ್ಲವೇಕೆ ಎಂಬ ಪ್ರಶ್ನೆ ಎದುರಾಯಿತು. ಈ ಜಗತ್ತನ್ನು ಪ್ರಜ್ಞಾಪೂರ್ವಕವಾಗಿ ಗ್ರಹಿಸಲು ಪ್ರಾರಂಭಿಸಿದ್ದ 90ರ ದಶಕದ ಆರಂಭದಲ್ಲಿ ಬಂಡಾಯ ಸಾಹಿತ್ಯ ತನ್ನ ಏರುಗಚ್ಚನ್ನು ದಾಟಿ ಅಂತರಂಗೀಕರಣಗೊಳ್ಳುತ್ತಿತ್ತು. ನೆಲದೊಳಗಿನ ಹರಿವು ನಡೆವ ಪಾದಗಳಿಗೆ ತಟ್ಟುವಷ್ಟು ರಭಸವಾಗೇ ಇತ್ತು. ಬಂಡಾಯ ಸಾಹಿತಿಗಳು ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೇ ಬೇಡವೇ ಎಂಬ ಚರ್ಚೆ ತಾರ್ಕಿಕ ಅಂತ್ಯವನ್ನು ಕಂಡಿತ್ತು. ‘ಎಲ್ಲೇ ನಿಂತರೂ ನಾವು ನಮ್ಮ ಮಾತನಾಡುವವರು… ಮಾತುಗಳು ನಮ್ಮೊಳಗೇ ಉಳಿದುಬಿಟ್ಟರೆ ಸಮುದಾಯವನ್ನು ತಲುಪುವುದು ಹೇಗೆ?’ ಎಂಬ ಚರ್ಚೆಯದು. ಆದರೆ, ಜಾತಿಯ ಸಂಘಟನೆಗಳಲ್ಲಿ ಭಾಗವಹಿಸುವುದು, ಪೂಜೆ-ಪುನಸ್ಕಾರಗಳನ್ನು ನಡೆಸುವುದು, ಜನರ ನಂಬಿಕೆಯ ಲೋಕವನ್ನು ಅಧ್ಯಯನದ ಆಸಕ್ತಿಯಿಂದಲಾದರೂ ಪ್ರವೇಶಿಸುವುದು ಒಪ್ಪಿತವಾಗಿರಲಿಲ್ಲ. ಆದರೆ ಆ ದಶಕದಲ್ಲಿಯೇ ದೇಶ, ಕೋಮುವಾದದಿಂದ ಸುಟ್ಟುರಿದಾಗ ಪ್ರಗತಿಪರ ಚಿಂತನೆ ದಿಗ್ಭ್ರಮೆಗೆ ಒಳಗಾಯಿತು. ಜನಮಾನಸವನ್ನೇ ಕೋಮುವಾದೀಕರಣಕ್ಕೆ ಒಳಗು ಮಾಡಿರುವ ನೀಚತನವನ್ನು ಎದುರಾಗುವುದು ಅನಿವಾರ್ಯವಾಯಿತು. ಈ ಶೋಧನೆಯಲ್ಲಿ ಗೋಚರವಾದ ಕಾರಣಗಳಲ್ಲಿ, ಪ್ರಗತಿಪರರ ಬೌದ್ಧಿಕ ಮಡಿವಂತಿಕೆಯೂ ಒಂದಾಗಿತ್ತು. ನಾವು ಜನರ ಎದುರು ನಿಂತೆವು. ಆವರಿಂದ ಪಡೆದದ್ದನ್ನು ಅವರೊಂದಿಗಿದ್ದು ಅನುಸಂಧಾನಿಸಲಿಲ್ಲ. ಒಳಗಿನವರಾಗಲು ಸೋತೆವು- ಎನ್ನುವುದು ಸ್ಪಷ್ಟವಾಗಿತ್ತು. ಜನಪದರನ್ನು ತಲುಪುವ ಬಗೆಯನ್ನು ಆತ್ಮಾವಲೋಕನ ಮಾಡಿಕೊಳ್ಳುವ ಜರೂರು ಎದುರಾಯಿತು.
Image result for gokarnaಇದೇ ಸಂದರ್ಭದಲ್ಲಿ, ಬಂಡವಾಳವಾದ ಕೋಮುವಾದಗಳ ಜುಗಲ್‍ಬಂದಿಯು ಸಾಂಸ್ಕøತಿಕ ವಲಯವನ್ನು ಗುತ್ತಿಗೆ ತೆಗೆದುಕೊಂಡು ತನ್ನ ಮಾಲೀಕತ್ವವನ್ನು ಹಾಜರುಪಡಿಸತೊಡಗಿತು. ಆಗ ಮತ್ತೆ, ಭಾಗವಹಿಸುವಿಕೆಯ ಪ್ರಶ್ನೆ ಮುನ್ನೆಲೆಗೆ ಬಂದಿತು. ಇಂತಹ ಸಂಘಟನೆಗಳು ‘ಎಲ್ಲರನ್ನೂ ಒಳಗೊಳ್ಳುವ’ ರಾಜಕೀಯದ ಮೂಲಕ ತನ್ನ ಚಹರೆಯನ್ನು ಪ್ರಖರವಾಗಿಸಿಕೊಳ್ಳುತ್ತವೆ ಎಂಬ ಆರೋಪ-ಪ್ರತ್ಯಾರೋಪಗಳು ಕೇಳಿದವು. ಆದರೆ ಕನ್ನಡ ಬರವಣಿಗೆ, ಚಿಂತನೆಗಳು ಜನಸಮುದಾಯದ ಸಾಮರಸ್ಯದ ನೆಲೆಗಳ ಹುಡುಕಾಟದ ಕಡೆ ಚಲಿಸಿತು. ಪ್ರಗತಿಪರ ಚಿಂತನೆಯು ಬೇರುಕಿತ್ತುಕೊಂಡು ಹೊರಬಂದ ಆ ಖಾಲಿಜಾಗೆಯಲ್ಲಿ ಮತೀಯವಾದ-ಕೋಮುವಾದಗಳ ಮುಳ್ಳುಕಂಟಿಗಳು ಬೆಳೆದಿದ್ದವು. ಬಂಡವಾಳವಾದದ ಗಾಣದಲ್ಲಿ ಸಿಕ್ಕ ಜನಸಮುದಾಯ ಭ್ರಷ್ಟತೆಯನ್ನು ಕೊಳ್ಳುಬಾಕತನವನ್ನು ಸಹಜ ಬೆಳವಣಿಗೆ ಎಂದು ಒಪ್ಪಿಕೊಂಡಿತ್ತು. ಬಿಟ್ಟು ಬಂದ ಮನೆಯನ್ನು ಮತ್ತೆ ಹೊಕ್ಕು ಒಕ್ಕಲಾಗಲು, ಉಸಿರ ಜಾಗೆಗಳನ್ನು ಹಸನು ಮಾಡಿಕೊಳ್ಳಲು ಸಿದ್ಧರಾಗಬೇಕಾಗುತ್ತದೆ. ಎಲ್ಲ ಮರುಪ್ರವೇಶಿಕೆಗಳಲ್ಲೂ ಸವಾಲಿದು.
ಇಂತಹ ಸಾಂಸ್ಕøತಿಕ ಒತ್ತಡದಲ್ಲಿ, ಒಳಗೆ ಜಾತಿ-ಧರ್ಮಗಳ ಹೂರಣವಿಟ್ಟು ಹೊರಗೆ ಬಹುತ್ವದ ನಕಲು ಹೊತ್ತ ಕೆಲ ಸಂಘಟನೆಗಳಲ್ಲಿ ಭಾಗವಹಿಸಿದ್ದೆ. “ಗಾಂಧೀಜಿಯ ತತ್ತ್ವದಲ್ಲಿ ನಂಬಿಕೆಯಿಟ್ಟು ದೇಶದ ಸ್ವಾತಂತ್ರ್ಯಕ್ಕಾಗಿ ಬದುಕನ್ನೇ ತೇದ ಸಮುದಾಯದ ವಾರಸುದಾರರಾಗಿ, ಈಗ್ಯಾಕೆ ಗಾಂಧೀಹತ್ಯೆಯ ತತ್ತ್ವದೊಂದಿಗಿದ್ದೀರ?” ಎಂದು ಮುಂತಾಗಿ ಪ್ರಶ್ನಿಸುತ್ತ ಹೋದೆ. ಕಾರ್ಯಕ್ರಮ ಮುಗಿದ ಆ ರಾತ್ರಿ ಕೆಲವರು ಭೇಟಿಯಾದರು. “ನೀನು ಹೇಳೂದು ಸರಿ. ಆದ್ರೆ ಏನ್ಮಾಡೋದು? ನಾವೀಗ ಅವರೊಟ್ಟಿಗೆ ಬಹಳ ದೂರ ನಡದೇವಿ. ಬಹಳ ತಪ್ಪುಗಳನ್ನೂ ಮಾಡೇವಿ. ಏನ್ಮಾಡೋದೋ ತಿಳೀತಿಲ್ಲ” ಎಂದರು. ಅವರಲ್ಲಿ ಒಬ್ಬ 1992ರ ರಥಯಾತ್ರೆಯು ಹುಟ್ಟುಹಾಕಿದ್ದ ಕೋಮುಹಿಂಸೆಯ ಮುಖ್ಯ ರೂವಾರಿಯಾಗಿದ್ದ. ಧಾರವಾಡದ ಉಳವಿ ಬಸಪ್ಪನ ಗುಡಿಯಲ್ಲಿ ಮಾತನಾಡಿದಾಗ ಬಹುತೇಕರು ಹೇಳಿದ್ದರು- ಹೌದು, ನಾವು ತಪ್ಪ ಮಾಡ್ಹಾಕತ್ತೀವಿ. ಹಿರೇಕರು ಹೇಳಿದ್ದಕ್ಕೂ ನಾವ್ ಬಾಳೂದಕ್ಕೂ ಸಂಬಂಧ ಇಲ್ಲದ್ಹಾಂಗಾಗೇತಿ- ಆಗೆಲ್ಲ, ಪಾರಿವಾಳಕ್ಕೆ ಬಾಣ ಹೂಡಿದ ಬೇಟೆಗಾರನ ಪಾದಕ್ಕೆ ಕಚ್ಚಿ, ಬಾಣದ ಗುರಿ ತಪ್ಪಿಸಿ ಪಾರಿವಾಳ ಹಾರಿಹೋಗುವ ಹಾಗೆ ಮಾಡಿದ್ದ ಕರಿಇರುವೆಯ ಕಥೆ- ಆ ಅಂಕಲಿಪಿಯ ಕಥೆ ನೆನಪಾಗುತ್ತಿತ್ತು. ತಟಕು ಜೀವದ ಇರುವೆ ದಾರಿ ತೆರೆದುಕೊಳ್ಳುತ್ತಿತ್ತು.
ಹೌದು, ಜನ ನಾಗರಿಕತೆಯ ಮೌಢ್ಯದಲ್ಲಿದ್ದಾರೆ. ದಾಳಿ ಅವರ ಪ್ರಜ್ಞಾಪಾತಳಿಯ ಮೇಲೆ ನಡೆಯುತ್ತಿದೆ. ಬಂಡವಾಳವಾದ ಅವರನ್ನು ಬಳಲಿಸಿದೆ. ಸೌಹಾರ್ದತೆಯ ಮೂಲದಿಂದ ಅವರನ್ನು ವಿಸ್ಮøತಿಗೆ ತಳ್ಳಲಾಗಿದೆ. ಈ ಸಾಮಾಜಿಕ ರೂಪಾಂತರದಲ್ಲಿ ಗುರುತು ಕಳೆದುಹೋಗುತ್ತಿದೆ. ಮಣ್ಣ ಪದರನ್ನು ಎಬ್ಬುವ ಇರುವೆ ದಾರಿ ತೆರೆಯಬೇಕು. ಒಂದಿಷ್ಟು ಆಯ ತಪ್ಪಿದರೂ ಮೌಢ್ಯದ ಹುದುಲಿನಲ್ಲಿ ಉಸಿರುಗಟ್ಟಿ ಸಾಯುತ್ತೇವೆ ಎಂಬ ಸತತ ಎಚ್ಚರದಲ್ಲಿ ಈ ಹಗ್ಗದ ನಡಿಗೆ ನಡೆಯಬೇಕು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ಬಿತ್ತುವ, ವಿಭಜನೀಯ ಶಕ್ತಿಗಳನ್ನು ಸೋಲಿಸಲು ಒಗ್ಗಟ್ಟಾಗಬೇಕು: ಅಡ್ಮಿರಲ್ ರಾಮದಾಸ್ ಅವರ ಕೊನೆಯ ಸಂದೇಶ...

0
ಲೋಕಸಭೆ ಚುನಾವಣೆ ಹೊಸ್ತಿಲ್ಲಲ್ಲಿ ನೌಕಾಪಡೆಯ ಮಾಜಿ ಮುಖ್ಯಸ್ಥ ಅಡ್ಮಿರಲ್ ರಾಮ್‌ದಾಸ್ ಅವರ ಕೊನೆಯ ಕಾಲದ ಸಂದೇಶವನ್ನು ಅವರ ಪತ್ನಿ ಲಲಿತಾ ರಾಮದಾಸ್‌ ಸಾರ್ವಜನಿಕರ ಮುಂದಿಟ್ಟಿದ್ದು, ದ್ವೇಷಿಸುವ, ವಿಭಜನೀಯ, ಸರ್ವಾಧಿಕಾರಿಗಳನ್ನು ಸೋಲಿಸಲು ಒಗ್ಗಟ್ಟಾಗಬೇಕು ಎಂದು...