Homeಅಂಕಣಗಳುದೇಮಾನ ಬೇಸಾಯ... (ಭಾಗ 2)

ದೇಮಾನ ಬೇಸಾಯ… (ಭಾಗ 2)

- Advertisement -
ಮಹಾದೇವ CIIL ಕೆಲಸಕ್ಕೆ ರಾಜೀನಾಮೆ ನೀಡಿ ಕೈಗೆ ಬಂದ ಒಂದಿಷ್ಟು ದುಡ್ಡಿನ ಜೊತೆ ಕೊಂಚ ಸಾಲವನ್ನು ಪಡೆದು ಹೊಲವನ್ನು ಕೊಳ್ಳುವಂತೆ ನಾನು ಮತ್ತು ಮಕ್ಕಳು ಹುರಿದುಂಬಿಸಿದೆವು. ದೇಮಾನಿಗೂ ತೋಟ ಬೆಳೆಸುವ ಇರಾದೆ ಇತ್ತು. ಹಾಗಾಗಿ ಹುಯಿಲಾಳು ಗ್ರಾಮದ ಬಳಿ ಕೆರೆಯ ಪಕ್ಕದಲ್ಲಿ ನಮಗೆ ಜಮೀನು ಸಿಕ್ಕಿತು. `ಆದರೆ ಬನವಾಸಿ, ಆಗದಿದ್ದರೆ ವನವಾಸಿ’ ಅಂತ ಜಮೀನಿಗೆ ಬನವಾಸಿ ಎಂದು ಹೆಸರಿಟ್ಟನು. ಉಜ್ವಲಾ ತೋಟದಲ್ಲಿ ಏನೇನು ಗಿಡ ಮರಗಳನ್ನು ನೆಡಿಸಬೇಕೆಂದು ಒಂದು ದೊಡ್ಡಪಟ್ಟಿಯನ್ನೇ ಸಿದ್ಧ ಮಾಡಿದಳು, ಅದರಲ್ಲೂ ಸೀಬೆಗಿಡಗಳು ಮನೆ ಪಕ್ಕದಲ್ಲೇ ಬರುವಂತೆ ಎಚ್ಚರಿಕೆ ವಹಿಸಿದ್ದಳು. ನಮ್ಮ ತೌರಿನವರು ಗದ್ದೆ ಉಳ್ಳವರಾದ್ದರಿಂದ, ವ್ಯವಸಾಯದಲ್ಲಿ ಅನುಸರಿಸಬೇಕಾದ ಅನೇಕ ಸಂಗತಿಗಳನ್ನು ಅಂದರೆ ಯಾವ್ಯಾವ ಕಾಳು, ಧಾನ್ಯಗಳನ್ನು ಬಿತ್ತಿ ಬೆಳೆಯಬಹುದೆಂಬಿತ್ಯಾದಿಗಳನ್ನು ದೇಮಾ ಕಿವಿಗೆ ತುಂಬಿಸಿದೆನು. ಮೊದಲಿಗೆ ಭೂಮಿಯನ್ನು ಉಳುಮೆ ಮಾಡಿ ಮೊದಲ ಬೆಳೆ ಪಕ್ಷಿಗಳಿಗೆ, ಉಳಿದದ್ದು ನಮಗೆ ಅಂತ ಸೂರ್ಯಕಾಂತಿಯನ್ನು ಚೆಲ್ಲಿಸಿದನು. ಈ ಎಣ್ಣೆ ಬೆಳೆ ಚೆನ್ನಾಗಿಯೇ ಬಂತು. ಇದನ್ನು ಕೊಯ್ಲು ಮಾಡುವಷ್ಟರಲ್ಲಿ ಅಮೆರಿಕಾದ ಐಯೋವಾ ವಿವಿಗೆ ಮೂರು ತಿಂಗಳ ಕಾಲ ಸಾಹಿತ್ಯದ ಶಿಬಿರಕ್ಕೆ ದೇಮ ಹೋಗಬೇಕಾಯಿತು. ಗತ್ಯಂತರವಿಲ್ಲದೆ ನಾನು ಮತ್ತು ಅಮ್ಮ ಇಬ್ಬರೂ ಸೇರಿ ಸೂರ್ಯಕಾಂತಿಯ ಬೀಜವನ್ನು ಒಕ್ಕಲು ಮಾಡಿ, ಎಣ್ಣೆ ಮಾಡಿಸಿದೆವು. ಸೂರ್ಯಕಾಂತಿಯ ತಾಜಾ ಎಣ್ಣೆ ಹೇಗಿತ್ತೆಂದರೆ ಹಸುವಿನ ಬೆಣ್ಣೆಯಿಂದ ಮಾಡಿದ ತುಪ್ಪದ ಹಾಗೆ ರುಚಿ ನೀಡಿತು.
ದೇಮಾ ಅಮೆರಿಕೆಯಿಂದ ವಾಪಸ್ ಬಂದ ಮೇಲೆ ಕೃಷಿ ಕಾರ್ಯಗಳು ಶುರುವಾದವು. ಆರಂಭದಲ್ಲೇ ಮೂಲಂಗಿ ಬೆಳೆದ ದೇಮಾನ ಮೂಲಂಗಿ ಬೇಸಾಯದ ಬಗ್ಗೆ ಹೇಳಲೇಬೇಕಾಗಿದೆ. ಅವನ ಮೂಲಂಗಿ ಬೇಸಾಯದ ವೈಶಿಷ್ಟ್ಯವನ್ನು ವಿವರಿಸಿ ಆಗ ನಾನು ಬರೆದ ಪುಟ್ಟ ವಿಡಂಬನಾತ್ಮಕ ಲೇಖನವೊಂದು ಆಂದೋಲನದಲ್ಲಿ ಪ್ರಕಟವಾಗಿ ಸಿಕ್ಕಾಪಟ್ಟೆ ಮೆಚ್ಚುಗೆಗಳಿಸಿಬಿಟ್ಟಿತು. ಎಷ್ಟೆಂದರೆ, ಆ ಲೇಖನವನ್ನು ಅನೇಕ ಜಿಲ್ಲಾ ಪತ್ರಿಕೆಗಳು ಪುನರ್ ಮುದ್ರಣ ಮಾಡಿದವು. ಅಂತು ಮಾದೇವನ ಬೇಸಾಯ ನನ್ನನ್ನು ಜನಪ್ರಿಯ ಲೇಖಕಿಯನ್ನಾಗಿ ಮಾಡಿಬಿಟ್ಟಿತು! ಅದನ್ನು ಯಥಾವತ್ತಾಗಿ ನೀಡಿದರೆ ಕ್ಷೇಮ.
ಒಂದೊತ್ತಿನ ಸಾರಿಗೆ ಸಾವಿರ ಮೂಲಂಗಿ
ಮಾದೇವ್ ನಿಯೋ ಬೇಸಾಯಗಾರರಾದ ನಂತರ ತರಕಾರಿ, ಹಣ್ಣು, ಕಾಡು ಗಿಡ, ಮರ ಬಳ್ಳಿ, ಹೂವು ಕಾಯಿ, ಅಣಬೆ, ರೇಷ್ಮೆ, ನಾರು, ಬೇರು ಮುಂತಾಗಿ…ಮುಂತಾಗಿ…ಈ ಎಲ್ಲವುಗಳ ಬಗ್ಗೆ ಲಭ್ಯವಿರುವ ಸಣ್ಣ-ದೊಡ್ಡ ಕನ್ನಡ ಮತ್ತು ಸರಳ ಇಂಗ್ಲಿಷ್ ಭಾಷೆಯಲ್ಲಿರುವ ಗ್ರಂಥಗಳನ್ನೆಲ್ಲ ಹಗಲೂ-ರಾತ್ರಿ ಸುಮಾರು ಎರಡು ತಿಂಗಳುಗಳ ಕಾಲ ಅಭ್ಯಸಿಸಿದರು. ಅನಂತರ ಮೂರು ಮುಖ್ಯ ವಿಷಯಗಳನ್ನು ಮನನ ಮಾಡಿಕೊಳ್ಳಲಾಯಿತು.
1. ಕಡಿಮೆ ಶ್ರಮದಿಂದ ಹೆಚ್ಚು ಲಾಭಗಳಿಸುವುದು ಅಂದರೆ ಮಹಾ ಸೋಮಾರಿಯಾಗೇ ಉಳಿದುಕೊಳ್ಳುವ ತಂತ್ರ.
2. ಕಡಿಮೆ ಅವಧಿಯಲ್ಲಿ, ಕನಿಷ್ಟ ಖರ್ಚಿನಲ್ಲಿ ಕೈಗೆ ಬರುವ ತರಕಾರಿಗಳ ಆಯ್ಕೆ-ಏಕೆಂದ್ರೆ ಬೀಡಿ, ಸಿಗರೇಟು ವಗೈರೆಗಳ ಬಗ್ಗೆ ಕಾಳಜಿ ವಹಿಸಲು.
3. ಯಾವ ಯಾವ ತರಕಾರಿಗಳಿಗೆ, ಯಾವ ಕಾಲದಲ್ಲಿ ಹೆಚ್ಚು ಬೆಲೆ ಸಿಗುತ್ತದೆ ಎಂಬ ಬಗ್ಗೆ ಸುಮಾರು ಅಂಗಡಿಗಳಿಗೆ ಅಲೆದು, ಒಂದು ಸಮೀಕ್ಷೆಯನ್ನೇ ನಡೆಸಲಾಯಿತು-ಕಾರಣ ದಿಢೀರನೆ ದೊಡ್ಡ (ತೂತು) ಜೇಬುಗಳನ್ನು ತುಂಬಿಸಲು.
ಇಷ್ಟೆಲ್ಲ ಚಿಂತನೆಯ ನಂತರ, ಹಲವಾರು ಅಂಗಡಿಗಳಲ್ಲಿ ವಿಚಾರಿಸಿ ‘ಖಿhe ಃesಣ’ ಎಂದು ಪ್ರಥಮವಾಗಿ ಮೂಲಂಗಿ, ಹಲಸಂದೆ ಮತ್ತು ಹುರುಳಿಕಾಯಿ ಬೀಜಗಳನ್ನು ತಂದರು. ನಾನು ಮತ್ತು ಮಕ್ಕಳು ತುಂಬ ಉತ್ಸಾಹದಿಂದ ಇವರ ಕಾರ್ಯಕ್ರಮವನ್ನೆಲ್ಲ ಸ್ವಾಗತಿಸಿದೆವು. `ನೋಡ್ರೋ… ನಾಳೆನೇ ಈ ಬಿತ್ತನೆಲ್ಲ ನೆಡುಸ್ತೀನಿ, ನೀವೆಲ್ಲ ಎರಡು ವಾರ ಬಿಟ್ಕಂಡ್ ಜಮೀನಿಗೆ ಬನ್ನಿ’ ಎಂದು ಹುಸಿನಗೆ ಸೂಸಿ ಜಮೀನಿಗೆ ಹೊರಟರು. ನಾವೆಲ್ಲರೂ ಬಹಳ ಕಾತರದಿಂದ ಎರಡು ವಾರಗಳನ್ನು ಯುಗಗಳಂತೆ ಕಳೆದವು. ಅಂತೂ ಜಮೀನಿಗೆ ಹೊರಡುವ ದಿನ ಬಂದೇಬಿಟ್ಟಿತು. ನಾನು (ಮಕ್ಕಳಿಗಿಂತ ಜಿiಡಿsಣ ನೋಡಲು) ದೇಮಾ ಜೊತೆ ಲೂನಾದಲ್ಲಿ ಹೊರಟೆ. ನಮ್ಮ ಮನೆಯಿಂದ ಜಮೀನು 12 ಕಿ.ಮೀ. ದೂರದಲ್ಲಿದ್ದು ಅದನ್ನು ದೇಮ ಕ್ರಮಿಸಲು ಅರ್ಧ ಗಂಟೆಯಾಗುತ್ತದೆ. ದಾರಿಯುದ್ದಕ್ಕೂ ತರಕಾರಿ ಗಿಡಗಳದ್ದೇ ಕನಸು… ಎಷ್ಟುದ್ದ ಬೆಳೆದಿರಬಹುದು? ಹೆಂಗೆ ಕಾಣ್ತಿರಬಹುದು? ನೆಲವೇ ಕಾಣಿಸದಷ್ಟು ಹಸುರಾಗಿರಬಹುದೇ?…ಎಂಬಿತ್ಯಾದಿಯಾಗಿ ಯೋಚಿಸುತ್ತಾ… `ಮಾದೇವ್ ಬೀಜಗಳೆಲ್ಲಾ ಚೆನ್ನಾಗಿ ಮೊಳೆತಿದ್ದಾವಾ? ಎಷ್ಟೆಲೆ ಇಕ್ಕವೆ (ಹುಟ್ಟಿದೆ)’ ಎಂದು ಕೇಳುವ ನನ್ನ ಪ್ರಶ್ನೆಗಳಿಗೆ, `ದೇಮಾ… ಓ ಫಸ್ಟ್ ಕ್ಲಾಸ್, ನಿಮ್ಮನ್ನೆಲ್ಲ ತಲೆ ಕುಣಿಸ್ಕೊಂಡು ಕೇಳ್ತಿದ್ದಾವಪ್ಪಾ…’ ಎಂದು ನನ್ನ ಕುತೂಹಲವನ್ನು ಇಮ್ಮಡಿಗೊಳಿಸುವಷ್ಟರಲ್ಲಿ ಜಮೀನು ಬಂದೇ ಬಿಟ್ಟಿತು! ನೋಡಾಡ್ತಾ ಓಡಿಕೋತಾ… ಮೂಲಂಗಿ ಹೊಲವನ್ನು ಹುಡುಕಾಡಿದೆ. `ಏ ಮಾದೇವ್ ನೀವೆಲ್ರೀ ಮೂಲಂಗಿ ನೆಟ್ಟರೋದು’ ಎಂದು ದನಿ ಏರಿಸಿದೆ. `ಅದೋ ನಿನ್ ಮುಂದ್ಗಡೇನೇ ಅವಲ್ಲ, ಕಾಣ್ಸಾಕಿಲ್ವೇನು?’ ಎಂದು ರೇಗಿದರು. ಆಗ ನಾನು ಕಣ್ಣು ಕೀಳಿಸಿ ನೆಲವನ್ನು ನೋಡಿದೆ-ಅಲ್ಲೇನಿದೆ? ಹುಳು ಹಿಡಿಯಲು ರೆಡಿಯಾದ ಒಂದೊಂದು ಎಲೆಯ ಗಿಡಗಳು ಅಕ್ಕಕ್ಕಲಾಗಿ (ದೂರ ದೂರಕ್ಕೆ) ನಿಂತಿದ್ದವು!! ಇದ್ಯಾವ್ ಮೂಲಂಗಿ ಬೆಳೆಯಪ್ಪಾ! ಇಂಥವುನ್ನ ನಾ ಕಂಡೇ ಇಲ್ವಲ್ಲಾಂತ ಅಚ್ಚರಿಪಡುತ್ತಾ… ಇದ್ಯಾಕ್ ಹಿಂಗವಲ್ಲಾ? ಅಂತ ಮಂಡ್ಯ ದಾಟಿಯಲ್ಲಿ ರಾಗವೆಳೆದೆ. `ಅದಾ..ಬೀಜ ಸರ್ಯಾಗಿ ಹುಟ್ಟಿಲ್ಲ, ಯಾಕೋ ನನ್ಮಗಂದು ಕೈಕೊಡ್ತು’ ಅಂತ ಅಂದ ಕೂಡ್ಲೆ ನನಗಂತೂ ಕ್ವಾಪ ಉಕ್ಕಿ ಅದ್ಯಾವೋನು ಮೂಲಂಗಿಯ ಹಿಂಗೆ ನೆಡು ಅಂದೋನು ಅಂತ ಅಂದೆ. `ಇನ್ನೆಂಗ್ ಹಾಕಾರೂ ಉತ್ತಾದ್ಮೇಲೆ ಜ್ವಾಳಾ ಚೆಲ್ವಂಗೆ (ಚೆಲ್ಲುವಂತೆ) ಚೆಲ್ಲಸ್ ಬುಟ್ಟಿ’ ಅಂದರು!! ಈ ಮಾತ್ಗೆ ಕಂಗ್‍ಮಂಗ್ಳಿಡಿದಂಗಾಗಿ (ಏನೂ ತೋಚದೆ) ಉಳಿದವಾದ್ರೂ ಚೆನ್ನಾಗಿರಬಹುದು ಎಂದು ಸಂತೈಸಿಕೊಂಡು, ಅಲ್ಲೇ ಪಕ್ಕಕ್ಕೆ ಕತ್ತು ಹೊರಳಿಸಿದರೆ, ಎರಡೆರಡು ಕೊಂಬುಗಳ ಥರ ಕಡ್ಡಿಗಳು ಕಾಣ್ತಿದ್ದವು. ಅವೇನು ಅಂತ ಬಗ್ಗೆ ನೋಡಿದ್ರೆ `ಹೈಬ್ರಿಡ್’ ತಗಣೀಕಾಯ್ಗೊಳು. ಎರಡೆರಡು ಎಲೆಗಳ ಮೇಲೆ ಎರಡು ತಗಣಿ ಚೊಟ್ಟುಗಳು ನೆಟ್ಟಗೆ ಆಕಾಶ ನೋಡ್ತ ನಿಂತಿದ್ದೊ. ಆಗ ನಂಗಂತೂ ಎಲ್ಲು ಇಲ್ಲದ ನಗು ಬಂದೋಯ್ತ. ದೇಮ ಕಕ್ಕಾಬಿಕ್ಕಿಯಾಗಿ ಇದೇನಾಯ್ತು ಇವಳಿಗೆ ಎಂದು ವಿಸ್ಮಯದಿಂದ ನೋಡಿದರು. ಅಂತೂ ಹಸಿ ತಗಣಿ ಕಾಳಿನ ರುಚಿ ನೋಡ್ಲಿಲ್ಲ ಅನ್ನಿ. ಆದ್ರೆ ಮೂಲಂಗಿಗಳು ಮಾತ್ರ ಒಂದು ಸಣ್ಣ ಮೂಟೆಯಲ್ಲಿ ಮನೆಗೆ ಬಂದವು. ನಮ್ಮ ಸ್ನೇಹಿತರ ಮನೆಗಳಿಗೆಲ್ಲ ಖುಷಿಯಿಂದ ಮೂಲಂಗಿ ಬೇರುಗಳ ರವಾನೆಯಾಯ್ತು. ದೇಮಾರವರ ತಮ್ಮ ಶಿವಮಲ್ಲು ಸ್ನೇಹಿತ ಗೋವಿಂದಯ್ಯರ ಜೊತೆ- `ನಮ್ಮಣ್ಣ ಮೂಲಂಗ್ಯ ಬೆಳೆದವ್ನೇ ಇನ್ಯಾಕ…ನಮ್ಮನೆ ಒಂದೊತ್ತಿನ್ ಸಾರಿಗೆ ಒಂದ್ಸಾವ್ರೆ (1000) ಬೇಕಾಯ್ತದೆಕಯ್ಯೋ…ಒಂದ್ಸಾವ್ರೆ’ ಎಂದು ನೆಗಾಡಿದರಂತೆ !!
– ಈ ಚೋಟುದ್ದುದ ಪುಟ್ಟ ಬರಹ ನಾನು ಬರೆಯಬಹುದು ಎಂಬ ಆತ್ಮವಿಶ್ವಾಸವನ್ನು ನನ್ನೊಳಗೆ ಚಿಗುರಿಸಿತು.
ಇರಲಿ, ಹುಟ್ಟು ಸೋಮಾರಿಯಾದ ದೇಮಾ, ಹಲವಾರು ಸಲ ತೋಟಕ್ಕೆ ಹೋಗದಿರಲು ಕಾರಣಗಳನ್ನು ತನ್ನ ತಲೆಯ ಮೇಲೆ ಕವುಚಿಕೊಳ್ಳುತ್ತಿದ್ದನು. ಇನ್ನು ಇವನನ್ನು ತಿದ್ದುವುದು ಕಷ್ಟವೆಂದು ತಿಳಿದುಹೋಯಿತು. ಕಣ್ ಮುಟ್ಟು ಎಂದರೆ ಕೈ ನೋವುತ್ತೆ ಅತ್ತೆ…. ಅನ್ನುವ ಪೈಕಿ ಇವ್ಞ. ನನಗೆ ಬೆಳಿಗ್ಗೆಯಿಂದ ರಾತ್ರಿಯವರೆಗೆ ಪುರುಸೊತ್ತಿಲ್ಲದಂತೆ ಕೆಲಸ. ಇದೇ ಸಮಯಕ್ಕೆ ಇವನ ಸ್ವಭಾವಕ್ಕೆ ಹೊಂದುವ ಫುಕುವೊಕಾರವರ ಕೃಷಿಯ ಬಗ್ಗೆ, ಉಳುಮೆ ಮಾಡದೆ ಬೆಳೆ ತೆಗೆಯುವ ಅಕ್‍ಭಾವ ತಕ್‍ಭಾವ ಪದ್ಧತಿಯು ದೇಮಾಗೆ ಸಿಕ್ಕಿತು! ಇನ್ನೇನು ಮಾಡುವುದು ಸಹಜವಾಗಿ ಬೆಳೆಯುವ ಗಿಡಮರಗಳ ನಡುವೆ ಹೇಗೋ ಓಡಾಡಿಕೊಂಡಿರಲಿ ಅಂದುಕೊಂಡೆ. ನನ್ನ ಈ ಧೋರಣೆಯನ್ನು ಕಂಡು ಮಗಳು ಉಜ್ವಲಾಗೆ ಏನನ್ನಿಸಿತೋ ಕಾಣೆ, ಒಂದು ದಿನ ತೋಟಕ್ಕೆ ಹೋಗದೆ ಮನೆಯಲ್ಲೇ ಮಲಗಿದ್ದ ಅಪ್ಪನನ್ನು ಕಂಡು,  ಏನ್ ಪಪ್ಪಾ ಇವತ್ತು ಯಾಕೆ ತೋಟಕ್ಕೆ ಹೋಗಲಿಲ್ಲ? ಎಂದು ಕೇಳಿದಳು. ಕಂದಾ ಸ್ವಲ್ಪ ತಲೆನೋವು, ಜೊತೆಗೆ ಕಣ್ಣು ಪಟಪಟಾ (ನೋವು) ಅಂತಿದೆ ಎಂದನು. ಉಜ್ವಲಾ ಏನೂ ಪ್ರತಿಕ್ರಿಯಿಸದೆ ಸುಮ್ಮನಾದಳು. ಮತ್ತೆರಡು ದಿನಗಳ ನಂತರ ಯಥಾಸ್ಥಿತಿಯಲ್ಲಿದ್ದ ಅಪ್ಪನಿಗೆ ಅದೇ ಪ್ರಶ್ನೆಗೆ ಅದೇ ಉತ್ತರ. ಮಾತ್ರೆ ತೊಗೊಂಡ್ರೆ ಸರಿಯಾಗಬಹುದು ಎಂದಳು. ಮತ್ತೆ ಕೆಲವು ದಿನಗಳ ನಂತರ ತೋಟಕ್ಕೆ ಹೋಗದೆ ಅಪ್ಪ ಮಲಗಿರುವುದನ್ನು ಕಂಡು, ಏನ್ ಪಪ್ಪಾ ಯಾಕೆ ಮನೆಯಲ್ಲೇ ಇದ್ದೀಯಾ? ಕಣ್ ಪಟ…ಪಟಾ ಅಂತಿದ್ಯಾ ಎಂದಳು. ಮಗಳ ಮಾತು ಮಹಾದೇವನಿಗೆ ಚುರುಕ್ ಅಂತ ಕೆಂಪಿರುವೆ ಸರಿಯಾದ ಜಾಗದಲ್ಲಿ ಇರುಕಿಸಿದಂತಾಗಿ ದಡಬಡನೆ ಎದ್ದು ತೋಟಕ್ಕೆ ಹೊರಟನು. ಅಂದಿನಿಂದ ಕ್ರಮ ತಪ್ಪದೆ ತೋಟದ ಕಡೆ ಲೂನಾದಲ್ಲಿ ಇವನ ತಿರುಗಾಟ ಶುರುವಾಯಿತು. ಎಂದಾದರೂ ಒಂದು ದಿನ ದಿಕ್ ತಪ್ಪಿ ದೇಮಾ ಮನೆಯಲ್ಲೇ ಉಳಿದುಕೊಂಡರೆ, ಉಜ್ವಲಾ ತಮಾಷೆಯಾಗಿ, ಪಪ್ಪಾ… ಕಣ್ಣು ಪಟಪಟಾನಾ? ಎಂದು ಇಂಪಾದ ದನಿಯಲ್ಲಿ ಕೇಳಿ ಕುಲುಕುಲು ನಗುತ್ತಿದ್ದಳು. ಆಗ ದೇಮಾ, ಇಲ್ಲ ಕಣೊಲೋ ಬಡ್ಡೆತ್ತುದ್ದೇ ಎಂದು ಹುಸಿನಗೆ ಸೂಸಿ, ಇನ್ನೇನು ಹೊರಡುತ್ತೀನಿ ಎಂದು ಹೇಳುತ್ತಾ ಟೀ ಕುಡಿದು, ಸಿಗರೇಟು ಸೇದಿ ಅಂತೂಇಂತೂ ಮಗಳಿಂದಾಗಿ ತೋಟಕ್ಕೆ ಲೂನಾ ಸವಾರಿ ಹೋಗುತ್ತಿತ್ತು.
ಹಾಗೂಹೀಗೂ ತರಕಾರಿ ಬೆಳೆಯಲು ಹೋಗಿ ವಿಫಲನಾದ ದೇಮಾನ ಕಣ್ಣು ಮುಂದೆ ತೆಂಗು ಮಾವು ಕಡೆಗೆ ಕಣ್ಣು ಬೀಳುತ್ತದೆ. ಹತ್ತಾರು ಕಡೆ ಹುಡುಕೀ ಹುಡುಕಿ ತೆಂಗಿನಸಸಿಗಳನ್ನು ತರುತ್ತಾನೆ. ಆಮೇಲೆ ಯಾವ ಮಾವು ಬಾಯಿಗೆ ರುಚಿಯನ್ನು ಮತ್ತು ಕೈಗೆ ಕಾಸನ್ನೂ ನೀಡುತ್ತದೆ ಎಂದು ತಡಕಾಡುತ್ತಿರುವಾಗ ಈ ಮಧುರಗಿತ್ತಿ ಮಲ್ಲಿಕಾ ಬಗ್ಗೆ ದೇಮಾಗೆ ಯಾರೋ ಪುಣ್ಯಾತ್ಮರು ಮಾಹಿತಿ ನೀಡಿದರು. ತಕ್ಷಣವೇ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯಕ್ಕೆ ಧಾವಿಸಿ ಮಲ್ಲಿಕಾ ಮಾವು ತಂದು ಮನೆ ತುಂಬಿಸಿಕೊಂಡನು. ಅವುಗಳನ್ನು ಮನೆಯ ತಾರಸಿಯ ಮೇಲೆ ಎಳೆಬಿಸಿಲು ಬೀಳುವ ಕಡೆ ಎಚ್ಚರಿಕೆಯಿಂದ ಇಡಲಾಯಿತು. ತಾರಸಿಗೆ ಹೋಗಲು ಆಗ ಮೆಟ್ಟಿಲು ಗಳಿರಲಿಲ್ಲವಾಗಿ ಹನ್ನೆರಡು ಕಾಲಿನ ಒಂದು ದೊಡ್ಡ ಏಣಿಯನ್ನು ಕೊಂಡುತಂದೆವು. ಒಂದೊಂದು ಗಿಡದಲ್ಲಿ ಹತ್ತಾರು ಎಲೆಗಳು ಇಕ್ಕಿದ್ದವು. ದೇಮಾ ಬೆಳಿಗ್ಗೆಯಿಂದ ಸಂಜೆಯತನಕ ಮಲ್ಲಿಕಾಳ ಸೇವೆಯಲ್ಲಿ ಮುಳುಗಿರುತ್ತಿದ್ದನು. ಒಂದು ದಿನ ಮಧ್ಯಾಹ್ನ, ಸದ್ದಿಲ್ಲದೆ ಇವನು ಏನು ಮಾಡುತ್ತಿರಬಹುದೆಂಬ ಕುತೂಹಲದಿಂದ ಮೆಲ್ಲನೆ ಏಣಿ ಹತ್ತಿ ತಾರಸಿಯ ಮೇಲಕ್ಕೆ ಕಣ್ಣು ಹಾಯಿಸಿದೆ. ಅಲ್ಲಿ ಕಂಡ ದೃಶ್ಯ ನನ್ನನ್ನು ಚಕಿತಗೊಳಿಸಿತು. ದೇಮಾ ತಾನು ಉಟ್ಟಿದ್ದ ಬಿಳಿಯ ಪಂಚೆಯಿಂದ ಒಂದೊಂದೇ ಮಾವಿನ ಎಲೆಗಳನ್ನು ಒರೆಸುತ್ತ ನೇವರಿಸುತ್ತಿದ್ದನು! ಆಗ, ಏನಪ್ಪಾ ಆ ಗಿಡಗಳನ್ನು ಬೆಳೆಯಗೊಡಿಸುತ್ತೀಯೋ ಇಲ್ವೋ? ಎಂದೆ. ಹುಸಿನಗೆಯೊಂದಿಗೆ- `ಈ ಗಿಡಗಳು ತುಂಬಾ ಸೂಕ್ಷ್ಮವಂತೆ, ಇದಕ್ಕೆ ಹೆಚ್ಚು ಬಿಸಿಲು ಇರಬಾರದಂತೆ… ನೀರನ್ನು ಕೂಡ ನೋಡಿಕೊಂಡು ಹಾಕಬೇಕು’ ಎಂದನು. ಯಾವುದೇ ಗಿಡವನ್ನು ನೆಟ್ಟು ಕೆಮ್ಮಣ್ಣು ಗೊಬ್ಬರ ಹಾಕಿ ನೀರುಣಿಸಿದರೆ ಸಾಕು, ಇದಕ್ಕೆ ಇಷ್ಟೆಲ್ಲ ಕೇಜ್ರ್ಗವಾಗಿ ನೋಡಿಕೋಬೇಕಾ? ಇದ್ಯಾವ್ ಸೀಮೆ ಮಾವು ಹಾಗಾದರೆ? ಎಂದು ರಾಗ ಎಳೆದೆ. ಊಂ…ಊಂ… ನಾನ್ಹಿಂಗೆ ನೋಡ್ಕೊಳ್ಳದಿದ್ದರೆ ಸೊರಗೋಗ್ತಾವೆ ಅಂದನು. ಶಭಾಸ್! ಹೊತ್ತಾರೆಯಿಂದ ಸಂಜೆಗಂಟ ಬಾಣಂತಿ ಯರನ್ನು ನೋಡಿ ಕೊಳ್ಳುವಂತೆ ನೋಡ್ಕೊತಾ ಯಿದ್ದೀಯ ಎಂದು ನಗೆ ಚಟಾಕಿ ಹಾರಿಸಿದೆ. ಹೀಗೆ ಕೆಲ ತಿಂಗಳುಗಳ ಕಾಲ ಮಲ್ಲಿಕಾಳ ಬಾಣಂತನ ವಾಯ್ತು. ಆ ನಂತರ ಬಹಳ ಜೋಪಾನವಾಗಿ ಬನವಾಸಿಗೆ ಒಯ್ದು ನೆಡೆಸಿದನು. ಗಿಡಗಳನ್ನು ನೆಟ್ಟ ನಂತರದ ಇವನ ಕಾಳಜಿ ಇನ್ನೂ ಹೆಚ್ಚಾಗಿ,  ಒಂದೆರಡು ಗಿಡಗಳು ಹರೋಹರವಾದಾಗ, ಎರಡು ಮಲ್ಲಿಕಾ ಸೊತ್ತೋದೊ ಎಂದು ಮುಖ ಬಾಡಿಸಿಕೊಂಡಿದ್ದನು.
ಮಲ್ಲಿಕಾ ಮೂರು ವರುಷ ತುಂಬಿದ ಕೂಡಲೆ ಅರ್ಧ ಮುಕ್ಕಾಲು ಕೆ.ಜಿ. ತೂಗುವ ಹಣ್ಣುಗಳನ್ನು ಬಿಟ್ಟು ನಮ್ಮನ್ನು ಬೆರಗುಗೊಳಿಸಿದಳು. ಸೊಗಸಿನ ಹಣ್ಣುಗಳು ಮನೆಗೆ ಬಂದ ಸಂತೋಷಕ್ಕೆ ನಮ್ಮ ನೆಂಟರಿಷ್ಟರ ಮನೆಗಳಿಗೆ ಮಲ್ಲಿಕಾಳನ್ನು ಕೊಟ್ಟೆವು. ಕೆಲವರು ಇನ್ನೂ ಪಕ್ವವಾಗದಿರುವಾಗ ಕುಯ್ದು ಅದರ ಹುಳಿಗೆ ತಿನ್ನಲಾಗದೆ ಎಸೆದದ್ದನ್ನು ತಿಳಿಸಿದರು. ಈ ಕಾರಣಕ್ಕೆ ಚೆನ್ನಾಗಿ ಹಣ್ಣಾದ ಮೇಲೇಯೆ ಕೊಡತೊಡಗಿದೆವು. ಅದರ ರುಚಿ, ಅದರ ಗಾತ್ರ ಸಕತ್ ಸುದ್ದಿ ಮಾಡಿತು. `ಮೇಡಂ ಇದ್ಯಾವ ಜಾತಿಯ ಮಾವು… ಇದುವರೆಗೂ ನಾನು ತಿಂದೇ ಇಲ್ಲ. ಏನ್ ರುಚಿಯಾಗಿದೆ ಅಂತೀರೀ… ನಾವು ಸಿಪ್ಪೇ ಸಮೇತ ತಿಂದ್ಕಂಡೊ’ ಎಂದವರೆಷ್ಟೊ! ಅಮ್ಮನಿಗೆ ಬೇರೆ ಜಾತಿಯ ಮಾವನ್ನು ತಿಂದರೆ ಹೊಟ್ಟೆ ಕೆಡುತ್ತಿತ್ತು. ಆದರೆ ಮಲ್ಲಿಕಾ ತಿಂದರೆ ಏನೂ ತೊಂದರೆ ಬರುತ್ತಿರಲಿಲ್ಲ. ನನ್ನಳಿಮಯ್ಯ ಅದೇನ್ ಚೆಂದಾಗಿ ಬೆಳೆದವ್ರೆ ತಾಯಿ ಎಂದು ಪ್ರತಿವರ್ಷ ಬಾಯಿ ಚಪ್ಪರಿಸುತ್ತಾ ಮೆಚ್ಚಿಕೆಯಾಡುತ್ತಿದ್ದರು. ನನ್ನಳಿಯನಿಗೆ ಗೊಬ್ಬರಗಾಲು ತಾಯಿ…. ಅದಿಕ್ಕೇನೆ ಭೂಮ್ ತಾಯಿ ಒಲೀತಾಳೆ! ಎಂದು ಅಳಿಯನ ಬಗ್ಗೆ ಬೆರೆದಿದ್ದೇಬೆರೆದಿದ್ದು. ಆದರೆ ದೇಮಾನಿಗಿರುವ ಒಂದೇ ಒಂದೇ ಕೊರಗೆಂದರೆ, ನಾನು ಇಂದಿಗೂ ಮಲ್ಲಿಕಾಳಿಗಿಂತ ರಸಪುರಿಯ ಭಕ್ತೆ ಎಂಬುದಾಗಿದೆ!I can’t help it!!!
ಯಾಕೆಂದರೆ ಮಾವಿನ ಹಣ್ಣು ಎಂದ ಕೂಡಲೇ ನನಗೆ ಥಟ್ಟನೆ ನೆನಪಾಗುವುದು ರಸಪುರಿ. 1953-54ರಲ್ಲಿ ಅಪ್ಪ ಮಂಡ್ಯ ರೈಲ್ವೆ ಸ್ಟೇಷನ್ ಮಾಸ್ಟರ್ ಆಗಿದ್ದಾಗ ಮಾವು ಕಾಲದಲ್ಲಿ ರಸಪುರಿಯನ್ನು ಬೆಳೆದ ರೈತರು ಬೇರೆ ಊರುಗಳಿಗೆ ಗೂಡ್ಸ್ ಗಾಡಿಯ ಮೂಲಕ ದಿನನಿತ್ಯ ನೂರಾರು ಬುಟ್ಟಿ ಮಾವನ್ನು ಕಳುಹಿಸುತ್ತಿದ್ದರು. ಆಗ ಅಪ್ಪನಿಗೂ ಒಂದೊಂದು ಮಾವು ತುಂಬಿದ ಬುಟ್ಟಿಯನ್ನು ಕೊಡುತ್ತಿದ್ದರು. ಅವುಗಳು ಹಣ್ಣಾಗಲೆಂದು ಬಿದಿರುಬುಟ್ಟಿಯಲ್ಲಿ ನೆಲ್ಲುಲ್ಲಿನ ಕಾವಿಗೆ ಇಟ್ಟಿರುತ್ತಿದ್ದರು. ಮಕ್ಕಳಾದ ನಮಗೆ ರಸಪುರಿ ತಿನ್ನುವ ಆಸೆಯನ್ನು ತಡೆಯಲಾರದೆ ದಿನಾ ಸಂಜೆ ಸ್ಕೂಲಿಂದ ಬಂದ ಕೂಡ್ಲೆ ಮಾವಿನ ಬುಟ್ಟಿಯನ್ನು ತೆಗೆದುನೋಡುತ್ತಿದ್ದೆವು. ಕೆಲವು ಸಲ ಅವು ಬೇಗ ಹಣ್ಣಾಗುತ್ತಿರಲಿಲ್ಲ. ಇನ್ನೂ ಎಷ್ಟು ದಿನ ಬೇಕು ಹಣ್ಣಾಗಲು ಎಂದು ಅಪ್ಪನನ್ನು ಪೀಡಿಸುತ್ತಿದ್ದೆವು. ಪದೇಪದೇ ಬುಟ್ಟಿ ಬಿಚ್ಚಿ ಗಾಳಿಯಾಡುವಂತಾದರೆ ಅವು ಬೇಗ ಹಣ್ಣಾಗುವುದಿಲ್ಲ ಎಂದು ಅಮ್ಮ ರೇಗುತ್ತಿದ್ದರು. ಆದರೂ ನಮ್ಮ ಚಪಲಕ್ಕೆ ಬೇರೆ ಮದ್ದಿರಲಿಲ್ಲವಾಗಿ, ಒಂದು ದಿನ ಅಮ್ಮನಿಗೆ ತಿಳಿಯದಂತೆ ನಾನು ಮತ್ತು ಅಣ್ಣ ಸೇರಿ ಒಂದು ದೊಡ್ಡ ದೋರುಗಾಯಿ ರಸಪುರಿಯನ್ನು ಕುಯ್ದು ಇಬ್ಬರೂ ಒಂದೊಂದು ಚೂರು ಬಾಯಿಗಿಟ್ಟರೆ ಅಯ್ಯಯ್ಯಮ್ಮೋ… ಭಯಂಕರ ಹುಳಿ. ಹಣ್ಣಾದಾಗ ಅಷ್ಟೊಂದು ಸಿಹಿಯಾದ ರಸಪುರಿಯನ್ನು ದೋರುಗಾಯಿಯಲ್ಲಿ ತಿಂದರೆ ಇಷ್ಟೊಂದು ಹುಳಿ ಪಂಚೇರ್ ಎಂದು ಊಹಿಸಿರಲಿಲ್ಲ. ಅಂದಿನಿಂದ ಅಮ್ಮನೇ ನಮಗೆ ಹಣ್ಣಾದ ರಸಪುರಿಯನ್ನು ಪರೀಕ್ಷಿಸಿ ತಿನ್ನಲು ಕೊಡುತ್ತಿದ್ದರು. ಆ ತಾಜಾ ರಸಪುರಿ ಮಾವಿನ ರುಚಿಯು ನನ್ನ ನಾಲಿಗೆಯಲ್ಲಿ ಕೂತಿರುವಾಗ ಆಮೇಲೆ ಬಂದ ಮಲ್ಲಿಕಾಳಿಗೆ ಎರಡನೇಯ ಸ್ಥಾನ ತಾನೆ?
ಇವೆಲ್ಲಾ ಇರಲಿ, ನಮ್ಮ ತಾಯಿ ಹೇಳಿದ ಮಾತು `ನನ್ನಳಿಯನಿಗೆ ಭೂಮ್ ತಾಯಿ ಒಲೀತಾಳೆ!’ ಎಂಬುದು ನಿಜ ಅನಿಸುತ್ತದೆ. ನಮ್ಮ ಭೂಮಿಯ ಫಸಲು ಹಣ್ಣುಹಂಪಲು ಏನೇ ಬೆಳೆದರೂ (ಮೂಲಂಗಿ ಹೊರತುಪಡಿಸಿ!) ಅದಕ್ಕೊಂದು ವಿಶೇಷ ರುಚಿ ಇದ್ದೇ ಇರುತ್ತದೆ.
– ಪ್ರೊ. ಕೆ ಸುಮಿತ್ರಾಪಾಯಿ
- Advertisement -

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಯುಎಸ್ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, ಹರ್ದೀಪ್ ಸಿಂಗ್‌ ಹತ್ಯೆ ಬಗ್ಗೆ ಉಲ್ಲೇಖ

0
ಯುನೈಟೆಡ್ ಸ್ಟೇಟ್ಸ್ ತನ್ನ 2023ರ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, BBC ಮೇಲೆ ತೆರಿಗೆ ಅಧಿಕಾರಿಗಳ ದಾಳಿ, ಕೆನಡಾದಲ್ಲಿ ಸಿಖ್ ಕಾರ್ಯಕರ್ತ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಂತಹ ಭಾರತಕ್ಕೆ ಸಂಬಂಧಿಸಿದ ಪ್ರಮುಖ...