Homeಅಂಕಣಗಳುಡಾರ್ಕ್ ವೆಬ್ ಎಂಬ ಮಬ್ಬಲೆಯೊಳಗೆ ಬೀಳದಿರಿ ಜೋಕೆ..

ಡಾರ್ಕ್ ವೆಬ್ ಎಂಬ ಮಬ್ಬಲೆಯೊಳಗೆ ಬೀಳದಿರಿ ಜೋಕೆ..

- Advertisement -
- Advertisement -

ನಮ್ಮ ಬಳ್ಳಾರಿ ಜಿಲ್ಲೆಯ ಮೈಲಾರದಾಗ ದೇವರ ಭಕ್ತ ಗೊರಪ್ಪ ಪ್ರತಿ ವರ್ಷ ಜಾತ್ರಿಯೊಳಗ ಕರಣಿಕ ಅಂದರ ಭವಿಷ್ಯ ಹೇಳತಾನ. ಒಂದು ಹತ್ತು ವರ್ಷ ಹಿಂದ ಆತ ಹೇಳಿದ್ದು ಏನಪಾ ಅಂದರ `ಸಂಪೆಲ್ಲಾ ಮಬ್ಬಲೆ ಕಳೀತಲೇ ಪರಾಕ’ ಅಂತ. ಹಂಗಂದರ `ಎಷ್ಟು ಸಮೃದ್ಧಿ ಬಂದರ ಏನು, ಅಜ್ಞಾನ ಇದ್ದರ ಎಲ್ಲಾ ವ್ಯರ್ಥ,’ ಅಂತ.

ಆದರ ಈಗ ನಮಗ ಬೇಕಾಗಿರೋದು ಆ ಮಬ್ಬಲೆ ಅಲ್ಲ. ಇದು ಬ್ಯಾರೆ ಮಬ್ಬಲೆ. ನಮ್ಮ ಈ ವಾರದ ಪದ ಯಾವುದು ಅಂದರ ಡಾರ್ಕ ವೆಬ್ಬು. ಅಂದರ ಮಬ್ಬು ಬಲೆ- `ಮಬ್ಬಲೆ’

ಮೊನ್ನೆ ಒಂದು ಸುದ್ದಿ ಏನು ಬಂತಪಾ ಅಂದರ ನಮ್ಮ ದೇಶದ ಮೂರು ಕೋಟಿ ನಿರುದ್ಯೋಗಿ ಯುವ ಜನರ ವೈಯಕ್ತಿಕ ಮಾಹಿತಿ ಎಲ್ಲಾ ಡಾರ್ಕ ವೆಬ್ಬಿನ್ಯಾಗ/ ಮಬ್ಬಲೆಯೊಳಗ ಯಾರೋ ಅಪರಿಚಿತರು ಹಾಕಿ ಬಿಟ್ಟಾರಂತ. ಇದು ಬರೇ ಭಾರತದ ಪತ್ರಿಕೆಗಳಲ್ಲಿ ಅಲ್ಲ, ನ್ಯೂಯಾರ್ಕ ಟೈಮ್ಸ್ ಮುಂತಾದ ವಿದೇಶದ ಪತ್ರಿಕೆಗಳಲ್ಲಿ ಸಹಿತಿ ಬಂದು ಬಿಟ್ಟೇತಿ.

ಹಿಂಗಂದರೇನು? ಇದರಿಂದ ನಮಗ ಯಾವ ರೀತಿ ತೊಂದರೆ ಆಗತೇತಿ?

ಮೊದಲಿಗೆ- ಮಬ್ಬಲೆ ಅಂದರ ಜನಸಾಮಾನ್ಯರಿಗೆ ಅಂದರ ನಮಗೂ ನಿಮಗೂ ಸುಲಭಕ್ಕ ಸಿಗಲಾರದ ಅಂತರ್ಜಾಲ, ಸರಳವಾಗಿ ಹೇಳಬೇಕಂದರ ಗೂಗಲ್ಲಿನ್ಯಾಗ ಸಿಗಲಾರದ ಮಾಹಿತಿ. ಇಂತಾದ್ದೂ ಒಂದು ಐತಿ ಅಂತ ಭಾಳ ಜನರಿಗೆ ಗೊತ್ತು ಮಾಡಿಕೊಡಬೇಕಾಗತೇತಿ. ಎಲ್ಲಾರೂ ಗೂಗಲ್ ಹುಡುಕಾಟದ ಅಸ್ತ್ರ ಒಂದು ನಮ್ಮ ಫೋನಿನ್ಯಾಗ ಇದ್ದರ ಸಾಕು, ನಮಗ ಏನು ಬೇಕು ಎಲ್ಲಾ ಸಿಕ್ಕು ಬಿಡತದ ಅಂತ ತಿಳಕೊಂಡಿರತಾರ. ಆದರ ಅದು ಹಂಗಂಲ್ಲ.

ನಮಗ ಗೊತ್ತಿರಲಾರದ್ದು, ನಮ್ಮ ಕೈಯ್ಯಾಗ ಸಿಗಲಾರದ್ದು, ತಿಳಿಸಿದರೂ ತಿಳಿಯಲಾರದ್ದು ಬೇಕಾದಷ್ಟು ಐತಿ. ಈದು ಏನಪಾ ಅಂದರ ಸಾಫ್ಟವೇರು ತಂತ್ರಜ್ಞಾನದೊಳಗ ಸಾಕಷ್ಟು ಪರಿಣಿತಿ ಹೊಂದಿರೋ ಕೆಲವರು, ತಮ್ಮ ಶಾಣೆತನಾ ಉಪಯೋಗಿಸಿ ಅಂತರಜಾಲದಾಗ ಒಂದಿಷ್ಟು ಮಾಹಿತಿ ಮುಚ್ಚಿ ಇಡತಾರ. ಅದನ್ನ ತೆಗೀಲಿಕ್ಕೆ ಆ ಮಟ್ಟಿಗಿನ ತಾಂತ್ರಿಕತೆ ಇದ್ದವರಿಗೆ ಅಷ್ಟ ಸಾಧ್ಯ. ಅದು ಹೆಂಗಪಾ ಅಂದರ ಪಾತಾಳ ಗರಡಿ ಹಾಕಿ ತಾಮ್ರದ ಕೊಡಾ ತಗದ ಹಂಗ. ಅಥವಾ ಅಕ್ಕ ಹೇಳಿದಂಗ `ನೆಲದ ಮರೆಯ ನಿದಾನದಂತೆ’.

ಇದನ್ನ ಟೋರು, ಫ್ರೀನೆಟ್ಟು, ರಿಫಲ್ಲು, ಐಟುಪಿ, ಮುಂತಾದ ತಂತ್ರಜ್ಞಾನದ ಉಪಕರಣಗಳನ್ನ ಬಳಸಿ ನೋಡಲಿಕ್ಕೆ ಬರತೇತಿ. ಇವನ್ನ ಯಾವ ಕಾಲೇಜಿನಾಗೂ ಕಲಿಸೋದಿಲ್ಲ. ಆಸಕ್ತಿ ಇದ್ದವರು ಅದನ್ನ ಕಲಕೋಬೇಕು.

ಮೊದಲಿಗೆ ಏನು ಆತಪಾ ಅಂದರ ಕೆಲವು ಉತ್ಸಾಹಿ ತರುಣರು, (ಎಲ್ಲಾ ತರುಣರು ಉತ್ಸಾಹಿ ಇರಲಿಕ್ಕೆ ಸಾಧ್ಯ ಇಲ್ಲ. ಎಲ್ಲಾ ಉತ್ಸಾಹಿಗಳು ತರುಣರಾಗಿರಬೇಕು ಅಂತೇನೂ ಇಲ್ಲ) ಸೇರಿಕೊಂಡು ಕೆಲವು ವಿಶೇಷ ಮಾಹಿತಿ- ಹೊಸದಾಗಿ ಕಂಡುಹಿಡಿದ, ಆದರ ಎಲ್ಲಾರ ಜೊತೆ ಪುಕ್ಕಟೆಯಾಗಿ ಹಂಚಿಕೊಳ್ಳಲಿಕ್ಕೆ ಸಾಧ್ಯವಿಲ್ಲದ ತಾಂತ್ರಿಕತೆ, ರಹಸ್ಯ ನಾಣ್ಯ, ಜನರಿಗೆ ಅನುಕೂಲವಾಗಬಹುದಾದ ಸರಕಾರಿ ರಹಸ್ಯಗಳು, ಅಧಿಕಾರದಲ್ಲಿ ಇರೋರ ಕಾರಸ್ಥಾನ ಇತ್ಯಾದಿಗಳನ್ನು ಒಂದು ಕಡೆ ಇಡೋ ಉದ್ದೇಶದಿಂದ ಇದನ್ನ ಆರಂಭ ಮಾಡಿದರು. ಆದರ ಅದು ಮುಂದ ಹೋದಂಗ, ಶಿಶು ಲೈಂಗಿಕತೆ, ಶಸ್ತ್ರಾಸ್ತ್ರ, ಮಾದಕ ದೃವ್ಯ, ಕಳ್ಳ ಸಾಗಾಣಿಕೆ ಇತ್ಯಾದಿಗಳ ಖರೀದಿ- ಮಾರಾಟದ ರಹದಾರಿ ಆತು.

ಹಂಗಂತ ಮಬ್ಬಲೆಯ ಎಲ್ಲಾ ಬಳಕೆದಾರರು ಕೆಟ್ಟವರು ಅಂತಲ್ಲ. ಅದನ್ನು ಬಹಳ ಒಳ್ಳೆ ಕೆಲಸಕ್ಕೆ ಬಳಸಿಕೊಳ್ಳೋರು ಬಹಳ ಜನ ಇದ್ದಾರ. ಅವರು ಗೂಗಲ್ಲು- ಫೇಸುಬುಕ್ಕು, ಅಮೇಜಾನು ಮುಂತಾದ ದೈತ್ಯ ಕಂಪನಿಗಳ ಕೈಯಿಂದ ತಂತ್ರಜ್ಞಾನವನ್ನು ಬಿಡುಗಡೆ ಮಾಡಬೇಕು, ಅದು ಜನಸಾಮಾನ್ಯರಿಗೆ, ವಿದ್ಯಾರ್ಥಿಗಳಿಗೆ, ಸರಳವಾಗಿ ಸಿಗಬೇಕು ಅಂತ ಹೇಳಿ ಅದನ್ನು ಬಳಸಿಕೊಳ್ಳತಾರ. ದೊಡ್ಡ ದೊಡ್ಡ ಕಂಪನಿಗಳ ಟ್ರಕ್ಕುಗಳು ಹೆದ್ದಾರಿ ಉಪಯೋಗಿಸಿದರ, ಮಬ್ಬಲೆ ಬಳಸುವವರು ಕಿರಿದಾರಿ ಬಳಸುವ ಸೈಕಲ್ಲು ಇದ್ದಂಗ.

ಇವರಿಗೆ ಬೈಯುವರೂ ಇದ್ದಾರ, ಹೊಗಳುವವರೂ ಇದ್ದಾರ. ನೀವು ಎಲ್ಲರ ಹತ್ತರ ಏನನ್ನೋ ಮುಚ್ಚಿಇಡತಾ ಇದ್ದೀರಿ ಅಂತ ಕೆಲವರು ಆರೋಪಿಸಿದರ, ಅಂತರ್ಜಾಲವನ್ನು ಬಂಧ ಮುಕ್ತರನ್ನಾಗಿ ಮಾಡತಾ ಇದ್ದೀರಿ ಅಂತ ಕೆಲವರು ಕೊಂಡಾಡತಾರ.

ರೋಜರ ಡಿಂಗಲಡಿನ್ ಅನ್ನೋ ವಿಚಿತ್ರ ಹೆಸರಿನ ಒಬ್ಬ ಮನುಷಾ ಇದ್ದಾನ. ಟೋರು ತಂತ್ರಜ್ಞಾನದ ಸಂಶೋಧಕರಲ್ಲಿ ಒಬ್ಬ. ಅವ “ನೀವು ನಮ್ಮನ್ನ ಏನು ಮಬ್ಬಲೆ ಬಳಕೆದಾರರು ಅಂತ ಕರೀತೀರಿ? ನೀವು ಉಪಯೋಗಿಸೋ ಫೇಸುಬುಕ್ಕು ಅದಲಾ ಅದ ದೊಡ್ಡ ಮಬ್ಬಲೆ. ಅದರಾಗ ಸಿಕ್ಕವ ಯಾರೂ ಹೊರಗ ಬರಲಿಕ್ಕೆ ಸಾಧ್ಯ ಇಲ್ಲ. ಅದರಾಗ ನಿಮಗ ಸಿಗೋ ಮಾಹಿತಿ ಶೇಕಡಾ ಹತ್ತಕ್ಕಿಂತಲೂ ಕಮ್ಮಿ” ಅಂತ ಹೇಳಿಕೊಂಡು ನಗತಾನ.

ಅಂದಂಗ ನಮ್ಮ ನಿರುದ್ಯೋಗಿಗಳ ಮಾಹಿತಿ ಮಬ್ಬಲೆಯೊಳಗ ಸಿಕ್ಕರ ಏನು ಆಗತೇತಿ? ಅದನ್ನ ಒಳ್ಳೆಯವರು ಬಳಸಿದರ ಇವರಿಗೆ ನೌಕರಿ ಸಿಗಬಹುದು, ಒಳ್ಳೆಯ ಸ್ಥಾನಮಾನ ದೊರಕಿ ಒಂದಿಷ್ಟು ಹಣ ಸಿಕ್ಕಬಹುದು. ಅವರ ತಂತ್ರಜ್ಞಾನದ ಅರಿವು ಹೆಚ್ಚಾಗಬಹುದು. ಆದರ ಕೆಟ್ಟವರ ಕೈಗೆ ಸಿಕ್ಕರ? ಅದನ್ನ ಅವರು ನೌಕರಿ ಡಾಟ್ ಕಾಂ ನಂಥಾ ಕಂಪನಿಗಳಿಗೆ ಮಾರಿಕೊಳ್ಳಬಹುದು. ಅವರು ಅದನ್ನ ಯಾವುದೋ ಕಂಪನಿಯವರಿಗೆ ಮಾರಿಕೊಳ್ಳಬಹುದು. ಅವರು ಕೆಲಸ ಕೇಳಲಿಕ್ಕೆ ಹೋದ ನಿರುದ್ಯೋಗಿಗಳನ್ನ ಯಾಮಾರಿಸಬಹುದು, ಬ್ಲ್ಯಾಕ ಮೇಲು ಮಾಡಬಹುದು. ವಿನಾಕಾರಣ ತೊಂದರೆ ಕೊಡಬಹುದು.

ಏನು ಇದ್ದರೂ ನಮ್ಮ ವೈಯಕ್ತಿಕ ಮಾಹಿತಿ ಅನ್ನೋದು ನಮಗ ಪರಿಚಯ ಇಲ್ಲದ ಇನ್ನೊಬ್ಬನಿಗೆ ಸಿಗೋದು ಬಹಳ ಅಪಾಯಕಾರಿ. ಅವರ ಕೈಯಾಗ ನಮ್ಮ ಕುತಗಿ ಕೊಟ್ಟಂಗ. ಅವರು ಮಾಲಿಷು ಮಾಡಬಹುದು, ಅಥವಾ ಕುತಗಿ ಹಿಚಗಬಹುದು.

ಎಲ್ಲಾ ಸರಿ, ಇಷ್ಟೆಲ್ಲಾ ರಾದ್ಧಾಂತ ಆಗಿ ಹೋದ ಮ್ಯಾಲೆ ನಮ್ಮ ಸರಕಾರದವರು ಏನು ಮಾಡಿದರು? ಛಪ್ಪನ ಇಂಚಿನ ಛಾತಿ ಇದ್ದವರು ಇಂಥಾ ಮಾಹಿತಿ ಸೋರಿ ಹೋಗಲಾರದ ಹಂಗ ಏನರ ಮಾಡಿದರ? ಇಲ್ಲಾ. ಏನರ ಮಾಡೋದು ಹೋಗಲಿ, ಸರಕಾರದಾಗ ಯಾರುನೂ- ದೊಡ್ಡವರಾಗಲೀ, ಸಣ್ಣವರಾಗಲೀ, ಇದು ಸಮಸ್ಯೆ ಆಗೇದ ಅಂತ ಒಪ್ಪಿಕೊಳ್ಳಲಿಲ್ಲ.

ಅವರು ಹೋಗಲಿ, ವಿಶ್ವದಾದ್ಯಂತ ಭಾರತದ ಹಿರಿಮೆಯನ್ನು ಬಿತ್ತಿದ ನಮ್ಮ ಹೆಮ್ಮೆಯ ಐಟಿ- ಬಿಟಿ ಹುಡುಗರು ಏನರ ಮಾಡಿದರ? ಇಲ್ಲಾ. ಅವರೆಲ್ಲಾ ಇವರನ್ನು ಸುಳ್ಳೇ ಹೊಗಳಿ, ಅವರನ್ನ ಸುಳ್ಳು ಸುಳ್ಳೇ ತೆಗಳೋದರಾಗ ಬಿಜಿ ಇದ್ದಾರ. ಅವರಿಗೆ ಇಂಥಾದಕ್ಕೆಲ್ಲಾ ಎಲ್ಲೆ ಟೈಂ ಇರಬೇಕು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಡ್ ಭ್ರಷ್ಟ ಸುಧಾಕರ್ ಪರವಾಗಿ ಮತ ಕೇಳಲು ಪ್ರಧಾನಿ ಮೋದಿ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾರೆ :...

0
ಪ್ರಧಾನಿ ಮೋದಿಯವರು ಹತ್ತು ವರ್ಷದಲ್ಲಿ ಕೊಟ್ಟ ಒಂದೂ ಆಶ್ವಾಸನೆಯನ್ನೂ ಈಡೇರಿಸದೆ ಭಾರತೀಯರ ನಂಬಿಕೆಗಳಿಗೆ ದ್ರೋಹ ಬಗೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಾಗೇಪಲ್ಲಿಯಲ್ಲಿ ನಡೆದ ಪ್ರಜಾಧ್ವನಿ-2 ಬೃಹತ್ ಜನ ಸಮಾವೇಶದಲ್ಲಿ...