ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಯೋಜಿತವಲ್ಲದ ಲಾಕ್ಡೌನ್ ಸಾರಿಗೆ, ಆರೋಗ್ಯ, ಉದ್ಯೋಗ, ಹಣಕಾಸು ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಗಳಿಗೆ ತೀವ್ರವಾದ ಸಮಸ್ಯೆಗಳನ್ನು ತಂದೊಡ್ಡಿದೆ. ಇದಾಗಿಯೂ ವಲಸೆ ಕಾರ್ಮಿಕರ ಬಿಕ್ಕಟ್ಟು ದೇಶ ಸ್ವಾತಂತ್ರ್ಯ ಗಳಿಸಿದಾಗಿನಿಂದ ಅತ್ಯಂತ ದುಃಖಕರ ಘಟನೆಯಲ್ಲಿ ಒಂದಾಗಿದೆ.
ದೆಹಲಿ ಹಾಗೂ ಯು.ಪಿ.ಯಲ್ಲಿ ವಲಸೆ ಕಾರ್ಮಿಕರ ದೈನಂದಿನ ವರದಿಗಳನ್ನು ನಾವು ನೋಡುತ್ತಿದ್ದೇವೆ. ಬಿಹಾರ್ನ ರೈಲ್ವೆ ನಿಲ್ದಾಣವೊಂದರಲ್ಲಿ ಮೃತ ತಾಯಿಯನ್ನು ಎಚ್ಚರಗೊಳಿಸಲು ಪ್ರಯತ್ನಿಸುತ್ತಿರು ಮಗುವಿನ ದೃಶ್ಯವನ್ನು ನೋಡಿದ್ದೇವೆ. ಆಹಾರದ ಕೊರತೆಯಿಂದಾಗಿ ಶ್ರಮಿಕ್ ವಿಶೇಷ ರೈಲುಗಳಲ್ಲಿ ಕಾರ್ಮಿಕರು ಸಾಯುತ್ತಿದ್ದಾರೆ. ಇವೆಲ್ಲವೂ ಮೋದಿ ಭರವಸೆ ನೀಡಿದ ‘ಅಚ್ಛೇ ದಿನ’ಗಳ ನಿಜರೂಪವನ್ನು ಅರಿತುಕೊಳ್ಳಲು ಸಹಾಯ ಮಾಡುತ್ತದೆ.
ಈ ಪರಿಸ್ಥಿತಿಯಿಂದ ಹೊರಬಂದು ವಲಸೆ ಕಾರ್ಮಿಕರಿಗೆ ಸಹಾಯ ಮಾಡಲು ಹಲವು ರಾಜ್ಯಗಳು ಪ್ರಯತ್ನಿಸುತ್ತಿದ್ದರೆ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಂತಹ ಕೆಲವು ರಾಜ್ಯಗಳು ಅವರ ವಿರುದ್ಧ ವಿಲಕ್ಷಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ಮೂಲಕ ಸಂವಿಧಾನದ ಅಡಿಯಲ್ಲಿ ಖಾತರಿಪಡಿಸಿದ ಅವರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ.
ಇತ್ತೀಚೆಗೆ, ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾನ್ ನೇತೃತ್ವದ ಸರ್ಕಾರವು ತನ್ನ ಕಾರ್ಮಿಕ ಕಾನೂನುಗಳಿಗೆ ಹಲವಾರು ತಿದ್ದುಪಡಿಗಳನ್ನು ಗೆಜೆಟ್ ಮಾಡಿ, ಕಾರ್ಖಾನೆಗಳ ಕಾಯ್ದೆಯ ಅಗತ್ಯ ನಿಬಂಧನೆಗಳನ್ನು ಮೊಟಕುಗೊಳಿಸಿ ಕಾರ್ಖಾನೆಗಳ ಮಾಲಿಕರಿಗೆ ನೆರವಾಯಿತು. ಅಂತೆಯೇ, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು ಕೆಲವು ಮೂಲಭೂತ ನಿಬಂಧನೆಗಳನ್ನು ಹೊರತುಪಡಿಸಿ, ಮೂರು ವರ್ಷಗಳ ಅವಧಿಗೆ, ಉತ್ಪಾದನಾ ಪ್ರಕ್ರಿಯೆಯಲ್ಲಿ ತೊಡಗಿರುವ ಎಲ್ಲಾ ಕಾರ್ಖಾನೆಗಳು ಮತ್ತು ಸಂಸ್ಥೆಗಳನ್ನು ಎಲ್ಲಾ ಕಾರ್ಮಿಕ ಕಾನೂನುಗಳ ಕಾರ್ಯಾಚರಣೆಯಿಂದ ವಿನಾಯಿತಿ ನೀಡಿದೆ.
ಆಶ್ಚರ್ಯಕರ ಸುಗ್ರೀವಾಜ್ಞೆಗಳು ಮತ್ತು ಆದೇಶಗಳ ಸರಣಿಯಲ್ಲಿ, ಉತ್ತರ ಪ್ರದೇಶದ ರಾಜ್ಯದ ಕಾರ್ಮಿಕರನ್ನು ಬೇರೆ ರಾಜ್ಯಗಳು ಸರ್ಕಾರದ ಅನುಮತಿಯೊಂದಿಗೆ ನೇಮಿಸಬೇಕು ಎಂದು ಇತ್ತೀಚೆಗೆ ಅಸಂವಿಧಾನಿಕ ಹೇಳಿಕೆ ನೀಡಿದೆ. ಇದಕ್ಕಾಗಿ ಕಾರ್ಮಿಕರು ಜೀವನೋಪಾಯವನ್ನು ಗಳಿಸಲು ರಾಜ್ಯ ಸರ್ಕಾರದ ಅನುಮತಿಗೆ ಕಾಯಬೇಕಾಗುತ್ತದೆ.
ಮೇಲಿನ ಹೇಳಿಕೆ ಭಾರತ ಸಂವಿದಾನದ ಸ್ಪಷ್ಟ ಉಲ್ಲಂಘನೆಯಾಗಿದ್ದು, ಭಾರತದ ಸಂವಿಧಾನದ ಆರ್ಟಿಕಲ್ 19 (1) (ಡಿ) – ಎಲ್ಲಾ ನಾಗರಿಕರಿಗೆ ಭಾರತದ ಭೂಪ್ರದೇಶದಾದ್ಯಂತ ಮುಕ್ತವಾಗಿ ಚಲಿಸುವ ಹಕ್ಕನ್ನು ಖಾತರಿಪಡಿಸುತ್ತದೆ. ಅಲ್ಲದೆ, ಆರ್ಟಿಕಲ್ 19 (1) (ಇ) ಎಲ್ಲಾ ನಾಗರಿಕರಿಗೆ ಭಾರತದ ಯಾವುದೇ ಭಾಗದಲ್ಲಿ ವಾಸಿಸುವ ಮತ್ತು ನೆಲೆಸುವ ಹಕ್ಕನ್ನು ಖಾತರಿಪಡಿಸುತ್ತದೆ.
ಇದ್ಯಾವುದನ್ನೂ ಉತ್ತರ ಪ್ರದೇಶದ ಆದಿತ್ಯನಾಥ್ ಸರ್ಕಾರ ಪರಿಗಣಿಸದೇ ಕಾರ್ಮಿಕರು ಬೇರೆ ರಾಜ್ಯಗಳಿಗೆ ಹೋಗ ಬೇಕಾದರೆ ಸರ್ಕಾರದ ಅನುಮತಿ ಪಡೆಯಬೇಕು ಎಂದು ಹೇಳಿದ್ದಾರೆ, ಜೊತೆಗೆ ರಾಜ್ಯದ ಕಾರ್ಮಿಕ ಕಾನೂನನ್ನು ಅಮಾನತಿನಲ್ಲಿಟ್ಟಿದೆ. ಇವೆಲ್ಲವನ್ನೂ ಜೊತೆಯಲ್ಲಿಟ್ಟುಕೊಂಡೇ ನೋಡಬೇಕಾಗುತ್ತದೆ. ಯಾಕೆಂದರೆ ಎಲ್ಲಾ ಸರಕಾರವೂ ಬಂಡವಾಳಶಾಹಿಗಳ ಪರವಾಗಿಯೇ ಇರುತ್ತದೆ.
ತನ್ನ ಹೇಳಿಕೆಗೆ ಆದಿತ್ಯನಾಥ್ ಕೊಟ್ಟಿರುವ ಸಮರ್ಥನೆಯೇನೆಂದರೆ ಉತ್ತರ ಪ್ರದೇಶದ ಕಾರ್ಮಿಕರನ್ನು ಇತರ ರಾಜ್ಯಗಳು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು. ಆದರೆ ಸ್ವತಃ ತನ್ನ ರಾಜ್ಯದಲ್ಲಿ ಮಾತ್ರ ಕಾರ್ಮಿಕರ ಸಂವಿಧಾನಿಕ ದತ್ತವಾಗಿರುವ ಕಾರ್ಮಿಕರ ಹಕ್ಕನ್ನು ತಡೆಹಿಡಿದಿದ್ದಾರೆ, ಅಂದರೆ ಮುಂದಿನ ಮೂರು ವರ್ಷಗಳಲ್ಲಿ ಅವರು ತಮ್ಮ ರಾಜ್ಯದ ಕಾರ್ಮಿಕರ ಶೋಷಣೆ ಮಾಡಲು ಒಪ್ಪಿಗೆ ಕೊಟ್ಟಿದ್ದಾರೆ ಎಂದೇ ಅರ್ಥ. ಒಟ್ಟಿನಲ್ಲಿ ನೋಡುವುದಾದರೆ ತಮ್ಮ ರಾಜ್ಯದ ಕಾರ್ಮಿಕರನ್ನು ಒತ್ತೆಯಾಳುಗಳಂತೆ ಮಾಡಿ ತಮ್ಮ ರಾಜ್ಯದಲ್ಲೆ ಉಳಿಸಿ ಜೀತ ಮಾಡಿಸುವ ಹುನ್ನಾರ ಈ ಹೇಳಿಕೆಯಲ್ಲಿದೆ.
ಕೊರೊನಾ ಸೋಂಕಿನ ಹೆಸರಲ್ಲಿ ಅಧೀಕೃತ ಸರ್ವಾಧಿಕಾರಿಗಳು ಸೃಷ್ಟಿಯಾಗುತ್ತಿದ್ದಾರೆ. ನಮ್ಮ ಪೂರ್ವಜರು ತ್ಯಾಗ ಬಲಿದಾನದಿಂದ ಗಳಿಸಿದ ಸ್ವಾತಂತ್ರ್ಯವನ್ನು ನಾವೇ ಆರಿಸಿದ ವ್ಯಕ್ತಿಗಳು ನಮ್ಮಿಂದ ಕಿತ್ತುಕೊಳ್ಳುತ್ತಿದ್ದಾರೆ.
- ಅಮರೀಶ್ ರಂಜನ್ ಪಾಂಡೆ ಮತ್ತು ಅಂಬುಜ್ ದಿಕ್ಷಿತ್ (ಉತ್ತರ ಪ್ರದೇಶ)
ಕೃಪೆ: ನ್ಯಾಷನಲ್ ಹೆರಾಲ್ಡ್
ಓದಿ: ಅನುಮತಿಯಿಲ್ಲದೆ ರಾಜ್ಯಗಳು ಉತ್ತರ ಪ್ರದೇಶದ ಕಾರ್ಮಿಕರನ್ನು ನೇಮಿಸಿಕೊಳ್ಳುವಂತಿಲ್ಲ: ಯೋಗಿ ಆದಿತ್ಯನಾಥ್