Homeಪುಸ್ತಕ ವಿಮರ್ಶೆಗುರುಪ್ರಸಾದ್ ಕಂಟಲಗೆರೆಯವರ ‘ದಲಿತ ಸಾಂಸ್ಕೃತಿಕ ಕಥನಗಳ ಅಧ್ಯಯನ’ ಕೃತಿ ವಿಮರ್ಶೆ..

ಗುರುಪ್ರಸಾದ್ ಕಂಟಲಗೆರೆಯವರ ‘ದಲಿತ ಸಾಂಸ್ಕೃತಿಕ ಕಥನಗಳ ಅಧ್ಯಯನ’ ಕೃತಿ ವಿಮರ್ಶೆ..

- Advertisement -
- Advertisement -

ಗುರುಪ್ರಸಾದ್ ಕಂಟಲಗೆರೆಯವರು ಮೂಲತಃ ಕವಿ-ಕತೆಗಾರ. ಸದ್ಯ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವತಿಯಿಂದ ಪ್ರಕಟಣೆಯಾದ ‘ದಲಿತ ಸಾಂಸ್ಕೃತಿಕ ಕಥನಗಳ ಅಧ್ಯಯನ’ ಕೃತಿ ಪ್ರಕಟವಾಗುವುದರ ಮೂಲಕ ಒಬ್ಬ ಸಂಶೋಧಕ, ವಿಮರ್ಶಕನಾಗಿ ಈ ಕ್ಷೇತ್ರಕ್ಕೂ ಪಾದಾರ್ಪಣೆ ಮಾಡಿದಂತಾಗಿದೆ. ಗುರುಪ್ರಸಾದ್ ದಲಿತ ಸಾಹಿತ್ಯವನ್ನು ಮರುವ್ಯಾಖ್ಯಾನ ಮಾಡುವುದನ್ನು ಗೌಣಗೊಳಿಸಿ, ನೆಲಮೂಲದವರಾದ ಮಾದಿಗ ಸಮುದಾಯವನ್ನು ಹೇಗೆ ಗ್ರಹಿಸಬಹುದೆಂಬುದನ್ನು ಮೌಖಿಕವಾಗಿ ದೊರೆಯುವ ಸಂಕಥನಗಳನ್ನು ಸಂಗ್ರಹಿಸಿ, ಅವನ್ನು ಸಮಕಾಲೀನ ಸಮಸ್ಯೆಗಳಿಗೆ, ಬಿಕ್ಕಟ್ಟುಗಳಿಗೆ ಹೇಗೆ ಮುಖಾಮುಖಿಯಾಗಬಲ್ಲವು ಎಂಬುದನ್ನು ಇಲ್ಲಿ ಸೂಕ್ಷ್ಮವಾಗಿ ಚರ್ಚಿಸಿದ್ದಾರೆ.

ದಲಿತರ ಸಾಂಸ್ಕೃತಿಕ ಲೋಕದ ಕಥನಗಳನ್ನು ಜನಪದ ವಾಙ್ಮಯದಲ್ಲಿರುವ, ಅದರಲ್ಲೂ ಮಾದಾರ ಸಮುದಾಯದಲ್ಲಿರುವ ಮತ್ತು ಜನಪದ ಹಾಗೂ ಸಾಂಸ್ಕೃತಿಕ ಆಚರಣೆಗಳ ಒಳಗಿರುವ ದಲಿತರ ಅಸ್ಮಿತೆಗಳನ್ನು ಇತ್ತೀಚಿನ ದಿನಗಳಲ್ಲಿ ತೀವ್ರತರವಾಗಿ ಶೋಧಿಸುವ ಕೆಲಸ ಈಗಿನ ಯುವ ಸಂಶೋಧಕರಿAದ ಬಹಳ ಅರ್ಥಪೂರ್ಣವಾಗಿ ಜರುಗಿಸಲಾಗುತ್ತಿದೆ. ಆ ನಿಟ್ಟಿನಲ್ಲಿ ರೂಪುಗೊಂಡ ಕೃತಿಯೇ ಕಂಟಲಗೆರೆ ಗುರುಪ್ರಸಾದ್ ಅವರ ‘ದಲಿತರ ಸಾಂಸ್ಕೃತಿಕ ಕಥನಗಳ ಅಧ್ಯಯನ’. ಈ ಕೃತಿಯು ಕರ್ನಾಟಕ ಸಾಹಿತ್ಯ ಅಕಾಡೆಮಿಯ ದಲಿತ ಅಧ್ಯಯನಗಳ ಅಡಿಯಲ್ಲಿ ಇದು ಪ್ರಕಟವಾಗಿದೆ. ತುಮಕೂರು ಜಿಲ್ಲೆಯ ದಲಿತರ ಬದುಕಿನ ಪರಂಪರೆಯ ಎಲ್ಲಾ ಮಗ್ಗುಲುಗಳನ್ನು ತಳಸ್ಪರ್ಶಿಯವಾಗಿ ಶೋಧಿಸಿ ಕಟ್ಟಿರುವುದು ಭವಿಷ್ಯದ ದೃಷ್ಟಿಯಿಂದ ಉತ್ತಮ ಆಕರ ಕೃತಿಯಾಗಿ ನಿಲ್ಲಬಲ್ಲದು.

‘ದಲಿತ’ ಪದ, ದಲಿತರ ಉಗಮ ವಿಕಾಸ, ಬದುಕಿನ ವಿನ್ಯಾಸ, ದಲಿತ ಚಳವಳಿಯಲ್ಲಿ ಕಂಡುಂಡ ವೈಫಲ್ಯಗಳು-ಸಾಫಲ್ಯಗಳು, ‘ದಲಿತ’ ಪದ ಇಂದು ವಿಸ್ತೃತಗೊಳ್ಳುತ್ತಿರುವ ಆರ್ದ್ರತೆ, ಅವುಗಳಲ್ಲೇ ಮುಂದುವರೆದಿರುವ- ಹಿಂದುಳಿದಿರುವ(ಸ್ಪೃಶ್ಯ-ಅಸ್ಪೃಶ್ಯ) ಜಾತಿಗಳಲ್ಲಿ ತಮ್ಮ ತಮ್ಮ ಐಡೆಂಟಿಗಳ ಹುಡುಕಾಟ, ಅಸ್ತಿತ್ವದ ಪ್ರಶ್ನೆ ಎದುರಾದಾಗ ರಾಜಕೀಯಾತ್ಮಕ ಮೇಲಾಟಗಳು ಜರುಗಿ, ಮತ್ತೊಂದು ಜಾತಿಯ ಮೇಲೆ ಸಣ್ಣದಾದ ಅಸೂಯೆ- ಸಂಘ಼ರ್ಷದಿಂದಾಗಿ ಆಗುತ್ತಿರುವ ಮೂಲದ ಆಶಯ-ಧ್ಯೇಯೋದ್ದೇಶಗಳಿಗೆ ಬಹು ದೊಡ್ಡ ಪೆಟ್ಟಾಗಿರುವುದನ್ನು ಅದರಲ್ಲೇ ಇಂದಿನವರೆಗೆ ಹೋರಾಟ ಮಾಡಿಕೊಂಡು ಬಂದಿರುವ ಚಿಂತಕರು ವಿಷಾದವನ್ನು ತಳೆಯುತ್ತಿರುವುದನ್ನು ಒಂದೆಡೆ ಕಂಡುಬಂದರೆ, ಮತ್ತೊಂದೆಡೆ ಹೋರಾಟದ ಸಾಂಘಿಕ ಫಲದಲ್ಲಿ ಒಂದೆರಡು ಜಾತಿಗಳು ಮಾತ್ರ ಲಾಭ ಹೊಂದಿವೆ ಎಂಬುದನ್ನು ಮನಗಂಡ ಯುವಪೀಳಿಗೆ ಒಳಮೀಸಲಾತಿ ಮತ್ತು ಈಗಾಗಲೇ ಅದರ ನಷ್ಟದಿಂದ ಅರಿವಿರುವ ಕಾರಣದಿಂದ ಸರ್ಕಾರಕ್ಕೆ ಮನವರಿಕೆ ಮಾಡಿ ಸದಾಶಿವ ಆಯೋಗ ವರದಿಯನ್ನು ತಯಾರಿಸಿ, ಸರ್ಕಾರದ ಮಡಿಲಲ್ಲಿದ್ದರೂ ಅದು ಜೀವಪಡೆಯದೇ ಅನಾಥವಾಗುವುದರ ಜೊತೆಗೆ ದೀರ್ಘದಿಂದ ಶೋಷಿತ ಜನಾಂಗ ಮತ್ತೆ ನೋವಿಗೆ ತಳ್ಳಿರುವುದು ಆಘಾತ ತರಿಸಿದೆ. ಇದರ ಹೋರಾಟಗಳು ನಡೆಯುತ್ತಿದ್ದರೂ ಇದೊಂದು ರಾಜಕೀಯದ ದಾಳವಾಗಿರುವುದಂತೂ ಸತ್ಯವೆಂಬುದನ್ನು ಗುರುಪ್ರಸಾದ್ ಚರ್ಚಿಸಿದ್ದಾರೆ.

ಗುರುಪ್ರಸಾದ್ ಅವರು ಸಮುದಾಯದಲ್ಲಿ ಮೌಖಿಕವಾಗಿರುವ ದಲಿತರ ಸಾಂಸ್ಕೃತಿಕ ಸಂಕಥನಗಳನ್ನು ಕ್ಷೇತ್ರಕಾರ್ಯದ ಮೂಲಕ ಪ್ರಶ್ನಾವಳಿ ರೂಪಿಸಿಕೊಂಡು ವಕ್ತೃ-ಹಾಡುಗಾರರೊಟ್ಟಿಗೆ ಸಂವಾದಿಸಿ, ತಮಗೆ ಬೇಕಾದುದನ್ನು ಪಡೆದು, ಕಳೆದುಹೋಗುವುದನ್ನು ಅಕ್ಷರರೂಪಕ್ಕೆ ತಂದಿರುವುದು ಮೆಚ್ಚತಕ್ಕದ್ದು. ಮಾದಿಗರ ಸೃಷ್ಟಿಮೂಲದ ಸಂಕಥನಗಳನ್ನು ಭಿನ್ನ ಪ್ರದೇಶಗಳಲ್ಲಿ ದೊರೆತಿರುವ ಭಿನ್ನಪಠ್ಯಗಳನ್ನು ಶೋಧಿಸಿರುವ ಗುರುಪ್ರಸಾದ್ ಚೌಡಿಕೆಯಲ್ಲಯ್ಯ ಹೇಳಿದ ಸಂಕಥನ ಕನ್ನಡ ಪುಸ್ತಕ ಪ್ರಾಧಿಕಾರದಿಂದ ದಕ್ಕಲಿಗರು ಕರ್ತೃ ಜಾನಕಲ್ ರಾಜಣ್ಣನವರು ಹೇಳಿದ ಸೃಷ್ಟಿಮೂಲದ ಬಗೆಗೆ ಇರುವ ವ್ಯತ್ಯಾಸವನ್ನು ಗುರುತಿಸುವುದನ್ನು ಕೃತಿಯಲ್ಲಿ ಕಾಣಬಹುದು.

‘ದಲಿತ’ ಪದದ ಒಳಗಿರುವ ಸಿಕ್ಕು, ಅದರೊಳಗೆ ಪಡೆಯುತ್ತಿರುವ ಸೌಲಭ್ಯಗಳು, ನಿಜವಾದ ದಲಿತರು ಯಾರು? ದಲಿತತ್ವ ಎಂದರೆ ಏನು? ಎಂಬುದನ್ನು ತಮ್ಮ ಅಭಿಪ್ರಾಯದೊಂದಿಗೆ ಅಂಬೇಡ್ಕರ್, ಕೆ.ಬಿ. ಸಿದ್ದಯ್ಯ ಅವರ ಆಲೋಚನೆಗಳನ್ನು ಇಲ್ಲಿ ಚರ್ಚಿಸಿದ್ದಾರೆ. ದಲಿತ ಅಂದರೆ ಡಿಪ್ರೆಸ್ಡ್ ಅನ್ನುವ ಇಂಗ್ಲಿಷ್ ಪದವಿದ್ದು, ಅದನ್ನೆ ತುಳಿತಕ್ಕೆ ಒಳಗಾದವರೆಲ್ಲರೂ ಸಮಾನ ದುಃಖಿಗಳೆಂಬುದನ್ನು ಚರ್ಚಿಸಿದ್ದಾರೆ. ದಲಿತರಲ್ಲಿ ಸ್ಪೃಶ್ಯ ಅಸ್ಪೃಶ್ಯರು ನಿರ್ಮಾಣಗೊಂಡು ಅದರ ಲಾಭವನ್ನು ಅಧಿಕವಾಗಿ ಸ್ಪೃಶ್ಯರೇ ಪಡೆಯುವ ಆತಂಕಕಾರಿ ಚಿತ್ರಣವನ್ನು ವಿಶ್ಲೇಶಿಸುವುದಾಗಿದೆ. ಆದರೆ ಇಂದು 101 ಜಾತಿಗಳ ಸಾಂಘಿಕ ಸಂಘಟನೆಯ ನೆಲೆಯೊಳಗೆ ಒಡಕು ಬಂದು ತಮ್ಮ ಅಸ್ಮಿತೆಗಳ ಹುಡುಕಾಟ ಶುರುವಾಗಿದೆ.

ಮೂಲದ ಪುರಾಣ ಸಂಕಥನಗಳು ತಿರುಚುವ ಪ್ರಯತ್ನ ನಿರಂತರವಾಗಿ ನಡೆದಿದೆ. ಸಂಕಥನಗಳಲ್ಲಿ ಭಿನ್ನ ಪಠ್ಯಗಳು ಹೇಗೆ ಬ್ರಾಹ್ಮಣ ಮತ್ತು ಬ್ರಾಹ್ಮಣ್ಯದ ವಿರುದ್ಧ ನಿಂತು ಮಾತಾಡುತ್ತವೆಂಬುದನ್ನು ಗುರುಪ್ರಸಾದ್ ಗುರುತಿಸಿದ್ದಾರೆ. ನೆಲಮೂಲದವರು ಯರ‍್ಯಾರೆಂಬುದು ಜಿಜ್ಞಾಸೆ ವ್ಯಕ್ತವಾಗುತ್ತಿರುವ ಇದೇ ಸಂದರ್ಭದಲ್ಲಿ ಆದಿಜಾಂಬವರು, ಯಾದವರು ನೆಲ ಸಂಸ್ಕೃತಿಯನ್ನು ಸಾರುವ ವಕ್ತಾರರೆನಿಸಿದ್ದಾರೆಂಬುದನ್ನು ಸಾಬೀತು ಪಡಿಸಿದ್ದಾರೆ. ಜೊತೆಗೆ ಕುರುಬರು, ಕುಂಚಿಟಿಗರು, ಮ್ಯಾಸಬೇಡರು ಕುಲ(ಪಂಗಡ)ಗಳಲ್ಲಿ ಹಲವು ಸಾಮ್ಯತೆಗಳಿವೆಯೆಂದರೆ ಈ ಸಮುದಾಯಗಳೆಲ್ಲವೂ ಈ ನೆಲಮೂಲದವರು, ಒಂದೇ ಸಂಸ್ಕೃತಿಯ ವಕ್ತಾರರೆಂಬುದನ್ನು ಅರಿಯಬಹುದು.

ಕೃತಿಯ ಎರಡನೆಯ ಹಂತದಲ್ಲಿ ಸಂಶೋಧಕರು ಆರು ದಲಿತರೊಟ್ಟಿಗೆ ಸಂವಾದಿಸುತ್ತಾರೆ. ಇವರೆಲ್ಲರೂ ಭಿನ್ನ ನೆಲೆಯಲ್ಲಿ ಬದುಕುತ್ತಿರುವವರು, ಆಲೋಚಿಸುತ್ತಿರುವವರು. ಲೇಖಕರ ಮೂಲ ಆಶಯವಿರುವುದು ಗ್ರಾಮ್ಯದ ಸ್ಥಳೀಯ ಹಂತದಿಂದ ರಾಜ್ಯಮಟ್ಟದ ಹೋರಾಟಗಾರರಲ್ಲಿ, ಚಿಂತಕರಲ್ಲಿ ದಲಿತತ್ವದ ನಿಲುವು ಹೇಗಿದೆ, ಅದರಲ್ಲೂ ಮಾದಿಗರ ಬದುಕಿಗೆ ಹೊಸ ಆಯಾಮವನ್ನು ಕೊಡುವ ದಾರಿ ಯಾವುದೆಂಬುದನ್ನು ಚರ್ಚಿಸುವುದು ಇಲ್ಲಿ ಮುಖ್ಯವಾಗಿದೆ. ಅವರ ಎಲ್ಲಾ ನಿಲುವುಗಳನ್ನು ಒಂದೆಡೆ ಸಂಗ್ರಹಿಸುವುದು ಅಷ್ಟೇ ಮುಖ್ಯವಾಗಿದೆ.

‘ದಲಿತ ಸಾಂಸ್ಕೃತಿಕ ಕಥನಗಳ ಅಧ್ಯಯನ’ ಕೃತಿಯು ಮೇಲ್ನೋಟದಲ್ಲಿ ಹಲವು ಹಂತಗಳಲ್ಲಿ ರೂಪುಗೊಂಡಿದೆ. ಅವಗಳನ್ನು ಹೀಗೆ ಪಟ್ಟಿ ಮಾಡಬಹುದು.

1. ಪುರಾಣದ ಕಥನಗಳಲ್ಲಿ ಮಾದಿಗರ ಪ್ರಾಮುಖ್ಯತೆ ಹಾಗೂ ಪರಂಪರೆ ಹೇಗೆ ನಯವಾಗಿ ಅದನ್ನು ವಂಚಿಸಿದೆಂಬುದನ್ನು ಗ್ರಹಿಸುವುದು.

2. ಕಂಚಿ ಫರ್ಮಾನ್‌ನಲ್ಲಿರುವ ಎಡಗೈ ಜನಾಂಗಕ್ಕಿರುವ ಸಾಂಸ್ಕೃತಿಕ ಬಿರುದಾವಳಿಗಳು, ಅಲ್ಲಿಯೂ

ಬಲಗೈಯೊಂದಿಗೆ ಸಂಘರ್ಷವಾದರೂ ಪೂರ್ವದ ಶ್ರೇಷ್ಠತೆಯಿಂದ ಮತ್ತೆ ಪಾರಮ್ಯ ಮೆರೆಯುವಿಕೆ.

3. ದಲಿತರ ಪ್ರಸ್ತ್ತುತ ಬದುಕಿನ ಆಯಾಮಗಳು, ‘ದಲಿತ’ ಪದದ ಮರುಚಿಂತನೆಯಲ್ಲಿ ಒಳಮೀಸಲಾತಿ

ಕೂಗು ಹಾಗೂ ಸದಾಶಿವ ಆಯೋಗದ ವರದಿ ಜಾರಿಗೊಳಿಸಲು ಒತ್ತಾಯ.

4. ಸಾಹಿತ್ಯದ ಚರಿತ್ರೆಯಲ್ಲಿ ಮಾದಿಗರನ್ನು ಗೌಣಗೊಳಿಸಿ ಮಾಡಿದ ಅನ್ಯಾಯದ ವಿರುದ್ಧ ದನಿಯೆತ್ತುವಿಕೆ.

5. ದಲಿತರ ಭವಿಷ್ಯ ಹೇಗಿರಬೇಕು ಎಂಬ ಪರ್ಯಾಯ ದಲಿತ ಚಿಂತನೆಯಿದೆ.

6. ದಲಿತತನದ ಒಳಗಿರುವ ಭಿನ್ನ ಆಯಾಮಗಳು, ಜಾತಿಯೆಂಬ ಪದದ ಐಡೆಂಟಿಟಿಯ ಒತ್ತಾಸೆಗಳು,

ಅಸ್ಮಿತೆಯ ಹುಡುಕಾಟಗಳು.

ಗುರುಪ್ರಸಾದ್ ಅವರು ದಲಿತರ ಬದುಕಿನ ಸಮಗ್ರ ಚಿತ್ರಣದ ಬಗೆಗೆ ಆಲೋಚಿಸುತ್ತಲೇ, ಸಮಕಾಲೀನ ಬಿಕ್ಕಟ್ಟುಗಳ ಕಡೆಗೂ ಹೊರಳಿಕೊಳ್ಳುವುದರಿಂದ ಈ ಕೃತಿಯು ಎಲ್ಲಾ ಕಾಲಕ್ಕೂ ಮುಖಾಮುಖಿಯಾಗುವ ಸಾಮರ್ಥ್ಯವೊಂದಿದೆ. ಕೃತಿಯ ಸತ್ವ ಇರುವುದು ಪರಂಪರೆಯಲ್ಲಿ ಜೋಪಾನವಾಗಿ ಕಾಪಾಡಿಕೊಂಡು ಬಂದಿರುವ ಮೌಖಿಕ ಕಥನಗಳ ಸಂಗ್ರಹ ಇದೆಯಲ್ಲ ಅದು ಇದುವರೆವಿಗೂ ಯಾರಿಂದಲೂ ಆಗದ್ದನ್ನು ಸಾಧಿಸಿದಂತಿದೆ. ಸಮುದಾಯದಲ್ಲಿ ಸಮೃದ್ಧವಾಗಿರುವ ಮೌಖಿಕ ಕಥನಗಳನ್ನು ಈಗ ಹೇಳುವ ಕೊಂಡಿಗಳು ಇಲ್ಲವಾಗುತ್ತಿರುವ ಈ ಸಂದರ್ಭದಲ್ಲಿ ದಲಿತರಿಗೆ, ಅದರಲ್ಲೂ ‘ಮಾದಿಗ’ ಜನಾಂಗಕ್ಕೆ ಕೃತಿ ಬೈಬಲ್ ಎಂದೇ ಹೇಳಬಹುದು.

-ಡಾ.ಕೆ.ವಿ.ಮುದ್ದವೀರಪ್ಪ, ತುಮಕೂರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...