ಕೊರೊನಾ ತಡೆಯಲು ಲ್ಯಾಕ್ಡೌನ್ ಮಾಡಬೇಕಾದ್ದರಿಂದ ರಾಜ್ಯದ ಎಲ್ಲಾ ಫ್ಯಾಕ್ಟರಿಗಳು ಬಂದ್ ಆಗಲಿದ್ದು, ಅಲ್ಲಿನ ಕಾರ್ಮಿಕರಿಗೆ ಮಾರ್ಚ್31ರವರೆಗೆ ವೇತನ ಸಹಿತ ರಜೆ ನೀಡುವಂತೆ ರಾಜ್ಯಸರ್ಕಾರ ಆದೇಶಿಸಿದೆ.
ಕೊರೊನ ವ್ಯಾಪಕತೆ ಪಡೆಯುತ್ತಿರುವ ಪರಿಣಾಮವಾಗಿ ಕಾರ್ಖಾನೆಗಳು, ಕಂಪನಿಗಳು ಮತ್ತು ಗಾರ್ಮೆಂಟ್ಸ್ ಗಳಿಗೆ ರಜೆ ನೀಡುವ ಸಂಬಂಧ ಇಂದು ಬೆಂಗಳೂರಿನ ಕೌಶಲ್ಯ ಭವನದಲ್ಲಿ ಕಾರ್ಮಿಕ ಸಂಘಟನೆಗಳ ಮುಖಂಡರೊಂದಿಗೆ ನಡೆದ ಮಾತುಕತೆಯ ನಂತರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.
ಇದರಿಂದ ರಾಜ್ಯದ 60 ಲಕ್ಷ ಕಾರ್ಮಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಈ ಹಿಂದೆ ಮಾರ್ಚ್ 19ರಂದು ಮಂಡ್ಯದ ಗಾರ್ಮೆಂಟ್ಸ್ಗಳಿಗೆ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದರು. ತದನಂತರ ಫ್ಯಾಕ್ಟರಿ ಮ್ಯಾನೇಜರ್ಗಳು ಒತ್ತಡ ತಂದು ರಜೆಯನ್ನು ರದ್ದುಗೊಳಿಸಿದ್ದರು.
ಪ್ರಮುಖ ಕೇಂದ್ರ ಕಾರ್ಮಿಕ ಸಂಘಟನೆಗಳಾದ ಸಿಐಟಿಯು, ಎಐಟಿಯುಸಿ, ಎಐಯುಟಿಯುಸಿ ಸೇರಿದಂತೆ ಎಲ್ಲಾ ಕರ್ಮಿಕ ಸಂಘಟನೆಗಳ ಮುಖಂಡರು ಕಾರ್ಮಿಕ ಸಚಿವರೊಂದಿಗೆ ಇಂದು ಮಾತುಕತೆ ನಡೆಸಿದರು.
ಈಗಾಗಲೇ ಸರ್ಕಾರಿ ಮತ್ತು ಖಾಸಗಿ ಬಸ್ ಗಳ ಸೇವೆ ಸ್ಥಗಿತಗೊಳಿಸಿದೆ. ಅಂತರರಾಜ್ಯ ಬಸ್ ಗಳ ಸೇವೆ ರದ್ದುಪಡಿಸಲಾಗಿದೆ.. ಎಲ್ಲಾ ಹೋಟೆಲ್ ಗಳಲ್ಲೂ ಜನರು ಕೂರದಂತೆ ಛೇರ್ ಗಳನ್ನು ತೆಗೆದಿರಿಸಲಾಗಿದೆ. ಹೊಟೆಲ್ ಗಳಲ್ಲಿ ಸ್ವಚ್ಚತೆಗೆ ಆದ್ಯತೆ ವಹಿಸುವಂತೆ ಸೂಚಿಸಲಾಗಿದೆ. ಆರೋಗ್ಯಾಧಿಕಾರಿಗಳು ದಿನಕ್ಕೆ ಮೂರು ಬಾರಿ ಹೋಟೆಲ್ ಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ಜನರು ಸೇರದಂತೆ ಮುನ್ನೆಚ್ಚರಿಕೆ ವಹಿಸುವಂತೆ ಕಟ್ಟುನಿಟ್ಟಿನ ಸೂಚನೆ ಕೊಡಲಾಗಿದೆ. ಹೋಟೆಲ್ ನ ಎಲ್ಲಾ ಸಿಬ್ಬಂದಿಯೂ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ.