ಹಾಡಹಗಲೇ ಸಮಾಜವಾದಿ ಪಕ್ಷ ದ ನಾಯಕ ಮತ್ತು ಅವರ ಪುತ್ರನನ್ನು ಗುಂಡಿಕ್ಕಿ ಹತ್ಯೆಗೈದಿರುವ ಘಟನೆಗೆ ಬಿಜೆಪಿಯ ಗೂಂಡಾಗಳು ಕಾರಣ ಎಂದು ಸಮಾಜವಾದಿ ಪಕ್ಷ ಆರೋಪಿಸಿದೆ.
ತಮ್ಮ ಪಕ್ಷದ ಮುಖಂಡರನ್ನು ಹತ್ಯೆ ಮಾಡಿರುವುದನ್ನು ಖಂಡಿಸಿರುವ ಸಮಾಜವಾದಿ ಪಕ್ಷ, ಬಿಜೆಪಿ ಸರ್ಕಾರ ಈ ಹತ್ಯೆಗೆ ಜವಾಬ್ದಾರಿಯಾಗಿದೆ. ಇದೊಂದು ಕೊಲೆಗಡುಕ ಸರ್ಕಾರ. ಬಿಜೆಪಿ ಗೂಂಡಾಗಳು ದಾಳಿ ನಡೆಸಿ ನಮ್ಮ ಮುಖಂಡರನ್ನು ಹತ್ಯೆಗೈದಿದ್ದಾರೆ. ದಲಿತ ಮುಖಂಡರ ಸಾವು ದುಃಖಕರ. ದಲಿತ ಮುಖಂಡರ ಹತ್ಯೆಗೆ ಕಾರಣವಾಗಿರುವ ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದೆ.
ಶಾಮ್ ಸೋಯಿ ಗ್ರಾಮದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ರಸ್ತೆ ನಿರ್ಮಾಣ ಸಂಬಂಧ, ಗುಂಪಿನೊಂದಿಗೆ ಮಾತಿನಚಕಮಕಿ ನಡೆದು ರೈಫಲ್ನಿಂದ ಚೊಟ್ಟಲಾಲ್ ದಿವಾಕರ್ ಮತ್ತು ಅವರ ಪುತ್ರನನ್ನು ಗುಂಡಿಕ್ಕಿ ಕೊಲ್ಲುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಎಎಸ್.ಪಿ ಅಲೋಕ್ ಕುಮಾರ್ ಜಸ್ವಾಲ್ ಮಾತನಾಡಿ, ಚೊಟ್ಟಲಾಲ್ ದಿವಾಕರ್ ಮತ್ತು ಆತನ ಪುತ್ರ ಸುನೀಲ್ ಅವರನ್ನು ಹಾಡಹಗಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಈ ಸಂಬಂಧ FIR ದಾಖಲು ಮಾಡಿದ್ದೇವೆ. ಹತ್ಯೆ ಮಾಡಿದವರಲ್ಲಿ ಐವರನ್ನು ಗುರುತಿಸಿದ್ದು ಉಳಿದವರ ಗುರುತು ಪತ್ತೆಯಾಗಿಲ್ಲ.
ಆರೋಪಿಗಳೆಲ್ಲರೂ ಸ್ಥಳೀಯರು. ರಸ್ತೆ ನಿರ್ಮಾಣ ಸಂಬಂಧ ಗುಂಪನ್ನು ಪ್ರಶ್ನಿಸಿದಾಗ ಇಬ್ಬರನ್ನು ಹತ್ಯೆ ಮಾಡಿದೆ. ಗುಂಡಿಟ್ಟು ಹತ್ಯೆ ಮಾಡಿರುವ ಆರೋಪಿ ನಾಪತ್ತೆಯಾಗಿದ್ದಾನೆ. ಹಾಗಾಗಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಹೇಳಿದ್ದಾರೆ.
ವಿಡಿಯೋ 2 ನಿಮಿಷ 30 ಸೆಕೆಂಡ್ ಇದ್ದು 2 ರೈಫಲ್ ಹಿಡಿದು ಬಂದು ಗುಂಡಿಕ್ಕಿರುವ ದೃಶ್ಯಗಳು ಸೆರೆಯಾಗಿವೆ. ಹಾಡಹಗಲೇ ಎಲ್ಲರ ಮುಂದೆಯೇ ಗುಂಡಿಕ್ಕಿ ಹತ್ಯೆಗೈದಿದ್ದಾರೆ.
ಹತ್ಯೆಯಾಗಿರುವ ದಿವಾಕರ್ ಸಮಾಜವಾದಿ ಪಕ್ಷದಿಂದ 2017ರ ವಿಧಾನಸಭಾ ಚುನಾವಣೆಯಲ್ಲಿ ಚಂದೌಸಿ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಗಿಟ್ಟಿಸಿಕೊಂಡಿದ್ದರು. ಆದರೆ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡ ಪರಿಣಾಮ ಆತನ ಸ್ಪರ್ಧಿಸಲಿಲ್ಲ. ಇಲ್ಲಿ ಕಾಂಗ್ರೆಸ್ ಪಕ್ಷ ಅಭ್ಯರ್ಥಿ ಗೆಲುವು ಸಾಧಿಸಿದ್ದರು.
ಓದಿ: ಯು.ಪಿ: ಸಮಾಜವಾದಿ ಪಕ್ಷದ ನಾಯಕ & ಪುತ್ರನನ್ನು ಗುಂಡಿಕ್ಕಿ ಹತ್ಯೆ