Homeಅಂಕಣಗಳುನಾವು ದಕ್ಷಿಣ ಭಾರತೀಯರು ಕಪಿಗಳಾ?

ನಾವು ದಕ್ಷಿಣ ಭಾರತೀಯರು ಕಪಿಗಳಾ?

- Advertisement -
- Advertisement -

ಗೌರಿ ಲಂಕೇಶ್ |

ರಾಮಸೇತುವಿನ ಸುತ್ತ ನಡೆಯುವ ವಾದವಿವಾದಗಳಲ್ಲಿ ನನ್ನದೊಂದು ಪ್ರಶ್ನೆಗೆ ಯಾರಾದರೂ ಉತ್ತರ ನೀಡುತ್ತಾರಾ? ಪ್ರಶ್ನೆ ಏನೆಂದರೆ ರಾಮ ಸೇತುವನ್ನು ರಾಮನೇ ಕಟ್ಟಿದ್ದು-ನಂಬಿಕೆ/ಪುರಾಣ/ಚರಿತ್ರೆ ಅಥವಾ ಇನ್ನಾವುದೋ ಕಾಗಕ್ಕ-ಗುಬ್ಬಕ್ಕ ಕತೆಯ ಪ್ರಕಾರ ಎಂಬುದನ್ನು ಸತ್ಯ ಎಂದು ಒಪ್ಪಿಕೊಳ್ಳುವುದಾದರೆ, ಅದೇ ಪ್ರಕರಣ ಕುರಿತಂತೆ ನಾವು ದಕ್ಷಿಣ ಭಾರತದ ಜನ ವಾನರರು-ಅಂದರೆ ಕಪಿಗಳು, ಮಂಗಗಳು ಎಂಬುದನ್ನು ಒಪ್ಪಿಕೊಳ್ಳಬೇಕಲ್ಲವೇ?

ಈ ಪ್ರಶ್ನೆ ಯಾಕೆಂದರೆ ರಾಮಾಯಣದ ಪ್ರಕಾರ ರಾಮನ ಸೈನ್ಯದಲ್ಲಿ ಇದ್ದದ್ದು ಕಪಿಗಳು. ಆ ಕಾಲದಲ್ಲೇ ರಾಮ ಆದರ್ಶ ಪುರುಷನಾಗಿದ್ದರೂ, ಏಕಪತ್ನಿವ್ರತಸ್ಥನಾಗಿದ್ದರೂ ದಕ್ಷಿಣ ಭಾರತದ ‘ಜನ’ ಇನ್ನೂ ಮಂಗಗಳಾಗಿಯೇ ಉಳಿದಿದ್ದರಲ್ಲದೆ, ಪಕ್ಕಾ ಕಾಡುಪ್ರಾಣಿಗಳಂತೆ ಜೀವಿಸುತ್ತಿದ್ದರು. ಒಬ್ಬರ ಹೆಂಡಂದಿರನ್ನು ಇನ್ನೊಬ್ಬರು ಲಪಟಾಯಿಸುತ್ತಿದ್ದರು, ವಿವೇಚನಾ ಶಕ್ತಿ ಇಲ್ಲದವರಾಗಿದ್ದರು!

ಕತೆ, ಪುರಾಣ, ಚರಿತ್ರೆ, ಇತಿಹಾಸ, ವಿಜ್ಞಾನ ಇವುಗಳ ನಡುವಿನ ವ್ಯತ್ಯಾಸವನ್ನು ಅರಿಯದ ಜನ ‘ಹದಿನೇಳು ಲಕ್ಷ ಐವತ್ತು ಸಾವಿರ ವರ್ಷಗಳ ಹಿಂದೆಯೇ ರಾಮನ ವಾನರ ಸೈನ್ಯ ಈ ಸೇತುವೆಯನ್ನು ನಿರ್ಮಿಸಿತ್ತು’ ಎಂದು ವಾದಿಸುತ್ತಾರಲ್ಲವೆ, ಬೀದಿಗಿಳಿದು ಮಂಗಗಳಂತೆ ವರ್ತಿಸುತ್ತಾರೆ.
ಎಲ್ಲಾ ಧರ್ಮಗಳಲ್ಲೂ ಅತಿಶಯೋಕ್ತಿ ಎನಿಸುವ ಮೆಟಫರ್‌ಗಳಿರುತ್ತವೆ. ಅಥವಾ ಆ ಧರ್ಮ ಜನಿಸಿದ್ದ ಕಾಲದ ಮರ್ತಮಾನದಲ್ಲಿ ಮನುಷ್ಯನ ಅರಿವಿಗೆ ಬಂದಿರುವ ಮಾಹಿತಿಯನ್ನು ಆಧರಿಸಿ ಹಲವು ಕತೆಗಳನ್ನು, ನೀತಿಪಾಠಗಳನ್ನು ಕಟ್ಟಿ ಕೊಡುತ್ತವಲ್ಲದೆ ಮನುಷ್ಯನ ಕಲ್ಪನೆಗೆ ಅರೋಪಿಸಿ ದೈವಶಕ್ತಿಯ ಬಗ್ಗೆ ನಂಬಿಕೆ ಜನಿಸುವಂತೆ ಮಾಡಿರಲಾಗುತ್ತದೆ.

ಉದಾಹರಣೆಗೆ ಕ್ರೈಸ್ತ ಧರ್ಮ ಎರಡು ಸಾವಿರ ವರ್ಷಗಳ ಹಿಂದೆ ಜನಿಸಿದಾಗ ಮಾನವನ ವಿಕಸನದ ಬಗ್ಗೆ ಗೊತ್ತಿರಲಿಲ್ಲ. ಆದ್ದರಿಂದ ಆ ಧರ್ಮದಲ್ಲಿ ಈಡನ್ ಗಾರ್ಡನ್‌ನ ಕಲ್ಪನೆ ಇದೆಯಲ್ಲದೆ, ಭೂಮಿ ಚಪ್ಪಟೆ ಆಗಿದೆ ಎಂದೂ, ಅದರ ಸುತ್ತ ಸೂರ್ಯನೆ ಚಲಿಸುತ್ತಾನೆಂದೂ ಅದರ ಧರ್ಮಗ್ರಂಥ ಬೈಬಲ್‌ನಲ್ಲಿ ದಾಖಲಿಸಲಾಗಿದೆ. ಅಂದಮಾತ್ರಕ್ಕೆ ಇವತ್ತು ಸತ್ಯ ಎಂದು ಸಾಬೀತುಪಡಿಸಲಾಗಿರುವ ಚಾರ್ಲ್ಸ್ ಡಾರ್ವಿನ್‌ನ ವಿಕಾಸವಾದವನ್ನು, ಕೊಪರ್ ನಿಕಸ್‌ನ ಸೌರ ಮಂಡಲದ ರೂಪವನ್ನು ನಿರಾಕರಿಸಲಾಗುತ್ತದೆಯೇ?

ಅಂದಹಾಗೆ ಹದಿನಾರನೇ ಶತಮಾನದಲ್ಲಿ ಕೊಪರ್‌ನಿಕಸ್ ಮತ್ತು 19ನೇ ಶತಮಾನದಲ್ಲಿ ಚಾರ್ಲ್ಸ್ ಡಾರ್ವಿನ್ ಇಬ್ಬರೂ ಅಂದಿನ ಮೂಲಭೂತವಾದಿ ಕ್ರೈಸ್ತರ ನಿಂದನೆಗೆ ಗುರಿಯಾಗಿದ್ದರು. ನಮ್ಮ ವಿಪರ್ಯಾಸ ಎಂತಹದ್ದೆಂದರೆ ಇವತ್ತು 21ನೇ ಶತಮಾನದಲ್ಲಿ ವೈಜ್ಞಾನಿಕವಾಗಿ ಲಭ್ಯವಿರುವ ಸಾಕ್ಷ್ಯಯಗಳನ್ನು ಆಧರಿಸಿ ರಾಮಸೇತುವನ್ನು ರಾಮನಾಗಲಿ, ಕಪಿಸೈನ್ಯವಾಗಲಿ ನಿರ್ಮಿಸಿದ್ದಲ್ಲ ಎಂದು ಹೇಳಿದರೆ ‘ಹಿಂದೂ ನಂಬಿಕೆಗಳಿಗೆ ಅವಮಾನ’ ಎಂದು ಕೂಗಾಡುವವರು, ಪ್ರತಿಭಟನೆಗೆ ಇಳಿಯುವವರು ನಮ್ಮ ಸುತ್ತಲೂ ಇದ್ದಾರೆ.
ಹೋಗಲಿ, ಇಲ್ಲಿಯವರೆಗೂ ಲಭ್ಯವಾಗಿರುವ ಮಾಹಿತಿ ಏನನ್ನು ಹೇಳುತ್ತದೆ ಎಂಬುದಕ್ಕೆ ಹಲವು ಅಂಕಿಅಂಶಗಳನ್ನು ಗಮನಿಸೋಣ. ಭೂಖಂಡ ಚದುರುವಿಕೆ ಸಂಭವಿಸಿ ಇಂದಿನ ವಿವಿಧ ಖಂಡಗಳು ನಿರ್ಮಿತವಾಗಿದ್ದು ಸುಮಾರು 2,00,000,000 ವರ್ಷಗಳ ಹಿಂದೆ. ಅಷ್ಟೇ ಅಲ್ಲ, ಆಧುನಿಕ ಮಾನವ ರೂಪಗೊಂಡಿದ್ದೂ 1,00,000 ವರ್ಷಗಳ ಹಿಂದೆ. ಅದರಲ್ಲೂ ತೀರಾ ಇತ್ತೀಚೆಗೆ ಎನಿಸುವ 10,000 ವರ್ಷಗಳ ಹಿಂದಷ್ಟೇ ಆತ ಕಾಡುಪ್ರಾಣಿಯಂತೆ ಜೀವಿಸುವುದನ್ನು ನಿಲ್ಲಿಸಿ ಕೃಷಿಕನಾಗಿದ್ದು. ಅಂದರೆ ಹತ್ತು ಸಾವಿರ ವರ್ಷಗಳಷ್ಟು ಹಿಂದೆ ಭೂಮಿಯ ಮೇಲೆ ರಾಜರು, ರಾಜವಂಶಗಳು, ಇಂಥದ್ದು ಯಾವುದೂ ಇರಲಿಲ್ಲ.

ಭಾರತದ ಬಗ್ಗೆ ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ಮಧ್ಯೆಪ್ರದೇಶದ ಭೀಮ್‌ಬೆಟ್ಟ ಎಂಬಲ್ಲಿ ಲಭ್ಯವಾಗಿರುವ ಮಾಹಿತಿಯ ಪ್ರಕರ 9,000 ವರ್ಷಗಳ ಹಿಂದೆ ಇಲ್ಲಿ ಕಾಡುಮಾನವ ವಾಸಿಸುತ್ತಿದ್ದ, ಅದಕ್ಕಿಂತ ಪುರಾತನ ಕಾಲದಲ್ಲಿ ಇಲ್ಲಿ ಮಾನವ ಇದ್ದನೆಂಬುದಕ್ಕೆ ಯಾವುದೇ ಪುರಾವೆಗಳೂ ಸಿಕ್ಕಿಲ್ಲ. ಅಷ್ಟು ಮಾತ್ರವಲ್ಲ, ಹರಪ್ಪ ನಾಗರಿಕತೆ ಇದ್ದದ್ದು ಸುಮಾರು 4,000 ವರ್ಷಗಳ ಹಿಂದೆ; ಋಗ್ವೇದ ರಷಿತವಾಗಿದ್ದು 3.000 ವರ್ಷಗಳ ಹಿಂದೆ, ರಾಮಾರಣವನ್ನು ವಾಲ್ಮೀಕಿ ರಚಿಸಿದ್ದು 2,300 ವರ್ಚಗಳ ಕೆಳಗೆ. ತುಳಸಿದಾಸ ತನ್ನ ರಾಮಚರಿತ ಮಾನಸ ಸೃಷ್ಟಿಸಿದ್ದು 400 ವರ್ಷಗಳ ಹಿಂದೆ.

ಈ ಎಲ್ಲಾ ಅಂಕಿ, ಅಂಶಗಳನ್ನು ಗಣನೆಗೆ ತೆಗೆದುಕೊಂಡು ನೋಡಿದಾಗ ‘ಹದಿನೇಳು ಲಕ್ಷ ಐವತ್ತು ಸಾವಿರ ವರ್ಷಗಳ ಹಿಂದೆಯೇ ರಾಮ ಈ ಸೇತುವೆಯನ್ನು ನಿರ್ಮಿಸಿದ್ದ’ ಎಂದು ಚೆಡ್ಡಿಗಳು ಅರಚುತ್ತಿರುವುದು ಎಷ್ಟು ಹಾಸ್ಯಾಸ್ಪದವಾಗಿ ಕಾಣಿಸುತ್ತದಲ್ಲವೇ?!

26 ಸೆಪ್ಟೆಂಬರ್, 2007 (‘ಕಂಡಹಾಗೆ’ ಸಂಪಾದಕೀಯದಿಂದ)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...