ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಮತ್ತು ಇತರ ಬ್ಯಾಂಕುಗಳಿಂದ 400 ಕೋಟಿ ರೂ. ಸಾಲ ಪಡೆದಿದ್ದ ಬ್ಯಾಂಕ್ ಸುಸ್ತಿದಾರ ದೆಹಲಿ ಮೂಲದ ಬಾಸ್ಮತಿ ಅಕ್ಕಿ ರಫ್ತುದಾರ ’ರಾಮ್ ದೇವ್ ಇಂಟರ್ನ್ಯಾಷನಲ್ ಲಿಮಿಟೆಡ್’ ಮಾಲೀಕರು 2016 ರಿಂದ ಕಾಣೆಯಾಗಿದ್ದು ದೇಶ ಬಿಟ್ಟು ಪಲಾಯನ ಮಾಡಿದ್ದಾರೆ ಎಂದು ಎಸ್ಬಿಐ ದೂರು ದಾಖಲಿಸಿದೆ.
ಕಂಪನಿಯು 2016 ರಲ್ಲಿ ಕಾರ್ಯನಿರ್ವಹಿಸದ ಆಸ್ತಿ ಎಂದು ವರ್ಗೀಕರಿಸಲ್ಪಟ್ಟಿತು. ನಾಲ್ಕು ವರ್ಷಗಳ ನಂತರ, ಫೆಬ್ರವರಿ 25 ರಂದು ಎಸ್ಬಿಐ ನೀಡಿದ ದೂರಿನ ನಂತರ, ಸಿಬಿಐ ಕಳೆದ ವಾರ ಏಪ್ರಿಲ್ 28 ರಂದು ಪ್ರಕರಣವನ್ನು ದಾಖಲಿಸಿತು.
ರಾಮ್ ದೇವ್ ಇಂಟರ್ನ್ಯಾಷನಲ್ 414 ಕೋಟಿ ರೂ ಸಾಲ ಉಳಿಸಿಕೊಂಡಿದೆ. ಎಸ್ಬಿಐನಿಂದ 173.11 ಕೋಟಿ, ಕೆನರಾ ಬ್ಯಾಂಕ್ನಿಂದ 76.09 ಕೋಟಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಿಂದ 64.31 ಕೋಟಿ ರೂ., ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಿಂದ 51.31 ಕೋಟಿ ರೂ., ಕಾರ್ಪೊರೇಷನ್ ಬ್ಯಾಂಕಿನಿಂದ 36.91 ಕೋಟಿ ಮತ್ತು ಐಡಿಬಿಐ ಬ್ಯಾಂಕಿನಿಂದ 12.27 ಕೋಟಿ ರೂ ಸಾಲ ಉಳಿಸಿಕೊಂಡಿದೆ.
ಸಿಬಿಐ ಏಪ್ರಿಲ್ 28 ರಂದು ಪ್ರಕರಣ ದಾಖಲಿಸಿದ್ದು, ಮಾಲೀಕರಾದ ಸುರೇಶ್ ಕುಮಾರ್, ನರೇಶ್ ಕುಮಾರ್ ಸಂಗಿತಾ ಮತ್ತು ಇತರರ ವಿರುದ್ಧ ದೂರು ದಾಖಲಿಸಲಾಗಿದೆ. 2018 ರಲ್ಲಿ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್ಸಿಎಲ್ಟಿ) ಆದೇಶದ ಪ್ರಕಾರ, ಪ್ರವರ್ತಕರು ದುಬೈಗೆ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
“ಜಂಟಿ ತಪಾಸಣೆಯ ಸಮಯದಲ್ಲಿ ಸಾಲಗಾರರು ಲಭ್ಯವಿರಲಿಲ್ಲ ಮತ್ತು ಹರಿಯಾಣ ಪೊಲೀಸ್ ಭದ್ರತಾ ಸಿಬ್ಬಂದಿಯನ್ನು ಅಲ್ಲಿ ನಿಯೋಜಿಸಲಾಗಿತ್ತು. ವಿಚಾರಣೆಯಲ್ಲಿ ಸಾಲಗಾರರು ಪರಾರಿಯಾಗಿದ್ದಾರೆ ಮತ್ತು ದೇಶವನ್ನು ತೊರೆದಿದ್ದಾರೆ ಎಂದು ನಾವು ತಿಳಿದುಕೊಂಡೆವು” ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆರೋಪಿಗಳು ದೇಶದಿಂದ ಪಲಾಯನ ಮಾಡುವ ಮೊದಲು ತಮ್ಮ ಹೆಚ್ಚಿನ ಆಸ್ತಿಯನ್ನು ಮಾರಾಟ ಮಾಡಿದ್ದರಿಂದ ಎಸ್ಬಿಐ ತನ್ನ ಬಾಕಿ ಮೊತ್ತವನ್ನು ವಸೂಲಿ ಮಾಡುವುದು ಸಾಧ್ಯವಿಲ್ಲ ಎಂದು ತಿಳಿದ ನಂತರ ಅಂತಿಮವಾಗಿ ಸಿಬಿಐ ದೂರು ದಾಖಲಿಸಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಉದ್ದಿಮೆದಾರರ 68,607 ಕೋಟಿ ರೂ ಸಾಲ ಮನ್ನಾ: ಮೋದಿ ಸರ್ಕಾರ ಸಂಸತ್ತಿನಿಂದ ಸತ್ಯ ಮರೆಮಾಚಿದೆ – ರಾಹುಲ್