Homeಮುಖಪುಟಹ್ಯಾರಿಸ್-ಆರ್.ಅಶೋಕ್: ಎರಡು ‘ಮಕ್ಕಳ’ ಪ್ರಕರಣಗಳು ; ಎರಡು ರೀತಿಯ ನಿಷ್ಕರ್ಷೆ

ಹ್ಯಾರಿಸ್-ಆರ್.ಅಶೋಕ್: ಎರಡು ‘ಮಕ್ಕಳ’ ಪ್ರಕರಣಗಳು ; ಎರಡು ರೀತಿಯ ನಿಷ್ಕರ್ಷೆ

- Advertisement -
- Advertisement -

ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಎರಡು high profile ಅಪಘಾತ ಪ್ರಕರಣಗಳು ಸಾಕಷ್ಟು ಸದ್ದು ಮಾಡುತ್ತಿವೆ. ಒಂದು ಶಾಂತಿನಗರ ಶಾಸಕ ಎನ್.ಎ.ಹ್ಯಾರಿಸ್ ಮಗ ನಲಪಾಡ್ ಪ್ರಕರಣವಾದರೆ, ಮತ್ತೊಂದು ಹೊಸಪೇಟೆ ತಾಲೂಕಿನಲ್ಲಾದ ಆರ್.ಅಶೋಕ್ ಮಗ ಶರತ್ ಹೆಸರು ತಳುಕು ಹಾಕಿದ್ದ ಭೀಕರ ಅಪಘಾತ ಪ್ರಕರಣ.

ಆದರೆ, ಈ ಎರಡೂ ಪ್ರಕರಣದಲ್ಲಿ ಪೊಲೀಸ್ ಇಲಾಖೆ ನಡೆದುಕೊಂಡ ರೀತಿ ಮತ್ತು ವಿಚಾರಣೆ ನಡೆಸಿದ ಧೋರಣೆಯನ್ನು ಗಮನಿಸಿದರೆ, ನಲಪಾಡ್‍ನನ್ನು ಹಣಿಯಲೇಬೇಕು ಎಂಬ ನಿರ್ಧರಿಸಿದ್ದ ಇದೇ ಪೊಲೀಸರು ಸಚಿವ ಆರ್.ಅಶೋಕ್ ಮಗ ಶರತ್‍ನನ್ನು ಹೊಸಪೇಟೆ ಅಪಘಾತ ಪ್ರಕರಣದಲ್ಲಿ ರಕ್ಷಿಸಲು ಪಟ್ಟ ಶ್ರಮ ಕಣ್ಣಿಗೆ ರಾಚುವಂತೆ ಎದ್ದು ಕಾಣುತ್ತದೆ.

ಈ ಎರಡೂ ಪ್ರಕರಣಗಳ ಬೆನ್ನತ್ತಿ ಹೊರಟ ನ್ಯಾಯಪಥ ತಂಡಕ್ಕೆ ಹತ್ತಾರು ಮಹತ್ವದ ಹಾಗೂ ಅಷ್ಟೇ ಕುತೂಹಲಕಾರಿಯಾದ ಹಲವಾರು ವಿಚಾರಗಳು ಕಂಡಿವೆ. ಆ ಕುರಿತ ಸಂಪೂರ್ಣ ವರದಿ ಇಲ್ಲಿದೆ.

ಪ್ರಕರಣ 1: ಮೊಹಮ್ಮದ್ ನಲಪಾಡ್

ಕಳೆದ ಭಾನುವಾರ ನಗರದ ಮೇಖ್ರಿ ವೃತ್ತದ ಬಳಿ ಐಶಾರಾಮಿ ಬೆಂಟ್ಲಿ ಕಾರು ಅಪಘಾತ ಮಾಡಿದ್ದ ಪ್ರಕರಣದಲ್ಲಿ ಶಾಂತಿನಗರ ಶಾಸಕ ಹ್ಯಾರಿಸ್ ಮಗ ಮಹಮ್ಮದ್ ನಲಪಾಡ್ ಹೆಸರು ಕೇಳಿ ಬಂದಿತ್ತು. ಮೂರು ವಾಹನಗಳಿಗೆ ಸರಣಿ ಡಿಕ್ಕಿ ಹೊಡೆದಿದ್ದ ಬೆಂಟ್ಲಿ ಕಾರನ್ನು ಅಪಘಾತದ ಸಂದರ್ಭದಲ್ಲಿ ಚಲಾಯಿಸುತ್ತಿದ್ದದ್ದು ಸ್ವತಃ ನಲಪಾಡ್ ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು. ಈ ಪ್ರಕರಣದಲ್ಲಿ ಓರ್ವ ವ್ಯಕ್ತಿಯ ಕಾಲಿನ ಮೂಳೆ ಮುರಿದಿತ್ತು.

ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನಲಪಾಡ್‍ಗೆ ನೋಟಿಸ್ ಜಾರಿ ಮಾಡಿದ್ದರು. ವಿಚಾರಣೆಗೆ ಹಾಜರಾಗುತ್ತಿದ್ದಂತೆ ನಲಪಾಡ್‍ನನ್ನು ಬಂಧಿಸಿದ್ದ ಪೊಲೀಸರು ವಿಚಾರಣೆ ನಂತರ ವಿಶೇಷ ಜಾಮೀನಿನ ಮೇಲೆ ಬಿಡುಗಡೆ ಮಾಡಿ ಕಳಿಸಿದ್ದರು. 2018ರಲ್ಲಿ ಯುಬಿ ಸಿಟಿ ಗಲಾಟೆ ವಿವಾದದಲ್ಲಿ ಪ್ರಸ್ತುತ ಜಾಮೀನಿನ ಮೇಲೆ ಹೊರಗಿರುವ ನಲಪಾಡ್ ಮೇಲೆ ಮತ್ತೆ ಯಾವುದೇ ಎಫ್‍ಐಆರ್ ದಾಖಲಾದರೂ ಆತ ಜೈಲು ಪಾಲಾಗಬೇಕಾಗುತ್ತದೆ. ಇದೇ ಕಾರಣಕ್ಕೆ ಈ ಪ್ರಕರಣ ಸಾಕಷ್ಟು ಮಹತ್ವ ಪಡೆದುಕೊಂಡಿತ್ತು.

ಆದರೆ, ನಲಪಾಡ್ ಕಾರು ಗುದ್ದಿ ಕಾಲಿನ ಮೂಳೆ ಮುರಿದಿದ್ದರೂ ಬೈಕ್ ಸವಾರ ಪ್ರಫುಲ್ಲಾ ತನಗೆ ಏನೂ ಆಗಿಲ್ಲ ಎಂದು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಹೇಳಿಕೆ ನೀಡಿದ್ದು ನಲಪಾಡ್‍ಗೆ ವರದಾನವಾಗಿತ್ತು. ಆದರೆ, ಪ್ರಫುಲ್ಲಾ ಹೇಳಿಕೆ ಹಿಂದೆ ಯಾರ ಒತ್ತಡವೂ ಇಲ್ಲ ಎಂದು ಹೇಳುವುದು ಅಸಾಧ್ಯ.

ಪ್ರಕರಣ 2: ಹೊಸಪೇಟೆ ಐಶಾರಾಮಿ ಕಾರು ದುರಂತ

ಫೆ.10ರ ಮಧ್ಯಾಹ್ನ ಸುಮಾರು 3.15ರ ಸಮಯ. ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಅತಿಯಾದ ವೇಗದಲ್ಲಿ ಚಲಿಸುತ್ತಿದ್ದ ಕೆಂಪು ಬಣ್ಣದ ಬೆಂಜ್ ಕಾರು ತನ್ನ ಮುಂದಿದ್ದ ಲಾರಿಯನ್ನು ಎಡಭಾಗದಿಂದ ಓವರ್‍ಟೇಕ್ ಮಾಡಲು ಮುಂದಾಗಿದೆ. ಕಾರಿನ ಚಾಲಕನ ನಿಯಂತ್ರಣ ತಪ್ಪಿ ಎಡಭಾಗದಲ್ಲಿ ಹೋಟೆಲ್ ಎದುರಿದ್ದ ದಾರಿಹೋಕ ರವಿನಾಯ್ಕ ಎಂಬುವವರಿಗೆ ಡಿಕ್ಕಿ ಹೊಡೆದಿದೆ.

ಹೀಗೆ ಡಿಕ್ಕಿ ಹೊಡೆದ ಕಾರು ಆತನ ಜೊತೆಗೆ ದಾರಿಯ ತಿರುವಿನಲ್ಲಿದ್ದ ತಗ್ಗಿನಲ್ಲಿ ಎರಡು ಬಾರಿ ಪಲ್ಟಿ ಹೊಡೆದು ಉರುಳಿದೆ. ಈ ವೇಳೆ ಸೀಟ್ ಬೆಲ್ಟ್ ಹಾಕದ ಕಾರಣಕ್ಕೆ ಕಾರಿನಲ್ಲಿದ್ದ ಸಚಿನ್ ಎಂಬಾತ ಮೃತಪಟ್ಟಿದ್ದರೆ, ಕಾರು ಚಾಲಕ ಗಾಯಗಳೊಂದಿಗೆ ಬಚಾವ್ ಆಗಿದ್ದ. ತಾನು ಮಾಡದ ತಪ್ಪಿಗೆ 16 ವರ್ಷದ ರವಿನಾಯ್ಕ್ ಎಂಬ ಯುವಕ ಮೃತಪಟ್ಟಿದ್ದ.

ಆದರೆ, ಅಪಘಾತಕ್ಕೊಳಗಾದ ಈ ಕಾರಿಗೂ ಸಚಿವ ಆರ್.ಅಶೋಕ್ ಮಗ ಶರತ್‍ಗೂ ಸಂಬಂಧ ಕಲ್ಪಿಸಿ ಸಾಕಷ್ಟು ಸುದ್ದಿಗಳು ಹರಿದಾಡಿದವು. ಅಪಘಾತಕ್ಕೊಳಗಾದ ಕಾರಿಗೂ ಅದರಲ್ಲಿ ಶರತ್ ಎಂಬ ವ್ಯಕ್ತಿ ಇದ್ದ ಎಂಬುದಕ್ಕೂ ಸಾಕಷ್ಟು ಸಾಕ್ಷಿಗಳಿವೆ. ಹೀಗಾಗಿ ಈ ಸುದ್ದಿಯನ್ನು ಸುಳ್ಳು ಎಂದು ತೆಗೆದುಹಾಕುವುದು ಸಾಧ್ಯವಿಲ್ಲ. ಆದರೆ, ಅಂತಹ ಪ್ರಯತ್ನಕ್ಕೆ ಕೈಹಾಕಿರುವ ಬಳ್ಳಾರಿ ಪೆÇಲೀಸರು ಶರತ್‍ನನ್ನು ಬಚಾವ್ ಮಾಡಿ ಮನೆಗೆ ಕಳುಹಿಸಿದ್ದಾರೆ.

ಅಸಲಿಗೆ ಸಚಿವ ಆರ್.ಅಶೋಕ್ ಮಗ ಶರತ್ ಆ ಕಾರಿನಲ್ಲಿ ಇದ್ದನೇ? ಆತನೇ ಡ್ರೈವ್ ಮಾಡಿದನೇ? ಅಥವಾ ಹಿಂದಿನ ಕಾರಿನಲ್ಲಿದ್ದನೇ? ಈ ಪ್ರಕರಣದಲ್ಲಿ ಇಷ್ಟೊಂದು ಗೊಂದಲ ಏಕೆ? ಇಲ್ಲಿದೆ ಪ್ರರಕಣದ ಅಸಲಿ ಕಥೆ.

ಆಕ್ಸಿಡೆಂಟ್ ರಿಯಲ್ ಫ್ಯಾಕ್ಟ್!

ನ್ಯಾಯಪಥಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ 10 ಜನರನ್ನೊಳಗೊಂಡ ಶರತ್ ಅಂಡ್ ಟೀಮ್ ಎರಡು ಕಾರಿನಲ್ಲಿ ಹೊಸಪೇಟೆಗೆ ಮದುವೆಗೆಂದು ಹೋಗಿರುವುದು ಸತ್ಯ. ಮುಂದೆ ಚಲಿಸುತ್ತಿದ್ದ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ 5 ಹಾಗೂ ಅದರ ಹಿಂದಿದ್ದ ಆಡಿ ಕಾರಿನಲ್ಲಿ 5 ಜನ ಮದುವೆ ಮುಗಿಸಿ ಹಂಪಿ ಪ್ರವಾಸಕ್ಕೆ ತೆರಳಿದ್ದಾರೆ. ಈ ವೇಳೆ ಹೊಸಪೇಟೆಯ ಮರಿಯಮ್ಮನಹಳ್ಳಿ ಬಳಿ ಅಪಘಾತ ಸಂಭವಿಸಿದೆ. ಅಲ್ಲಿಗೆ ಶರತ್‍ಗೂ ಈ ಅಪಘಾತಕ್ಕೂ ಸಂಬಂಧ ಇದೆ ಎಂಬುದು ಸಾಬೀತಾಗಿದೆ. ಆದರೆ, ಆತ ಅಪಘಾತಕ್ಕೆ ಒಳಗಾದ ಕಾರನ್ನು ಸ್ವತಃ ಚಲಾಯಿಸುತ್ತಿದ್ದನೇ? ಎಂಬುದು ಪ್ರಶ್ನೆ.

ಥಿಯೆರಿ 1- ಅಪಘಾತ ನಡೆದ ಸ್ಥಳದಲ್ಲಿ ಕಾರಿನಲ್ಲಿದ್ದ ಓರ್ವ ವ್ಯಕ್ತಿ ಬಲಿಯಾಗಿದ್ದರೆ, ಉಳಿದ ನಾಲ್ಕು ಜನಕ್ಕೆ ತೀವ್ರ ಗಾಯಗಳಾಗಿದ್ದವು. ಹೊಸಪೇಟೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದ ಇವರನ್ನು ಮರುದಿನವೇ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಒಂದು ವೇಳೆ ಈ ಕಾರಿನಲ್ಲಿ ಶರತ್ ಇದ್ದದ್ದೇ ನಿಜವಾದರೆ ಅವರಿಗೆ ಕನಿಷ್ಟ ಸಣ್ಣಪುಟ್ಟ ಗಾಯಗಳಾದರೂ ಆಗಬೇಕಿತ್ತು. ಆದರೆ, ಅವರಿಗೆ ಯಾವುದೇ ಗಾಯಗಳಾಗಿಲ್ಲ. ಹೀಗಾಗಿ ಆತ ಅಪಘಾತಕ್ಕೊಳಗಾದ ವಾಹನದಲ್ಲಿ ಇದ್ದ ಸಾಧ್ಯತೆ ತೀರಾ ಕಡಿಮೆ.

ಥಿಯೆರಿ 2- ಒಂದು ವೇಳೆ ಶರತ್ ಕಾರು ಚಲಾಯಿಸದೆ ವಾಹನ ಚಾಲಕನ ಪಕ್ಕದಲ್ಲಿ ಕುಳಿತಿದ್ದರೆ, ಆತನೂ ಓರ್ವ ಸಂತ್ರಸ್ತನೆ ಹೊರತು ಆರೋಪಿಯಲ್ಲ.

ಥಿಯೆರಿ-3: ಅಸಲಿಗೆ 10 ಜನ ಗೆಳೆಯರು ಎರಡು ಕಾರಿನಲ್ಲಿ ಹೊಸಪೇಟೆ ತಲುಪಿದ್ದಾರೆ. ಮುಂದಿದ್ದ ಬೆಂಜ್ ಕಾರಿಗೆ ಅಪಘಾತವಾಗಿದೆ. ಈ ಸಂದರ್ಭದಲ್ಲಿ ಶರತ್ ಹಿಂಬದಿ ಇದ್ದ ಆಡಿ ಕಾರಿನಲ್ಲಿ ಇದ್ದರು. ವಾಹನ ಅಪಘಾತಕ್ಕೆ ಒಳಗಾದ ಸಂದರ್ಭದಲ್ಲಿ ಗಾಯಾಳುಗಳನ್ನು ಸ್ವತಃ ಆಸ್ಪತ್ರೆಗೆ ದಾಖಲು ಮಾಡಿಸಿದ್ದಾರೆ. ಹೀಗೆ ನೋಡಿದರೂ ಸಹ ಶರತ್ ಮೇಲೆ ಯಾವುದೇ ಕಾನೂನು ಕ್ರಮ ಜರುಗಿಸಲು ಸಾಧ್ಯವಿಲ್ಲ.

ಇದೊಂದು ಅಪಘಾತ ಪ್ರಕರಣವೇ ಹೊರತು ಕ್ರಿಮಿನಲ್ ಪ್ರಕರಣ ಅಲ್ಲ. ಒಂದು ವೇಳೆ ಅಪಘಾತಕ್ಕೆ ಒಳಗಾದ ಕಾರಿನಲ್ಲಿ ಸಚಿವ ಅಶೋಕ್ ಅವರ ಮಗ ಇದ್ದರೂ ಸಹ ಅದೊಂದು ದೊಡ್ಡ ಅಪರಾಧವೇನಲ್ಲ. ಅಪಘಾತ ಪ್ರಕರಣ ದಾಖಲಿಸಿ ಎಲ್ಲಾ ಪ್ರಕರಣದಂತೆ ಈ ಪ್ರಕರಣವನ್ನು ಪರಿಗಣಿಸಬಹುದಿತ್ತು.

ಆದರೆ, ಅಪಘಾತ ಸ್ಥಳದಲ್ಲಿ ಶರತ್ ಇಲ್ಲವೇ ಇಲ್ಲ ಎಂದು ವಾದಿಸುವ ಸಲುವಾಗಿ ಪೊಲೀಸ್ ಇಲಾಖೆ ಹಾಗೂ ಸಚಿವ ಅಶೋಕ್ ನೀಡಿರುವ ಕೆಲವು ಗೊಂದಲದ ಹೇಳಿಕೆಗಳು ಹಲವಾರು ಅನುಮಾನಕ್ಕೆ ಎಡೆಮಾಡಿಕೊಡುತ್ತಿದೆ.

ಪೊಲೀಸರು ಎಡವಿದ್ದೆಲ್ಲಿ?

ಹೊಸಪೇಟೆ ಅಪಘಾತ ಪ್ರಕರಣದಲ್ಲಿ ಕಾರಿನಲ್ಲಿದ್ದ ಎಲ್ಲರೂ ಮದ್ಯಪಾನ ಮಾಡಿದ್ದಾರೆ, ಮದ್ಯಪಾನ ಮಾಡಿ ಅತೀ ವೇಗದಲ್ಲಿ ವಾಹನ ಚಲಾವಣೆ ಮಾಡಿದ್ದೇ ಈ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ.

ಯಾವುದೇ ಅಪಘಾತವಾದರೂ ಕಾನೂನಿನ ಪ್ರಕಾರ ಅಪಘಾತವಾಗಿ ಗರಿಷ್ಟ 6 ಗಂಟೆಯ ಒಳಗಾಗಿ ವಾಹನ ಚಾಲಕ ಮದ್ಯಪಾನ ಮಾಡಿದ್ದಾನೆಯೇ? ಎಂದು ಪೊಲೀಸರು ಪರೀಕ್ಷೆ ಮಾಡಿಸಬೇಕು. ಆದರೆ, ಪೊಲೀಸರು ಈ ಪ್ರಕರಣದಲ್ಲಿ ಅಂತಹ ಯಾವುದೇ ಪರೀಕ್ಷೆ ಮಾಡಿಸಿಲ್ಲ. ಅಲ್ಲಿಗೆ ಅಪಘಾತಕ್ಕೆ ಸಂಬಂಧಿಸಿದ ಪ್ರಮುಖ ಸಾಕ್ಷಿಯೊಂದನ್ನು ಸ್ವತಃ ಪೊಲೀಸರೇ ನಾಶ ಮಾಡಿದಂತಾಗಿದೆ.

ಇನ್ನು ಅಪಘಾತದಲ್ಲಿ ಕಾರಿನಲ್ಲಿದ್ದ ಸಚಿನ್ ಎಂಬ ವ್ಯಕ್ತಿ ಮೃತಪಟ್ಟಿದ್ದಾನೆ. ಆದರೆ, ಆತನ ಶವವನ್ನು ತುರ್ತಾಗಿ ಮರಣೋತ್ತರ ಪರೀಕ್ಷೆ ಮಾಡಲು ವೈದ್ಯರು ಒಪ್ಪಿರಲಿಲ್ಲ. ಆದರೆ, ಪೊಲೀಸರು ಮೃತ ವ್ಯಕ್ತಿ ಸಚಿವ ಆರ್.ಅಶೋಕ್ ಕಡೆಯವರು ಎಂದು ಹೇಳಿ ತುರ್ತಾಗಿ ಮರಣೋತ್ತರ ಪರೀಕ್ಷೆ ನಡೆಸಿ ಫೆ.11ಕ್ಕೆ ಶವವನ್ನು ಬೆಂಗಳೂರಿಗೆ ರವಾನೆ ಮಾಡಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಅಸಲಿಗೆ ಮರಣೋತ್ತರ ಪರೀಕ್ಷೆಯನ್ನು ಇಷ್ಟು ಅವಸರವಾಗಿ ನೆರವೇರಿಸುವ ಅಗತ್ಯವಾದರೂ ಏನು? ಮರಣೋತ್ತರ ಪರೀಕ್ಷೆಗಾಗಿ ಸ್ವತಃ ಪೊಲೀಸರೇ ಸಚಿವ ಆರ್.ಅಶೋಕ್ ಹೆಸರನ್ನು ಬಳಸಿದ್ದು ಏಕೆ ಎಂಬುದು ಪ್ರಶ್ನೆ?

ಅಸಲಿಗೆ ಅಪಘಾತದ ನಂತರ ಗಾಯಾಳುಗಳು ಸರ್ಕಾರಿ ಆಸ್ಪತ್ರೆಗೆ ತೆರಳುವ ಮುನ್ನವೇ ಮೈತ್ರಿ ಎಂಬ ಖಾಸಗಿ ಆಸ್ಪತ್ರೆಗೆ ತೆರಳಿದ್ದಾರೆ. ಈ ವೇಳೆ ಸಚಿವ ಅಶೊಕ್ ಮಗ ಶರತ್ ಗಾಯಾಳುಗಳನ್ನು ಸಾಗಿಸಲು ಆಸ್ಪತ್ರೆ ಸಿಬ್ಬಂದಿಯ ಬಳಿ ಸ್ವತಃ ಮಾತನಾಡಿ ಸ್ಟ್ರೆಚರ್ ಕೇಳಿದ್ದಾರೆ. ಇದನ್ನು ಆಸ್ಪತ್ರೆಯಲ್ಲಿ ಕೆಲಸ ಮಾಡುವ ಭಾರತಿಬಾಯಿ ಎಂಬವರು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಅಪಘಾತ ಸ್ಥಳದಲ್ಲಿ ಶರತ್ ಇರುವ ಚಿತ್ರಗಳು ಸಾಕಷ್ಟಿದ್ದು, ಅಪಘಾತದ ಸ್ಥಳದಲ್ಲಿ ಆತ ಇದ್ದ ಮತ್ತು ಅಪಘಾತದಲ್ಲಿ ಮೃತಪಟ್ಟವರು ಆತನ ಕಡೆಯವರೇ ಎಂಬುದು ಸಾಬೀತಾಗಿದೆ.
ಒಟ್ಟಲ್ಲಿ ಶರತ್ ಅಪಘಾತ ಮಾಡಿಲ್ಲದೆ ಇರಬಹುದು. ಆದರೆ, ಅಪಘಾತಕ್ಕೂ ಆತನಿಗೂ ಸಂಬಂಧ ಇರುವುದು ಮಾತ್ರ ಖಚಿತ. ಆದರೂ, ‘ಆತ ಸ್ಥಳದಲ್ಲಿ ಇರಲಿಲ್ಲ. ಈ ಅಪಘಾತಕ್ಕೂ ಆತನಿಗೂ ಸಂಬಂಧವೇ ಇಲ್ಲ’ ಎಂದು ಆರ್.ಅಶೋಕ್ ಹಾಗೂ ಪೊಲೀಸರು ವಾದಿಸುತ್ತಿರುವುದೇಕೆ ಗೊತ್ತೆ?

ಸಚಿವ ಆರ್.ಅಶೋಕ್‍ಗೇಕೆ ಭಯ?

ಇದೊಂದು ಅಪಘಾತ ಪ್ರಕರಣ. ಅಲ್ಲದೆ, ಹೇಗೆ ನೋಡಿದರೂ ಅಪಘಾತದ ಸಂದರ್ಭದಲ್ಲಿ ಶರತ್ ಅಪಘಾತಕ್ಕೊಳಗಾದ ಕಾರನ್ನು ಓಡಿಸಿರಲಿಲ್ಲ ಎಂಬುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ. ಏಕೆಂದರೆ ಅವರು ಕಾರು ಚಲಾಯಿಸಿದ್ದರೆ, ಕನಿಷ್ಟ ಸಣ್ಣ ಗಾಯಗಳಾದರೂ ಆಗಬೇಕಿತ್ತು.
ಹೀಗಾಗಿ ಈ ಪ್ರಕರಣದಲ್ಲಿ ಶರತ್ ಓರ್ವ ಅಪರಾಧಿ ಎಂದು ಹೇಳಲು ಯಾವುದೇ ಸಾಕ್ಷಿ ಪುರಾವೆಗಳಿಲ್ಲ. ಆದರೂ ಅಪಘಾತ ಪ್ರಕರಣ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾದ ನಂತರದ ಬೆಳವಣಿಗೆಯಲ್ಲಿ ಸಚಿವ ಆರ್.ಅಶೋಕ್ ಅಷ್ಟೊಂದು ಗಾಬರಿಗೊಳಗಾದದ್ದು ಏಕೆ? ಗೊಂದಲದ ಹೇಳಿಕೆ ನೀಡಿದ್ದು ಏಕೆ? ಎಂಬ ಪ್ರಶ್ನೆಗಳು ಉದ್ಭವವಾಗುತ್ತದೆ.

ಅಸಲಿಗೆ ಶರತ್‍ಗೂ ಶಾಸಕ ಹ್ಯಾರಿಸ್ ಮಗ ನಲಪಾಡ್‍ಗೂ ತುಂಬಾ ವ್ಯತ್ಯಾಸವೇನಿಲ್ಲ. ಹೈಪ್ರೊಫೈಲ್ ರಾಜಕಾರಣಿಗಳ ಇಬ್ಬರೂ ಮಕ್ಕಳೂ ಪುಂಡರೇ ಎಂದು ಹೇಳುತ್ತವೆ ಅವರ ಹತ್ತಿರದ ಮೂಲಗಳು. ನಲಪಾಡ್ ಪುಂಡಾಟಿಕೆ ಎರಡು ವರ್ಷಗಳ ಹಿಂದೆಯೇ ಬೆಳಕಿಗೆ ಬಂದಿದ್ದರೆ, ಶರತ್ ಹೆಸರು ಈಗ ಮುನ್ನೆಲೆಗೆ ಬರುತ್ತಿದೆ.

ಒಂದು ವೇಳೆ ಅಪಘಾತಕ್ಕೂ ಶರತ್‍ಗೂ ಸಂಬಂಧ ಇದೆ ಎಂಬ ವಿಚಾರ ಬಹಿರಂಗವಾದರೆ, ದೃಶ್ಯ ಮಾಧ್ಯಮಗಳು ನಲಪಾಡ್ ಪ್ರಕರಣದಂತೆ ಶರತ್ ಬೆನ್ನು ಬೀಳುತ್ತವೇನೋ? ತನ್ನ ಮಗನ ಚಾರಿತ್ರ್ಯ ವಧೆಯಾಗುತ್ತೋ ಏನೋ? ಎಂಬ ಭಯಕ್ಕೆ ಆರ್.ಅಶೋಕ್ ಇಂತಹ ಗೊಂದಲದ ಹೇಳಿಕೆ ನೀಡುತ್ತಿದ್ದಾರೆ. ಅಲ್ಲದೆ, ಪೊಲೀಸ್ ವ್ಯವಸ್ಥೆಯನ್ನು ಬಳಸಿಕೊಂಡು ಪ್ರಕರಣದ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಒಟ್ಟಿನಲ್ಲಿ ಈ ಹೈ ಪ್ರೊಫೈಲ್ ಅಪಘಾತ ಪ್ರಕರಣದಲ್ಲಿ ಅನಾಮತ್ತಾಗಿ 18 ವರ್ಷದ ರವಿನಾಯ್ಕ್ ತನ್ನ ಪ್ರಾಣ ಕಳೆದುಕೊಂಡಿದ್ದಾನೆ. ತನ್ನದಲ್ಲದ ತಪ್ಪಿಗೆ ಮೃತಪಟ್ಟಿದ್ದಾನೆ. ಆತ ಮೃತಪಟ್ಟು ಒಂದು ವಾರ ಕಳೆದರೂ ಈವರೆಗೆ ಯಾರೂ ಆತನ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ನೀಡುವ ಕೆಲಸಕ್ಕೆ ಮುಂದಾಗಿಲ್ಲ. ಕನಿಷ್ಟ ಪರಿಹಾರವನ್ನೂ ನೀಡಿಲ್ಲ. ಇದ್ದೊಬ್ಬ ಮಗನನ್ನು, ಮನೆಗೆ ಆಧಾರವಾಗಿದ್ದವನನ್ನು ಕಳೆದುಕೊಂಡಿರುವ ಬಡ ಕುಟುಂಬ ಇದೀಗ ಅಕ್ಷರಶಃ ಬೀದಿ ಪಾಲಾಗಿದೆ.

ಇನ್ನು ಒಂದು ವಾರದಲ್ಲಿ ಈ ಪ್ರಕರಣದ ತನಿಖೆಯು ಯಾರ ಗಮನಕ್ಕೂ ಬಾರದಂತೆ ಮುಗಿದು ಹೋಗುತ್ತದೆ. ಆ ಕೆಲಸವನ್ನು ಪೊಲೀಸ್ ಇಲಾಖೆ ಅಚ್ಚುಕಟ್ಟಾಗಿ ಮಾಡುತ್ತದೆ ಎಂಬುದರಲ್ಲಿ ಯಾವುದೇ ಸಂಶಯ ಇಲ್ಲ. ಆದರೆ, ನಲಪಾಡ್ ಪ್ರಕರಣದಲ್ಲಿ ದಕ್ಷತೆ ಮೆರೆದ ಪೊಲೀಸ್ ಇಲಾಖೆ ಶರತ್ ಪ್ರಕರಣದಲ್ಲಿ ಏಕೆ ಕೈಕಟ್ಟಿ ಕುಳಿತಿದೆ?. ಮೃತ ರವಿನಾಯ್ಕ್ ಸಾವಿಗೆ ಇವರು ನೀಡುವ ನ್ಯಾಯ ಏನು? ಒಂದು ಪ್ರಕರಣದಲ್ಲಿ ಅಪರಾಧಿಯನ್ನು ಮೊದಲೇ ತೀರ್ಮಾನಿಸಿಬಿಟ್ಟಿದ್ದ ಪೊಲೀಸ್, ಮಾಧ್ಯಮಗಳು ಇನ್ನೊಂದರಲ್ಲಿ ಮೊದಲೇ ನಿರಪರಾಧಿ ಎಂತಲೂ ತೀರ್ಮಾನಿಸಿಬಿಟ್ಟರೆ? ಎಂಬ ಪ್ರಶ್ನೆಗಳು ಉಳಿದೇ ಉಳಿಯುತ್ತವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣಾ ಆಯೋಗ ಪಕ್ಷಾತೀತವಾಗಿ ನಡೆದುಕೊಳ್ಳುತ್ತಿಲ್ಲ: ಪಿಣರಾಯಿ ವಿಜಯನ್

0
ಪ್ರಧಾನಮಂತ್ರಿ ನರೇಂದ್ರ ಮೋದಿ ಇತ್ತೀಚೆಗೆ ಮುಸ್ಲಿಮರ ವಿರುದ್ಧ ನೀಡಿದ್ದ ಹೇಳಿಕೆಗಳಿಗೆ ಸಂಬಂಧಿಸಿದಂತೆ ತಕ್ಷಣ ಕ್ರಮ ಕೈಗೊಳ್ಳುವ ಮೂಲಕ ಚುನಾವಣಾ ಆಯೋಗವು ಪಕ್ಷಾತೀತವಾಗಿ ವರ್ತಿಸದಿರುವುದು ದುರದೃಷ್ಟಕರ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಮೋದಿಯ...