ಉದ್ದೇಶವಿಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವವರ ಮೇಲೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಆಮೇಲೆ ಇದಕ್ಕೆ ಸರ್ಕಾರವನ್ನು ದೂರಬೇಡಿ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಕೆಲವೆಡೆ ಎಂದಿನಂತೆ ಜನಸಂದಣಿ ಅನಗತ್ಯವಾಗಿ ಸೇರುತ್ತಿರುವುದು ಸರಿಯಲ್ಲ.
ಇದು ಸೋಂಕು ಹರಡುವುದನ್ನು ತಡೆಯುವ ಉದ್ದೇಶವನ್ನೇ ಬುಡಮೇಲು ಮಾಡುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಅತ್ಯಂತ ಅಗತ್ಯ ವಸ್ತುಗಳನ್ನು ಕೊಳ್ಳಲು ಹಾಗೂ ಇತರ ಅತ್ಯಗತ್ಯ ಸಂದರ್ಭದಲ್ಲಿ ಮಾತ್ರ ಜನತೆ ಹೊರಗಡೆ ಬರಬೇಕು. ಉದ್ದೇಶವಿಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡದೇ ಮಹಾಜನತೆ ಸೂಕ್ತ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಹರಡುತ್ತಿರುವ ಕೊರೊನಾ: ಈ ಸಂದರ್ಭದಲ್ಲಿ ಸರ್ಕಾರವೇನು ಮಾಡಬೇಕು? ಜನರೇನು ಮಾಡಬೇಕು?
ಇಂದು ಬೆಳಿಗ್ಗೆ ಮಾರ್ಕೆಟ್ಗಳಲ್ಲಿ, ಹೂವಿನ ಅಂಗಡಿಗಳಲ್ಲಿ ಜನಸಂದಣಿ ಸೇರಿದ ಕಡೆ ಪೊಲೀಸರು ಲಾಠೀ ಬೀಸಿದ್ದಾರೆ. ಹೆಬ್ಬಾಳ. ಕೆ.ಆರ್ ಮಾರ್ಕೆಟ್, ಬನಶಂಕರಿಗಳಲ್ಲಿ ಲಘು ಲಾಠೀ ಪ್ರಹಾರ ನಡೆಸಿದ್ದಾರೆ. ಇದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿರುವುದಕ್ಕೆ ಯಡಿಯೂರಪ್ಪನವರು ಇದಕ್ಕೆ ಸರ್ಕಾರ ಹೊಣೆಯಲ್ಲ ಎಂದಿದ್ದಾರೆ.
ಈ ಕುರಿತು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿ 44 ಸೆಕ್ಷನ್ ಹಾಕಿ ಬೀದಿಗೆ ಬಂದವರನ್ನೆಲ್ಲಾ ಪೊಲೀಸರು ಹೊಡೆಯೋದು ಸರಿಯಲ್ಲ, ಜನರ ಮೇಲೆ ಲಾಠಿ ಚಾರ್ಜ್ ಮಾಡೋದು ಸರಿಯಲ್ಲ. ಹಬ್ಬ ಇದೆ, ಅಗತ್ಯ ವಸ್ತುಗಳನ್ನ ಮಾರಾಟ ಮಾಡಲು ಮತ್ತು ಖರೀದಿ ಮಾಡಲು ಅವಕಾಶ ಕೊಡದಿದ್ದರೆ ಹೇಗೆ ಎಂದು ಪ್ರಶ್ನಿಸಿದ ಸಿದ್ದರಾಮಯ್ಯನವರು, ನಾನು ಪೊಲೀಸ್ ಆಯುಕ್ತರ ಜೊತೆ ಮಾತಾಡಿದ್ದೇನೆ ಎಂದಿದ್ದಾರೆ.