ಒಂದು ಪದ್ಯ
ಹೊರಗೆ ಮಳೆಹನಿಗಳ ಶಬ್ಧ
ರಂಗಮಂದಿರ
ನಿಶ್ಯಬ್ದ
ಏಕತಾರಿಯ ಮೇಲೆ ಧೂಳು
ಹಾರ್ಮೋನಿಯಂನ
ಮೇಲೆ
ಹಾಕಿದ ಕವರ್ ತೆಗೆದಿಲ್ಲ
ಕರೀ ಮೂರು, ಬಿಳಿ ನಾಲ್ಕರ ಮನೆಗಳ ಮೇಲೆ ಬೆರಳಿಲ್ಲ
ಡೈರೆಕ್ಟರ್ನ ಟೇಬಲ್ ಮೇಲೆ ಜಿರಳೆಗಳು.
ಎಲ್ಲಿ ಹೋದಿರಿ
ಮೋಹಕ
ನಟ-ನಟಿಯರೇ?
ಬಣ್ಣ ಹಚ್ಚುತ್ತಿದ್ದ
ಕೈಗಳೇ
ಖಾಲಿಬಿದ್ದ
ಬಣ್ಣ ಬಿಳುಚಿದ
ಖಾಲಿ
ಕಂಕಾಲ ಮುಖಗಳೇ.
ಎಂದು ಬಂದೀರಿ
ಪಾತ್ರವಾಗಿ
ಏನ ತಂದೀರಿ ಹೃದಯಕ್ಕೆ ಆಪ್ತವಾಗಿ
ಬನ್ನಿ
ಈಗಾಗಲೇ ತಡವಾಗಿದೆ
ಮೂರನೇ ಬೆಲ್
ಹೊಡೆದಾಗಿದೆ.
ಲಿಪ್ ಸ್ಟಿಕ್ಗೆ ತುಟಿಗಳಿಲ್ಲ
ವಾರ್ಡ್ರೋಬ್ನಲ್ಲಿನ
ಉಡುಪು
ಪ್ಯಾನ್ ಕೇಕ್, ಮಾಸ್ಕರಾ
ನಿಮ್ಮ ದೇಹ
ಮುಖ
ಕಣ್ಣುಗಳನ್ನೇ ಕಾಯುತ್ತಿವೆ
ಎಂದು
ಬಂದೀರಿ ಎಂದು
ಮತ್ತೆ
ಹಳೆಯ ಲಯಕ್ಕೆ
ಹೇಗೆ
ಮರಳುವಿರಿ ಎಂದು.
ಲೈಟಿಂಗ್ ರೂಂನಲ್ಲಿ
ಯಾರಿಲ್ಲ
ರಂಗಕ್ಕೆ ಬೆಳಕಿಲ್ಲ
ಡಿಮ್ಮರ್ಗಳು ರೆಸ್ಟಿನಲ್ಲಿವೆ.
ವಿದ್ಯುತ್ ಬಿಲ್
ಜಾಸ್ತಿಯಾಗಿದೆ.
ಹೊರಗೆ
ಬೀದಿಯಲ್ಲಿ ಲಕ್ಷಾಂತರ ಹೆಜ್ಜೆ ಸಪ್ಪಳ
ನಿಟ್ಟುಸಿರು
ರೈಲುಗಾಡಿಯ ಸಿಳ್ಳು
ಸಾವಿನ ವಾಸನೆ
ಬೀದಿಯಲ್ಲಿ ಚಲ್ಲಿದ ಹಾಲು
ಟೊಮ್ಯಾಟೊ
ಹಾಸಿಗೆ, ಪೆಟ್ಟಿಗೆ ಟ್ರಂಕ್ ಹೊತ್ತು
ಮಂದಿ
ಪುಟ್ಟ ಮಕ್ಕಳು
ಎಲ್ಲೆಲ್ಲೂ ಶಂಖ
ಜಾಗಟೆಯ
ತಟ್ಟೆ ಬಡಿತದ ಕೇಕೆ
ಛಕ್ಕನೆ ಬೆಳಕಾರಿ
ಮತ್ತೊಂದು
ದೃಶ್ಯ
ಕಾಣಿಸುತ್ತಿದ್ದ ನೀವೆಲ್ಲ ಎಲ್ಲಿ?
ಯಾವ
ನಾಟಕಗಳಲ್ಲಿ ಅಡಗಿದ್ದೀರಿ
ವೇಷ
ಮರೆಸಿದ್ದೀರಿ
ಎಲ್ಲಿ ನಡೆಸಿದ್ದೀರಿ ತಾಲೀಮು
ಬೀದಿಯಲ್ಲೇ
ಲಾಕ್ ಡೌನಾದ
ಮನೆಗಳಲ್ಲೇ
‘ಬಾ ಇಲ್ಲಿಸಂಭವಿಸು’ವ
ಹೊಸ
ಅವತಾರದಲ್ಲೇ.
– ನಟರಾಜ್ ಹೊನ್ನವಳ್ಳಿ
೨೦-೦೫-೨೦೨೦, ಬುಧವಾರ
ಇದನ್ನೂ ಓದಿ: ತೀರ ಸೇರದ ಬದುಕು: ಮಿಸ್ರಿಯಾ.ಐ.ಪಜೀರ್ರವರ ಕವನ
ರಂಗ ಮಂದಿರದ ಈಗಿನ ಒಳ ನೋಟವನ್ನು
ಮರೆ ಮಾಚಿದ ತೆರೆಮರೆಯ ಕಲಾವಿದನ
ಅಂತರಂಗದ ಬಣ್ಣಮಾಸಿದ ಬದುಕಿನ ಭಾವನೆಗಳನ್ನು
ರಂಗಮಂದಿರ ನಡುವೆ ನಿಂತ ಕಲಾಜೀವಿ
ಲಯ ಬದ್ದ ವಾದ್ಯಗಳ ಸಂಗೀತವಿಲ್ಲದೆ ಅನಾಥವಾಗಿ
ನುಡಿಸುವ ನಾಡಿಯ ನಾವಿಕನಿಲ್ಲದೆ
ದೂಳು ತುಂಬಿ ಪಾಳುಬಿದ್ದ ಮನೆಯ ರೀತಿ ಗೋಚರಿಸುತ್ತಿದೆ. ಪಾತ್ರಗಳಿಗೆ ಜೀವ ತುಂಬಿ ಬಣ್ಣದ ಬದುಕ ನಂಬಿ, ಕಲಾಭಿಮಾನಿಗಳ ಕಣ್ಣುಗಳಿಗೆ ರಂಗು ತುಂಬುತ್ತಿದ್ದ ಪಾತ್ರಧಾರಿಗಳೇ ಎಲ್ಲಿ ಕಳೆದು ಹೊದಿರಿ ಬಣ್ಣವಿಲ್ಲದ ಮುಖವಾಡ ಧರಿಸಿ….
ಕೋವಿಡ್19 ಸ್ವಾಗತಿಸಿದ ಭ್ರಷ್ಟ ಸರ್ಕಾರಗಳೇ ಚಪ್ಪಾಳೆ ಜಾಗಟೆ ಭಾರಿಸುತ್ತ ಆನಂದದಿ ರಜೆ ಉಂಡ ಅಜ್ಞಾನಿಗಳೇ ನಿಮಗೆ ಹಸಿವಿನಿಂದ ನೊಂದು ಬೆಂದು ಬೆಂಡಾಗಿ ಜೀವ ಬಿಟ್ಟ ಸಾಮಾನ್ಯ ಪ್ರಜೆಯ ಕೂಗು ಕೇಳದೇ?! ಇಂತಹ ಪರಿಸ್ಥಿತಿಯ ಅಬ್ಬರಕ್ಕೆ ಕೊಚ್ಚಿಹೋಗದೆ ಮಂಕು ಕವಿದ ಮನೆಯ ಚಿಲಕ ಹೊಡೆದು ಹೊರ ಬನ್ನಿ ಹೊಸ ಅವತಾರದಲ್ಲಿ ರಂಗಿನ ರಂಗ ಮಂದಿರಕ್ಕೆ ನಟ ನಟಿಯರೇ ಎಂದು ಕಲಾವಿದನ ಬದುಕನ್ನು ಪದ್ಯದ ಪದಗಳಲ್ಲಿ ತೋರಿದ ಕನ್ನಡನಾಡಿನ ಹೆಮ್ಮೆಯ ರಂಗಭೂಮಿ ನಿರ್ದೇಶಕರು,ಸಾಹಿತಿಗಳು,ಪ್ರಗತಿಪರ ಚಿಂತಕರು, ಆದ ಗುರುಗಳು ಆದ ಶ್ರೀಯುತ ನಟರಾಜು ಹೊನ್ನವಳ್ಳಿಯವರಿಗೆ ಅನಂತಧನ್ಯವಾದಗಳು
Thank you sir