- Advertisement -
- Advertisement -
✍?ಮಿಸ್ರಿಯಾ.ಐ.ಪಜೀರ್
ದೀಪ ಹಚ್ಚಬೇಕಿದೆ
——————————
ದಿಢೀರನೆ ಬಿದ್ದ ಬೀಗ ಮುದ್ರೆಗೆ
ಕತ್ತು ಹೊರಳಿಸಲೂ ಸಮಯವಿಲ್ಲದೆ
ಬದುಕನುಳಿಸುವ ಬವಣೆಗೆ
ಕಾಲ್ನಡಿಗೆಯೇ ಸಾಕ್ಷಿಯಾಯಿತು
ಊರ ದಾರಿಯುದ್ದಕ್ಕೂ
ಜೀವತೆತ್ತವರಿಗಾಗಿ
ಮೋಂಬತ್ತಿ ಹಚ್ಚಬೇಕಿದೆ
ಗಂಟೆ ಜಾಗಟೆ ಚಪ್ಪಾಳೆಯ ಪ್ರಹಸನದಿ
ಹೊಮ್ಮಿದ ಅಗಾಧ ಶಕ್ತಿಗೆ
ಬಸವಳಿದ ಜೀವ
ಚೈತನ್ಯ ಪಡೆಯಲಿಲ್ಲ
ಊರ ದಾರಿಯಲಿ ಕಣ್ಣೆವೆ ಮುಚ್ಚಿದ
ಹಸಿದ ಜೀವಗಳೇ, ಕ್ಷಮಿಸಿರೆಂದು
ಮೋಂಬತ್ತಿ ಹಚ್ಚಬೇಕಿದೆ
ವೈರಸಿಗೂ ಟೊಪ್ಪಿಯಿಟ್ಟು
ಪೈಜಾಮ ಉಡಿಸಿ ದಾಡಿಯಿಟ್ಟು
ಕೋವಿ ಕೊಟ್ಟ ಮಾಧ್ಯಮಗಳು
ಕೋಮು ನಂಜೇರಿ ಸತ್ತಿವೆ
ಆತ್ಮಕ್ಕೆ ಕೊಂಚವಾದರೂ
ಶಾಂತಿ ಸಿಗಲೆಂದು
ದೀಪ ಹಚ್ಚಬೇಕಿದೆ
ಉರಿವ ಬೆಳಕ ನಂದಿಸಿ
ನಿಶೆಯೆಡೆಗೆ ಚಲಿಸದೆ
ಐಕ್ಯದಿ ಮೌಢ್ಯವ
ಸುಟ್ಟು ಬಿಡಬೇಕಿದೆ
ಹೌದು ದೀಪ ಹಚ್ಚಬೇಕಿದೆ..
ಅಜ್ಞಾನದೆದೆಯಲ್ಲಿ ವಿಜ್ಞಾನದ
ದೀವಿಗೆ ಬೆಳಗಬೇಕಿದೆ
****************