ಮೂಢನಂಬಿಕೆಗಳೆಂದರೆ ಸಿಡಿಯುತ್ತಿದ್ದ ‘ಮುಂಗಾರು’ ಪತ್ರಿಕೆ ಬಿಟ್ಟ ಮೇಲೆ ನಾನು ಕೆಲವು ಸಂಜೆ ಪತ್ರಿಕೆಗಳಲ್ಲೂ ಕೆಲಸ ಮಾಡಿದ್ದೆ. ಇವೆಲ್ಲವೂ ದಿನ ಭವಿಷ್ಯ ಪ್ರಕಟಿಸುತ್ತಿದ್ದವು. ಆದರೆ, ಲೇವಡಿಯ ಹೊರತು ನಾವೇನೂ ಮಾಡುವಂತಿರಲಿಲ್ಲ!
ಈ ಭವಿಷ್ಯಗಳು ಹಿಂದೆ ಹವಾಮಾನ ಇಲಾಖೆಯ ಭವಿಷ್ಯಗಳಂತೆ ಇರುತ್ತಿದ್ದವು- ‘ರಾಜ್ಯದ ಉತ್ತರ ಒಳನಾಡಿನ ಕೆಲವೆಡೆ ಮಳೆಯಾಗಲಿದೆ’. ಒಂದೆರಡು ಹಳ್ಳಿಗಳಲ್ಲಿ ನಾಲ್ಕು ಹನಿ ಬಿದ್ದರೂ ಭವಿಷ್ಯ ನಿಜವಾಗುತ್ತದೆ!
ಮನೆಯಲ್ಲಿ ಮನಸ್ತಾಪ, ಹೆಂಡತಿ ಜೊತೆ ಜಗಳ, ಹಣದ ಮುಗ್ಗಟ್ಟು, ಸಹೋದ್ಯೋಗಿಗಳಿಂದ ಕಿರುಕುಳ, ಮೇಲಧಿಕಾರಿಗಳಿಂದ ದಬ್ಬಾಳಿಕೆ, ಸಾಲಗಾರರಿಂದ ತೊಂದರೆ ಇತ್ಯಾದಿಗಳೂ, ಲಾಟರಿಯಲ್ಲಿ ಅದೃಷ್ಟ, ಮಕ್ಕಳಿಂದ ಮನಸ್ಸಿಗೆ ಉಲ್ಲಾಸ, ಸದ್ಯವೇ ಭಡ್ತಿ ಯೋಗ ಇತ್ಯಾದಿಗಳೂ ಇರುತ್ತಿದ್ದವು! ನಾವು ತಮಾಷೆಗೆ ಮಿತ್ರನಿಂದ ಪುತ್ರಭಾಗ್ಯ ಇತ್ಯಾದಿಯಾಗಿ ಲೇವಡಿಯನ್ನೂ ಮಾಡುತ್ತಿದ್ದೆವು. ಇವೆಲ್ಲಾ ಪ್ರತಿಯೊಬ್ಬರ ಜೀವನದಲ್ಲಿ ಸಾಮಾನ್ಯವಾಗಿರುವುದರಿಂದ ಓದುಗರಿಗೆ ಹೇಗೋ ಒಂದೊಂದು ರೀತಿಯಲ್ಲಿ ಹೊಂದಾಣಿಕೆಯಾಗುತ್ತಿದ್ದವು.
ಒಂದು ಪತ್ರಿಕೆಯಲ್ಲಿ ಒಬ್ಬರು ಜ್ಯೋತಿಷಿ ವಾರಕ್ಕೊಮ್ಮೆ ಬಂದು ಇಡೀ ವಾರದ ಭವಿಷ್ಯ ಬರೆದು ತಂದುಕೊಟ್ಟು ಹೋಗುತ್ತಿದ್ದರು! ಸುಮ್ಮನೇ ಹೋಗುತ್ತಿರಲಿಲ್ಲ- ಜ್ಯೋತಿಷ್ಯದ ಬಗ್ಗೆ ಕೊರೆದೇ ಹೋಗುತ್ತಿದ್ದರು! ಇದರಿಂದ ಈ ಮಹಾನ್ ಬುರುಡೆ ಶಾಸ್ತ್ರದ ನನ್ನ ಜ್ಞಾನ ಅಪಾರ ಅಭಿವೃದ್ಧಿಯಾಯಿತು!
ಒಂದು ಸಲ ಅವರು ಬರಬೇಕಾದ ದಿನ ಬರಲಿಲ್ಲ. ಏನು ಮಾಡುವುದು ಎಂದು ಉಪಸಂಪಾದಕನಿಗೆ ತಲೆಬಿಸಿ! ‘ತಲೆಬಿಸಿ ಎಂತಕ್ಕೆ? ಹಿಂದಿನದ್ದೇ ಒಂದು ಹಾಕು!’ ಎಂದೆ ನಾನು. ಇದು ಓದುಗರಿಗೆ ಮೋಸ ಎಂದು ನನಗೆ ಅನಿಸಲಿಲ್ಲ! ಮೊದಲೇ ಸುಳ್ಳು! ಆ ಸುಳ್ಳಿನಲ್ಲಿ ಮತ್ತೆ ಮೋಸ ಎಂತದ್ದು!? ಅವರು ಮರುದಿನವೂ ಬರಲಿಲ್ಲ! ಈ ಪರಿಪಾಠ ಮುಂದುವರಿಯಿತು. ಕೆಲವು ದಿನಗಳ ನಂತರ ಅತಂಕದಿಂದಲೇ ಬಂದರು- ಬರೆಯುವ ಅವಕಾಶ ತಪ್ಪಿ ಹೋಯಿತೆ ಎಂದು. ಯಾಕೆಂದರೆ, ಪತ್ರಿಕೆಯಲ್ಲಿ ಪ್ರತೀದಿನ ಹೆಸರು ಪ್ರಕಟವಾಗುತ್ತಿದ್ದುದರಿಂದ ಅವರಿಗೆ ಉಚಿತ ಜಾಹೀರಾತು! ಇದರಿಂದ ಕುರಿಗಳ- ಕ್ಷಮಿಸಿ, ಗಿರಾಕಿಗಳ ಸಂಖ್ಯೆ ಹೆಚ್ಚುತ್ತಿತ್ತು!.
ಬಂದವರೇ, ”ನನಗೆ ಹುಷಾರಿರಲಿಲ್ಲ ಮಾರಾಯ್ರೆ! ಮಲೇರಿಯಾ! ನನ್ನ ಬದಲು ಭವಿಷ್ಯ ಯಾರು ಬರೆಯುತ್ತಿದ್ದುದು?” ಎಂದು ಕೇಳಿದರು. ಪಾಪ! ಎಲ್ಲರ ಸಮಸ್ಯೆಗಳನ್ನು ಮುಂಚಿತವಾಗಿ ಹೇಳುವ ಅವರಿಗೆ ತನಗೆ ಮಲೇರಿಯಾ ಬರಲಿದೆ ಎಂದು ಗೊತ್ತಿರಲಿಲ್ಲ! ಗೊತ್ತಿದ್ದರೆ ಮುಂಚಿತವಾಗಿ ಒಂದು ತಿಂಗಳದ್ದು ಬರೆದುಕೊಟ್ಟು ಹೋಗುತ್ತಿರಲಿಲ್ಲವೆ!?
ನಮ್ಮ ಸಂಪಾದಕರು ಸ್ವತಃ ಈ ಜ್ಯೋತಿಷ್ಯದ ಹುಚ್ಚನಾಗಿದ್ದರೂ ಮಹಾ ಕಿಡಿಗೇಡಿ!- (ಈಗ ಅವರಿಲ್ಲ!; ಅವರ ಆತ್ಮಕ್ಕೆ ಶಾಂತಿ ಸಿಗಲಿ!) ಯಾರೋ ಪ್ರಸಿದ್ಧ ಜ್ಯೋತಿಷಿಯ ಹೆಸರು ಹೇಳಿ ಬುರುಡೆಬಿಟ್ಟರು!
“ಹೋ! ಹೌದೆ? ನೋಡುವಾಗಲೇ ಅಂದಾಜಾಯಿತು- ಯಾರೋ ದೊಡ್ಡಜನ ಬರೆದದ್ದು ಅಂತ! ಸರೀಯಾಗಿತ್ತು!” ಎಂದು ಒತ್ತಿಹೇಳಿ, ಮುಂದಿನ ವಾರದ ಭವಿಷ್ಯ ಕೊಟ್ಟು ಹೋದರು. ಒಂದು ವೇಳೆ ಸಂಪಾದಕರು ಯಾವುದೋ ಕಾಂಜಿಪೀಂಜಿ ಹೆಸರು ಹೇಳಿರುತ್ತಿದ್ದರೆ, “ಛೇ! ಏನೇನೂ ಸರಿಯಿರಲಿಲ್ಲ!! ಮೂರನೇ ಮನೆಯಲ್ಲಿ ಕುಜ ಇರುವಾಗ….” ಎಂದೆಲ್ಲಾ ಕೊರೆಯುತ್ತಿದ್ದರು.
ನಂತರ ನಾನು ಸೇರಿದ ಸಂಜೆ ಪತ್ರಿಕೆ ಮಾಲಕರು ಪಕ್ಕಾ ವ್ಯಾಪಾರಿ. ಪತ್ರಿಕೆ ಅರಂಭವಾಗುವ ಮೊದಲೇ ಸೇರಿದ್ದ ನಾನು ಭವಿಷ್ಯ ಬೇಡವೆಂದರೂ ಕೇಳಲಿಲ್ಲ! ‘ಹೇ! ನಿಮಗೆ ಗೊತ್ತಿಲ್ಲ! ಅದಕ್ಕೇ ಓದುಗರಿದ್ದಾರೆ. ಭವಿಷ್ಯ ಬೇಕೇಬೇಕು. ದಿನ ಭವಿಷ್ಯದ ಜೊತೆಗೆ ವಾರಭವಿಷ್ಯವೂ ಬೇಕು’ ಎಂದರು. ಸರಿ ಡೆಸ್ಕಿನಲ್ಲೇ ಒಂದಷ್ಟು ಭವಿಷ್ಯ ಬರೆಯಲಾಯಿತು! ಅದನ್ನು ಡಿಟಿಪಿಯವರ ಕೈಗೆ ಒಪ್ಪಿಸಲಾಯಿತು! ಅವರೇ ಲಾಟರಿ ತೆಗೆದಂತೆ ತಿರುಗಿಸಿ ತಿರುಗಿಸಿ, ಒಂದೊಂದು ರಾಶಿಗೆ ಒಂದೊಂದು ಹಾಕುತ್ತಿದ್ದರು! ಇದರಲ್ಲಿ ಮೋಸವೇನೂ ಇಲ್ಲ! ಭವಿಷ್ಯ ಎಂದರೆ ‘ಅದೃಷ್ಟದ ಆಟ’ವಲ್ಲವೆ!!? ಗಿಣಿಶಾಸ್ತ್ರದಂತೆ ಗಿಣಿಯ ಬದಲು ಮನುಷ್ಯರು ಚೀಟಿ ಹೆಕ್ಕಿದಂತೆ ಆಯಿತಷ್ಟೇ!
ಇದನ್ನು ಓದಿದ ಮೇಲೆ, ನೀವೂ ನಿಮ್ಮ ಪತ್ರಿಕೆಗಳಲ್ಲಿ ಬರುವ ದಿನಭವಿಷ್ಯ ತಪ್ಪದೇ ಓದಿ ಮಾರ್ಗದರ್ಶನ ಪಡೆಯಿರಿ!
ಇದನ್ನು ಬರೆಯಲು ಕಾರಣವೆಂದರೆ, ಈ ರೀತಿ ಮಾಡದ ಪತ್ರಿಕೆಗಳೇ ಕಡಿಮೆ ಎಂದು ಹಳೆಯ ಪತ್ರಕರ್ತರನ್ನು ಕೇಳಿದರೆ ಸಾಕ್ಷಿ ಹೇಳುತ್ತಾರೆ. ನಾವು ಹಿಂದೆ ಮಾಡಿದ್ದು, ಮಹಾ ಅನೈತಿಕ ಅನಿಸಿದರೂ ಮಹಾ ಮೋಸವೆಂದು ನನಗನಿಸಿಲ್ಲ! ಇದರಿಂದ ನಮಗೇನೂ ಲಾಭವಿರಲಿಲ್ಲ! ಆದರೀಗ ಮಹಾಮೋಸಗಾರರ ಕದೀಮ ದಂಡೇ ಪತ್ರಿಕಾ ಮತ್ತು ದೃಶ್ಯ ಮಾಧ್ಯಮಗಳಲ್ಲಿ ವಕ್ಕರಿಸಿ ವಿಜ್ಞಾನದ ಕಪಾಳಕ್ಕೆ ಹೊಡೆಯುವಂತಹ ಸಂಶೋಧನೆಗಳನ್ನು ಯಾವುದೇ ನಾಚಿಕೆ ಅಥವಾ ಹಿಂಜರಿಕೆ ಇಲ್ಲದೇ ಬೊಗಳುತ್ತವೆ.
ಮೂಢನಂಬಿಕೆಗಳನ್ನು ನಿವಾರಿಸಬೇಕಾದ ಮಾಧ್ಯಮಗಳೇ ಅವುಗಳಿಗೆ ಪ್ರೋತ್ಸಾಹ ನೀಡಿ ಧನಲಾಭ ಮಾಡಿಕೊಳ್ಳುತ್ತಿವೆ. ಪತ್ರಿಕೆಗಳಲ್ಲಿ ಕೇವಲ ದಿನ, ವಾರ ಭವಿಷ್ಯಗಳೇ ಅಲ್ಲದೆ, ಮಹಾನ್ ಸಂಶೋಧನಾ ಲೇಖನಗಳೂ ಬರುತ್ತಿವೆ! ಪ್ರಳಯವಾಗುತ್ತದೆ ಎಂದು ಸಾವಿರಾರು ಜನರನ್ನು ಹೆದರಿಸಿದ ದಂಡಪಿಂಡ ಇಂದಿಗೂ ತನ್ನ ಬ್ರಹ್ಮಾಂಡ ಹೊಟ್ಟೆಯನ್ನು ಹೊತ್ತುಕೊಂಡು ಒದರುತ್ತಾ ಹೊಟ್ಟೆಹೊರೆದುಕೊಳ್ಳುತ್ತಿದ್ದಾನೆ!
ಕೇವಲ ಉದಾಹರಣೆಗಾಗಿ ಕೆಲವು ಪ್ರಸಿದ್ಧ ಪತ್ರಿಕೆಗಳಲ್ಲಿ ಬಂದ ಲೇಖನಗಳಿಂದಲೇ ನಾನು ಪಡೆದುಕೊಂಡ ಜ್ಞಾನವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
“ಕೆಲವರಿಗೆ ಎಷ್ಟು ಹುಡುಕಾಡಿದರೂ ಸರಿಯಾದ ಸಂಗಾತಿ ಸಿಗದೆ ಇರುವುದರಿಂದ ಮದುವೆ ವಿಳಂಬವಾಗಿರುತ್ತದೆ. ಇದಕ್ಕೆ ಜ್ಯೋತಿಷ್ಯದ ಪ್ರಕಾರ ಪಿತೃದೋಷ ಅಥವಾ ಸರ್ಪದೋಷವೆಂದು ಕರೆಯಲಾಗುತ್ತದೆ. ಆದರೆ ಈ ದೋಷಗಳನ್ನು ನಿವಾರಣೆ ಮಾಡಲು ಆಧ್ಯಾತ್ಮಿಕ ಪರಿಹಾರಗಳು ಇವೆ! ಇದನ್ನು ಪಾಲಿಸಿಕೊಂಡು ಹೋದರೆ ಮುಂದೆ ಸಂಗಾತಿ ಸಿಗುವುದರಲ್ಲಿ ಯಾವುದೇ ಸಂಶಯವಿಲ್ಲ!” ಇದು ಜೋಯಿಸರುಗಳ ಒಂದು ಸಾಮಾನ್ಯ ಬುರುಡೆ. ಪರಿಹಾರ ಇದೆ! ಲಾಭ ಗ್ಯಾರಂಟಿ- ಜೋಯಿಸರಿಗೆ!
ಎಂತಹ ವಿಚಿತ್ರ ನೋಡಿ! ‘ನನ್ನ ತಂಗಿಗೊಂದು ಗಂಡು ಕೊಡಿ’ ಎಂಬ ನಾಟಕವನ್ನೇ ಪಿ.ಲಂಕೇಶರು ಬರೆದಿದ್ದಾರೆ! ಬಹುತೇಕ ಜನರಿಗೆ ಈ ಸಮಸ್ಯೆ ಇದೆ! ಜಾತಿ, ಉಪಜಾತಿ, ಕುಲ, ಜಾತಕ, ನಕ್ಷತ್ರ, ಐಶ್ವರ್ಯ, ಅಂತಸ್ತು, ರೂಪ, ಬಣ್ಣ, ಗುಣ, ಎತ್ತರ, ವಿದ್ಯೆ…ಮಣ್ಣು ಮಸಣ ಎಂದು ಹೆಣಗಾಡುವುದರಿಂದ ಈ ಸಮಸ್ಯೆ ಉಂಟಾಗುವುದಿಲ್ಲ! ಇದಕ್ಕೆ ಪಿತೃದೋಷ, ಶನಿದೋಷ, ನಾಗದೋಷಗಳೇ ಕಾರಣ!
ಇದಕ್ಕೆ ಪರಿಹಾರ ನೋಡಿ! “ಹಾಲು, ಮೊಸರು, ಎಳನೀರು, ಹೂ, ಜೇನುತುಪ್ಪ, ಕಬ್ಬಿನ ಹಾಲು ಇತ್ಯಾದಿಯಿಂದ ಶಿವನ ಲಿಂಗಕ್ಕೆ ಅಭಿಷೇಕ ಮಾಡಬೇಕು.” (ಇದನ್ನೇ ಮಕ್ಕಳಿಗಾಗಲೀ, ಹಸಿದವರಿಗಾಗಲೀ ಕೊಟ್ಟರೆ ಫಲವಿಲ್ಲ!)
ಸೋಮವಾರ ಅಥವಾ ಶನಿವಾರದಂದೇ ಈ ಕಾರ್ಯಗಳನ್ನು ಮಾಡಬೇಕು. (ಬೇರೆ ದಿನಗಳಲ್ಲಿ ಇವುಗಳನ್ನು ಸೇವಿಸುವುದಿಲ್ಲ ಎಂದು ಟೈಮ್ಟೇಬಲ್ ಹಾಕಿರುವ ದೇವರು ಅದನ್ನು ಸೀಕ್ರೆಟಾಗಿ ಈ ಜೋಯಿಸರಿಗೆ ತಿಳಿಸಿರುತ್ತಾನೆ!)
“ಪಿತೃದೋಷ ಅಥವಾ ಶಿಕ್ಷೆಯನ್ನು ನಿವಾರಣೆ ಮಾಡುವ ಸಲುವಾಗಿ ಶನಿದೇವರನ್ನು ಒಲಿಸಿಕೊಳ್ಳಲು ಹನುಮಂತನಿಗೆ ಹರಕೆ ಒಪ್ಪಿಸಬೇಕು! ಅಥವಾ ಓಂ ಶಂ ಶನೈಶ್ಚರಾಯ ನಮಃ ಮಂತ್ರವನ್ನು ಪಠಿಸಬೇಕು.” ಇದೆಂತಹ ಲಾಜಿಕ್ ಎಂದು ಅರ್ಥವಾಗುವುದಿಲ್ಲ. ಈಗ ಬೆಂಗಳೂರು ಮತ್ತಿತರ ನಗರಗಳಲ್ಲಿ ಶನಿದೇವರು ಜೀಪು ರಥದಲ್ಲಿ ಪ್ರದಕ್ಷಿಣೆ ಬಂದು ಕಲೆಕ್ಷನ್ ಮಾಡುವುದರಿಂದ ಮತ್ತು ಹಳ್ಳಿಹಳ್ಳಿಗಳಲ್ಲಿ ಸಾಮೂಹಿಕ ಶನಿಪೂಜೆಗಳು ನಡೆಯುತ್ತಿರುವುದರಿಂದ ಆತನ ವಿಷಯದಲ್ಲಿ ಹನುಮಂತನಿಗೇನು ಕೆಲಸ? ಇದು ಅನ್ಫೇರ್ ಟ್ರೇಡ್ ಪ್ರ್ಯಾಕ್ಟೀಸ್ ಆಗುವುದಿಲ್ಲವೇ!?
ಇದೇ ರೀತಿಯಲ್ಲಿ ಪಿತೃದೋಷ, ಶನಿದೋಷ, ನಾಗದೋಷ, ಗ್ರಹದೋಷಗಳಿಂದ ನಿಮಗೆ ಆಗುವ ಅನಾಹುತಗಳನ್ನೂ, ಅದರಿಂದ ಜೋಯಿಸರಿಗೆ ಆಗುವ ಲಾಭಗಳನ್ನು ಮುಂದೆ ನೋಡೋಣ!
– ನಿಖಿಲ್ ಕೋಲ್ಪೆ