| ನಾನುಗೌರಿ ಡೆಸ್ಕ್ |
ಕಳೆದ ವರ್ಷ ಕೆ.ಆರ್.ಎಸ್ ನಲ್ಲಿ ಕೇವಲ 70 ಅಡಿ ನೀರಿತ್ತು. ಆಗ ನಾಲೆಗಳಿಗೆ ನೀರು ಹರಿಸಿ ಬೆಳೆಗಳನ್ನು ರಕ್ಷಿಸಲಾಗಿತ್ತು. ಪುಟ್ಟಣ್ಣಯ್ಯನವರು ಬದುಕಿದ್ದಾಗ 72 ಅಡಿ ನೀರಿತ್ತು. ಆಗಲೂ ಹೋರಾಟ ಮಾಡಿ ನೀರು ಬಿಡಿಸಲಾಗಿತ್ತು. ಈಗ ಕೆ.ಆರ್.ಎಸ್ ನಲ್ಲಿ 80 ಅಡಿ ನೀರಿದೆ. 5ಟಿಎಂಸಿ ನೀರು ಬಳಕೆಗೆ ಯೋಗ್ಯವಾಗಿದೆ. 82 ಸಾವಿರ ಎಕರೆಯಲ್ಲಿ ಸುಮಾರ 60 ಲಕ್ಷ ಟನ್ ಕಬ್ಬು ನೀರಿಲ್ಲದೆ ಒಣಗುತ್ತಿದೆ. ಆದರೂ ಸಿ.ಎಸ್ ಪುಟ್ಟರಾಜು ಮತ್ತು ಕುಮಾರಸ್ವಾಮಿಯವರ ದ್ವೇಷ ರಾಜಕಾರಣದಿಂದ ನೀರು ಬಿಡುತ್ತಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಆರೋಪಿಸಿದೆ.
ನಾಲೆಗಳಿಗೆ ನೀರು ಹರಿಸಬೇಕೆಂದು ಕಳೆದ 8 ದಿನಗಳಿಂದ ದರ್ಶನ್ ಪುಟ್ಟಣ್ಣಯ್ಯನವರ ನೇತೃತ್ವದಲ್ಲಿ ರೈತಸಂಘ ನಡೆಸುತ್ತಿರುವ ಹೋರಾಟ ತೀವ್ರಸ್ವರೂಪಕ್ಕೆ ತಿರುಗಿದ್ದು ರೈತರೆಲ್ಲರೂ ಕೆ.ಆರ್.ಎಸ್ ಗೆ ಮುತ್ತಿಗೆ ಹಾಕಲು ತಂಡಪೋತಂಡವಾಗಿ ಹೊರಟಿದ್ದಾರೆ. ಜೀಪು ಮತ್ತು ಬೈಕ್ಗಳಲ್ಲಿ ಮಂಡ್ಯದಿಂದ ಹೊರಟಿರುವ ರೈತರ ತಂಡಗಳು ಸ್ಥಳೀಯ ಶಾಸಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆ.ಆರ್.ಎಸ್ ಮತ್ತು ಹೇಮಾವತಿ ವ್ಯಾಪ್ತಿಯ ನಾಲೆಗಳಿಗೆ ನೀರು ಬಿಡುವಂತೆ ಒತ್ತಾಯಿಸಿ, ಕಳೆದ ಎಂಟು ದಿನಗಳಲ್ಲಿ ಪಾಂಡವಪುರದಲ್ಲಿ ಪ್ರತಿಭಟೆನೆ, ಮಂಡ್ಯದಲ್ಲಿ ಆಹೋರಾತ್ರಿ ಧರಣಿ ಮತ್ತು ನಿರಂತರ ಹೋರಾಟ ನಡೆಸಲಾಗಿತ್ತು. ಕೇಂದ್ರದ ನೀರು ನಿರ್ವಹಣಾ ಪ್ರಾಧಿಕಾರದ ಅನುಮತಿಯಿಲ್ಲದೇ ನೀರು ಬಿಡಲು ಸಾಧ್ಯವಿಲ್ಲ ಎಂದು ಮಂಡ್ಯ ಜಿಲ್ಲಾಧಿಕಾರಿ ಮಂಜುಶ್ರಿರವರು ಹೇಳಿದ್ದರು.
ಜಿಲ್ಲಾಧಿಕಾರಿ ಮಾತಿಗೆ ಸೊಪ್ಪು ಹಾಕದ ಪ್ರತಿಭಟನಾಕಾರರು ಹೋರಾಟ ಮುಂದುವರೆಸಿದ್ದರು. ಮಾಜಿ ಸಚಿವ ಚಲುವರಾಯಸ್ವಾಮಿ, ಹಾಲಿ ಡಿಸಿಎಂ ಪರಮೇಶ್ವರ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಇಂದು ಬೆಂಗಳೂರಿನಲ್ಲಿ ಸಚಿವ ಸಂಪುಟದ ಸಭೆ ನಡೆಯುತ್ತಿದ್ದು ನೀರು ಬಿಡುವ ವಿಚಾರ ಚರ್ಚೆಗೆ ಬರುವ ಸಾಧ್ಯತೆಯಿದೆ.