ಸರೋವರ್ ಬೆಂಕಿಕೆರೆ |
2014ರ ನಂತರದಿಂದ ಸಾಂವಿಧಾನಿಕ ಸಂಸ್ಥೆಗಳು ತನ್ನ ಸ್ವಾಯತ್ತತೆಯನ್ನು ಕಳೆದುಕೊಳ್ಳುತ್ತಿದೆ ಎನ್ನುವುದು ಹಳೆಯ ವಿಚಾರ. ಸುಪ್ರೀಮ್ ಕೋರ್ಟಿನ ನ್ಯಾಯಾಧೀಶರುಗಳೇ ‘ಪ್ರಜಾತಂತ್ರ ಅಪಾಯದಲ್ಲಿದೆ’ ಎಂದು ಪತ್ರಿಕಾಗೋಷ್ಠಿ ನಡೆಸಿದ ಉದಾಹರಣೆ ದೇಶದಲ್ಲಿ ಇರಲೇ ಇಲ್ಲ. ಇದೀಗ ಭಾರತೀಯ ಚುನಾವಣೆ ಆಯೋಗವು ತನ್ನ ಸ್ವಾಯತ್ತತೆ ಕಳೆದುಕೊಂಡಿತೇ ಎನ್ನುವ ಅನುಮಾನ ಹುಟ್ಟುತ್ತದೆ. ಅಲ್ಲದೆ ಚುನಾವಣಾ ಆಯೋಗ ನಿಜಕ್ಕು ಪಕ್ಷಾತೀತವಾಗಿದೆಯೇ ಎನ್ನುವ ಪ್ರಶ್ನೆಗಳು ಏಳುತ್ತಿದೆ.
ಮಾರ್ಚ್ 10ರ ಭಾನುವಾರದಂದು ಚುನಾವಣಾ ಆಯೋಗವು ಚುನಾವಣಾ ದಿನಾಂಕವನ್ನು ನಿಗದಿ ಮಾಡಿದ್ದು ಅಂದಿನಿಂದಲೇ ನೀತಿಸಂಹಿತೆಯನ್ನೂ ಜಾರಿ ಮಾಡಿದೆ. ಚುನಾವಣೆ ದಿನಾಂಕ ಘೋಷಣೆ ವಿಳಂಬವಾಗುತ್ತಿದೆ ಎನ್ನುವ ಮಾತುಗಳು ಬಂದನಂತರ ಆಯೋಗವು ಘೋಷಣೆ ಮಾಡಿದೆ. ಅಲ್ಲದೆ ಮಾರ್ಚ್ 10ರ ಮುಂಚೆಯ ಮೋದಿಯವರು ಕೇವಲ 30 ದಿನಗಳಲ್ಲಿ 157 ಯೋಜನೆಗಳು ಮಿಂಚಿನ ವೇಗದಂತೆ ಉದ್ಘಾಟನೆ ಮಾಡಿದ್ದಾರೆ! ಒಂದು ತಿಂಗಳಿನ ಕಾಲಾವಧಿಯಲ್ಲಿ ದೇಶದಾದ್ಯಂತ 28 ಕಡೆ ಪ್ರವಾಸ ಕೈಗೊಂಡಿದ್ದು ಯೋಜನೆಗಳು, ಶಂಕುಸ್ಥಾಪನೆ, ಉದ್ಘಾಟನೆಗಳ ಭರಾಟೆಯನ್ನು ಮುಗಿಸಿದ್ದಾರೆ. ಫೆಬ್ರವರಿ 8ರಿಂದ ಮಾರ್ಚ್ 9ರ ಮಧ್ಯೆ ಪ್ರಧಾನಿ ಮೋದಿಯವರು ಕೆಲವೇ ಕೆಲವು ಕಿಮಿ ಉದ್ದದ ರಸ್ತೆಗಳನ್ನು ಒಳಗೊಂಡ ಅನೇಕ ವಿಭಾಗಗಳ ಹೆದ್ದಾರಿಗಳು, ರೈಲ್ವೆ ಮಾರ್ಗಗಳು, ವೈದ್ಯಕೀಯ ಕಾಲೇಜುಗಳು, ಆಸ್ಪತ್ರೆಗಳು, ಶಾಲೆಗಳು, ಗ್ಯಾಸ್ ಪೈಪ್ಲೈನ್ಗಳು, ವಿಮಾನ ನಿಲ್ದಾಣಗಳು, ನೀರಿನ ಸಂಪರ್ಕಗಳು, ನೀರು ಸಂಸ್ಕರಣಾ ಸಂಪರ್ಕಗಳು, ವಿದ್ಯುತ್ ಘಟಕಗಳು, ಮೊಬೈಲ್ ಆಪ್ಗಳು ಹೀಗೆ ಉದ್ಘಾಟನೆಗಳ ಮೇಲೆ ಉದ್ಘಾಟನೆಗಳನ್ನು ಕೈಗೊಂಡಿದ್ದಾರೆ. ಪುಲ್ವಾಮದಲ್ಲಿ ಸೈನಿಕರ ಮೇಲೆ ದಾಳಿ ನಡೆದ ನಂತರದಲ್ಲಿಯೂ ಸಹ ಯಾವ ಕಾರ್ಯಕ್ರಮವನ್ನು ರದ್ಧು ಮಾಡದೆ ಉದ್ಘಾಟನೆ ಮತ್ತು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಪ್ರಧಾನಿ ಮೋದಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಜನವರಿ 8ರಿಂದ ಫೆಬ್ರವರಿ 7ರ ತನಕ ಸುಮಾರು 57 ಯೋಜನೆಗಳ ಉದ್ಘಾಟನೆ ನಡೆಸಿದರೆ, ನಂತರದ ನಾಲ್ಕು ವಾರಗಳಲ್ಲಿ ಕೈಗೊಂಡ ಉದ್ಘಾಟನೆಗಳ ಸಂಖ್ಯೆ ಮೂರು ಪಟ್ಟು ಹೆಚ್ಚಿದೆ.
ಪ್ರಧಾನಿ ಸಚಿವಾಲಯದ ಹಾಗೂ ಸರ್ಕಾರದ ಅಧಿಕೃತ ಘೋಷಣೆಗಳ ಆಧರಿತವಾಗಿರುವ ಈ ಅಂಕಿಅಂಶವನ್ನು ಗಮನಿಸಿದರೆ ಕೆಲವು ತಮಾಷೆ ಮತ್ತು ವಿಚಿತ್ರ ರೀತಿಯಲ್ಲಿವೆ. ಪ್ರಧಾನಿ ಮೋದಿಯವರು ಕೆಲವು ಹಳೆಯ ಯೋಜನೆಗಳನ್ನು ಹೊಸದಾಗಿ ಮರುಚಾಲನೆಗೊಳಿಸಿದ್ದಾರೆ. ಅವುಗಳಲ್ಲಿ ಈ ತಿಂಗಳ ಆರಂಭದಲ್ಲಿ ಉತ್ತರಪ್ರದೇಶದ ಅಮೇಥಿಯಲ್ಲಿ ರಷ್ಯಾದ ಸಹಭಾಗಿತ್ವದಲ್ಲಿ ಎಕೆ ರೈಫಲ್ಗಳ ಉತ್ಪಾದನಾ ಘಟಕವನ್ನು ಅನಾವರಣಗೊಳಿಸಿದ್ದರು. ಆದರೆ 2007ರಲ್ಲಿ ಉದ್ಘಾಟನೆಗೊಂಡಿದ್ದ ಆ ಘಟಕ 2010ರಲ್ಲಿ ಕಾರ್ಬಿನ್ಸ್, ರೈಫಲ್ಸ್, ಐಎನ್ಎಸ್ಎಎಸ್ ಮೆಶಿನ್ ಗನ್ಗಳ ಉತ್ಪಾದನೆ ನಡೆಸುತ್ತಿತ್ತು ಎಂದು ಸರ್ಕಾರದ ಪ್ರಕಟಣೆಯೇ ಹೇಳಿದೆ.
ಇನ್ನೊಂದು ಉದಾಹರಣೆಯಾಗಿ, ಬಿಹಾರದ ಕರ್ಮಾಲಿಚಕ್ನಲ್ಲಿ ನೀರು ಸಂಸ್ಕರಣಾ ಜಾಲಕ್ಕೆ ಫೆ.17ರಂದು ಮೋದಿ ಅಡಿಗಲ್ಲು ಹಾಕಿದರು. ಆದರೆ ಅದೇ ಯೋಜನೆಗೆ ಸ್ವತಃ ಮೋದಿ ಅವರೇ 2017ರ ಅಕ್ಟೋಬರ್ನಲ್ಲಿ ಅಡಿಗಲ್ಲು ಹಾಕಿದ್ದರು!! ಪ್ರಧಾನಿಯವರು ಉದ್ಘಾಟಿಸಿದ ಕೆಲವು ಯೋಜನೆಗಳು ಮುನ್ಸಿಪಾಲಿಟಿ ಮಟ್ಟದವೂ ಆಗಿದ್ದವು. ಗಾಜಿಯಾಬಾದ್ ಮುನ್ಸಿಪಾಲಿಟಿಯ ಅಡಿಯಲ್ಲಿನ ಗೋಶಾಲೆಗೆ ಅಡಿಗಲ್ಲನ್ನೂ ಹಾಕಿದ್ದಾರೆ. ಹಲವು ಕಡೆಗೆ ಹೋಗಲು ಸಮಯ ಸಿಗದೆ, ವಿದ್ಯುತ್ ಘಟಕದಂತಹ ಯೋಜನೆಗಳನ್ನು ರಿಮೋಟ್ ಮೂಲಕ 17 ಯೋಜನೆಗಳನ್ನೂ ಮೋದಿ ಉದ್ಘಾಟಿಸಿದ್ದಾರೆ.
ಇಷ್ಟು ಆತುರಾತುರವಾಗಿ 157 ಯೋಜನೆಗಳಿಗೆ ಉದ್ಘಾಟನೆ ಮಾಡಿರುವುದು, ಅಧಿಕೃತ ಪ್ರವಾಸ ರ್ಯಾಲಿಗಳು ಮುಗಿದಿದ್ದು, ಇನ್ನೇನು ಯಾವುದೇ ಯೋಜನೆಗಳು ಉದ್ಘಾಟನೆ ಮಾಡಲು ಬಾಕಿ ಉಳಿದಿಲ್ಲ ಎನ್ನುವ ಹೊತ್ತಿಗೆ ‘ಮೋದಿಯ ಎಲ್ಲಾ ಕಾರ್ಯಗಳು ಮುಗಿಯಲಿ ಎಂದು ಕಾಯುತ್ತಿದ್ದೇವೆ’ ಎನ್ನುವಂತೆ ಚುನಾವಣಾ ಆಯೋಗ ಚುನಾವಣೆ ದಿನಾಂಕವನ್ನು ಹಾಗೂ ನೀತಿ ಸಂಹಿತೆಯನ್ನು ಜಾರಿ ಮಾಡಿರುವುದು ನೋಡಿದರೆ ಆಯೋಗ ನಿಜಕ್ಕೂ ತನ್ನ ಸ್ವಾಯತ್ತತೆಯನ್ನು ಕಾಪಾಡಿಕೊಂಡಿದೆಂiÀi, ಪಕ್ಷಾತೀತವಾಗಿ ಕಾರ್ಯ ನಿರ್ವಹಿಸುತ್ತಿದೆಯಾ ಎನ್ನುವ ಅನುಮಾನ ಕಾಡುತ್ತದೆ. ಅಲ್ಲದೆ ರಕ್ಷಣಾ ಕೊರತೆ ಹಾಗೂ ಸೂಕ್ಷ್ಮ ಪ್ರದೇಶಗಳಂತ ರಾಜ್ಯಗಳಲ್ಲಿ 3-4 ಸುತ್ತಿನಲ್ಲಿ ಚುನಾವಣೆ ನಡೆಯುತ್ತದೆ ಆದರೆ 39 ಕ್ಷೇತ್ರಗಳಿರುವ ತಮಿಳುನಾಡಿನಲ್ಲಿ ಒಂದೇ ಸುತ್ತಿನಲ್ಲಿ ಚುನಾವಣೆ ನಡೆಯುತ್ತಿದ್ದು 28 ಕ್ಷೇತ್ರವಿರುವ ಕರ್ನಾಟದಂತ ರಾಜ್ಯದಲ್ಲಿ 2 ಸುತ್ತಿನಲ್ಲಿ ನಡೆಯುತ್ತಿರುವುದು ಹಲವು ಗೊಂದಲ ಮತ್ತು ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿದೆ.
ಚುನಾವಣೆ ಆಯೋಗದ ನಿಷ್ಪಕ್ಷಪಾತವನ್ನು ಪ್ರಶ್ನೆ ಮಾಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಹಿಮಾಚಲ ಪ್ರದೇಶ ಮತ್ತು ಗುಜರಾತ್ನಲ್ಲಿ ಒಂದೇ ಸುತ್ತಿನಲ್ಲಿ ನಡೆಯುತ್ತಿದ್ದ ಚುನಾವಣೆಯನ್ನು ಬೇರ್ಪಡಿಸಿದಾಗ ಹಾಗೂ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯ ಸ್ಪರ್ಧೆಯನ್ನು ಅನರ್ಹಗೊಳಿಸಿದಾಗಲೂ ಭಾರತೀಯ ಚುನಾವಣಾ ಆಯೋಗದ ಪಕ್ಷಪಾತದ ಧೋರಣೆಯ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಒಟ್ಟಾರೆ ಸಾಂವಿಧಾನಿಕ ಸಂಸ್ಥೆಗಳು ತನ್ನ ಸ್ವಾಯತ್ತತೆ ಕಳೆದುಕೊಳ್ಳುತ್ತಿರುವುದರ ಮತ್ತೊಂದು ಗುಣಲಕ್ಷಣವಿದು ಎನ್ನಬಹುದು.