ಅಂಫಾನ್ ಚಂಡಮಾರುತ ಉತ್ತರ ಒಡಿಶಾದ ಹಾಗೂ ಪಶ್ಚಿಮ ಬಂಗಾಳಕ್ಕೆ ಸುಮಾರು 185 ಕಿಲೋಮೀಟರ್ ವೇಗದಲ್ಲಿ ಅಪ್ಪಳಿಸಿದ್ದು, 12 ಮಂದಿ ಜೀವ ಕಳೆದು ಕೊಂಡಿದ್ದಾರೆ. ಎರಡೂ ರಾಜ್ಯಗಳ ಜನಜೀವನ ಅಸ್ತವ್ಯಸ್ತಗೊಂಡಿದೆ.
ಚಂಡಮಾರುತದಿಂದಾಗಿ ಪಶ್ಚಿಮ ಬಂಗಾಳದ ಸುಂದರಬನ್ಸ್ ಮತ್ತು ದಕ್ಷಿಣ ಬಂಗಾಳದ ಆರು ಜಿಲ್ಲೆಗಳಲ್ಲಿ ವ್ಯಾಪಕ ಹಾನಿಯಾಗಿದೆ. ಇದರಿಂದಾಗಿ 12 ಮಂದಿ ಮೃತಪಟ್ಟಿರುವ ವರದಿಗಳಿದ್ದು, ಭಾರಿ ಹಾನಿಯಾಗಿದೆ, ಹಾನಿಯ ಪ್ರಮಾಣವನ್ನು ಅಂದಾಜಿಸಲು ಕೆಲ ದಿನ ಬೇಕಾಗಬಹುದು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಚಂಡಮಾರುತದ ಭೀಕರತೆಯನ್ನು ಮುಖ್ಯಮಂತ್ರಿ ಮಮತ ಬ್ಯಾನರ್ಜಿ ತಾಂಡವ ನೃತ್ಯ ಎಂದು ಹೇಳಿದ್ದಾರೆ. “ನಾನು ವಾರ್ ರೂಂನಲ್ಲಿ ಕುಳಿತಿದ್ದೇನೆ. ನಬನ್ನಾದಲ್ಲಿನ ನನ್ನ ಕಚೇರಿ ಅಲುಗಾಡುತ್ತಿದೆ. ನಾನು ಯುದ್ಧದ ಹಾದಿಯಲ್ಲಿ ಕಠಿಣ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದೇನೆ. ಚಂಡಮಾರುತವು ಮಧ್ಯರಾತ್ರಿಯವರೆಗೆ ಮುಂದುವರಿಯುವ ಸಾಧ್ಯತೆಯಿದೆ” ಎಂದು ಅವರು ನಿನ್ನೆ ರಾತ್ರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಒಡಿಶಾ ಹಾಗೂ ಪಶ್ಚಿಮ ಬಂಗಾಳದ ಕರಾವಳಿಯಲ್ಲಿ ಭಾರಿ ಮಳೆ ಸುರಿದಿದ್ದು, ಐದು ಸಾವಿರಕ್ಕೂ ಹೆಚ್ಚು ಮನೆಗಳು ಕುಸಿದಿವೆ. ದಕ್ಷಿಣ, ಉತ್ತರ 24 ಪರಗಣ ಜಿಲ್ಲೆಗಳಿಗೆ ಚಂಡಮಾರುತ ಪ್ರವೇಶಿಸಿದಾಗ ಗಾಳಿಯ ವೇಗ ಗಂಟೆಗೆ 160–170 ಕಿ.ಮೀ.ನಷ್ಟಿತ್ತು ಎಂದು ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ಹೇಳಿದ್ದಾರೆ.
ಚಂಡಮಾರುತದಿಂದಾಗಿ ಕಲ್ಕತ್ತಾ ವಿಮಾನ ನಿಲ್ದಾಣವೂ ನೀರಿನಿಂದ ಆವೃತವಾಗಿದ್ದು ಕಟ್ಟಡಗಳಿಗೆ ಹಾನಿಯಾಗಿದೆ. ರಾಜಧಾನಿಯಲ್ಲೂ ಭಾರೀ ಮಾರುತಕ್ಕೆ ಮರ, ವಿದ್ಯುತ್ ಕಂಬಗಳು ಉರುಳಿದ್ದು ವಾಹನಗಳಿಗೆ ಹಾನಿಯಾಗಿದೆ.
#WATCH West Bengal: A portion of Kolkata Airport flooded in wake of #CycloneAmphan pic.twitter.com/28q5MdqoD2
— ANI (@ANI) May 21, 2020
ಹವಾಮಾನ ಇಲಾಖೆಯ ಮುನ್ಸೂಚನೆಗೆ ಅನುಸಾರವಾಗಿ ಪಶ್ಚಿಮ ಬಂಗಾಳ ಮತ್ತು ಒಡಿಶಾ ಕರಾವಳಿ ಪ್ರದೇಶದ 6.58 ಲಕ್ಷಕ್ಕೂ ಹೆಚ್ಚು ಜನರನ್ನು ಚಂಡಮಾರುತವು ಪ್ರವೇಶಿಸುವ ಮೊದಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು. ಈ ನಡುವೆ ಇತ್ತ ಕೇರಳಕ್ಕೂ ಅಂಫಾನ್ ಬೀತಿ ಆವರಿಸಿದೆ.
ಓದಿ: ಅಂಫಾನ್ ಚಂಡಮಾರುತ: ಭಾರೀ ಮಳೆ – ಪರಿಹಾರ ಕಾರ್ಯಕ್ಕೆ NDRF ಪಡೆಗಳ ನಿಯೋಜನೆ