Homeಎಲೆಮರೆಗಡಿನಾಡು ಬೀದರಿನಲ್ಲಿ ಸದ್ದಿಲ್ಲದೆ ದುಡಿಯುವ ಚಂದ್ರಪ್ಪ ಹೆಬ್ಬಾಳಕರ

ಗಡಿನಾಡು ಬೀದರಿನಲ್ಲಿ ಸದ್ದಿಲ್ಲದೆ ದುಡಿಯುವ ಚಂದ್ರಪ್ಪ ಹೆಬ್ಬಾಳಕರ

- Advertisement -
ಎಲೆಮರೆ-27
- Advertisement -

ಕುವೆಂಪು ಭಾಷಾ ಭಾರತಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ಸೆಮಿನಾರಿನೊಂದರಲ್ಲಿ ಚಂದ್ರಪ್ಪ ಹೆಬ್ಬಾಳಕರ್ ಅವರನ್ನು ನಾನು ಮೊದಲಿಗೆ ನೋಡಿದೆ. ಚೂರು ಕುಳ್ಳನೆ ವ್ಯಕ್ತಿ ಪುಟುಪುಟು ಓಡಾಡುತ್ತ ತಮ್ಮ `ಬೀದರ್ ಜಿಲ್ಲೆಯ ದಲಿತ ಕವಿ ಕಾವ್ಯ’ ಕೃತಿಯನ್ನು ಕೆಲವರಿಗೆ ಕೊಡುತ್ತಿದ್ದರು. ನಾನು ಕುತೂಹಲದಿಂದ ಈ ಪುಸ್ತಕವನ್ನು ಗಮನಿಸಿದೆ. ಇದೊಂದು ಶ್ರಮದಾಯಕ ಕೆಲಸ ಅನ್ನಿಸಿತು. ನಂತರ ಜನಪದ ಕವಿಗಳ ಭೇಟಿಗೆಂದು ಬೀದರ ಜಿಲ್ಲೆಯ ಬಸವಕಲ್ಯಾಣಕ್ಕೆ ಹೋದಾಗ ಚಂದ್ರಪ್ಪ ಅವರನ್ನು ಕಂಡು ಮಾತನಾಡಿಸಿ, ಅವರ ಈ ಪುಸ್ತಕವನ್ನು ಪಡೆದೆ. ಈ ಭಾಗದ ಕೆ.ನೀಲಾ, ಮೀನಾಕ್ಷಿ ಬಾಳಿ, ಪ್ರಭು ಖಾನಾಪುರೆ ಮೊದಲಾದವರೊಡಗೂಡಿ ಬಸವ ಕಲ್ಯಾಣದ ಕೆಲವೆಡೆಗಳಲ್ಲಿ ಸುತ್ತಾಡುವಾಗ ಇವರ ಜತೆ ಮತ್ತಷ್ಟು ಮಾತುಕತೆ ನಡೆಯಿತು. ರಾಜ್ಯವ್ಯಾಪಿ ಪ್ರಚಾರವಿಲ್ಲದೆ, ಜನತೆಗೆ ಅರಿವು ಮೂಡಿಸುವ ಕೆಲಸದಲ್ಲಿ ತಣ್ಣಗೆ ದುಡಿದವರಲ್ಲಿ ಚಂದ್ರಪ್ಪ ಹೆಬ್ಬಾಳಕರ ಅವರೂ ಒಬ್ಬರೆಂದು, ಅವರ ಬಗೆಗೆ ಗೌರವ ಮೂಡಿತು.

ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಬೇಮಳಖೇಡದ ಚಂದ್ರಪ್ಪ ಹೆಬ್ಬಾಳಕರ ಅವರು ಇದೀಗ ಬೀದರಿನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಚಂದ್ರಪ್ಪನವರು 1958 ರಲ್ಲಿ ಚಿಟಗುಪ್ಪದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿದವರು, ನಂತರ ಪ್ರೌಢಶಾಲೆ ಶಿಕ್ಷಕರಾಗಿಯೂ, 1998ರಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿಯೂ ಕಾರ್ಯನಿರ್ವಹಿಸಿ ನಿವೃತ್ತರಾದರು. ಶಾಲಾ ಶಿಕ್ಷಕರಾದವರು ಸಮಾಜದೊಂದಿಗೆ ಒಡನಾಡುತ್ತಾ, ಜನತೆಯನ್ನು ತಿದ್ದುವ ಮೇಷ್ಟ್ರುಗಳಾಗಿಯೂ ರೂಪಾಂತರ ಹೊದುವವರು ವಿರಳ. ಅಂತವರಲ್ಲಿ ಚಂದ್ರಪ್ಪ ಹೆಬ್ಬಾಳಕರ ಅವರು ಒಬ್ಬರು.

ಗುಲ್ಬರ್ಗಾ ಬೀದರ ಭಾಗದಲ್ಲಿ `ಬಾನಾಮತಿ’ಯ ಕುರಿತ ಮೌಢ್ಯ ವ್ಯಾಪಕವಾಗಿದೆ. ಈ ಕಾರಣಕ್ಕೆ ಜನರು ಸದಾ ಆತಂಕಿತರಾಗಿರುತ್ತಾರೆ. ಈ ಬಾನಾಮತಿ ಕುರಿತಂತೆ ಬಹಳ ಹಿಂದೆಯೇ ಹೆಚ್.ನರಸಿಂಹಯ್ಯ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ಸರಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ಇದೊಂದು ಮಾನಸಿಕ ವ್ಯಾಧಿ. ಇದಕ್ಕೆ ಪ್ರಜ್ಞಾವಂತಿಕೆಯೊಂದೆ ಮದ್ದು ಎಂದು ನರಸಿಂಹಯ್ಯ ಹೇಳಿದ್ದರು. ಈ ಬಾನಾಮತಿ ಕುರಿತಂತೆ ಸ್ಥಳೀಯರು ವೈಚಾರಿಕವಾಗಿ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಬೇಕು ಎಂಬ ಆಲೋಚನೆಯಲ್ಲಿ ಚಂದ್ರಪ್ಪ ಅವರು ಸ್ಥಳೀಯವಾಗಿ ಹಲವು ಬಾನಾಮತಿ ಪ್ರಕರಣಗಳಲ್ಲಿ ಹಳ್ಳಿಗಳಿಗೆ ತೆರಳಿ ಜನರನ್ನು ಮೌಢ್ಯದಿಂದ ಹೊರಬರುವಂತೆ ಜಾಗೃತಿ ಮೂಡಿಸಿದ್ದಾರೆ. ಶಾಲಾ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಲು ಬಾನಾಮತಿ ನಿರ್ಮೂಲನ ಸಮಿತಿಯ ಸಂಚಾಲಕರಾಗಿ ಬೀದರ್ ಭಾಗದ ಪ್ರಾಥಮಿಕ ಮತ್ತು ಪ್ರೌಢಶಾಲೆಗಲ್ಲಿ ನಾಟಕ ಪ್ರದರ್ಶನ ಮತ್ತು ಉಪನ್ಯಾಸಗಳನ್ನು ಏರ್ಪಡಿಸಿ ಶಾಲೆಗಳಲ್ಲಿ ವೈಚಾರಿಕತೆ ಮೂಡಿಸಲು ಚಂದ್ರಪ್ಪ ಅವರು ಶ್ರಮಿಸಿದ್ದಾರೆ. ಭಾರತೀಯ ಜ್ಞಾನವಿಜ್ಞಾನ ಸಂಘಟನೆಯ ಸದಸ್ಯರಾಗಿ ಪವಾಡ ಬಯಲಿನ ಮೂಲಕ ಮೌಢ್ಯಗಳ ಬಗೆಗೆ ಅರಿವು ಮೂಡಿಸುವುದರಲ್ಲಿಯೂ ಸಕ್ರಿಯವಾಗಿದ್ದಾರೆ.

ಬೀದರ ಭಾಗದಲ್ಲಿ ಬೌದ್ಧಧರ್ಮಕ್ಕೆ ಪ್ರವೇಶಿಸಿದ ದಲಿತರ ಸಂಖ್ಯೆ ಹೆಚ್ಚು. ಹಳ್ಳಿ ಹಳ್ಳಿಗಳಲ್ಲಿಯೂ ಚಿಕ್ಕ ಚಿಕ್ಕ ಬೌದ್ಧವಿಹಾರಗಳು ಸ್ಥಾಪನೆಯಾಗಿವೆ. ಹೀಗಿರುವಾಗ ಬೌದ್ಧಧರ್ಮದ ಅನುಸರಣೆಯೂ ಮೌಢ್ಯಕ್ಕೆ ತಿರುಗಬಾರದೆಂದು ಈ ಭಾಗದ ಕೆಲವರು ಬೌದ್ಧ ವೈಚಾರಿಕತೆಯನ್ನು ವಿಸ್ತರಿಸುತ್ತಿದ್ದಾರೆ. ಹೆಬ್ಬಾಳಕರ ಅವರು 1994 ರಿಂದ 2001ರ ತನಕ ಬೌದ್ಧಿಷ್ಟ್ ಸೊಸೈಟಿ ಆಫ್ ಇಂಡಿಯಾದ ಬೀದರ ಜಿಲ್ಲೆಯ ಕಾರ್ಯಕಾರಿ ಸದಸ್ಯರಾಗಿ ನೂರಾರು ಹಳ್ಳಿಗಳಿಗೆ ಬಾಬಾ ಸಾಹೇಬರ ಬೌದ್ಧದಮ್ಮದ ತಿಳಿವನ್ನು ವಿಸ್ತರಿಸಲು ಪ್ರಯತ್ನಿಸಿದ್ದಾರೆ. ಇದಕ್ಕಾಗಿ ನೂರಕ್ಕಿಂತ ಹೆಚ್ಚು ಹಳ್ಳಿಗಳಲ್ಲಿ `ಧಮ್ಮ ದೀಪ’ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸುವಲ್ಲಿ ಶ್ರಮಿಸಿದ್ದಾರೆ.

ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಚಂದ್ರಪ್ಪ ಅವರ ಸಾಹಿತ್ಯ ರಚನೆ ಅಷ್ಟಾಗಿ ಚರ್ಚೆಗೆ ಒಳಗಾಗಿಲ್ಲ. ಈ ತನಕ ಅವರು `ಬೀದರ್ ಜಿಲ್ಲೆಯ ಮೊಹರಂ ಪದಗಳು’ `ಭೀಮಕವಿ ಶ್ರೀ ಮಾಣಿಕರಾವ ಜ್ಯೋತಿ’ `ಶೇರ್ ಎ ದಖನ್: ಬಿ.ಶ್ಯಾಮಸುಂದರ್’ `ಉರಿಲಿಂಗ ಪೆದ್ದಿ ಪರಂಪರೆ’ `ದಲಿತೋದ್ಧಾರಕರು’ ಒಳಗೊಂಡಂತೆ ಹದಿನೈದಕ್ಕಿಂತ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ `ಬೀದರ್ ಜಿಲ್ಲೆಯ ದಲಿತ ಕವಿ ಕಾವ್ಯ’ ಒಂದು ಅತ್ಯುತ್ತಮ ಕೃತಿ. ಇಡೀ ಬೀದರನ ಹಳ್ಳಿ ಹಳ್ಳಿಗಳ ಸುತ್ತಿ ಸಂಪಾದಿಸಿದ್ದಾರೆ. ಈ ಕೃತಿ 2012 ರಲ್ಲಿ ಪ್ರಕಟವಾಗಿದೆ. ಹತ್ತೊಂಬತ್ತನೆ ಶತಮಾನದ ಆದಿಯಲ್ಲಿ ಜೀವಿಸಿದ್ದರು ಎನ್ನಲಾಗುವ ಹುಮನಾಬಾದ ತಾಲೂಕಿನ ಚಿಡಗುಪ್ಪಿಯ ತಿಪರಂಚಿ ಮಾಸ್ತರರಿಂದ ಮೊದಲುಗೊಂಡು 1979 ರಲ್ಲಿ ಜನಿಸಿದ ಮಚ್ಚೇಂದ್ರ ಪಿ. ಅಣಕಲ್ ತನಕ ಒಟ್ಟು 85 ದಲಿತ ಕವಿಗಳ ವಿವರ ಮತ್ತು ಆಯ್ದ ಕವಿತೆಗಳನ್ನು ಕೊಡಲಾಗಿದೆ. ಹೆಚ್ಚುಕಡಿಮೆ ಒಂದು ಶತಮಾನದ ಅಂತರದಲ್ಲಿ ಇಷ್ಟು ಕವಿಗಳ ಮೊತ್ತ ದೊಡ್ಡದಲ್ಲವಾದರೂ ದಲಿತ ಕವಿಗಳು ಎನ್ನುವಾಗ ಈ ಸಂಖ್ಯೆಯ ಮಹತ್ವ ಅರಿವಿಗೆ ಬರುತ್ತದೆ.

ಈ ಸಂಕಲನದ ಕವಿತೆಗಳನ್ನು ಕನ್ನಡದ ಆಧುನಿಕ ಕಾವ್ಯದ ಜೊತೆಗಿಟ್ಟು ನೋಡಲಾಗದು. ಅಥವಾ ಇಲ್ಲಿನ ಯಾವ ಕವಿಗಳ ಹೆಸರೂ ನಮ್ಮ ಕನ್ನಡ ಕವಿಗಳ ಪಟ್ಟಿಯಲ್ಲಿ ಕಾಣದು. ಅಷ್ಟರ ಮಟ್ಟಿಗೆ ಈ ಕವಿಗಳು ಮತ್ತವರ ಕವಿತೆ ಬೀದರ ಭಾಗಕ್ಕೆ ಮಾತ್ರ ಸೀಮಿತವಾದಂತೆ ಕಾಣುತ್ತದೆ ಅಥವಾ ಕನ್ನಡ ಸಾಹಿತ್ಯ ಪರಂಪರೆ ಬೀದರ ಭಾಗದ ಕವಿ ಕಾವ್ಯವನ್ನು ಹೊರಗಿಟ್ಟಂತೆ ಗೋಚರಿಸುತ್ತಿದೆ. ಹೀಗೆ ತಮ್ಮದೇ ಆದ ವಿಶಿಷ್ಠತೆಯನ್ನು ಮೈಗೂಡಿಸಿಕೊಂಡ ಈ ಭಾಗದ ದಲಿತ ಕಾವ್ಯಮೀಮಾಂಸೆ ಯಾವುದು? ಕನ್ನಡ ಕಾವ್ಯ ಎಂದು ಕರೆಯುವಾಗ ಈ ಭಾಗದ ಕಾವ್ಯಕ್ಕಿರುವ ವಿಶಿಷ್ಠ ಚಹರೆ ಏನು? ಎನ್ನುವುದರ ಕುರಿತು ಚರ್ಚಿಸುವ ಅಗತ್ಯವಿದೆ.

ಬೀದರ ಜಿಲ್ಲೆಯ ಬಸವಕಲ್ಯಾಣದ ಪ್ರಭಾವ ಈ ಭಾಗದ ಕವಿಗಳ ಮೇಲೆ ಸಹಜವಾಗಿದೆ. ಹೀಗಾಗಿ ಈ ಭಾಗದ ಕವಿಗಳಲ್ಲಿ ವಚನದ ಅನುಕರಣೆಯಿದೆ. ಹೆಬ್ಬಾಳಕರ ಕೂಡ `ಚಂದ್ರಣ್ಣ’ ಎನ್ನುವ ವಚನಾಂಕಿತದಲ್ಲಿ ವಚನಗಳನ್ನು ಬರೆದಿದ್ದಾರೆ. ಚಂದ್ರಪ್ಪ ಜಾನಪದ ವಿದ್ವಾಂಸರೂ ಕೂಡ. ಈ ಭಾಗದ ಮೊಹರಂ ಪದಗಳನ್ನು ಸಂಗ್ರಹಿಸಿದ್ದಾರೆ. ಅಂತೆಯೇ ಬೀದರ್ ಜಿಲ್ಲಾ ಜನಪದ ಸೊಗಡು ಕೃತಿಯಲ್ಲಿ ಈ ಭಾಗದ ಜನಪದ ಸಾಹಿತ್ಯದ ಬಗ್ಗೆ ಗಮನಸೆಳೆದಿದ್ದಾರೆ.

ಚಂದ್ರಪ್ಪ ಹೆಬ್ಬಾಳಕರನ್ನು ಗುರುತಿಸಿ ಬೀದರ್ ಗುಲ್ಬರ್ಗಾ ಭಾಗದ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ, ಸನ್ಮಾನಗಳನ್ನು ಮಾಡಿ ಪುರಸ್ಕರಿಸಿವೆ. 2015 ರಲ್ಲಿ ಇವರ ಸಾಹಿತ್ಯಿಕ ಕೃಷಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಯು ಲಭಿಸಿತು. ಬಹುಶಃ ಆಗ ಹೋರಾಟಗಾರ್ತಿ ಕೆ.ನೀಲಾ ಅವರು ಸಾಹಿತ್ಯ ಅಕಾಡೆಮಿಯ ಸದಸ್ಯರಾಗದೆ ಇದ್ದಿದ್ದರೆ, ಚಂದ್ರಪ್ಪ ಅವರನ್ನು ಸಾಹಿತ್ಯ ಅಕಾಡೆಮಿ ಗುರುತಿಸುತ್ತಿರಲಿಲ್ಲ.

ದುರಂತವೆಂದರೆ, ಇವರ ಆಯ್ಕೆಯನ್ನು ಇತರೆ ಅಕಾಡೆಮಿ ಸದಸ್ಯರು ವಿರೋಧಿಸಿದ್ದರು. ಕಾರಣ ಚಂದ್ರಪ್ಪ ಅವರ ಕೆಲಸವು ರಾಜ್ಯಮಟ್ಟದಲ್ಲಿ ಪ್ರಚಾರಕ್ಕೆ ಬಂದಿರಲಿಲ್ಲ. ಅಂತೆಯೇ ಹಳ್ಳಿಹಳ್ಳಿ ತಿರುಗಾಡಿ ವೈಚಾರಿಕತೆ ರೂಪಿಸುವ ಶ್ರಮದಾಯಕ ಕೆಲಸವು ಸಾಹಿತ್ಯ ಅಕಾಡೆಮಿಯ ಮೌಲ್ಯಮಾಪನಕ್ಕೆ ಸಿಕ್ಕದಿರುವುದು ಅಕಾಡೆಮಿಯ ಮಿತಿಯನ್ನೂ ತೋರಿಸುತ್ತದೆ. ಈ ಭಾಗದಲ್ಲಿ ಹೋರಾಟ ಚಳವಳಿ ವೈಚಾರಿಕ ಎಚ್ಚರವನ್ನು ಮೂಡಿಸುತ್ತಿರುವ ಕೆ.ನೀಲಾ, ಮೀನಾಕ್ಷಿ ಬಾಳಿ, ಪ್ರಭು ಖಾನಾಪುರೆ, ಆರ್.ಕೆ.ಹುಡುಗಿ ಮೊದಲಾದವರ ತಂಡದ ಜತೆ ಚಂದ್ರಪ್ಪ ಅವರೂ ಸೇರಿಕೊಂಡು ಕೆಲಸ ಮಾಡುತ್ತಾರೆ. ಹೀಗೆ ಸ್ಥಳೀಯವಾಗಿ ಗ್ರಾಮಗಳಲ್ಲಿ ವೈಚಾರಿಕತೆ ಮೂಡಿಸುವ ಇಂತಹ ಹಿರಿಯರ ಕೆಲಸಗಳನ್ನು ಗುರುತಿಸುವ ಅಗತ್ಯವಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ ವೀಕ್ಷಿಸುತ್ತಾ ಬೀದಿಯಲ್ಲಿ ತಿರುಗಾಡುವ ಯುವಕರ ಖಾತೆಗಳಿಗೆ ಹಣ...

0
"ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ಗಳನ್ನು ಬಳಸಿಕೊಂಡು ಬೀದಿಗಳಲ್ಲಿ ತಿರುಗುತ್ತಿರುವ ನಮ್ಮ ಯುವಕರ ಬ್ಯಾಂಕ್ ಖಾತೆಗಳಿಗೆ ವಾರ್ಷಿಕ ಒಂದು ಲಕ್ಷ ರೂಪಾಯಿ ಮತ್ತು ತಿಂಗಳಿಗೆ 8,500 ರೂಪಾಯಿಗಳನ್ನು ಜಮಾ ಮಾಡಲಾಗುತ್ತದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ"...