Homeಕರ್ನಾಟಕಗ್ರಾಮವಾಸ್ತವ್ಯದಲ್ಲಿ ಕುಮಾರಸ್ವಾಮಿ : ತಳಮಟ್ಟದ ಸಂಕಟಗಳಿಗೆ ಪರಿಹಾರ ಸಿಗುವುದೇ?

ಗ್ರಾಮವಾಸ್ತವ್ಯದಲ್ಲಿ ಕುಮಾರಸ್ವಾಮಿ : ತಳಮಟ್ಟದ ಸಂಕಟಗಳಿಗೆ ಪರಿಹಾರ ಸಿಗುವುದೇ?

- Advertisement -
- Advertisement -

| ನಾನುಗೌರಿ ಡೆಸ್ಕ್ |

ಚುನಾವಣೆ, ಕ್ಯಾಬಿನೆಟ್ ಸಭೆ, ಸಮನ್ವಯ ಸಮಿತಿ ಸಭೆ, ಮೈತ್ರಿಯ ಗೊಂದಲಗಳಲ್ಲೇ ಮುಳುಗಿ ಗ್ರಾಮ ಕರ್ನಾಟಕವನ್ನೇ ಮರೆತಿದ್ದ ಮುಖ್ಯಮಂತ್ರಿ ಮತ್ತು ಆ ಕಾರಣಕ್ಕಾಗಿ ಸರ್ಕಾರಕ್ಕೆ ಎಚ್ಚರವಾದಂತಿದೆ. ಇದು ಬರಪೀಡಿತ ಗ್ರಾಮ ಕರ್ನಾಟಕದ ಜನತೆಗೆ ತನ್ನ ಸಂಕಟಗಳನ್ನು ಮುಖಾಮುಖಿ ತೋರಿಸಲು ಅವಕಾಶವಾಗಿದೆ.

ಈಗ ಯಾದಗಿರಿ ತಾಲೂಕಿನ ಚಂಡರಕಿಯಲ್ಲಿ ಮುಖ್ಯಮಂತ್ರಿಗಳ ಗ್ರಾಮವಾಸ್ತವ್ಯ ನಡೆದಿದೆ. ಚಂಡರಕಿಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತಾಡುತ್ತಿರುವ ಕುಮಾರಸ್ವಾಮಿ, ಇಡೀ ಯಾದಗಿರಿ ಜಿಲ್ಲೆಯ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಘೋಷಿಸಿದ್ದಾರೆ. ಯಾದಗಿರಿಗೊಂದು 300 ವಾರ್ಡುಗಳ ಆಸ್ಪತ್ರೆ ನಿರ್ಮಾಣದ ಭರವಸೆ ನೀಡಿದ್ದಾರೆ. ಯಾದಗಿರಿಯ ಎಲ್ಲ ಗ್ರಾಮಗಳಿಗೂ ಒಂದೂವರೆ ವರ್ಷದಲ್ಲಿ ನದಿನೀರನ್ನು ತಲುಪಿಸುವ ಯೋಜನೆಯನ್ನು ಘೋಷಿಸಿದ್ದಾರೆ. ಇದಕ್ಕೂ ಮೊದಲು ಅವರು ಯಾದಗಿರಿ ಪಟ್ಟಣದಲ್ಲಿ 28 ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ.

ಯಾದಗಿರಿಯ ಜಿಲ್ಲೆಯಲ್ಲಿ ಸಾಲಮನ್ನಾ ಕುರಿತಂತೆ ಆಗಿರುವ ಎಡವಟ್ಟಿಗೆ ಅಸಮಾಧಾನ ವ್ಯಕ್ತಪಡಿಸಿದ ಕುಮಾರಸ್ವಾಮಿ, ಡಿಸಿಸಿ ಬ್ಯಾಂಕಿನ ತಪ್ಪಿನಿಂದಾಗಿ ಇದು ನಡೆದಿದ್ದು ಅದನ್ನು ಸರಿಪಡಿಸುವ ಭರವಸೆ ನೀಡಿ, ಹೊಸ ಸಾಲ ಪಡೆಯಲು 100 ರೂ ಕೋಟಿ ಒದಗಿಸಲು ಆದೇಶ ನೀಡಿದ್ದಾರೆ. ಸಂಜೆ ಸರ್ಕಾರಿ ಶಾಲೆಯ ಮಕ್ಕಳೊಂದಿಗೆ ಚರ್ಚೆ ನಡೆಸಿ, ರಾತ್ರಿ ಅಲ್ಲಿಯೇ ಊಟ ಮಾಡಿ ವಾಸ್ತವ್ಯ ಮಾಡಲಿದ್ದಾರೆ.

ಹಿಂದುಳಿದ ಭಾಗದ ವಾಸ್ತವತೆ ಅರಿವಾಗಲಿ
ಸದಾ ಬೆಂಗಳೂರಿನಿಂದಲೇ ಆಡಳಿತ ನಿರ್ವಹಿಸುವ ಅಧಿಕಾರಸ್ಥರಿಗೆ ಇಂತಹ ಗ್ರಾಮ ವಾಸ್ತವ್ಯಗಳು ಜನರ ನೈಜ ಸಮಸ್ಯೆಗಳ ದರ್ಶನಕ್ಕೆ ಅವಕಾಶ ಮಾಡಿಕೊಡುವ ದೃಷ್ಟಿಯಿಂದ ಸ್ವಾಗತಾರ್ಹ. ಜಿಲ್ಲೆಯಾದ ಮೇಲೂ ಯಾದಗಿರಿಗೆ ಬಹುಪಾಲು ಜಿಲ್ಲಾ ಸೌಕರ್ಯಗಳು ಸಿಕ್ಕಿಲ್ಲ. ಇಂದಿಗೂ ಬಹುಪಾಲು ಸರ್ಕಾರಿ ಕಚೇರಿಗಳು ಖಾಸಗಿ ಕಟ್ಟಡಗಳಲ್ಲೇ ನಡೆಯುತ್ತಿವೆ. ಎಲ್ಲ ಕಡೆಯಂತೆಯೇ ಸರ್ಕಾರಿ ಶಾಲೆಗಳು ಸಮಸ್ಯೆಯಲ್ಲಿವೆ.

ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ (ಯುಕೆಪಿ) ನಿರ್ಮಿಸಿದ ಕಳಪೆ ಕಾಲುವೆಗಳಿಂದ ನೀರು ಪೋಲಾಗುತ್ತಿದೆ. ನೀರಾವರಿ ಯೋಜನೆಗಳ ಕೊರತೆಯ ಕಾರಣಕ್ಕೆ ಅಪಾರ ನೀರು ಸುಮ್ಮನೇ ಹರಿದು ತೆಲಂಗಾಣ ತಲುಪುತ್ತಿದೆ. ಕೃಷ್ಣ ಮತ್ತು ಭೀಮಾ ನದಿಗಳು ಪಕ್ಕದಲ್ಲೇ ಹರಿದರೂ ಯಾದಗಿರಿ ಮತ್ತು ಶಹಾಪುರ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಸಲಾಗಿಲ್ಲ!

ಸರ್ಕಾರಿ ಯೋಜನೆಗಳ ಅನುಷ್ಟಾನ ಸರಿಯಾಗದೇ ಇರುವುದರಿಂದ ಯಾದಗಿರಿಯ ಜಿಲ್ಲೆಯ ಜನ ಕಳೆದ 20 ವರ್ಷಗಳಿಂದ ಬೆಂಗಳೂರು, ಹೈದರಾಬಾದ್‍ಗಳಿಗೆ ಕಟ್ಟಡ, ರಸ್ತೆ ನಿರ್ಮಾಣದ ಕೆಲಸಗಳಿಗೆ ಗುಳೆ ಹೋಗುವುದು ನಡೆದೇ ಇದೆ. ಬೆಂಗಳೂರಿನ ಹೊರವಲಯದ ಖಾಲಿ ಜಾಗಗಳಲ್ಲಿ ಹತ್ತಾರು ‘ಯಾದಗಿರಿ ಕ್ಯಾಂಪ್’ಗಳು ತಲೆಎತ್ತಿವೆ. ಪೋಷಕರೊಂದಿಗೆ ಅಲ್ಲಿಗೆ ಹೋಗಿರುವ ಮಕ್ಕಳ ಶಿಕ್ಷಣ ಮೊಟಕುಗೊಳ್ಳುತ್ತಿದೆ.

ಇಂತಹ ವಾಸ್ತವ್ಯಗಳಿಂದಲಾದರೂ ನೈಜ ಸಮಸ್ಯೆಗಳನ್ನು ಅಧಿಕಾರಸ್ಥರು ಅರಿಯುವಂತಾಗಲಿ. ಜನರು ಕೂಡ ತಮ್ಮ ಹಕ್ಕುಗಳಿಗಾಗಿ ದನಿ ಎತ್ತಿ ನ್ಯಾಯ ಪಡೆಯುವ ಅವಕಾಶ ಸಿಗಲಿ.
ರೆಸಾರ್ಟು, ರಾಜಧಾನಿ ರಾಜಕಾರಣ ಹಿಂದಕ್ಕೆ ಸರಿದು, ಈ ಬಗೆಯಲ್ಲಾದರೂ ಗ್ರಾಮಗಳತ್ತ ಸರ್ಕಾರ ಕಣ್ಣು ತೆರೆಯುಂತಾಗಲಿ.

ಹಿಂದೆ 13 ವರ್ಷಗಳ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಕುಮಾರಸ್ವಾಮಿಯವರ ಗ್ರಾಮ ವಾಸ್ತವ್ಯ ಜನರಲ್ಲಿ ಒಳ್ಳೆಯ ಅಭಿಪ್ರಾಯವನ್ನು ಮೂಡಿಸಿತ್ತು. ಈ ಬಾರಿ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸೊರೇನ್ ಜಾಮೀನು ಅರ್ಜಿಗೆ ಉತ್ತರಿಸಲು ಇಡಿಗೆ ಕಾಲಾವಕಾಶ ನೀಡಿದ ಕೋರ್ಟ್‌

0
ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಜಾಮೀನು ಅರ್ಜಿಗೆ ಉತ್ತರಿಸಲು ವಿಶೇಷ ಪಿಎಂಎಲ್‌ಎ ನ್ಯಾಯಾಲಯ ಮಂಗಳವಾರ ಜಾರಿ ನಿರ್ದೇಶನಾಲಯಕ್ಕೆ (ಇಡಿ) ಇನ್ನೂ ಒಂದು ವಾರ ಕಾಲಾವಕಾಶ ನೀಡಿದೆ. ನ್ಯಾಯಾಲಯವು ಪ್ರಕರಣದ ಮುಂದಿನ...