ಟೊಮೊಟೊದಿಂದ ಟೆನ್ಷನ್, ರೆಡ್ ಡೆಡ್ಲಿ ವೈರಸ್ ಇನ್ಫೆಕ್ಷನ್. ತಿರಂಗ ವೈರಸ್ ಬಂದಿದೆ. ತರಕಾರಿಗಳಿಂದ ಮಾನವನ ದೇಹ ಹೊಕ್ಕಿ ಕೊಲ್ಲಲು ಸಜ್ಜಾಗಿದೆ. ಇದು ಕೊರೊನಾ ವೈರಸ್ನ ಹೊಸ ರೂಪ. ಆದರೆ ಕೊರೊನಾಗಿಂತಲೂ ಡೇಂಜರ್ ವೈರಸ್. ಅದರಿಂದಾಗಿ ಮಹಾರಾಷ್ಟ್ರದಲ್ಲಿ ಒಂದು ವರ್ಷ ಜನರು ಟೊಮೊಟೊ ತಿನ್ನುವುದಿಲ್ಲ ಎಂದು ನಿರ್ಧರಿಸಿದ್ದಾರೆ.
ಈ ಮೇಲಿನ ಅಣಿಮುತ್ತುಗಳು ಟಿವಿ9 ಭಾರತ್ವರ್ಷ್ ಹಿಂದಿವಾಹಿನಿಯಲ್ಲಿ ಮೇ13 ರಂದು ಪ್ರಸಾರವಾದಂತವುಗಳು. ಜೊತೆಗೆ ಅಷ್ಟೇ ಬೇಗ ಅದನ್ನು ಡಿಲಿಟ್ ಮಾಡಲಾಯಿತು ಕೂಡ. ಅಷ್ಟರಲ್ಲಿ ಅದನ್ನು ನೋಡಿದ ಎಷ್ಟು ಜನರು ಇದನ್ನು ನಂಬಿದರೋ ಗೊತ್ತಿಲ್ಲ. ಆದರೆ ಬಹಳಷ್ಟು ಜನರು ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವನ್ನು ತಾವೇ ಕಂಡುಹಿಡಿದವರಂತೆ ಹಾಕಿಕೊಂಡಿದ್ದರು.
ಫ್ಯಾಕ್ಟ್ಚೆಕ್
ಈ ವರ್ಷ ಮಹಾರಾಷ್ಟ್ರದ ಹಲವು ಕಡೆ ಕೂಯ್ಲಿಗೆ ಬಂದ ಟೊಮೊಟೊಗಳು ಮಾಗಿಹೋಗಿವೆ. ಇದರಿಂದ ರೈತರಿಗೆ ಸಾಕಷ್ಟು ನಷ್ಟವಾಗಿದೆ. ನಾಸಿಕ್, ಪುಣೆ ಮತ್ತು ಅಹ್ಮದ್ ನಗರ ಜಿಲ್ಲೆಗಳಲ್ಲಿ ಕಳೆದ ಹತ್ತು ದಿನಗಳಿಂದ ಶೇ.60% ಟೊಮೊಟೊ ನಾಶವಾಗಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ಸೇರಿದಂತೆ ಹಲವು ಮಾಧ್ಯಮಗಳು ವರದಿ ಮಾಡಿವೆ.
ಮಹಾತ್ಮಾ ಫುಲೆ ಕೃಷಿ ವಿದ್ಯಾಪೀಠದ ಡಾ.ನವಲೆ ಎಂಬುವವರು ಟೊಮೊಟೊಗಳು ಹಾಳಾಗಲು ಕಾರಣವೇನೆಂದು ಅಧ್ಯಯನ ಮಾಡುತ್ತಿದ್ದಾರೆ. ಅವರು ಸ್ಯಾಂಪಲ್ಗಳನ್ನು ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಹಾರ್ಟಿಕಲ್ಚರ್ ರಿಸರ್ಚ್ ಫಾರ್ ಐಡೆಂಟಿಫಿಕೇಶನ್ ಕಳಿಸಿದ್ದಾರೆ. ಅವರು ಬರೆದ ಲೇಖನದಲ್ಲಿ ಯಾವುದೋ ರೋಗದಿಂದ ಟೊಮೊಟೊ ಎಲೆಗಳು ಮೊದಲು ಹಾಳಾಗಿ ನಂತರ ಹಣ್ಣು ಸಹ ಹಾಳಾಗುತ್ತಿದೆ ಎಂದಿದ್ದಾರೆ. ಅಲ್ಲದೇ ರೋಗದಿಂದ ಕೂಡಿದ ಟೊಮೊಟೊ ಬೀಜಗಳನ್ನು ವಿತರಿಸಿರುವುದರಿಂದ ಈ ಸಮಸ್ಯೆ ಉಂಟಾಗಿದೆ ಎಂದು ಹಲವು ರೈತರು ಪ್ರತಿಭಟನೆ ನಡೆಸಿರುವುದನ್ನು ಲೇಖನದಲ್ಲಿ ಉಲ್ಲೇಖಿಸಿದ್ದಾರೆ.
ಬಹಳಷ್ಟು ಕೀಟತಜ್ಞರು ಇದು ಕೊರೊನಾ ವೈರಸ್ ರೀತಿಯದು ಎಂಬ ಸುದ್ದಿಯನ್ನು ಅಲ್ಲಗೆಳೆದಿದ್ದಾರೆ. ಟೊಮೊಟೊಗೆ ಹಲವು ರೋಗಗಳು ಬರುವುದು ಸಹಜ. ಅದರಿಂದ ಕೆಂಪು ಟೊಮೊಟೊಗಳು ಮಾಗಿವೆ. ಆದರೆ ಇದಕ್ಕೂ ಕೊರೊನಾ ವೈರಸ್ ಯಾವ ಸಂಬಂಧವಿಲ್ಲ, ತರಕಾರಿಗಳಿಂದ ವೈರಸ್ ಮನುಷ್ಯನ ದೇಹ ಸೇರುತ್ತವೆ ಎಂಬುದು ಸಂಪೂರ್ಣ ಸುಳ್ಳು ಎಂದಿದ್ದಾರೆ.
ನಂತರ ಈ ಸ್ಟೋರಿಗಳನ್ನು ಡಿಲಿಟ್ ಮಾಡಿರುವ ಟಿವಿ9 ಭಾರತ್ವರ್ಷ್ ಮೇ15 ರಂದು ಮತ್ತೊಂದು ಶೋ ನಡೆಸಿ ನಾವು ಪ್ರಶ್ನಾರ್ಥಕ ಚಿನ್ನೆಗಳನ್ನಿಟ್ಟು ಶೋ ನಡೆಸಿದ್ದವು. ಆದರೆ ಸಾಮಾಜಿಕ ಜಾಲತಾಣಿಗರು ತಪ್ಪು ಸಂದೇಶ ಹರಡಿದ್ದಾರೆ ಎಂದು ಸಮರ್ಥಿಸಿಕೊಂಡಿವೆ.
ಇದನ್ನೂ ಓದಿ: ಫ್ಯಾಕ್ಟ್ಚೆಕ್: ಆಹಾರ, ಹಣಕ್ಕಾಗಿ ವಲಸೆ ಕಾರ್ಮಿಕರಿಂದ ದರೋಡೆ ಮತ್ತು ಕೊಲೆ?: ಇದು ನಿಜವಲ್ಲ