Homeಸಾಹಿತ್ಯ-ಸಂಸ್ಕೃತಿಕಥೆಕೇಪಿ ಮೇಷ್ಟ್ರು ಇಲಿ ಹೊಡೆದ್ರು

ಕೇಪಿ ಮೇಷ್ಟ್ರು ಇಲಿ ಹೊಡೆದ್ರು

- Advertisement -
- Advertisement -

ನಮ್ಮ ಪುಟ್ಟ ಊರಿಗೆ ಹಳೆಯ ಕಾಲದ ಒಂದು ಹೈಸ್ಕೂಲೇ ಯುನಿವರ್ಸಿಟಿಯಂತಿತ್ತು. ಊರಿಂದ ಸುಮಾರು ಅರ್ಧ ಮೈಲಿಯಷ್ಟು ದೂರದಲ್ಲಿ ಯಾರೋ ದಾನಿಗಳು ಕೊಟ್ಟ ಅಜಮಾಸು ಎರಡು ಎಕರೆ ಜಮೀನಿನ ಒಂದು ಮೂಲೆಯಲ್ಲಿ ಕೆಂಪು ಹೆಂಚಿನ ಹಳೇ ಕಾಲದ ಕಟ್ಟಡವೇ ಅದರ ಅಸ್ತಿತ್ವ. ಆ ಹೈಸ್ಕೂಲಿನ ಮುಂದೆ ತುಂಬಾ ಸೊಗಸಾಗಿ ಸಲುಹಿದ್ದ ಹಸಿರು ಗಿಡಗಳ ಕಿರು ಉದ್ಯಾನ ಮತ್ತು ಶಾಲೆಯ ಬೆನ್ನಿಗೆ ಚಾಚಿಕೊಂಡಿದ್ದ ವಿಶಾಲ ಆಟದ ಮೈದಾನಗಳು ಅದರ ಅಂದ ಹೆಚ್ಚಿಸಿದ್ದವು. ತನ್ನ ಶಿಥಿಲ ಕಟ್ಟಡದ ಹೊರತಾಗಿಯೂ ಸಸ್ಯ ಶ್ಯಾಮಲೆಯಂತೆ ಹೈಸ್ಕೂಲು ಕಂಗೊಳಿಸುತ್ತಿದ್ದುದೇ ಅವುಗಳಿಂದಾಗಿ.
ನಾನು ಎಂಟನೇ ಕ್ಲಾಸಿನ ಮೂಲಕ ಆ ಶಾಲೆಗೆ ಕಾಲಿಡುವ ವೇಳೆಗಾಗಲೆ ಅದು ಹಳೆಯ ಕಟ್ಟಡವಾಗಿಬಿಟ್ಟಿತ್ತು. ಮಳೆಗಾಲದಲ್ಲಿ ಜಡಿ ಮಳೆಯೇನಾದ್ರು ಹಿಡಿದುಬಿಟ್ಟರೆ ಹೆಂಚುಗಳ ಸಂದಿಯಿಂದ ಗೋಡೆಗಳ ಮೇಲೆ ನೀರಿನ ಧಾರೆಗಳು ಧುಮ್ಮಿಕ್ಕುತ್ತಿದ್ದವು. ಮಣ್ಣು ಮತ್ತು ಇಟ್ಟಿಗೆಯ ಗೋಡೆಗಳಾದ್ದರಿಂದ ಹಾಗೆ ಸುರಿಯುತ್ತಿದ್ದ ನೀರಿನ ಧಾರೆಗಳು ಸಹಜವಾಗೇ ಕೆಂಬಣ್ಣದಲ್ಲಿ ನಮ್ಮ ಗಮನ ಸೆಳೆಯುತ್ತಿದ್ದವು. ನಾವು ಅವುಗಳಿಗೆ ಜೋಗ ಫಾಲ್ಸ್ ಅಂತ ಕರೀತಿದ್ದೆವು. ದಪ್ಪಗೆ ಹರಿವ ಧಾರೆಗೆ ರಾಜ ಅಂತಲೂ, ಬಳುಕಾಡುತ್ತ ಇಳಿವ ಧಾರೆಗೆ ರಾಣಿ ಎಂತಲೂ, ರಭಸವಾಗಿ ಇಳಿವ ಧಾರೆಗೆ ರಾಕೆಟ್ ಅಂತಲೂ… ಒಟ್ಟಿನಲ್ಲಿ ನಮ್ಮ ಶಾಲಾ ಕೊಠಡಿಗಳನ್ನೇ ಜೋಗಫಾಲ್ಸ್ ಮಾಡಿಕೊಂಡು ಖುಷಿ ಪಡುತ್ತಿದ್ದೆವು. ಮಕ್ಕಳ ಮನಸ್ಸೇ ಎಷ್ಟು ಮುಗ್ಧವಲ್ಲವೇ? ಆದರೆ ನಮ್ಮ ಮೇಸ್ಟ್ರುಗಳು ಮಾತ್ರ ವಿಪರೀತ ಗಾಬರಿಯಿಂದ ಪರದಾಡುತ್ತಿದ್ದರು. ಅಪ್ಪಿತಪ್ಪಿ ಗೋಡೆಗಳೇನಾದರು ಕುಸಿದು ಬಿದ್ದರೆ ಮಕ್ಕಳ ಗತಿಯೇನು, ದಾಖಲಾತಿಗಳ ಕಥೆಯೇನು ಎಂಬ ಚಿಂತೆ ಅವರದ್ದು. ಮಳೆ ಶುರುವಾಯಿತೆಂದರೆ ನಮ್ಮ ಕ್ಲಾಸುಗಳೇ ಖತಂ. ಎಲ್ಲರನ್ನೂ ಗೋಡೆಯಿಂದ ದೂರ ತಂದು ಕೊಠಡಿಯ ಮಧ್ಯದಲ್ಲಿ ಗುಂಪಾಗಿ ಕೂರಿಸಿಬಿಡುತ್ತಿದ್ದರು. ಅಪ್ಪಿತಪ್ಪಿ ಗೋಡೆ ಕುಸಿದರು ಮಕ್ಕಳಿಗೆ ಕಡಿಮೆ ಹಾನಿಯಾಗಲಿ ಅಂತ! ನಮ್ಮ ಚೇಷ್ಟೆಗಳಿಗೆ ಅಷ್ಟೇ ಸಾಕಾಗಿತ್ತು…. ನಮ್ಮ ಗಲಾಟೆಗಳಿಗೆ ಬ್ರೇಕ್ ಹಾಕಲು ಪಾಪ, ಮೇಸ್ಟ್ರುಗಳು ಆ ಅವಧಿಯನ್ನು ಕಥೆ ಹೇಳುತ್ತಲೋ ನಮ್ಮಿಂದ ಹಾಡು ಹೇಳಿಸುತ್ತಲೋ, ಜೋಕು ಹೇಳುತ್ತಲೋ ಹೇಗೋ ಮ್ಯಾನೇಜ್ ಮಾಡುತ್ತಿದ್ದರು. ಬೋರು ಹೊಡೆಸುವ ಕ್ಲಾಸುಗಳಿಗಿಂತ ಇಂಥ ರಂಜನೆಗೆ ಜಾಗ ಮಾಡಿಕೊಡುತ್ತಿದ್ದ ಮಳೆಗಾಲವೆಂದರೇ ನಮಗೆಲ್ಲ ತುಂಬಾ ಅಚ್ಚುಮೆಚ್ಚಿನ ಕಾಲ. ಮಳೆಗಾಲದಲ್ಲಿ ಧುಮ್ಮಿಕ್ಕಿ ಹರಿಯುತ್ತಿದ್ದ `ಸಾಲಿಗುಡಿ’ ಫಾಲ್ಸುಗಳು ಬೇಸಿಗೆ ವೇಳೆಯಲ್ಲಿ ತಾವು ಹರಿದು ಉಂಟುಮಾಡಿದ್ದ ಕೊರಕಲು ಕಣಿವೆಗಳ ಕುರುಹುಗಳನ್ನು ಬಿಟ್ಟು ಕಣ್ಮರೆಯಾಗಿಬಿಡುತ್ತಿದ್ದವು. ಬೇಸಿಗೆಯ ಧಗೆಯ ನಡುವೆಯೂ ಪಾಠ ಕೇಳಲೇಬೇಕಾದ `ಸಂಕಟ’ದ ಪರಿಸ್ಥಿತಿಯಲ್ಲಿ ನಮಗೆ ಆಶಾಕಿರಣದ ಸಾಂತ್ವನದಂತೆ, ಸದ್ಯದಲ್ಲೇ ನಾವು ಮತ್ತೆ ಧುಮ್ಮಿಕ್ಕಲಿದ್ದೇವೆ ಎಂದು ಆ ಕಣಿವೆಗಳು ನಮ್ಮನ್ನು ಸಂತೈಸಿ, ಪಾಠ ಕೇಳುವಂತೆ ಮಾಡುತ್ತಿದ್ದವು.

ಆ ಶಾಲೆಯಲ್ಲಿ ನಡೆಯುತ್ತಿದ್ದುದು ಮೂರೇ ವರ್ಗಗಳು. ಎಂಟು, ಒಂಬತ್ತು, ಹತ್ತು. ಹೈಸ್ಕೂಲಿಗೆ ಸಿಬ್ಬಂದಿ ಅಂತ ಇದ್ದದ್ದು ಎಂಟು ಮಂದಿ. ಹೆಡ್‍ಮಾಸ್ತರರನ್ನೂ ಸೇರಿಸಿ ಆರು ಮಂದಿ ಶಿಕ್ಷಕರು, ಒಬ್ಬರು ಕ್ಲರ್ಕ್ ಮತ್ತೊಬ್ಬರು, ಮೊದಲೇ ಹೇಳಿದ ಜವಾನ್ ಚಂದ್ರಣ್ಣ. ಆ ಆರರಲ್ಲಿ ನಮಗೆಲ್ಲ ಕನ್ನಡ ಪಾಠ ಮಾಡುತ್ತಿದ್ದ, ಇತಿಹಾಸದ ಕ್ಲಾಸೂ ತೆಗೆದುಕೊಳ್ಳುತ್ತಿದ್ದ ಕೇಪಿ ಮೇಸ್ಟ್ರು ಈ ಕಥೆಯ ಹೀರೊ. ಅವರ ಪೂರ್ತಿ ನಾಮ ಕೆ.ಪರಮೇಶ್ವರಪ್ಪ. ಈ ಶಾಲೆ, ಕಾಲೇಜುಗಳಲ್ಲಿ ಪಾಠ ಹೇಳುವ ಮಾಸ್ತರುಗಳ ಹೆಸರುಗಳಿಗೆ ಕತ್ತರಿಹಾಕಿ, ವಿರೂಪಗೊಳಿಸಿ ಕರೆಯುವ ಪರಂಪರೆಯನ್ನು ಅದ್ಯಾವ ಪುಣ್ಯಾತ್ಮ ಹುಟ್ಟುಹಾಕಿದರೋ ಗೊತ್ತಿಲ್ಲ, ನಮ್ಮ ಶಾಲೆಯಲ್ಲೂ ಅದು ಮುಕ್ಕಾಗದೆ ಜಾರಿಯಲ್ಲಿತ್ತು. ಹಾಗಾಗಿ ಪರಮೇಶ್ವರಪ್ಪ ಕೇಪಿಯಾಗಿ ರೂಪಾಂತರಗೊಂಡಿದ್ದರು. ಎನ್ನೆನ್ನು, ಈಟಿ, ಟೀಜಿಬಿ, ಎಎಮ್ಮೆಸ್ಸು, ಎಎನ್ನೆಸ್ಸು, ಎನ್ಸಿಆರು ಹೀಗೆ ಆ ಮಾಸ್ತರುಗಳ ಅಸಲಿ ಹೆಸರುಗಳೇ ಮರೆತುಹೋಗುವಷ್ಟು ಭೀಕರ ರೂಪದ ಹೆಸರುಗಳು ನಮ್ಮ ನಡುವೆ ಚಲಾವಣೆಯಲ್ಲಿದ್ದವು.
ಈ ನಮ್ಮ ಕೇಪಿ ಮೇಸ್ಟ್ರು ಬಲು ಹಾಸ್ಯಪ್ರಜ್ಞೆಯ ಜಾಯಮಾನದವರು. ಅವರು ತರಗತಿಗೆ ಬಂದರೆ ನಗುವೋ ನಗು. ಅವರ ಕ್ಲಾಸು ಇಲ್ಲದಿದ್ದಾಗಲೂ ಅವರ ಸುತ್ತ ಸುಳಿದಾಡಲು ನಮಗೆಲ್ಲ ಎಂತದೋ ಖುಷಿ. ಆ ಪರಿ ನಮ್ಮನ್ನೆಲ್ಲ ಆಕರ್ಷಿಸಿಟ್ಟುಕೊಂಡಿದ್ದರು. ಕುಳ್ಳಗಿದ್ದರೂ ಹೊಲಮನೆ ಕೆಲಸ ಮಾಡಿಕೊಂಡಿದ್ದ ಅವರು ಕಟ್ಟುಮಸ್ತಾಗಿದ್ದರು. ನೋಡಲು ತೊಂಡೆಹಣ್ಣಿನಷ್ಟು ಕೆಂಪಗಿದ್ದ ಅವರನ್ನು ನಾವೆಲ್ಲ `ಕೇಪಿ ಮೇಸ್ಟ್ರಲ್ಲ, ಕೆಂಪಿನ ಮೇಸ್ಟ್ರು’ ಅಂತ ಗೇಲಿ ಮಾಡುತ್ತಿದ್ದೆವು.
ಹೀಗೆ ಸಾಂಗವಾಗಿ ಸಾಗುತ್ತಿದ್ದ ನಮ್ಮ ಸಾಲಿಗುಡಿ ವ್ಯಾಸಂಗದ ಮೇಲೆ ಅದೊಮ್ಮೆ ಇದ್ದಕ್ಕಿದ್ದಂತೆ ಮೂಷಿಕ ಪಡೆಯ ಹಾವಳಿ ಶುರುವಾಯ್ತು. ಆಲ್‍ಫ್ರೆಡ್ ವೆಜೆನರ್‍ನ ಭೂಖಂಡಗಳ ಅಲೆತದ ಭೂಗೋಳ ಪಾಠವನ್ನು ಪ್ರತ್ಯಕ್ಷವಾಗಿ ತೋರುವಂತೆ ಬಿರುಕು ಬಿಟ್ಟಿದ್ದ ಗೋಡೆಗಳು, ತುಮುಗುಡುವ ಟೆಕ್ಟಾನಿಕ್ ಪ್ಲೇಟುಗಳಂತೆ ನೆಲದ ಸಂಪರ್ಕವೇ ಇಲ್ಲದೆ ಸರಿದಾಡುತ್ತಿದ್ದ ಕಡಪದ ಕಲ್ಲಿನ ಸಂದಿಗಳು, ಸಾಲದ್ದಕ್ಕೆ ಚಂದ್ರಪ್ಪ ಹುಲುಸಾಗಿ ಬೆಳೆಸಿದ್ದ ಉದ್ಯಾನದ ಅಡಗುದಾಣ, ಸುತ್ತಲೂ ಆವರಿಸಿದ್ದ ಹೊಲಗಳ ಪೂರಕ ವಾತಾವರಣ ಮೂಷಿಕ ಪಡೆ ವಿಜೃಂಭಿಸಲು ಹೇಳಿಮಾಡಿಸಿದಂತಿದ್ದವು. ರಾತ್ರೋರಾತ್ರಿ ಕಚೇರಿಯ ಫೈಲುಗಳು, ಕರೆಕ್ಷನ್‍ಗೆ ಕೊಟ್ಟಿದ್ದ ನಮ್ಮ ಹೋಂವರ್ಕ್ ಪುಸ್ತಕಗಳು, ಮಾಸಿಕ ಪರೀಕ್ಷೆಯ ನೋಟ್ ಬುಕ್ಕುಗಳು ಇಲಿ ಇಕ್ಕೆಯ ನಡುವೆ ಧೂಳೀಪಟವಾಗಿ ಬಿದ್ದಿರುತ್ತಿದ್ದವು. ಸುತ್ತಿ ಮೂಲೆಯಲ್ಲಿ ಹೊಟ್ಟಿರುತ್ತಿದ್ದ ಭೂಗೋಳದ ಭೂಪಟಗಳಂತು ಹೀನಾಯವಾಗಿ ಸೋತ ಸೇನಾಪಡೆಯ ಯುದ್ಧಪತಾಕೆಗಳಂತೆ ಚಿಂದಿಚಿಂದಿಯಾಗಿರುತ್ತಿದ್ದವು. ದಿನದಿಂದ ದಿನಕ್ಕೆ ಇಲಿಗಳ ಉಪಟಳ ಹೆಚ್ಚಾಗುತ್ತಲೇ ಬಂತು. ಪ್ರತಿದಿನ ಬೆಳಿಗ್ಗೆ ಶಾಲೆಗೆ ಬಂದಾಕ್ಷಣ ಇವತ್ತು ಇಲಿಗಳು ಏನು ಅವಾಂತರ ಮಾಡಿವೆ ಅಂತ ಹುಡುಕೋದು, ಅದರಿಂದ ನಮಗಾಗುವ ಲಾಭ ನಷ್ಟದ ಬಗ್ಗೆ ಲೆಕ್ಕ ಹಾಕಿ ಚರ್ಚಿಸೋದೆ ನಮ್ಮ ಕೆಲಸವಾಯ್ತು. ಅಪ್ಪಿತಪ್ಪಿ ಯಾವುದಾದರು ಇಲಿ ಸತ್ತುಬಿದ್ದಿದ್ದರೆ ಅವತ್ತಿನ ಇಡೀ ದಿವಸ ಅದರ ಪಾರ್ಥಿವ ಶರೀರಕ್ಕೆ ಶೋಧನೆ ನಡೆಸಿ, ಗಬ್ಬು ನಾತದಿಂದ ಮುಕ್ತಿ ಪಡೆಯುವುದಕ್ಕೇ ಮೀಸಲಾಗುತ್ತಿತ್ತು. ಇಲಿಗಳಿಂದ ನಮ್ಮಂತ ಪಾಠಗಳ್ಳರಿಗೆ ಕಿಂಚಿತ್ತು ರಿಲೀಫ್ ಸಿಕ್ಕಿದ್ದೇನೊ ನಿಜ, ಆದರೆ ಅದು ಬಹಳ ದಿನ ಉಳಿಯಲಿಲ್ಲ.
ಅದೊಮ್ಮೆ ಬಿಇಒ ಕಚೇರಿಯಿಂದ ನಮ್ಮ ಹೆಡ್‍ಮಾಸ್ತರರಿಗೆ ಮುಖ್ಯವಾದ ಪತ್ರವೊಂದು ಬಂದಿತ್ತು. ಸಂಜೆ ಹೊರಡುವ ತರಾತುರಿಯಲ್ಲಿ ಅವರು ಅದನ್ನು ಬೀರುವಿನ ಒಳಗೆ ಇಡುವ ಬದಲು ಮೇಜಿನ ಮೇಲೆಯೇ ಮರೆತು ಹೋಗಿದ್ದರು. ಅವತ್ತು ರಾತ್ರಿ ನೇರವಾಗಿ ಹೆಡ್‍ಮಾಸ್ತರ ಕೋಣೆಗೇ ಮುತ್ತಿಗೆ ಘೋಷಿಸಿದ ಮೂಷಿಕಗಳು, ನಾವೆಲ್ಲ ವಿಪರೀತ ಭಯ ಪಡುತ್ತಿದ್ದ ಹೆಡ್‍ಮಾಸ್ತರಿಗೆ ಕಿಂಚಿತ್ತೂ ಕ್ಯಾರೇ ಅನ್ನದೆ ಆ ಪತ್ರವನ್ನೇ ಚಿಂದಿ ಉಡಾಯಿಸಿದ್ದವು. ನಾವು ಬೆಳಿಗ್ಗೆ ಶಾಲೆಗೆ ಹೋಗುವುದರ ಒಳಗಾಗಿ ಅಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಖಜಾನೆ ಮೇಲೆಯೇ ದಾಳಿ ನಡೆಸಿದ್ದ ಇಲಿಗಳ ವಿರುದ್ಧ ಹೆಡ್‍ಮಾಸ್ತರರು ಅದಾಗಲೇ ತುರ್ತು ಪರಿಸ್ಥಿತಿಯನ್ನು ಘೋಷಿಸಿಯಾಗಿತ್ತು. ಅಂದು ಮಧ್ಯಾಹ್ನ ಎಲ್ಲಾ ಮಾಸ್ತರುಗಳ ತುರ್ತು ಸಭೆ ಕರೆದು ಗಂಭೀರ ಚರ್ಚೆ ನಡೆಸಿದರು. ನಮಗೆಲ್ಲ ವಿಪರೀತ ಕುತೂಹಲ. ಏನು ನಿರ್ಣಯ ಬರುತ್ತೋ, ನಮ್ಮ ಮೇಸ್ಟ್ರುಗಳು ಮೂಷಿಕ ಪಡೆ ಮೇಲೆ ಎಂಥ ರಣನೀತಿ ಹೆಣೆಯುತ್ತಾರೊ, ಈ ಕದನದಲ್ಲಿ ನಮಗೆಷ್ಟು ದಿನ ಕದನ ವಿರಾಮ ಸಿಗುತ್ತೋ ಅಂತ ನಮ್ಮದೇ ತರ್ಕ ಹೆಣೆಯುತ್ತಾ ಕೂತಿದ್ದವು. ಅಷ್ಟೊತ್ತಿಗಾಗಲೆ ಸಭೆ ಒಂದು ನಿರ್ಣಯಕ್ಕೆ ಬಂದು ಬರ್ಖಾಸ್ತಾಗಿತ್ತು. ಸಭೆಯಲ್ಲಿ ಇಲಿಗಳ ಮೇಲೆ ಬೋನಿನ ಅಸ್ತ್ರ ಪ್ರಯೋಗಿಸಬೇಕೆಂದು, ಅದಕ್ಕೆ ಸಾಮೂಹಿಕ ಹೋರಾಟ ಅಗತ್ಯವಾಗಿರೋದ್ರಿಂದ ಎಲ್ಲಾ ವಿದ್ಯಾರ್ಥಿಗಳಿಂದ ನಾಲ್ಕಾಣೆ ಸಂಗ್ರಹಿಸಬೇಕೆಂದೂ ಅವಿರೋಧವಾಗಿ ತೀರ್ಮಾನಿಸಲಾಗಿತ್ತಂತೆ. ಅಲ್ಲದೇ ಇಡೀ ಕದನಕ್ಕೆ ನಮ್ಮ ಕೇಪಿ ಮೇಸ್ಟ್ರುನ್ನೇ ಸೇನಾಧಿಪತಿಯನ್ನಾಗಿ ಆಯ್ಕೆ ಮಾಡಿದ್ದ ನಮ್ಮ ಹೆಡ್‍ಮಾಸ್ತರರು ರಣನೀತಿ ರೂಪಿಸುವ ಹೊಣೆಯನ್ನೂ ಅವರಿಗೇ ವಹಿಸಿದ್ದರಂತೆ. ಇದನ್ನೆಲ್ಲ ಮೂರೂ ತರಗತಿಗಳಿಗೆ ಬಂದ ಕೇಪಿ ಮೇಸ್ಟ್ರೇ ಬಹಳ ಗಂಭೀರ ಮುಖಮುದ್ರೆಯಲ್ಲಿ ನಮ್ಮ ಮುಂದೆ ಅರುಹಿ, ನಮ್ಮಿಂದ ತನು-ಮನ-ಧನ ಸಹಾಯಕ್ಕೆ ಮನವಿ ಸಲ್ಲಿಸಿದ್ದರು.
ನಮ್ಮನಮ್ಮ ಮನೆಗಳಿಂದ ನಾಲ್ಕಾಣೆ ಹೊಂಚಿ ತರುವುದು ನಮಗೇನೂ ಕಷ್ಟವಾಗಲಿಲ್ಲ. ಇಲಿಗಳ ಹಾವಳಿ ಕೇಳಿತಿಳಿದ ಪೋಷಕರು ಸಹಾ ಅನ್ಯಥಾ ಭಾವಿಸದೆ ಯುದ್ಧ ಖಜಾನೆಗೆ ಧಾರಾಳ ಧನಸಹಾಯ ಮಾಡಿದರು. ಅದೊಂದು ಶುಭ ದಿನದಂದು ಕೇಪಿ ಮೇಸ್ಟ್ರೇ ಮುತುವರ್ಜಿವಹಿಸಿ ಹೊಚ್ಚಹೊಸ ಬೋನನ್ನೂ ಕೊಂಡು ತಂದರು. ಪರೋಕ್ಷವಾಗಿ ನಮಗೆ ನೆರವಾಗಿದ್ದರೂ, ಶಾಲಾ ಸಮೂಹದ ದೃಷ್ಟಿಯಲ್ಲಿ ನಮ್ಮ ಶತ್ರುಗಳೆನಿಸಿದ್ದ ಇಲಿಗಳ ಮೇಲೆ ಯುದ್ಧಾಸ್ತ್ರವನ್ನು ಕೊಂಡುತಂದದ್ದು ನಮ್ಮ ಉತ್ಸಾಹವನ್ನು ಇಮ್ಮಡಿಗೊಳಿಸಿತ್ತು. ಇನ್ಮುಂದೆ ಯುದ್ಧ ಘೋಷಣೆಯೊಂದೇ ಬಾಕಿ ಎನ್ನುವ ಕಾತರದಲ್ಲಿ ನಾವಿದ್ದೆವು. ಆದರೆ ನಮ್ಮ ಸೇನಾಧಿಪತಿಗಳಾದ ಕೇಪಿ ಮೇಸ್ಟ್ರ ಕಾರ್ಯಾಚರಣೆಯಲ್ಲೆ ನಾವೆಲ್ಲ ಯುದ್ಧ ನಡೆಸಬೇಕಿತ್ತಾದ್ದರಿಂದ ತೆಪ್ಪಗಿದ್ದೆವು. ಅವತ್ತು ಶುಕ್ರವಾರ. ನಮ್ಮ ಸೇನಾಧಿಪತಿಗಳು ಅಧಿಕೃತವಾಗಿ ಯುದ್ಧ ಘೋಷಿಸಿಯೇ ಬಿಟ್ಟರು. ಸಂಜೆ ಮನೆಗೆ ಹೋಗುವ ಮುನ್ನ ಹೊಟೇಲಿನಿಂದ ಬೋಂಡಾವನ್ನು ತರಿಸಿದ ಕೇಪಿ ಮೇಸ್ಟ್ರು ಇಲಿಗಳು ಹೆಚ್ಚಾಗಿ ಓಡಾಡುತ್ತಿದ್ದ ರ್ಯಾಕ್‍ನ ಸಂದಿಯಲ್ಲಿ ಬೋನನ್ನಿರಿಸಿ, ತಮ್ಮ ರಣನೀತಿ ಸರಿಯಾಗಿರುವುದನ್ನು ಖಾತ್ರಿ ಪಡಿಸಿಕೊಂಡು ಗೆಲುವಿನ ವಿಶ್ವಾಸದಲ್ಲಿ ಹೊರಬಂದರು.
ಮಾರನೇ ದಿನ ಶನಿವಾರ, ಮಾರ್ನಿಂಗ್ ಕ್ಲಾಸು. ಬೇಗಬೇಗನೆ ಬಂದು ಸ್ಟಾಫ್ ರೂಮಿನ ಮುಂದೆ ಜಮಾಯಿಸಿದೆವು. ತಾವೇ ಸ್ವತಃ ಬಂದು ಬೀಗ ತೆಗೆಯಬೇಕೆಂದು ಕೀಯನ್ನು ಚಂದ್ರಪ್ಪನಿಗೂ ಕೊಡದೆ ಹೋಗಿದ್ದ ನಮ್ಮ ಸೇನಾಧಿಪತಿಗಳ ಆಗಮನಕ್ಕೆ ನಾವೆಲ್ಲ ಉತ್ಸುಕದಿಂದ ಕಾದ ಘಳಿಗೆಗೆ ಸರಿಯಾಗಿ ಅವರೂ ಬಂದರು. ತನ್ನ ಹಿಂದೆ ಯಾರೂ ಬರದಂತೆ ಎಚ್ಚರಿಕೆ ಕೊಟ್ಟು ಒಬ್ಬರೇ ಸ್ಟಾಫ್ ರೂಂ ಹೊಕ್ಕವರಿಂದ ಒಂದು ಗೆಲುವಿನ ಉದ್ಘಾರದ ದನಿ ಹೊರಬಿತ್ತು, `ಅಲೆಲೆಲೆಲೆ… ಬಡ್ಡೀ ಮಗುಂದು ಇಲಿ ಬೋನಿಗೆ ಬಿದ್ಬುಟ್ಟುದೆ ಕಣ್ರೋ. ಮಾಡ್ತೀನಿ ತಡಿ ನನ್ ಮಗುಂದೆ…’.
ಸೆರೆ ಸಿಕ್ಕಿರೋದು ಎದುರಾಳಿ ಸೈನ್ಯದ ರಾಜನೋ, ಸೇನಾಧಿಪತಿಯೋ ಅಥವಾ ಯಕಶ್ಚಿತ್ ಕಾಲಾಳೋ ಎಂಬ ಯಾವ ತರ್ಕವೂ ನಮಗಾಗಲಿ, ನಮ್ಮ ಸೇನಾಧಿಪತಿ ಮೇಸ್ಟ್ರಿಗಾಗಲಿ ಬೇಕಿರಲಿಲ್ಲ. ನಮ್ಮ ರಣನೀತಿ ಗೆದ್ದ ಖುಷಿಯೊಂದೇ ಸಾಕಾಗಿತ್ತು, ಇಡೀ ಯುದ್ದವನ್ನು ಗೆದ್ದವರಂತೆ ಸಂಭ್ರಮಿಸಿದೆವು. ಅಷ್ಟೊತ್ತಿಗೆ ನಮ್ಮ ಹೆಡ್‍ಮಾಸ್ತರ ಆಗಮನವೂ ಆಯ್ತು.
`ಏಯ್, ಏನ್ರೋ, ಬೆಳ್ಳಂಬೆಳಿಗ್ಗೆ ಸಾಲೆ ಮುಂದೆ ಗುಡ್ಡೆ ಹಾಕ್ಕ್ಯೋಂಡಿದೀರಿ’ ಎಂದವರ ಕಣ್ಣಿಗೆ ಕೇಪಿ ಮೇಸ್ಟ್ರು ಬಿದ್ದಿದ್ದೆ ತಡ `ಏನ್ರೀ ಕೇಪಿ ಇದು. ಇಲಿಗಿಲಿ ಬೋನಿಗೆ ಬಿತ್ತೇನ್ರಿ’ ಅಂತ ರೋಮಾಂಚನಗೊಂಡು ಕೇಳಿದರು. ವಿಷಯ ತಿಳಿದ ಅವರ ಮುಖದಲ್ಲು ಗೆಲುವಿನ ಗೆರೆಗಳು ಅರಳಿದವು.
ತಮ್ಮ ಮುತ್ಸದ್ದಿತನದಿಂದ ಹೆಡ್‍ಮಾಸ್ತರರು ಯುದ್ಧಖೈದಿಯ ಬಗ್ಗೆ ಒಂದು ಗಂಭೀರ ಪ್ರಶ್ನೆ ಎತ್ತಿದರು `ಹೌದ್ರೀ, ಕೇಪಿ. ಈಗ ಇದುನ್ನ ಏನ್ಮಾಡೋದ್ರಿ?’.
`ಹೇ, ಇದುನ್ನೇನ್ ಸೆಂಟ್ರಲ್ ಜೈಲಿಗೆ ಕಳ್ಸಕ್ಕಾಗುತ್ತಾ ಸಾ, ಹೊಡ್ದು ಸಾಯ್ಸೋದು ಅಷ್ಟೆಯಾ?’ ಕೇಪಿ ಮೇಸ್ಟ್ರು ತಮ್ಮ ರಣನೀತಿ ಬಿಚ್ಚಿಟ್ಟರು. ಅಷ್ಟೊತ್ತಿಗಾಗಲೆ ಪ್ರೇಯರ್ ಟೈಂ ಆಗಿತ್ತು. `ಸರಿ, ಸರಿ…. ಮೊದ್ಲು ಪ್ರೇಯರ್ ಮುಗ್ಸೋಣ. ಇಲಿ ಸಮೇತ ಆ ಬೋನನ್ನು ಅಲ್ಲೇ ಇಟ್ಟು ಬನ್ನಿ. ಆಮೇಲೆ ಅದುನ್ನ ಹೊಡ್ದು ಸಾಯಿಸ್ತೀರೋ, ಸೆಂಟ್ರಲ್ ಜೈಲಿಗೆ ಕಳಿಸ್ತಿರೋ ನಿಮುಗೇ ಬಿಟ್ಟದ್ದು’ ಅಂದರು ನಮ್ಮ ಹೆಡ್ ಮಾಸ್ತರು.
ಅವತ್ತು ಪ್ರೇಯರ್ ಬಗ್ಗೆ ನಮಗ್ಯಾರಿಗೂ ಆಸಕ್ತಿ ಉಳಿಯಲಿಲ್ಲ. ಅದು ಮುಗಿದದ್ದೂ ಗೊತ್ತಾಗಲಿಲ್ಲ. ಎಲ್ಲರ ಮನಸ್ಸು ಬೋನಿನೊಳಗೆ ಸಿಕ್ಕಿಬಿದ್ದಿದ್ದ ಯುದ್ಧಖೈದಿಯ ಬಗ್ಗೆಯೇ ಯೋಚಿಸುತ್ತಿತ್ತು. ಪ್ರೇಯರ್ ಮುಗಿಸಿ ಮತ್ತೆ ಕೇಪಿ ಮೇಸ್ಟ್ರು ಸುತ್ತ ಜಮಾಯಿಸಿದೆವು. ನಮ್ಮ ಪುಣ್ಯಕ್ಕೆ ಅವತ್ತು ಹೆಡ್‍ಮಾಸ್ತರ್ ಕೂಡಾ ಕ್ಲಾಸಿಗೆ ಹೋಗುವಂತೆ ಬೆದರಿಸಲಿಲ್ಲ.
ಅಷ್ಟೊತ್ತಿಗಾಗಲೇ ನಮ್ಮ ಸೇನಾಧಿಪತಿ ಮೇಸ್ಟ್ರು ತಲೆಯೊಳಗೆ ಮುಂದಿನ ರಣನೀತಿ ಸಿದ್ಧವಾಗಿತ್ತು. ಬೋನನ್ನು ಜೋಪಾನವಾಗಿ ಎತ್ತಿ ತಂದು ಶಾಲೆಯ ಹುಲ್ಲು ಮೈದಾನದ ನಡುವಿನಲ್ಲಿ ಇಟ್ಟರು. ಬರುವಾಗ ಕೇವಲ ಬೋನು ಮಾತ್ರವಲ್ಲ, ಒಂದು ಬಿದಿರು ಕೋಲನ್ನೂ ತಂದಿದ್ದರು. ಹೋಂವರ್ಕ್ ಮಾಡಿಲ್ಲ ಅಂತಲೋ, ಪ್ರಶ್ನೆಗೆ ಉತ್ತರ ಹೇಳಲಿಲ್ಲ ಅಂತಲೋ ಅಥವಾ ಅವರ ಪಾಠದ ಮಧ್ಯೆ ಮಾತಾಡಿದೆವು ಅಂತಲೋ ಹುಡುಗರಿಗೆ ಬಾರಿಸಲು ಇಟ್ಟುಕೊಂಡಿದ್ದ ಬಿದಿರು ಕೋಲು ಅದು. ಇದ್ದ ಹಲವು ಕೋಲುಗಳಲ್ಲಿ ಕೊಂಚ ಉತ್ತಮ ಎನ್ನುವಂತದ್ದನ್ನು ಆರಿಸಿ ತಂದಿದ್ದರು. ತುಸು ಉದ್ದವೂ ಇತ್ತು. ಆ ಕೋಲು ನೋಡಿದಾಗಲೇ ಅವರು ಯುದ್ಧಖೈದಿಗೆ ಯಾವ ಗತಿ ಕಾಣಿಸಲಿದ್ದಾರೆ ಅನ್ನೋದು ನಮಗೆ ಮನದಟ್ಟಾಗಿತ್ತು.
ಸುತ್ತ ನೆರೆದಿದ್ದ ನಮ್ಮ ಮೇಲೆ ಕಣ್ಣಾಯಿಸಿ, `ಲೇ, ಹನ್ಮಂತಗೌಡ ಬಾರ್ಲೇ ಇಲ್ಲಿ’ ಅಂತ ಕೂಗಿದರು.
ಈ ಹನುಮಂತಗೌಡ ನಮ್ಮ ತರಗತಿಯ ಅಜಾನುಬಾಹು ಆಸಾಮಿ. ತನ್ನದೇ ವಯಸ್ಸಿನ ಮೂರ್ನಾಲ್ಕು ಹುಡುಗರನ್ನು ಕಿಂಚಿತ್ತೂ ತ್ರಾಸಿಲ್ಲದೆ ಒಂದೇ ಏಟಿಗೆ ಹೊಡೆದು ಮಲಗಿಸಬಲ್ಲ ದೇಹವನ್ನು ಆ ದೇವರು ಆತನಿಗೆ ದಯಪಾಲಿಸಿದ್ದ. ಆದರೆ ಆ ಸಾಹಸಕ್ಕೆ ಬೇಕಾದ ಧೈರ್ಯವನ್ನು ಕೊಡುವಲ್ಲಿ ಆ ದೇವರೂ ಒಂಚೂರು ಚೌಕಾಸಿ ಮಾಡಿ ಕಳಿಸಿದ್ದ. ಪಾಪಾ, ನಂ ಕೇಪಿ ಮೇಸ್ಟ್ರು ದೇವರ ಈ ಅಡ್ಜೆಸ್ಟ್‍ಮೆಂಟ್ ಬಗ್ಗೆ ಅರಿವಿಲ್ಲದೆ, ಅವನ ಗಾತ್ರವನ್ನು ನೋಡಿ ಮೋಸಹೋಗಿ ಈ ಕೆಲಸಕ್ಕೆ ಅವನನ್ನು ಆಯ್ಕೆ ಮಾಡಿಕೊಂಡರು. ಅದು ಎಂತಹ ದೊಡ್ಡ ತಪ್ಪಾಯ್ತು ಅನ್ನೋದು ಅವರಿಗೆ ಆಮೇಲೆ ಮನವರಿಕೆಯಾಯ್ತು.
ಮೇಸ್ಟ್ರು ಕರೆದಿದ್ದೇ ತಡ ಹನ್ಮಂತಗೌಡ ಹುಮ್ಮಸ್ಸಿನಲ್ಲೇ ನಮ್ಮನ್ನೆಲ್ಲ ಪಕ್ಕಕ್ಕೆ ಸರಿಸಿ ಅವರ ಪಕ್ಕ ಹೋಗಿ ನಿಂತ. ಬೋನಿನಿಂದ ಹೊರಗಿದ್ದ ಇಲಿಯ ಬಾಲವನ್ನು ತೋರಿಸುತ್ತಾ, `ನೋಡ್ಲೇ ಗೌಡ, ನೀನು ಈ ಬಾಲದ ಮ್ಯಾಲೆ ಕಾಲಿಟ್ಟು ಒತ್ತಿ ಹಿಡ್ಕಂಡಿರು. ತಗೋ ಈ ಕೋಲು. ನಾನು ನಿಧಾನುಕ್ಕೆ ಬೋನ್ ತೆಗೀತಿನಿ. ಮಗುಂದು ಎಸ್ಕೇಪ್ ಆಗಕ್ಕೆ ಅಂತ ಓಡೋಗಲು ಪರದಾಡುತ್ತೆ. ಬಾಲದ ಮ್ಯಾಲಿನ ಕಾಲು ಎತ್ತಬೇಡ. ಸರಿಯಾಗಿ ಒಂದ್ ಏಟ್ ಹಾಕು, ನನ್ ಮಗುಂದು ಅಲ್ಲೇ ಪ್ರಾಣ ಬಿಡುತ್ತೆ. ಎಷ್ಟು ತ್ರಾಸ್ ಕೊಟ್ಟಿವಿ ಈ ಸಂತಾನುದವು’ ಅಂತ ತಮ್ಮ ಸಂಪೂರ್ಣ ರಣನೀತಿ ಬಿಚ್ಚಿಟ್ಟರು.
ಹನ್ಮಂತಗೌಡ ಅದೇ ಹುಮ್ಮಸ್ಸಿನಲ್ಲಿ ಒಪ್ಪಿಕೊಂಡು ಬಿದಿರಿನ ಅಸ್ತ್ರವನ್ನು ಮೇಸ್ಟ್ರಿಂದ ಈಸ್ಕೊಂಡ. ನಮ್ಮ ಕುತೂಹಲ ಅಂತಿಮಘಟ್ಟಕ್ಕೆ ಬಂದು ತಲುಪಿತ್ತು. `ಏಯ್, ಎಲ್ರೂ ದೂರ ಹ್ವೋಗಿ. ಹತ್ರ ಬಂದು ಕ್ಯೆಲ್ಸ ಕೆಡಿಸ್ಬೇಡಿ’ ಅಂತ ನಮಗೆಲ್ಲ ತಾಕೀತು ಮಾಡಿದ ಕೇಪಿ ಮೇಸ್ಟ್ರು ಹನ್ಮಂತಗೌಡನಿಗೆ ಮಗದೊಮ್ಮೆ ರಣನೀತಿ ವಿವರಿಸಿ ಕಾರ್ಯಾಚರಣೆಗೆ ಸಿದ್ಧವಾದರು. ನೆಲದ ಮೇಲಿಟ್ಟಿದ್ದ ಬೋನಿನಿಂದ ಹೊರಚಾಚಿಕೊಂಡಿದ್ದ ಇಲಿಯ ಬಾಲವನ್ನು ಹನ್ಮಂತಗೌಡ ಕಾಲಿನಲ್ಲಿ ನೆಲಕ್ಕೆ ಒತ್ತಿ ಅದುಮುತ್ತಿದ್ದಂತೆಯೇ ಅದು ಭಯದಿಂದ ಬೋನಿನೊಳಗೆ ಕೊಸರಾಡಿತು. ಆದರೂ ಆತ ಬಾಲ ಬಿಡಲಿಲ್ಲ. ಕೋಲನ್ನು ಮೇಲಕ್ಕೆತ್ತಿ ಹೊಡೆಯಲು ಬೇಕಾದ ಫೋರ್ಸು, ಪೊಸೀಷನ್‍ಗಳನ್ನೆಲ್ಲ ಖಾತ್ರಿಪಡಿಸಿಕೊಂಡು ಅಪ್ಪಟ ಯುದ್ಧವೀರನಂತೆ ಫೋಜು ಕೊಟ್ಟ. ಅವನ ಹಾವಭಾವಕ್ಕೆ ಸಂಪೂರ್ಣ ಮಾರುಹೋದ ನಮ್ಮ ಸೇನಾಧಿಪತಿ ಮೇಸ್ಟ್ರು ಶಿಷ್ಯ ತನ್ನ ರಣತಂತ್ರವನ್ನು ಅಚ್ಚುಕಟ್ಟಾಗಿ ಪಾಲಿಸುತ್ತಾನೆಂಬ ವಿಶ್ವಾಸದಲ್ಲಿ ನಿಧಾನಕ್ಕೆ ಬೋನಿನ ಬಾಗಿಲು ತೆಗೆದರು.
ಅಬ್ಬಾ.. ಅದು ಸರಿಯಾದ ಗಾತ್ರದ ಇಲಿಯೇ ಆಗಿತ್ತು. ಬಹುಶಃ ಇಡೀ ಮೂಷಿಕ ವೈರಿ ಪಡೆಯ ರಾಜನೋ, ಸೇನಾಧಿಪತಿಯೋ ಇರಬಹುದೇನೊ. ಹಾಗಿತ್ತು ಅದರ ಗಾತ್ರ. ಪ್ರಾಣಭೀತಿಯ ಸಂದರ್ಭದಲ್ಲಿ ಗಾತ್ರ ಎಂತದಿದ್ದರೇನು, ಪಲಾಯನ ಮಾಡಿ ಜೀವ ಉಳಿಸಿಕೊಳ್ಳೋದು ಎಲ್ಲಾ ಪ್ರಾಣಿಗಳ ಕಾಮನ್ ಬಿಹೇವಿಯರ್. ಪಾಪ, ಆ ಇಲಿಯೂ ಅದನ್ನೇ ಮಾಡಿತು. ಬಂಧಿಸಿಟ್ಟಿದ್ದ ಬೋನು ದೂರ ಸರಿಯುತ್ತಿದ್ದಂತೆಯೇ ಓಡಲು ಯತ್ನಿಸಿತು. ಆದರೆ ಸಾಧ್ಯವಾಗಲಿಲ್ಲ. ಯಾಕೆಂದ್ರೆ ನಮ್ಮ ಯುದ್ಧವೀರ ಹನ್ಮಂತಗೌಡ್ರು ಬಾಲವನ್ನು ಗಟ್ಟಿಯಾಗಿ ಮೆಟ್ಟಿ ನಿಂತಿದ್ದರಲ್ಲ. ಮುಂದಕ್ಕೆ ಓಡುವ ವೇಗದಲ್ಲಿದ್ದ ಅದು ಹಿಂದಕ್ಕೆ ಎಳೆದಂತಾಗಿ ಹಿಂದಕ್ಕೆ ಬಿತ್ತು. ಅರ್ಥಾತ್ ನಮ್ಮ ಹನ್ಮಂತಗೌಡನ ಕಾಲ ಮೇಲೆಯೇ ಬಿದ್ದು ಹೊರಳಾಡಲು ಶುರು ಮಾಡ್ತು.
ಅದ್ಯಾವಾಗ ಹೆಗ್ಗಣ ಗಾತ್ರದ ಇಲಿರಾಯ ತನ್ನ ಮೆತ್ತಮೆತ್ತಗಿನ ಮೈಯನ್ನು ಕಾಲ ಮೇಲೆ ಎಸೆದು ಬುಳುಬುಳು ಓಡಾಡಲು ಶುರು ಮಾಡಿತೊ ಆಗ ಹನ್ಮಂತಗೌಡನ ಯುದ್ಧಭ್ರಮೆಯೆಲ್ಲ ಜರ್ರನೆ ಇಳಿದು ವಾಸ್ತವಕ್ಕೆ ಮರಳಿದ. ಇಷ್ಟೊತ್ತು ತಾನು ನರಭಕ್ಷಕ ಹುಲಿ ಭೇಟೆಗೆ ಅಣಿಯಾಗಿದ್ದವನಂತೆ, ಈಗ ಅಪಾಯದ ಅಸಲಿಯತ್ತು ಅರಿತು ಜಾಣನಾದವನಂತೆ, ಕೈಯ್ಯಲಿದ್ದ ಕೋಲನ್ನು ಪಕ್ಕದಲ್ಲಿ ನಿಂತಿದ್ದ ಕೇಪಿ ಮೇಸ್ಟ್ರ ಕೈಯೊಳಗೆ ತುರಕಿ, ಅಲ್ಲಿಂದ ಪೇರಿಕಿತ್ತ. ಆತ ಓಡಿ ಹೋಗುತ್ತಿದ್ದಂತೆಯೇ ಇಲಿಯ ಬಾಲಕ್ಕೂ ಬಿಗಿತದ ಮುಕ್ತಿ ಸಿಕ್ಕಿತು. ಅದೂ ತಡಮಾಡಲಿಲ್ಲ. ದಿಕ್ಕು ತೋಚಿದತ್ತ ಓಡಲು ಶುರು ಮಾಡಿತು.
ನಂ ಸೇನಾಧಿಪತಿ ಮೇಸ್ಟ್ರು `ಲೇ… ಲೇ… ಗೌಡ, ಬಾರ್ಲಾ, ಯಾಕ್ಲಾ…?’ ಅಂತ ಕೂಗುವ ಕೆಲವೇ ಸಕೆಂಡುಗಳ ಅವಧಿಯಲ್ಲಿ ಚಿತ್ರಣವೇ ಬದಲಾಗಿ ಹೋಗಿತ್ತು. ಬೇಟೆಗೆ ಸಿದ್ಧವಾಗಿ ನಿಂತಿದ್ದ ಹನ್ಮಂತಗೌಡ ಯುದ್ಧಭೂಮಿಯಿಂದ ಕಾಲ್ಕಿತ್ತು ಮೆಟ್ಟಿಲುಗಳನ್ನೇರಿ ನಿಂತಿದ್ದ, ಇಷ್ಟೊತ್ತು ಅವನ ಕೈಯಲ್ಲಿದ್ದ ಯುದ್ಧಾಸ್ತ್ರ ಮೇಸ್ಟ್ರು ಕೈಗೆ ವರ್ಗಾವಣೆಯಾಗಿತ್ತು, ಯುದ್ಧಖೈದಿಯೂ ದಿಕ್ಕೆಟ್ಟು ಓಡಲು ಹವಣಿಸುತ್ತಿದ್ದ. ಕೇಪಿ ಮೇಸ್ಟ್ರು ಮುಖದಲ್ಲಿ ಸಿಟ್ಟು, ಗಾಬರಿ, ಗೊಂದಲಗಳೆಲ್ಲ ಒಟ್ಟೊಟ್ಟಿಗೆ ಮೂಡಿ ಮೆರೆದಾಡಲು ಶುರುವಾದವು.
ಇತ್ತ ಸುತ್ತಲೂ ನೆರೆದಿದ್ದ ಹುಡುಗರೂ, ಇಲಿ ಎಲ್ಲಿ ತಮ್ಮ ಮೇಲೆಯೇ ನುಗ್ಗಿ ಬಿಡುತ್ತೋ ಅಂತ ಚಿಟ್ಟನೆ ಚೀರುತ್ತಾ ದಿಕ್ಕಾಪಾಲಾದರು. ಒಂದಷ್ಟು ಮಂದಿ ಮೇಸ್ಟ್ರು ಹಿಂದೆ ಆಸರೆಗೆ ಸರಿದು ನಿಂತರು. ಈಗ ಯುದ್ಧಭೂಮಿಯಲ್ಲಿ ಪಾಪ, ನಂ ಸೇನಾಧಿಪತಿಗಳು ಏಕಾಂಗಿಯಾಗಿದ್ದರು. ಹಾಗಂತ ಕೈಕಟ್ಟಿ ಕೂರುವ ಸಮಯವಲ್ಲ ಎಂದರಿತವರೇ ತಮ್ಮ ಕೈಯಲ್ಲಿದ್ದ ಕೋಲನ್ನು ಮೇಲಕ್ಕೆತ್ತಿ ಹಿಡಿದು ಯುದ್ಧಖೈದಿಯ ಬೆನ್ನುಬಿದ್ದೇ ಬಿಟ್ಟರು. ಸೇನಾಧಿಪತಿಯೇ ಹೀಗೆ ವೀರಾವೇಶದಿಂದ ಮುನ್ನುಗ್ಗಿದ್ದು ನಮ್ಮಂತ ಸೈನಿಕರಲ್ಲಿ ಹುಮ್ಮಸ್ಸು ಹುಟ್ಟಿಸಿತು. ಉಧೋ, ಎಂದವರೇ ನಾವು ಅವರ ಹಿಂದೆ ಇಲಿಯ ಬೆನ್ನಟ್ಟಿದೆವು.
ಪ್ರತಿ ಶನಿವಾರದಂತೆ ಅವತ್ತೂ ಚಂದ್ರಪ್ಪ ಮೈದಾನಕ್ಕೆ ನೀರು ಹಾಯಿಸಿದ್ದರಿಂದ ಹುಲ್ಲಿನ ಮೈದಾನ ಕೆಸರು ಮಯವಾಗಿತ್ತು. ಹಾಗಾಗಿ ಓಡಲು ನಮಗೆಷ್ಟು ತ್ರಾಸಾಗುತ್ತಿತ್ತೊ, ಪ್ರಾಣಭೀತಿಯಲ್ಲಿದ್ದ ಇಲಿಗೂ ಅದೇ ಫಜೀತಿಯಾಗಿತ್ತು ಅನ್ನಿಸುತ್ತೆ. ಇಲಿಗೆ ಪ್ರಾಣ ಉಳಿಸಿಕೊಳ್ಳುವ ದರ್ದು, ಕೇಪಿ ಮೇಸ್ಟ್ರಿಗೆ ಹೆಡ್‍ಮಾಸ್ತರು ತಮ್ಮ ಮೇಲೆ ನಂಬಿಕೆ ಇಟ್ಟು ವಹಿಸಿದ್ದ ಆಪರೇಷನನ್ನು ಸಕ್ಸಸ್ ಮಾಡಿ ತೋರಿಸುವ ಇರಾದೆ, ಇನ್ನು ನಮಗೆ ಒಂದು ಪುಕ್ಕಟೆ ಮನರಂಜನೆಯ ಭರಾಟೆ.
`ಸಾ.. ಸಾ… ಇಲ್ಲೋಯ್ತು’, `ಸಾ.. ಸಾ… ಅಲ್ಲೋಯ್ತು’, `ಸಾ, ನಿಮ್ಮ ಕಾಲತ್ರುವೇ ಬಂತು ಹೊಡೀರಿ ಸಾ’, ಇಂಥಾ ಉದ್ಘಾರಗಳ ನಡುವೆ ಇಲಿಯ ಬೆನ್ನು ಹತ್ತಿದ್ದ ಕೇಪಿ ಮೇಸ್ಟ್ರು ತಮ್ಮ ಟಾರ್ಗೆಟ್‍ನಿಂದ ಕದಲುವಂತೆ ಕಾಣಲಿಲ್ಲ. ಅತ್ತ ಮೆಟ್ಟಿಲು ಹತ್ತಿ ನಿಂತಿದ್ದ ಯುದ್ಧವೀರ ಹನ್ಮಂತಗೌಡ ಚಿಯರ್ ಗರ್ಲ್ ಥರಾ ಚೀರಾಡುತ್ತಲೇ ಇದ್ದ. ಹೀಗೆ ಸಾಗುತ್ತಿದ್ದ ನಮ್ಮ ಈ ಚೇಸಿಂಗ್ ದೃಶ್ಯಾವಳಿಯಲ್ಲಿ ಹಠಾತ್ತನೆ ಅವಘಡವೊಂದು ಸಂಭವಿಸಿತು. ನೀರು ಬಿಟ್ಟು ಒದ್ದೆಯಾಗಿದ್ದ ಕೆಸರಿನಲ್ಲಿ ಕಾಲಿಟ್ಟು ಜಾರಿದ್ದರಿಂದಲೋ, ಅಥವಾ ಅವರಿಗೆ ಹುರಿದುಂಬಿಸಲು ಅವರ ಕಾಲ ಬುಡದಲ್ಲೇ ಓಡುತ್ತಿದ್ದ ಹುಡುಗರ ತೊಡರುಗಾಲಿನಿಂದಲೋ ಅಥವಾ ಅದ್ಯಾವನಾದ್ರು ಒಂದು ತಮಾಷೆ ನೋಡೇ ಬಿಡುವ ಎಂಬ ಭಂಡತನಕ್ಕೆ ಧೈರ್ಯ ಮಾಡಿ ತಳ್ಳಿದ್ದರಿಂದಲೋ ಒಟ್ಟಿನಲ್ಲಿ ಅಡ್ಡಾದಿಡ್ಡಿ ಓಡುತ್ತಿದ್ದ ಕೇಪಿ ಮೇಸ್ಟ್ರು ದಬಾಲನೇ ಬಿದ್ದುಬಿಟ್ಟರು. ಬಿಳೀ ಬಟ್ಟೆಯ ಅವರ ದಢೂತಿ ದೇಹ ಆಯತಪ್ಪಿ ಹುಲ್ಲುಗೆಸರಿನಲ್ಲಿ ಬಿದ್ದರೆ ಅವರ ಗತಿ ಏನಾಗಿರಬೇಡ. ಮುಖಮೂತಿಗೆಲ್ಲ ಕೆಸರು ಮೆತ್ತಿಕೊಂಡಿತು. ಇನ್ನು ಅವರ ಬಿಳಿ ಬಟ್ಟೆಯನ್ನು ಕೇಳುವುದೇ ಬೇಡ. ನಮಗೆ ಕೇಪಿ ಮೇಸ್ಟ್ರು ಬಿದ್ದ ಫಜೀತಿಯಿಂದ ಗಾಬರಿಯಾಗಿದ್ದರೆ, ನಮ್ಮ ಮುಂದಿದ್ದ ಒಂದಷ್ಟು ಹುಡುಗರು `ಹೋಯ್, ಹೋಯ್…’ ಅಂತ ಸಂಭ್ರಮದಿಂದ ಕುಣಿದಾಡಲು ಶುರು ಮಾಡಿದರು.
ಅರೆ, ಮೇಸ್ಟ್ರು ಬಿದ್ದ್ರೆ, ಅಯ್ಯೋ ಅನ್ನೋದು ಬಿಟ್ಟು, ಖುಷಿಯಿಂದ ಚೀರಾಡ್ತರಲ್ಲ, ಇವ್ರಿಗೇನಾಗಿದೆ? ಆದರೆ ಅವರ ಖುಷಿಗೆ ಬೇರೆಯದೇ ಒಂದು ಕಾರಣವಿತ್ತು. ನಮ್ಮ ಕೇಪಿ ಮೇಸ್ಟ್ರು ಮಕಾಡೆ ಜಾರಿ ಬಿದ್ದರಲ್ಲ, ಅವಾಗ ಒಂದು ಚಮತ್ಕಾರ ನಡೆದುಹೋಗಿತ್ತು. ಕೋಲನ್ನು ಎತ್ತಿ ಹಿಡಿದುಕೊಂಡು ಓಡುತ್ತಿದ್ದ ಮೇಸ್ಟ್ರು ಅದೇ ಭಂಗಿಯಲ್ಲಿ ಭೂಮಿತಾಯಿಯ ಹಸೀ ಮಡಿಲಿಗೆ ಜಾರಿಕೊಂಡಿದ್ದರು. ಅವರ ಕೈಯಲ್ಲಿದ್ದ ಕೋಲು ಅವರಿಂದ ತುಸು ದೂರದಲ್ಲಿ ನೆಲಕ್ಕೆ ಅಪ್ಪಳಿಸಿತ್ತು. ಆ ಇಲಿಯ ದುರಾದೃಷ್ಟವೋ ಏನೊ, ಆ ಕೋಲು ನೆಲಕ್ಕಪ್ಪಳಿಸುವ ವೇಳೆಗೆ ಸರಿಯಾಗಿ, ಪಾಪಾ, ಆ ಇಲಿ ಓಡುತ್ತಾ ಅಲ್ಲಿಗೆ ಬಂದು ತಲುಪಿತ್ತು. ಕೇಪಿ ಮೇಸ್ಟ್ರ ದೇಹದ ಭಾರ ಮತ್ತು ವೇಗದ ಸಮೇತ ಧರೆಗಪ್ಪಳಿಸಿದ ಕೋಲಿನ ಅಡಿ ಸಿಕ್ಕ ಇಲಿ ಅಲ್ಲೇ ಅಪ್ಪಚ್ಚಿಯಾಗಿ ಪ್ರಾಣ ಬಿಟ್ಟಿತ್ತು!
ದರಿದ್ರದ ಇಲಿ ಹಿಂದೆ ಬಿದ್ದು ಬಟ್ಟೆ, ಮೈ ಕೈಯೆಲ್ಲ ಗಲೀಜಾಯ್ತಲ್ಲ ಅಂತ ಮೇಲಕ್ಕೇಳುತ್ತಿದ್ದ ಕೇಪಿ ಮೇಸ್ಟ್ರಿಗೆ ನಡೆದ ವಿದ್ಯಮಾನಗಳೆಲ್ಲ ಗೊತ್ತಾಗಿ, ಇಲಿ ಸತ್ತು ಬಿದ್ದಿರೋದು ಕಣ್ಣಿಗೆ ಕಾಣುತ್ತಿದ್ದಂತೆಯೇ ವರಸೆಯನ್ನೇ ಬದಲಿಸಿಕೊಂಡು ಬಿಟ್ಟರು. `ನೋಡಿದ್ರೇನ್ರಲಾ, ಹಿಂಗೆ ಇಲಿ ಹೊಡೆಯೋದು ಅಂದ್ರೆ. ನಂಗೆ ಚಳ್ಳೆ ಹಣ್ ತಿನ್ಸೋಕೆ ನೋಡ್ತು ಮಗುಂದು. ಡೈ ಬಿದ್ದು ಹೊಡ್ದೆ ನೋಡು. ನಾನು ಡೈ ಹೊಡೀಲಿಲ್ಲ ಅಂದ್ರೆ ತಪ್ಪುಸ್ಕೊಂಡ್ ಬಿಡ್ತಿತ್ತು… ಮಗುಂದು…’ ಅಂತ ಇಡೀ ಸೀನನ್ನೇ ತಮ್ಮತ್ತ ತಿರುಗಿಸಿಕೊಂಡು ಹೀರೊ ಆಗಿಬಿಟ್ಟರು. ವೈರಿ ಪಡೆಯ ಸೈತಾನನ್ನು ಹೊಡೆದುಹಾಕಿದ ಸಂಭ್ರಮದಲ್ಲಿ ನಮಗೂ ಅದು ನಿಜವೆನ್ನಿಸಿತು, `ಓ..ಓಹೋ, ಓ, ಓ… ನಂ ಕೇಪಿ ಮೇಸ್ಟ್ರು ಡೈ ಹೊಡ್ದು ಇಲಿ ಹೊಡುದುಬಿಟ್ರು’ ಅಂತ ಚೀರಲು ಶುರು ಮಾಡಿದೆವು. ನಮ್ಮ ಗಲಾಟೆಗೆ ಹೊರಬಂದ ಹೆಡ್‍ಮಾಸ್ತರು ಹಾಗೂ ಮಿಕ್ಕ ಮೇಸ್ಟ್ರುಗಳೂ ಪರಿಸ್ಥಿತಿಯನ್ನು ಅಂದಾಜಿಸಿ, ನಿಜವಾಗಲೂ ನಡೆದಿರೋದು ಏನು ಅನ್ನೋದನ್ನು ಅರ್ಥ ಮಾಡಿಕೊಂಡು ಮುಸಿಮುಸಿ ನಗಾಡಲು ಶುರು ಮಾಡಿದ್ದರು. ಇತ್ತ ನಮ್ಮ ಕೇಪಿ ಮೇಸ್ಟ್ರು ಮಾತ್ರ ಬಿದ್ದ ನೋವನ್ನೆಲ್ಲ ಮರೆತು, ಮಕ್ಕಳಂತೆಯೇ ನಮ್ಮ ನಡುವೆ ನಕ್ಕು, ನಲಿದು ಸಂಭ್ರಮಿಸುತ್ತಿದ್ದರು.

– ಗಿರೀಶ್ ತಾಳಿಕಟ್ಟೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read