Homeಮುಖಪುಟಪ್ರೀತಿಯ ಜರೀನ್ ತಾಜ್, : ದೇವನೂರು ಮಹದೇವರವರು ಬರೆದ ಕ್ಷಮಾಪಣಾ ಪತ್ರ

ಪ್ರೀತಿಯ ಜರೀನ್ ತಾಜ್, : ದೇವನೂರು ಮಹದೇವರವರು ಬರೆದ ಕ್ಷಮಾಪಣಾ ಪತ್ರ

ಎಲ್ಲಾ ಜಾತಿ, ಧರ್ಮಗಳಲ್ಲಿ ಇಂತಹ ಅನಾಗರಿಕತೆ ಇದ್ದೇ ಇದೆ. ಅಂತಹವರು ಇಂತಹ ಅಮಾನವೀಯವಾದ ಕೃತ್ಯಗಳಿಗೆ ಇಳಿಯುತ್ತಾರೆ. ಇಂದಿನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ನೀವು ಕಹಿ ಅನುಭವಿಸಬಾರದು ಎಂದು ಪ್ರಾರ್ಥಿಸುತ್ತೇನೆ.

- Advertisement -
- Advertisement -

ಬೆಂಗಳೂರಿನ ಸ್ವರಾಜ್‌ ಅಭಿಯಾನ್‌ ಸಂಘಟನೆಯ ಕಾರ್ಯಕರ್ತೆಯಾದ ಜರೀನ್‌ ತಾಜ್‌ರವರು ಲಾಕ್‌ಡೌನ್‌ ಘೋಷಿಸಿದಾಗಿನಿಂದಲೂ ವಲಸೆ ಕಾರ್ಮಿಕರಿಗೆ, ಬಡಜನರಿಗೆ, ಸ್ಲಂ ನಿವಾಸಿಗಳಿಗೆ ತಮ್ಮಿಂದಾದಷ್ಟು ಸಹಾಯ ಮಾಡುತ್ತಾ ಬಂದಿದ್ದಾರೆ. ಆದರೆ ಏಪ್ರಿಲ್‌ 4 ಮತ್ತು 6 ರಂದು ಬಡಜನರಿಗೆ ಆಹಾರ ಧಾನ್ಯಗಳನ್ನು ವಿತರಿಸುತ್ತಿದ್ದಾಗ ಅವರು ಮುಸ್ಲಿಂ ಎಂಬ ಕಾರಣಕ್ಕೆ ಹಲವು RSS ಬೆಂಬಲಿಗರು ಅವರ ಮೆಲೆ ಎರಡು ಬಾರಿ ಹಲ್ಲೆ ನಡೆಸಿದ್ದಾರೆ. ಈಗ ಸದ್ಯಕ್ಕೆ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದರಿಂದ ನೊಂದುಕೊಂಡು ಹಿರಿಯ ಸಾಹಿತಿ ಮತ್ತು ಸ್ವರಾಜ್‌ ಇಂಡಿಯಾದ ಮುಖಂಡರಾದ ದೇವನೂರು ಮಹಾದೇವರವರು ಭಾವಪೂರ್ಣ ಪತ್ರ ಬರೆದಿದ್ದಾರೆ.

ಪ್ರೀತಿಯ ಜರೀನ್ ತಾಜ್,

ಬಹಳ ದುಃಖದಿಂದ ನಿಮಗೀ ಪತ್ರವನ್ನು ಬರೆಯುತ್ತಿದ್ದೇನೆ. ವಾಸ್ತವದಲ್ಲಿ ನಿಮಗೆ ಕೃತಜ್ಞತೆಗಳನ್ನು ಸಲ್ಲಿಸಿ, ಅಭಿನಂದಿಸುವ ಸಲುವಾಗಿ ನಾನು ನಿಮ್ಮನ್ನು ಭೇಟಿ ಮಾಡಬೇಕಿತ್ತು. ಆದರೆ ಕ್ಷಮೆ ಕೇಳಿ ಪತ್ರ ಬರೆಯುವ ಸಂದರ್ಭ ಒದಗಿ ಬಂದಿರುವುದು ನೋವುಂಟು ಮಾಡಿದೆ. ಕೊರೊನಾ ಲಾಕ್‍ಡೌನ್‍ನಿಂದ ತಮ್ಮ ಊರಿಗೂ ಸೇರಲಾಗದೇ ಇದ್ದಲ್ಲೂ ಇರಲಾಗದೇ ತುತ್ತು ಅನ್ನಕ್ಕಾಗಿ ಒದ್ದಾಡುತ್ತಿದ್ದ ವಲಸೆ ಕಾರ್ಮಿಕರಿಗೆ ಅನ್ನ ನೀಡುತ್ತಿದ್ದ ನಿಮ್ಮಗಳ ಮೇಲೆ ದಾಳಿ ನಡೆದದ್ದು ಕೇಳಿ ನಿನ್ನೆಯಿಂದ ಇದ್ದಲ್ಲಿ ಇರಲಾಗುತ್ತಿಲ್ಲ. ಮೊನ್ನೆ ಸಂಜೆ 6.30ಕ್ಕೆ ಅಮೃತಹಳ್ಳಿ ಬಳಿ ನಿಮಗೆ ಬೆದರಿಕೆ ಒಡ್ಡಿ, ನಿಮ್ಮ ಮನೆ ಮಕ್ಕಳ ಮೇಲೆ ದಾಳಿ ನಡೆದದ್ದು ನನ್ನ ಗಮನಕ್ಕೆ ಬಂದಿತು. ನಿಜಕ್ಕೂ ಅದು ನಿದ್ದೆಗೆಡಿಸಿತು.


ಇದನ್ನೂ ಓದಿ: ಕಾರ್ಮಿಕರಿಗೆ ಪಡಿತರ ವಿತರಿಸುತ್ತಿದ್ದ ಸ್ವರಾಜ್ ಅಭಿಯಾನದ ಕಾರ್ಯಕರ್ತರ ಮೇಲೆ RSS ಬೆಂಬಲಿಗರಿಂದ ಹಲ್ಲೆ – ಆರೋಪ


ಎಲ್ಲಾ ಮನುಷ್ಯರಲ್ಲೂ ಭೀತಿ ಹುಟ್ಟಿಸಿರುವ ಕೊರೊನಾ ಸೋಂಕು ಹರಡದಂತೆ ದಿಢೀರ್ ಲಾಕ್‍ಡೌನ್ ಘೋಷಿಸಿದಾಗ ಅಸಹಾಯಕರು ಎಲ್ಲೆಲ್ಲಿ ಹೇಗ್ಹೇಗೆ ಸಿಕ್ಕಿಕೊಂಡರೋ ಗೊತ್ತಿಲ್ಲ. ಅಂತಹವರಿಗೆ ಆತುಕೊಳ್ಳುವುದೇ ಮನುಷ್ಯತ್ವ. ಆದರೆ ಈ ಮನುಷ್ಯತ್ವದ ಮೇಲೆಯೇ ದಾಳಿ ನಡೆದಾಗ ಮಾನವೀಯತೆಯೇ ಸೋತು ಹೋಯಿತೇನೋ ಎಂದು ದಿಗಿಲಾಯಿತು. ಆದರೆ ಜರೀನ್, ಎಲ್ಲಾ ಜಾತಿ, ಧರ್ಮಗಳಲ್ಲಿ ಇಂತಹ ಅನಾಗರಿಕತೆ ಇದ್ದೇ ಇದೆ. ಅಂತಹವರು ಇಂತಹ ಅಮಾನವೀಯವಾದ ಕೃತ್ಯಗಳಿಗೆ ಇಳಿಯುತ್ತಾರೆ. ಇಂದಿನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ನೀವು ಕಹಿ ಅನುಭವಿಸಬಾರದು ಎಂದು ಪ್ರಾರ್ಥಿಸುತ್ತೇನೆ.

ಮತ್ತೊಮ್ಮೆ ಮನವಿ ಮಾಡಿಕೊಳ್ಳುತ್ತೇನೆ, ಇದರಿಂದ ನಿಮ್ಮ ಮನಸ್ಸಿನಲ್ಲಿ ಮೂಡಿರಬಹುದಾದ ಕಹಿಯನ್ನು ತೆಗೆದುಹಾಕಿ. ನಿಮ್ಮ ಮಾನವೀಯ ಸ್ಪಂದನೆಗಳಿಗೆ ಉದಾರ ಭಾರತದ ನಾಗರಿಕ ಸಮಾಜ ಕೈ ಜೋಡಿಸುತ್ತದೆಂಬ ನಂಬಿಕೆ ನನಗಿದೆ. ಕೊರೊನಾ ಇಲ್ಲದಿದ್ದರೆ ನೇರವಾಗಿಯೇ ಬಂದು ಭೇಟಿ ಮಾಡಿ ಈ ಮಾತುಗಳನ್ನು ಹೇಳುತ್ತಿದ್ದೆ.

ಕ್ಷಮೆಯಿರಲಿ.

(ದೇವನೂರ ಮಹಾದೇವ)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೆರಿಕದ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಬಗ್ಗೆ ಸ್ಯಾಮ್ ಪಿತ್ರೋಡಾ ಕೊಟ್ಟಿದ್ದ ವಿವರಣೆಯನ್ನು ‘ರಾಜಕೀಯ ಅಸ್ತ್ರ’...

0
ಲೋಕಸಭೆ ಚುನಾವಣೆ ಹಿನ್ನೆಲೆ ಪ್ರಧಾನಿ ಮೋದಿ ಹಾದಿಯಾಗಿ ಬಿಜೆಪಿ ನಾಯಕರು ವಿವಾದಾತ್ಮಕ ಹೇಳಿಕೆ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಮತ್ತು ಕಾಂಗ್ರೆಸ್‌ನ ಪ್ರಣಾಳಿಕೆ ವಿರುದ್ಧ ವಾಗ್ಧಾಳಿ ನಡೆಸುತ್ತಾ ಬಂದಿದ್ದಾರೆ. ಈ ಮಧ್ಯೆ ಭಾರತೀಯ ಸಾಗರೋತ್ತರ...