Homeರಾಜಕೀಯಉದ್ಯೋಗ ನಿರ್ನಾಮ ಮುಚ್ಚಲು ಮಂದಿರ ನಿರ್ಮಾಣ!

ಉದ್ಯೋಗ ನಿರ್ನಾಮ ಮುಚ್ಚಲು ಮಂದಿರ ನಿರ್ಮಾಣ!

- Advertisement -
- Advertisement -

-ಮಲ್ಲನಗೌಡರ್. ಪಿ. ಕೆ. |

ಕಳೆದ ವಾರ ಪ್ರಮುಖ ದೈನಿಕಗಳಲ್ಲಿ ಎರಡು ಮುಖಪುಟ ಸುದ್ದಿಗಳಿದ್ದವು. ಒಂದು, ಉದ್ಯೋಗ-ನಿರುದ್ಯೋಗ ಕುರಿತ ಅಂಕಿಸಂಖ್ಯೆಗಳನ್ನು ಕೇಂದ್ರ ಸರ್ಕಾರ ಬೇಕೆಂತಲೇ ಬಿಡುಗಡೆ ಮಾಡುತ್ತಿಲ್ಲ ಎಂದು ‘ರಾಷ್ಟ್ರೀಯ ಸಾಂಖ್ಯಿಕ ಆಯೋಗ’(ಎನ್‍ಎಸ್‍ಸಿ)ದ ಇಬ್ಬರು ಸದಸ್ಯರು ಪ್ರತಿಭಟಿಸಿ ರಾಜಿನಾಮೆ ನೀಡಿದ್ದು.
ಇನ್ನೊಂದು, ಕೇಂದ್ರ ಸರ್ಕಾರವು ಸುಪ್ರಿಂಕೋರ್ಟಿಗೆ ಮನವಿ ಸಲ್ಲಿಸಿ, ಅಯೋಧ್ಯೆಯ ವಿವಾದಿತ ಪ್ರದೇಶದ ಸುತ್ತಲಿನ ಭೂಮಿಯನ್ನು ಸಂಬಂಧಪಟ್ಟವರಿಗೆ ಬಿಟ್ಟುಕೊಡಬೇಕೆಂದು ಕೇಳಿಕೊಂಡಿದ್ದರ ಕುರಿತ ಸುದ್ದಿ.
ಒಂದೇ ದಿನ ಇವೆರಡೂ ಸುದ್ದಿ ಬಂದಿದ್ದು ಕಾಕತಾಳೀಯ ಇರಬಹುದು. ಆದರೆ, ಒಟ್ಟೂ ಸರ್ಕಾರದ ನಿಲುವು, ನಾಟಕ, ಹುಚ್ಚಾಟಗಳಿಗೆ ಈ ಎರಡೂ ಸುದ್ದಿಗಳು ಸಾಂಕೇತಿಕ ಸಾಕ್ಷ್ಯಗಳು ಎಂಬುದರಲ್ಲಿ ಎರಡು ಮಾತಿಲ್ಲ.
2014ರಲ್ಲಿ ಚುನಾವಣಾ ಪ್ರಚಾರ ಮಾಡುವಾಗ, ಬಿಜೆಪಿಯ ಅಂದರೆ ನರೇಂದ್ರ ಮೋದಿಯ ಭಾಷಣದ ವಸ್ತುಗಳು: ಉದ್ಯೋಗ ಸೃಷ್ಟಿ ಮತ್ತು ಕಪ್ಪುಹಣ ವಾಪಸ್ ತರುವಿಕೆ. ಬಿಜೆಪಿಯ ಪ್ರಣಾಳಿಕೆಯಲ್ಲೂ ಉದ್ಯೋಗ ಸೃಷ್ಟಿಯ ಅಜೆಂಡಾವೇ ಪ್ರಧಾನವಾಗಿತ್ತು. ಅದರಲ್ಲಿ ರಾಮ ಮಂದಿರ ನಿರ್ಮಾಣದ ವಿಷಯ ಇತ್ತಾದರೂ, ಬೇಕೆಂತಲೇ ಅದನ್ನು ಅತಿ ಕಡಿಮೆ ಪ್ರಾಶಸ್ತ್ಯದ ಜಾಗದಲ್ಲಿ ಇಡಲಾಗಿತ್ತು!
ಈಗ 2019: ಚುನಾವಣೆಯ ವರ್ಷ. ಬಿಜೆಪಿಯ ಪಾಲಿಗೆ ಉದ್ಯೋಗ ಅಥವಾ ನಿರುದ್ಯೋಗ ಎಂಬ ಪದವೇ ಶಾಪವಾಗಿದೆ. ಹಾಗಾಗಿ ಈಗ ಅದು ಆ ವಿಷಯವನ್ನು ಹಿನ್ನೆಲೆಗೆ ಸರಿಸಿ, ಮಂದಿರ ನಿರ್ಮಾಣದಂತಹ ವಿಷಯಗಳಿಗೆ ಆದ್ಯತೆ ಕೊಡಲು ತಯ್ಯಾರಿ ನಡೆಸಿದೆ. ಇದಕ್ಕೆ ಪೂರಕವಾಗಿ ಮೇಲಿನ ಎರಡು ಸುದ್ದಿಗಳ ಹಿಂದಿನ ಅಸಲಿಯತ್ತು ಈಗ ಅನಾವರಣಗೊಳ್ಳುತ್ತಿದೆ.
ಸೃಷ್ಟಿಸಲಿಲ್ಲ, ಉದ್ಯೋಗ ನಿರ್ನಾಮ ಮಾಡಿದರು!
ವರ್ಷಕ್ಕೆ ಎರಡು ಕೋಟಿಯ ಉದ್ಯೋಗ ಸೃಷ್ಟಿಯ ಭಾರಿ ಭರವಸೆ ನೀಡಿದ್ದ ನರೇಂದ್ರ ಮೋದಿ ಪ್ರಧಾನಿಯಾದ ನಂತರ ಆ ಕುರಿತಂತೆ ಯಾವ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲೇ ಇಲ್ಲ. ಅಂತಹ ದೂರದೃಷ್ಟಿಯೂ ಈ ಸರ್ಕಾರಕ್ಕೆ ಇಲ್ಲವೇ ಇಲ್ಲ. ಅದು ದೊಡ್ಡ ಕೈಗಾರಿಕೋದ್ಯಮಿಗಳ ಹಿತ ಕಾಪಾಡುವಲ್ಲೇ ಮಗ್ನವಾಗಿತು. ಪ್ರಚಾರಕ್ಕಾಗಿ ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ, ಸ್ಟಾರ್ಟ್‍ಅಪ್ ಇಂಡಿಯಾ- ಎಂಬಂತಹ ರೋಚಕ ಹೆಸರಿನ ಘೋಷಣೆಗಳನ್ನು ಮಾಡಿತೇ ವಿನಃ, ಅವುಗಳ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನವನ್ನು ಮಾಡಲೇ ಇಲ್ಲ. ಅದು ನಿಜವಾಗಿಯೂ ಈ ಯೋಜನೆಗಳ ಗಂಭೀರವಾಗಿದ್ದರೆ, ಸ್ಕಿಲ್ ಇಂಡಿಯಾವನ್ನು ಅನಂತಕುಮಾರ ಹೆಗಡೆಯಂತಹ ಮುಠ್ಠಾಳನ ಕೈಗೆ ನೀಡುತ್ತಿರಲಿಲ್ಲ. ಮಾತೆತ್ತಿದರೆ ಹೊಡಿ, ಬಡಿ, ಕಡಿ ಎನ್ನುವ ಈ ಮನುಷ್ಯ ‘ಕಿಲ್ ಇಂಡಿಯಾ’ದ ಪ್ರತಿನಿಧಿಯಾದರಷ್ಟೇ. ಮೇಕ್ ಇನ್ ಇಂಡಿಯಾ ಯೋಜನೆಯು ಎಚ್‍ಎಎಲ್‍ನಂತಹ ಸಾರ್ವಜನಿಕ ಉದ್ಯಮಗಳನ್ನು ಬಲಿ ಕೊಟ್ಟು ಅನಿಲ್ ಅಂಬಾನಿಯಂತಹ ವಂಚಕ ಉದ್ಯಮಿಯನ್ನು ರಕ್ಷಿಸುವ ಕೆಲಸಕ್ಕೆ ಸಿಮೀತವಾಗಿತು. ಹಾಗಾಗಿಯೇ ಇವತ್ತು ಬಿಜೆಪಿಗೆ ಚುನಾವಣಾ ಬಾಂಡ್‍ಗಳ ಮೂಲಕ ವಿಪರೀತ ಎನ್ನುವಷ್ಟು ಪಾರ್ಟಿ ಫಂಡ್ ಹರಿದು ಬರುತ್ತಿದೆ.
ನ್ಯಾಷನಲ್ ಸ್ಯಾಂಪಲ್ ಸರ್ವೆ ಸಂಸ್ಥೆಯ ಅಧ್ಯಯನದ ಪ್ರಕಾರ, ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಆದರೆ ಬಿಜೆಪಿ ಪ್ರಕಾರ, ಉದ್ಯೋಗಗಳಲ್ಲಿ ಹೆಚ್ಚಳವಾಗಿದೆಯಂತೆ! ಅದಕ್ಕಾಗಿ ತಿರುಚಿದ ಭವಿಷ್ಯ ನಿಧಿ ಅಂಕಿಸಂಖ್ಯೆಗಳನ್ನು ಮುಂದಿಡುತ್ತಿದೆ! ಕಾರ್ಮಿಕ ಇಲಾಖೆಯ ಅಧ್ಯಯನ ಕೂಡ ಉದ್ಯೋಗ ನಷ್ಟದ ಬಗ್ಗೆ ವರದಿ ನೀಡಿದ್ದು, ಅದನ್ನೂ ಈ ಕಳ್ ಸರ್ಕಾರ ಮುಚ್ಚಿಡುತ್ತ ಬಂದಿದೆ.
ಈ 45 ವರ್ಷಗಳಲ್ಲಿ ದೇಶ ಕಂಡರಿಯದಷ್ಟು ಪ್ರಮಾಣದಲ್ಲಿ ಉದ್ಯೋಗದ ಸಮಸ್ಯೆ ಸದ್ಯ ದೇಶವನ್ನು ಕಾಡುತ್ತಿದೆ. ಉದ್ಯೋಗ ಸೃಷ್ಟಿ ಹಾಳಾಗಿ ಹೋಗಲಿ, ಇದ್ದಬದ್ದ ಸಣ್ಣಪುಟ್ಟ ಉದ್ಯೋಗಗಳನ್ನೂ ಈ ಸರ್ಕಾರ ತನ್ನ ಮೂರ್ಖ ನೋಟು ರದ್ದತಿಯಿಂದ ನಾಶ ಮಾಡಿದ್ದರ ಪರಿಣಾಮವಿದು.
ಕೃಷಿ ಬಿಕ್ಕಟ್ಟಿನಲ್ಲಿದೆ, ಯುವಕರು ಹತಾಶರಾಗಿದ್ದಾರೆ. ಆ ಬಗ್ಗೆ ಬಜೆಟ್‍ನಲ್ಲಿ ಯಾವುದೇ ಪ್ರಾಮಾಣಿಕ ಭರವಸೆಗಳಿಲ್ಲ. ಬದಲಿಗೆ ಸುಪ್ರಿಂಕೋರ್ಟಿಗೆ ಮನವಿ ಮಾಡುವ ಕೇಂದ್ರ ಸರ್ಕಾರವು, ಅಯೋಧ್ಯೆಯ ವಿವಾದಿತ ಜಾಗವನ್ನು ಬಿಟ್ಟು ಉಳಿದ ಜಾಗವನ್ನು ‘ಸಂಬಂಧಿಸಿದವರಿಗೆ’ ನೀಡಿ ಎಂದು ಕಿಡಿ ಹಚ್ಚಲು ಹೊರಟಿದೆ. ವಿವಾದಿತ ಜಾಗದ ಸುತ್ತಲಿನ ಜಾಗವನ್ನು ‘ಸಂಬಂಧಿಸಿದವರಿಗೆ’ ನೀಡಿದರೆ ಅದು ಕೋಮು ಗಲಭೆಗಳಿಗೆ ಅವಕಾಶ ಮಾಡಿಕೊಡಲು ಮುನ್ನುಡಿ ಬರೆದಂತಾಗುತ್ತದೆ ಎಂದು ಸುಪ್ರಿಂಕೋರ್ಟು 2003ರಲ್ಲೇ ತನ್ನ ಅಭಿಪ್ರಾಯವನ್ನು ದಾಖಲಿಸಿದ್ದು ಗೊತ್ತಿದ್ದೂ ಮೋದಿ ಸರ್ಕಾರ ದೇಶದ ನಿರುದ್ಯೋಗ ಸಮಸ್ಯೆಯನ್ನು ಹಿನ್ನೆಲೆಗೆ ಸರಿಸಿ, ಯುವಕರನ್ನು ಭಾವನಾತ್ಮಕ ನೆಲೆಗೆ ಒಯ್ದು ಲಾಭ ಮಾಡಿಕೊಳ್ಳಲು ಹವಣಿಸುತ್ತಿದೆ.
ಆದರೆ, ಅದು ಅಷ್ಟು ಸುಲಭ ಸಾಧ್ಯವಲ್ಲ ಎಂಬುದು ಅದಕ್ಕೂ ಗೊತ್ತಿರುವುದರಿಂದ, ಇನ್ನಷ್ಟು ಬಗೆಬಗೆಯ ನಾಟಕಗಳನ್ನು ಆರಂಭಿಸಿ, ಧ್ರುವೀಕರಂಕ್ಕೆ ಯತ್ನಿಸುವುದಂತೂ ಖಂಡಿತ. ಜನ ಹುಶಾರಾಗಿರಬೇಕಷ್ಟೇ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...