Homeಮುಖಪುಟಬಿಜೆಪಿಯ ಡಿವೈಡ್ & ರೂಲ್ ತಂತ್ರಕ್ಕೆ ಆಹಾರವಾಗುತ್ತಿದ್ದಾರಾ ಸಿದ್ದರಾಮಯ್ಯ?

ಬಿಜೆಪಿಯ ಡಿವೈಡ್ & ರೂಲ್ ತಂತ್ರಕ್ಕೆ ಆಹಾರವಾಗುತ್ತಿದ್ದಾರಾ ಸಿದ್ದರಾಮಯ್ಯ?

- Advertisement -
- Advertisement -

| ಸುನಿಲ್ ಶಿರಸಂಗಿ |

ಇಲ್ಲಿ ಬಿಜೆಪಿ ಎದುರಿಸುತ್ತಿರುವ ಸಮಸ್ಯೆ ಒಂದಿದೆ. ಡಿಕೆಶಿಯನ್ನು ಬಂಧಿಸಿ, ಜೈಲಿಗೆ ಕಳಿಸುವಂತೆ ಮಾಡಿದ್ದು ತಾವೇ ಎಂದು ಅದು ಹೇಳಿಕೊಳ್ಳುವ ಪರಿಸ್ಥಿತಿ ಇಲ್ಲ. ಹಾಗೆ ಮಾಡಿದರೆ, ಈಗಾಗಲೇ ಕುಮಾರಸ್ವಾಮಿ ಸರ್ಕಾರವನ್ನು ಇಳಿಸಿರುವ ತಾವು ಒಕ್ಕಲಿಗ ವಿರೋಧಿಗಳ ಪಟ್ಟ ಕಟ್ಟಿಕೊಳ್ಳಬೇಕಾಗುತ್ತದೆಂಬ ಹೆದರಿಕೆ ಅದಕ್ಕಿದೆ. ಹಾಗಾಗಿಯೇ ಇದನ್ನು ತಮ್ಮ ಸಾಧನೆಯೆಂದು ಹೇಳಿಕೊಳ್ಳುವ ಬದಲು ಸಿದ್ದರಾಮಯ್ಯನವರ ತಲೆಗೆ ಕಟ್ಟುವ ಹುನ್ನಾರ ಅವರದ್ದು.

ರಾಜ್ಯ ರಾಜಕೀಯದ ಬಾಹುಬಲಿ ಕಾಂಗ್ರೆಸ್ ಪಕ್ಷದ ಆಪತ್ಭಾಂಧವ ಡಿ.ಕೆ.ಶಿವಕುಮಾರ್ ಬಂಧನದ ನಂತರ ರಾಜ್ಯ ರಾಜಕೀಯ ಸಂಪೂರ್ಣ ಬದಲಾಗಿದೆ. ದೆಹಲಿಯ ಅವರ ಅಪಾರ್ಟ್‍ಮೆಂಟ್‍ನಲ್ಲಿ ದೊರೆತ ಅಕ್ರಮ ಹಣದ ಕೇಸಿನಲ್ಲಿ ‘ಇಡಿ’ ಡಿಕೆಶಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದೆ. ಮೋದಿ ಮತ್ತು ಅಮಿತ್ ಶಾ ಜೋಡಿ ಇಡಿಯನ್ನು ಬಳಸಿಕೊಂಡು ಶಿವಕುಮಾರ್ ಮೇಲೆ ಮುರಿದುಕೊಂಡು ಬಿದ್ದಿದೆ ಎಂದರೆ ಜೈಲು ಕುಣಿಕೆಯಿಂದ ಡಿಕೆಶಿ ಹೊರಬರುವುದು ಕಷ್ಟಸಾಧ್ಯ. ಕನಕಪುರ ತಾಲೂಕಿನ ಅತಿ ಸಾಧಾರಣ ಒಕ್ಕಲಿಗ ಕುಟುಂಬದಿಂದ ಬಂದ ಡಿಕೆಶಿ ವಿದ್ಯಾರ್ಥಿ ನಾಯಕನಿಂದ ಕಾಂಗ್ರೆಸ್ ಪಕ್ಷದ ಆಪತ್ಕಾಲದ ಹೀರೋ ಆಗಿ ಬೆಳೆದುಬಂದ ದಾರಿ ಸುಲಭದ್ದೇನಲ್ಲ. ಈ ರೀತಿ ಬೆಳೆಯಲು ಮಾಡಿದ ಅಕ್ರಮಗಳಿಗೆ ಲೆಕ್ಕವಿಲ್ಲ. ಆದರೆ ಅವರ ಬಂಧನಕ್ಕೆ ಅವರು ಮಾಡಿದ ಅಕ್ರಮಗಳು ಮತ್ತು ಅವರು ಅಪಾರ ಹಣ ಮಾತ್ರ ಕಾರಣವಲ್ಲವೆಂದರೆ ನಂಬಲೇಬೇಕು.

ಯಾಕೆಂದರೆ ಇದು ಪಿಎಮ್ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಹಾಗೂ ಗೃಹ ಮಂತ್ರಿ ಅಮಿತ್ ಶಾ ಅವರ ಪಕ್ಕಾ ಸೇಡಿನ ರಾಜಕೀಯ. 2017ರಲ್ಲಿ ಗುಜರಾತ್ ರಾಜ್ಯಸಭಾ ಚುನಾವಣೆಯಲ್ಲಿ ತಮ್ಮ ಕಡುವೈರಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಪ್ತ ಅಹಮದ್ ಪಟೇಲ್‍ರನ್ನು ಸೋಲಿಸಲು ಹೆಣೆದಿದ್ದ ಬಲೆಯಿಂದ ಗೆಲುವನ್ನು ಕಾಂಗ್ರೆಸ್‍ಗೆ ದಕ್ಕಿಸಿಕೊಟ್ಟಿದ್ದು ಇದೇ ಡಿಕೆ ಶಿವಕುಮಾರ್. ಇದಲ್ಲದೇ, 2018ರ ಚುನಾವಣೆಯ ನಂತರ ಅತಿದೊಡ್ಡ ಪಕ್ಷವಾದರೂ ಬಹುಮತ ಪಡೆದುಕೊಳ್ಳದಿದ್ದ ಬಿಜೆಪಿಗೆ, ಆಗಲೇ ಆಪರೇಷನ್ ನಡೆಸಲು ಅಡ್ಡಿಯಾಗಿದ್ದೂ ಡಿಕೆ. ಹೀಗಾಗಿ ಆತನನ್ನು ಸದೆಬಡಿಯಲು ಬಿಜೆಪಿಯ ದ್ವೈಕಮ್ಯಾಂಡ್ ತೀರ್ಮಾನಿಸಿಯಾಗಿತ್ತು. ಅದರ ಫಲವೇ ಡಿಕೆ ಅರೆಸ್ಟ್.

ಈಗ ಉಳಿದಿರುವ ಪ್ರಶ್ನೆ ಇಷ್ಟೇ. ಡಿಕೆ ಮುಗಿಸುವ ತಂತ್ರದಲ್ಲಿ ಮೋದಿ-ಶಾ ಜೋಡಿ ಯಶಸ್ವಿಯಾಗುತ್ತದೆಯೋ ಇಲ್ಲ, ಜೈಲಿನಿಂದ ಹೊರಬಂದ ಡಿಕೆ ಇನ್ನಷ್ಟು ರಾಜಕೀಯವಾಗಿ ಗಟ್ಟಿಯಾಗಿ ಬೆಳೆಯುತ್ತಾರೋ ಎಂಬುದು. ಇದನ್ನು ಕೇವಲ ಕಾಲ ತಿಳಿಸುವುದಿಲ್ಲ, ಕಾಂಗ್ರೆಸ್ಸಿನ ಆಂತರಿಕ ವೈರುಧ್ಯಗಳೂ ತೀರ್ಮಾನಿಸುತ್ತವೆ ಎಂಬುದು ದಿನೇದಿನೇ ಸ್ಪಷ್ಟವಾಗುತ್ತಿವೆ. ಟ್ರಬಲ್ ಶೂಟರ್ ನಾಯಕನ ಬಂಧನದ ನಂತರ ಅವರ ಪಕ್ಷವಾದ ಕಾಂಗ್ರೆಸ್‍ನಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳು ಒಂದೊಂದಾಗಿ ಹೊರಬರುತ್ತಿವೆ. ಜನನಾಯಕರ ಸಣ್ಣತನಗಳು ಜನಸಾಮಾನ್ಯರಿಗೆ ಪುಕ್ಕಟೆ ಮನರಂಜನೆ ನೀಡುತ್ತಿದ್ದರೆ ಆಡಳಿತಾರೂಢ ಬಿಜೆಪಿಗೆ ತಮ್ಮ ನೆಲೆ ಭದ್ರಪಡಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ.

ಪ್ರಬಲ ಒಕ್ಕಲಿಗ ನಾಯಕನ ಸತತ ವಿಚಾರಣೆಯ ಸಂದರ್ಭದಲ್ಲಿ ಕಾಟಾಚಾರಕ್ಕೆ ಹೇಳಿಕೆಗಳು, ಪ್ರತಿಭಟನೆಗಳನ್ನು ಬಿಟ್ಟರೆ ರಾಜ್ಯ ನಾಯಕರು ಡಿಕೆ ಬೆಂಬಲಕ್ಕೆ ನಿಲ್ಲಲಿಲ್ಲ. ಆಗ ಶಿವಕುಮಾರ್ ನನ್ನ ಬೆಂಬಲಕ್ಕೆ ಹೈಕಮಾಂಡ್ ಇದೆಯೇ ಹೊರತು ರಾಜ್ಯ ನಾಯಕರಿಲ್ಲವೆಂದು ಹೇಳಿದಾಗಲೇ ಎಚ್ಚೆತ್ತುಕೊಂಡ ರಾಜ್ಯ ನಾಯಕರು ಕಾಟಾಚಾರಕ್ಕೆ ಒಂದು ಸಭೆ ಮಾಡಿ ಮುಗಿಸಿದರು. ಆ ಸಭೆಯಲ್ಲೂ ಪಕ್ಷದ ಆಂತರಿಕ ಭಿನ್ನಾಭಿಪ್ರಾಯ ಮತ್ತಷ್ಟು ಎದ್ದು ಕಂಡಿತು. ಅದಕ್ಕೆ ಕಾರಣ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ. ರಾಜ್ಯ ಕಾಂಗ್ರೆಸ್‍ನ ಪ್ರಶ್ನಾತೀತ ನಾಯಕರಾಗಿ ಮೆರೆಯುತ್ತಿದ್ದ ಅಹಿಂದ ನಾಯಕ ಸಿದ್ಧರಾಮಯ್ಯನವರ ವಿರುದ್ಧ ಪಕ್ಷದಲ್ಲಿ ಅಸಮಾಧಾನ ಹೆಚ್ಚಾಗಲು ಕಾರಣವೇನೆಂದು ಹುಡುಕಲು ಹೊರಟರೆ ಕಾಣುವುದು ಸ್ವತಃ ಅವರೇ.

ಸಮ್ಮಿಶ್ರ ಸರ್ಕಾರ ರಚನೆಯಾದಾಗಿನಿಂದ ಪಕ್ಷದಲ್ಲಿ ಹೊಗೆಯಾಡುತ್ತಿದ್ದ ಸಿದ್ದು ವಿರುದ್ಧದ ಅಸಮಾಧಾನ ಈಗ ಬೇರೆ ರೀತಿಯಾಗಿ ಉರಿಯುತ್ತಿದೆ. ವಿರೋಧ ಪಕ್ಷದ ನಾಯಕರನ್ನಾಗಿ ಸಿದ್ದರಾಮಯ್ಯರನ್ನು ಹೈಕಮಾಂಡ್ ಇನ್ನೇನು ಸೂಚಿಸುತ್ತದೆ ಅನ್ನುವಾಗಲೆ ಸಿದ್ದು ವಿರುದ್ಧ ಆರೋಪಗಳ ಪಟ್ಟಿ ಸಮೇತ ಹೈಕಮಾಂಡ್‍ಗೆ ಪತ್ರ ರವಾನೆಯಾಗಿದೆ. ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ, ವೀರಪ್ಪಮೊಯ್ಲಿರಂತಹ ‘ಹಿರಿಯ’ ನಾಯಕರು ಸಿದ್ದರಾಮಯ್ಯ ವಿರುದ್ಧ ಅಖಾಡಕ್ಕೆ ಇಳಿದಾಗಿದೆ. ಹೈಕಮಾಂಡ್‍ಗೆ ದೂರು ದಾಖಲಾಗಿದೆ. ಇಷ್ಟೆಲ್ಲದರ ಮಧ್ಯೆ ಹೈಕಮಾಂಡ್‍ಗೆ ಸಿದ್ದು ಹೊರತಾಗಿ ಬೇರೆ ಆಯ್ಕೆಗಳು ಇಲ್ಲದೇ ಇರುವುದರಿಂದ ಬೇರೆಯವರನ್ನು ವಿರೋಧ ಪಕ್ಷದ ನಾಯಕರನ್ನಾಗಿಸುವುದು ಸುಲಭವಲ್ಲ. ಅದು ಸಿದ್ದರಾಮಯ್ಯನವರ ವಿರುದ್ಧ ಪಕ್ಷದಲ್ಲಿ ಅಸಮಾಧಾನವನ್ನು ಹೆಚ್ಚಿಸುತ್ತದೆ.

ಇದು ಗೊತ್ತಿದ್ದೇ ಬಿಜೆಪಿ ಬಿರುಕನ್ನು ಬಳಸಿಕೊಳ್ಳಲು ದಾಳ ಹೂಡಿದೆ. ನಳಿನ್‍ಕುಮಾರ್ ಕಟೀಲ್‍ರ ಹೇಳಿಕೆ ಅದೇ ಹಿನ್ನೆಲೆಯಲ್ಲಿ ಬಂದಿದೆ. ಡಿ.ಕೆ.ಶಿವಕುಮಾರ್ ಬಂಧನಕ್ಕೆ ಸಿದ್ದರಾಮಯ್ಯ ಕಾರಣ ಎಂಬ ಕಟೀಲ್ ಮಾತಿಗೆ ಸಿದ್ದು ಸರಿಯಾದ ತಿರುಗೇಟು ಕೊಟ್ಟಿದ್ದಾರೆ. ಆದರೆ, ಹಿಂದೊಮ್ಮೆ ಡಿಕೆಶಿ ತಾಯಿ ಗೌರಮ್ಮ ತನ್ನ ‘ಮಗನ ಮೇಲೆ ಹಾಕುತ್ತಿರುವ ಕೇಸುಗಳಿಗೆ ಸಿದ್ದರಾಮಯ್ಯನೇ ಕಾರಣ’ ಎಂಬ ಹೇಳಿಕೆಯನ್ನು ನೀಡಿದ್ದರು. ಇವೆಲ್ಲವೂ ಸೇರಿಕೊಂಡು, ಸಹಜವಾಗಿಯೇ ಸಿದ್ದು ಬಿಟ್ಟರೆ ಕರ್ನಾಟಕದ ಸಿಎಂ ಸ್ಥಾನಕ್ಕೆ ಕಾಂಗ್ರೆಸ್ಸಿನಲ್ಲಿನ ಪ್ರಬಲ ಅಭ್ಯರ್ಥಿಯಾದ ಡಿಕೆಶಿ ಬಗ್ಗೆ ಸಿದ್ದು ಹಗೆ ಸಾಧಿಸುತ್ತಿದ್ದಾರೆಂಬ ಭಾವನೆ ಮೂಡಿಸುವುದು ಅವರ ಉದ್ದೇಶ.

ಇಲ್ಲಿ ಬಿಜೆಪಿ ಎದುರಿಸುತ್ತಿರುವ ಸಮಸ್ಯೆಯೂ ಇದೆ. ಡಿಕೆಶಿಯನ್ನು ಬಂಧಿಸಿ, ಜೈಲಿಗೆ ಕಳಿಸುವಂತೆ ಮಾಡಿದ್ದು ತಾವೇ ಎಂದು ಅದು ಹೇಳಿಕೊಳ್ಳುವ ಪರಿಸ್ಥಿತಿ ಇಲ್ಲ. ಹಾಗೆ ಮಾಡಿದರೆ, ಈಗಾಗಲೇ ಕುಮಾರಸ್ವಾಮಿ ಸರ್ಕಾರವನ್ನು ಇಳಿಸಿರುವ ತಾವು ಒಕ್ಕಲಿಗ ವಿರೋಧಿಗಳ ಪಟ್ಟ ಕಟ್ಟಿಕೊಳ್ಳಬೇಕಾಗುತ್ತದೆಂಬ ಹೆದರಿಕೆ ಅದಕ್ಕಿದೆ. ಹಾಗಾಗಿಯೇ ಇದನ್ನು ತಮ್ಮ ಸಾಧನೆಯೆಂದು ಹೇಳಿಕೊಳ್ಳುವ ಬದಲು ಸಿದ್ದರಾಮಯ್ಯನವರ ತಲೆಗೆ ಕಟ್ಟುವ ಹುನ್ನಾರ ಅವರದ್ದು.

ಅದಕ್ಕೆ ಬೇಕಾದ ಪರಿಸ್ಥಿತಿಯನ್ನು ಸ್ವತಃ ಸಿದ್ದರಾಮಯ್ಯನವರೇ ನಿರ್ಮಾಣ ಮಾಡುತ್ತಿರುವುದು ಕಾಣುತ್ತಿದೆ. ಹಗರಣ ಮುಕ್ತ ಸರ್ಕಾರ ತಮ್ಮದೆಂದು ಹೇಳಿಕೊಂಡ ಸಿದ್ದು 2018ರಲ್ಲಿ ಮತ್ತೆ ತಮ್ಮ ನೇತೃತ್ವದಲ್ಲಿ ಅಧಿಕಾರ ಗದ್ದುಗೆ ಹಿಡಿಯುವ ವಿಶ್ವಾಸದಲ್ಲಿದ್ದರು. ಆದರೆ ತಪ್ಪು ಲೆಕ್ಕಾಚಾರ, ಅತಿಯಾದ ಆತ್ಮವಿಶ್ವಾಸ, ಲಿಂಗಾಯತರ ವಿರೋಧ, ವರುಣಾ ಬಿಟ್ಟು ಬಾದಾಮಿಗೆ ಸ್ಥಳಾಂತರ ಮತ್ತು ಒಕ್ಕಲಿಗರಲ್ಲಿ ಮೂಡಿದ ಅಸಮಾಧಾನದ ಬಗ್ಗೆ ಅವಜ್ಞೆ ಇವೆಲ್ಲವೂ ಸೇರಿಕೊಂಡು ಸಿದ್ದುಗೆ ಮತ್ತೆ ಅಧಿಕಾರ ಕೈಗೆಟುಕಲಿಲ್ಲ. ಅನಿವಾರ್ಯ ಕಾರಣಗಳಿಂದ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿತು. ಅಲ್ಲಿಂದ ಆರಂಭವಾಯಿತು ಸಿದ್ದರಾಮಯ್ಯರ ಸಂಕಟ. ಅಲ್ಲಿಂದ ಅವರು ಆಡಿದ ಆತ್ಮಘಾತುಕ ಆಟ 14 ತಿಂಗಳ ಹೆಚ್.ಡಿ.ಕೆ ಸರ್ಕಾರ ಬೀಳಿಸುವವರೆಗೂ ನಿಲ್ಲಲಿಲ್ಲ. ತಾನು ಭಿನ್ನಮತವನ್ನು ಸೃಷ್ಟಿಸಬಲ್ಲೆ ಮತ್ತು ಅದನ್ನು ತಣಿಸಲೂ ಸಮರ್ಥ ಎಂದುಕೊಂಡಿದ್ದ ಅವರಿಗೆ, ಬಿಜೆಪಿಯ ಘಾತುಕವಾದ ಸಂಚು ಬೆಳೆಯುತ್ತಾ ಹೋದ ಹಾಗೆ, ಭಿನ್ನಮತ ತಣಿಸಲು ಸಾಧ್ಯವಿಲ್ಲ ಎಂದು ಗೊತ್ತಾಗುವ ಹೊತ್ತಿಗೆ ಕಾಲ ಮಿಂಚಿ ಹೋಗಿತ್ತು.

ಡಿಕೆಶಿ ಮತ್ತು ಪರಮೇಶ್ವರ್ ಸಹ ಕರ್ನಾಟಕದ ಕಾಂಗ್ರೆಸ್ಸಿನ ಮೇಲೆ ಹಿಡಿತ ಸಾಧಿಸುವ ಯಾವ ಪ್ರಯತ್ನಕ್ಕೂ ಕೈ ಹಾಕದೇ ಜೆಡಿಎಸ್ ಮಂತ್ರಿಗಳೇನೋ ಎಂಬಂತೆ ನಡೆದುಕೊಂಡಿದ್ದರಿಂದ, ಕಾಂಗ್ರೆಸ್ ಶಾಸಕಾಂಗ ಪಕ್ಷದ ಭಿನ್ನಮತೀಯರಿಗೆ ಸಿದ್ದರಾಮಯ್ಯನವರ ನಿಲುವು ಇಷ್ಟವಾಗಿರಲಿಕ್ಕೂ ಸಾಕು.

ಆದರೆ, ಇದೀಗ ಪರಿಸ್ಥಿತಿ ಬೇರೆಯೇ ಆಗಿದೆ. ವಿರೋಧ ಪಕ್ಷಗಳನ್ನು ನಾಮಾವಶೇಷ ಮಾಡುವ ದಿಕ್ಕಿನಲ್ಲಿ ಮೋದಿ-ಶಾ ಮುಂದಡಿಯಿಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕರ್ನಾಟಕ ಕಾಂಗ್ರೆಸ್ಸನ್ನು ಒಗ್ಗೂಡಿಸಿ ಹೋರಾಟ ನಡೆಸುವ ಸಾಧ್ಯತೆ ಇದ್ದದ್ದು ಸಿದ್ದರಾಮಯ್ಯನವರಿಗೆ ಮಾತ್ರ. ಡಿಕೆಶಿ ಬಂಧನದ ಸಂದರ್ಭದಲ್ಲಿ ಅದರ ವಿರುದ್ಧ ಕೂಗು ಹಾಕುವ ಮೂಲಕ, ‘ಒಕ್ಕಲಿಗ ವಿರೋಧಿ’ ಎಂಬ ಪಟ್ಟವನ್ನು ಸ್ವಲ್ಪವಾದರೂ ಕಳೆದುಕೊಳ್ಳುವ ಸಾಧ್ಯತೆಯೂ ಇತ್ತು. ಮುಂದಿನ ಸಿಎಂ ಆಗಿ ಮತ್ತೆ ತಾನೇ ಪ್ರತಿಷ್ಠಾಪನೆಗೊಳ್ಳಬೇಕು ಎಂಬ ಆಸೆ ಬಿಟ್ಟು, ಬಿಜೆಪಿಯ ವಿರುದ್ಧ ಹೋರಾಟ ಮಾಡುವುದು ಮಾತ್ರ ಮುಖ್ಯ ಎಂದು ಅವರು ಹೊರಟಿದ್ದರೆ, ಅವರ ಸೈದ್ಧಾಂತಿಕ ನಿಲುವಿಗೂ ಬಲ ಬರುತ್ತಿತ್ತು.

ಆದರೆ ಸೀಮಿತವಾದ ಆಲೋಚನೆಗಳಲ್ಲದೇ ಅವರು ಮುಳುಗಿದಂತೆ ಕಾಣುತ್ತಿದೆ. ತನ್ನ ಪಕ್ಷಕ್ಕೆ ಸೇರಿದ ಭ್ರಷ್ಟಾತಿಭ್ರಷ್ಟರಿಗೆ ಕ್ಲೀನ್‍ಚಿಟ್ ನೀಡಿ, ಇತರ ಪಕ್ಷಗಳಲ್ಲಿರುವವರನ್ನು ಹಣಿಯುತ್ತಾ ಸಾಗುತ್ತಿರುವ ಕೇಂದ್ರದ ನೀತಿಯ ವಿರುದ್ಧ ಸಮರ ಸಾರಿ ದೇಶ ಮಟ್ಟದಲ್ಲೂ ಗಮನ ಸೆಳೆಯಬಹುದಿತ್ತು. ಹಾಗೆ ಮಾಡಿದರೆ, ಜೈಲು ಸೇರಿರುವ ಡಿಕೆಶಿ ಹೀರೋ ಆಗಿಬಿಡುತ್ತಾರೆಂಬ ಆಲೋಚನೆ ಸಿದ್ದರಾಮಯ್ಯನವರಲ್ಲಿ ಇದ್ದಂತಿದೆ. ಒಂದೆಡೆ ಸಮಾಜವಾದದ ಹಿನ್ನೆಲೆಯಿಂದ, ಬಡವರ ಪರ ನೀತಿಗಳಿಂದ, ದೇವರಾಜ ಅರಸು ಅವರ ನಂತರ ರಾಜ್ಯ ಕಂಡ ಜನಪರ ನಾಯಕನಾಗಿ ಕಾಣಲಾರಂಭಿಸಿದ ಸಿದ್ದರಾಮಯ್ಯ ಇಂದು ತಮ್ಮ ವಿಫಲ ತಂತ್ರಗಾರಿಕೆ ಮತ್ತು ನೀತಿಗಳಿಂದ ಪಕ್ಷದಲ್ಲಿ ಬೆಂಬಲ ಕಳೆದುಕೊಳ್ಳುತ್ತಿದ್ದಾರೆ.

ಇನ್ನೊಂದೆಡೆ ಡಿಕೆ ಶಿವಕುಮಾರ್ ಬಂಧನದ ನಂತರ ಇ.ಡಿ. ಅವರ ಪುತ್ರಿ ಐಶ್ವರ್ಯಗೆ ಇದೇ 13ಕ್ಕೆ ತನಿಖೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ. ಇವೆಲ್ಲದರ ಮಧ್ಯೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಶಿವಕುಮಾರ್ ಸಹೋದರ ಸಂಸದ ಡಿಕೆ ಸುರೇಶ್ ಕರೆಸಿಕೊಂಡು ಕ್ಷೇಮ ವಿಚಾರಿಸಿದ್ದಲ್ಲದೆ ನಿಮ್ಮೊಂದಿಗೆ ಪಕ್ಷವಿದೆ ಎಂದು ಅಭಯ ನೀಡಿದ್ದಾರೆ. ತಮ್ಮೆಲ್ಲಾ ಅಕ್ರಮಗಳು, ಭುಜಬಲದಿಂದ ಬಾಹುಬಲಿಯಾಗಿ ಬೆಳೆದು, ಪಕ್ಷಕ್ಕೆ ಕಷ್ಟ ಬಂದಾಗ ಬಂಡೆಗಲ್ಲಿನಂತೆ ನಿಂತ ಶಿವಕುಮಾರ್‍ಗೆ ಅಷ್ಟು ಹೇಳುವುದು ಅವರಿಗೂ ಅನಿವಾರ್ಯವಿತ್ತು. ಆದರೆ, ಕರ್ನಾಟಕದಲ್ಲಿ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಮತ್ತು ಪರಿಸ್ಥಿತಿ ಹೈಕಮ್ಯಾಂಡ್‍ಗಿಲ್ಲ.

2014ರ ನಂತರ ಬಹುತೇಕ ಚುನಾವಣೆಗಳಲ್ಲಿ ಗೆಲುವಿನ ಜೈತ್ರಯಾತ್ರೆ ಮುಂದುವರೆಸಿರುವ ಪಿಎಮ್ ನರೆಂದ್ರ ಮೋದಿ ಮತ್ತು ಅಮಿತ್ ಶಾ ಜೋಡಿ ಕರ್ನಾಟಕದಲ್ಲಿ ಮಧ್ಯಂತರ ಚುನಾವಣೆ ನಡೆಸಿ ಸ್ಪಷ್ಟ ಬಹುಮತದ ತಮ್ಮ ಸರ್ಕಾರ ರಚಿಸುವ ಇರಾದೆ ಹೊಂದಿದ್ದಾರೆ. ಅಂತಹ ಸಂದರ್ಭದಲ್ಲಿ ಅವರನ್ನು ಎದುರಿಸಲು ಬೇಕಾದ ತಯಾರಿ ಕರ್ನಾಟಕ ಕಾಂಗ್ರೆಸ್‍ನ ಪ್ರಧಾನ ನಾಯಕ ಸಿದ್ದರಾಮಯ್ಯನವರಲ್ಲಿ ಇದ್ದಂತೆ ಕಾಣುತ್ತಿಲ್ಲ. ಬಿಜೆಪಿ ಲೆಕ್ಕಾಚಾರ ವಿಫಲವಾಗಿ ಮಧ್ಯಂತರ ಚುನಾವಣೆ ನಡೆಯದೇ ಹೋದರೂ, ಅನರ್ಹ ಶಾಸಕರ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಬೇಕಿದೆ. ಅಲ್ಲಿಯಾದರೂ ಗೆದ್ದು, ಬಿಜೆಪಿ ಬಹುಮತ ಕಳೆದುಕೊಳ್ಳುವಂತೆ ಮಾಡಬೇಕೆಂದರೂ ಸಿದ್ದು, ಖರ್ಗೆ, ಡಿಕೆಶಿ ಎಲ್ಲರೂ ಒಂದಾಗಲೇಬೇಕು. ಅದಕ್ಕೆ ಬೇಕಾದ ವಾತಾವರಣ ನಿರ್ಮಿಸುವುದು ಸಿದ್ದರಾಮಯ್ಯನವರ ಜವಾಬ್ದಾರಿಯೇ ಹೊರತು ಬೇರೆಯವರದ್ದಲ್ಲ. ಅದರಲ್ಲಿ ವಿಫಲವಾದರೆ, ಮೋದಿ, ಶಾ ಜೊಡಿ ಎದುರಾಳಿಗಳಿಲ್ಲದ ಅಖಾಡದಲ್ಲಿ ಗೆಲುವಿನ ನಗೆ ಬೀರುತ್ತಲೇ ಹೋಗುತ್ತಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...