ಕೊರೊನಾ ವೈರಸ್ ಭೀತಿಯಿಂದ ಲಾಕ್ಡೌನ್ ಕಾರಣಕ್ಕೆ ಲಕ್ಷಾಂತರ ನಿರ್ಮಾಣ ಕಾರ್ಮಿಕರಿಗೆ ಆರ್ಥಿಕ ನೆರವು ಸೇರಿದಂತೆ ತುರ್ತು ಕಲ್ಯಾಣ ಕ್ರಮಗಳನ್ನು ರೂಪಿಸುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದ್ದಾರೆ.
ಮಾರ್ಚ್ 23 ರಂದು ಪ್ರಧಾನ ಮಂತ್ರಿಗೆ ಬರೆದ ಪತ್ರದಲ್ಲಿ “ಈ ನಿಟ್ಟಿನಲ್ಲಿ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗಳಿಗೆ ಸಲಹೆ ನೀಡುವಂತೆ” ಕೋರಿದ್ದಾರೆ.
ಕಾಂಗ್ರೆಸ್ ಮುಖ್ಯಮಂತ್ರಿಗಳಾದ ಕ್ಯಾಪ್ಟನ್ ಅಮರಿಂದರ್ ಸಿಂಗ್ (ಪಂಜಾಬ್), ಅಶೋಕ್ ಗೆಹ್ಲೋಟ್ (ರಾಜಸ್ಥಾನ), ಭೂಪೇಶ್ ಬಾಗೇಲ್ (ಚತ್ತೀಸ್ಗಡ) ಮತ್ತು ವಿ ನಾರಾಯಣಸಾಮಿ (ಪುದುಚೇರಿ) ಯವರಿಗೂ ಸಹ ಸೋನಿಯಾ ಗಾಂಧಿಯವರು ಪತ್ರ ಬರೆದಿದ್ದಾರೆ. ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಸೆಸ್ ಬಳಕೆಯಾಗದೆ ಉಳಿದಿರುವುದನ್ನು ಈ ಸಮಯದಲ್ಲಿ ಬಳಸಬೇಕೆಂದು ಕೋರಿದ್ದಾರೆ.
“ಕಳೆದ ವಾರದಲ್ಲಿ, ಭಾರತದ ಪ್ರಮುಖ ನಗರಗಳಲ್ಲಿ ಲಕ್ಷಾಂತರ ವಲಸೆ ಕಾರ್ಮಿಕರು ದೀರ್ಘಕಾಲದ ಆರ್ಥಿಕ ಕುಸಿತದ ಭಯದಿಂದ ತಮ್ಮ ಊರು ಮತ್ತು ಹಳ್ಳಿಗಳಿಗೆ ತೆರಳಿದ್ದಾರೆ. ಭಾರತದ ಎರಡನೇ ಅತಿದೊಡ್ಡ ಉದ್ಯೋಗದಾತರಾಗಿರುವ ನಿರ್ಮಾಣ ಕ್ಷೆತ್ರದ 44 ದಶಲಕ್ಷಕ್ಕೂ ಹೆಚ್ಚು ಕಾರ್ಮಿಕರು ಈಗ ಅನಿಶ್ಚಿತ ಭವಿಷ್ಯವನ್ನು ಎದುರಿಸುತ್ತಿದ್ದಾರೆ. ಅನೇಕರು ನಗರಗಳಲ್ಲಿ ಸಿಲುಕಿಕೊಂಡಿದ್ದಾರೆ ಮತ್ತು ಕಟ್ಟುನಿಟ್ಟಾದ ಲಾಕ್ ಡೌನ್ ಕ್ರಮಗಳಿಂದಾಗಿ ಅವರ ಜೀವನೋಪಾಯದಿಂದ ವಂಚಿತರಾಗಿದ್ದಾರೆ” ಎಂದು ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ (ಉದ್ಯೋಗ ಮತ್ತು ಸೇವೆಯ ಷರತ್ತುಗಳ ನಿಯಂತ್ರಣ) ಕಾಯ್ದೆ 1996 ಅನ್ನು ಉಲ್ಲೇಖಿಸಿರುವ ಅವರು, ಇದು ಕಾರ್ಮಿಕರಿಗೆ ವಿವಿಧ ಕಲ್ಯಾಣ ಕ್ರಮಗಳನ್ನು ಒದಗಿಸಲು ರಾಜ್ಯ ಕಲ್ಯಾಣ ಮಂಡಳಿಗಳು ಮತ್ತು ಕಲ್ಯಾಣ ನಿಧಿಯನ್ನು ಬಳಸಬಹುದೆಂಬುದನ್ನು ನೆನಪಿಸಿದ್ದಾರೆ.
ಮಾರ್ಚ್ 31, 2019 ರವರೆಗೆ ಕಲ್ಯಾಣ ಮಂಡಳಿಗಳು 49,688.07 ಕೋಟಿ ರೂ.ಗಳನ್ನು ಸೆಸ್ ಮೂಲಕ ಸಂಗ್ರಹಿಸಿಲಾಗಿದ್ದು ಆದಾಗ್ಯೂ, ಕೇವಲ 19,379.922 ಕೋಟಿ ರೂ. ಮಾತ್ರ ಖರ್ಚು ಮಾಡಲಾಗಿದೆ” ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ (ಸಿಪಿಪಿ) ಅಧ್ಯಕ್ಷರೂ ಆಗಿರುವ ಸೋನಿಯಾ ಗಾಂಧಿ ಹೇಳಿದ್ದಾರೆ.
ಕೆನಡಾ ಮತ್ತು ಇತರ ಹಲವಾರು ದೇಶಗಳು ತಮ್ಮ ಕೋವಿಡ್ -19 ಆರ್ಥಿಕ ಪ್ರತಿಕ್ರಿಯೆ ಯೋಜನೆಯ ಭಾಗವಾಗಿ ವೇತನ ಸಬ್ಸಿಡಿ ಕ್ರಮಗಳನ್ನು ಘೋಷಿಸಿವೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.