ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಅವರ ಕುಟುಂಬವು ತಮ್ಮ ನಿವಾಸದಲ್ಲಿ ದೀಪ ಹಚ್ಚಿ ಕುಳಿತಿರುವ ಚಿತ್ರವನ್ನು ಟೈಮ್ಸ್ ಆಫ್ ಇಂಡಿಯಾದ ಕೊಚ್ಚಿ ಆವೃತ್ತಿಯು ಇತ್ತೀಚೆಗೆ ತಮ್ಮ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ಟ್ವೀಟ್ ಮಾಡಿದೆ. COVID-19 ಸಾಂಕ್ರಾಮಿಕ ರೋಗವು ತಂದಿರುವ ಕತ್ತಲೆಯನ್ನು ಹೋಗಲಾಡಿಸಲು 2020 ರ ಏಪ್ರಿಲ್ 5 ರಂದು ರಾತ್ರಿ 9ಗಂಟೆಗೆ ಲೈಟ್ ಆರಿಸಿ ದೀಪ ಬೆಳಗಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರ ನೀಡಿದ ಕರೆಗೆ ಪಿಣರಾಯಿ ವಿಜಯನ್ ಭಾಗವಹಿಸುತ್ತಿದ್ದಾರೆ ಎಂದು ಆ ಟ್ವೀಟ್ಗೆ ಶೀರ್ಷಿಕೆ ನೀಡಲಾಗಿದೆ.
ಅದೇ ರೀತಿ ಭಾರತೀಯ ಜನತಾ ಪಕ್ಷದ ತಮಿಳುನಾಡಿನ ಯುವ ವಿಭಾಗದ ಉಪಾಧ್ಯಕ್ಷ ಎಸ್.ಜಿ.ಸೂರ್ಯ ಅವರು ಪಿಣರಾಯಿ ವಿಜಯನ್ ಮತ್ತು ಪುದುಚೇರಿ ಮುಖ್ಯಮಂತ್ರಿ ವೇಲು ನಾರಾಯಣಸಾಮಿಯವರ ದೀಪ ಹಿಡಿದಿರುವ ಚಿತ್ರಗಳನ್ನು ಕೊಲಾಜ್ ಮಾಡಿ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
“ಕೇವಲ ಈ ಎರಡು ಚಿತ್ರಗಳು ಪ್ರಧಾನ ಮಂತ್ರಿ ನರೇಂದ್ರಮೋಡಿಯವರ 9 ನಿಮಿಷಗಳು ದೀಪ ಹಚ್ಚುವ ಕರೆಯ ಯಶಸ್ಸನ್ನು ತೋರಿಸುತ್ತವೆ. ಕಮ್ಯುನಿಸ್ಟ್ನ ಏಕೈಕ ಸಿಎಂ ಕೇರಳ ಪಿಣರಾಯಿ ವಿಜಯನ್ ಮತ್ತು ಬಿಜೆಪಿಯ ತೀವ್ರ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಪಾಂಡಿಚೆರಿ ಸಿಎಂ ನಾರಾಯಣಸಾಮಿ ಇಂದು ಪ್ರಧಾನಿ ಮೋದಿ ಅವರೊಂದಿಗೆ ನಿಂತಿದ್ದಾರೆ! ಇದಕ್ಕಿಂತ ಬೇರೆ ಯಾವುದೂ ನಿಮಗೆ ಉತ್ತಮ ಕಥೆಯನ್ನು ಹೇಳುವುದಿಲ್ಲ!” ಎಂದು ಚಿತ್ರದ ಜೊತೆ ಅವರು ಬರೆದಿದ್ದಾರೆ.
ಆದರೆ ಈ ಎರಡು ಸುದ್ದಿಗಳು ಸಹ ಸುಳ್ಳು ಸುದ್ದಿಗಳಾಗಿವೆ. ಪಿಣರಾಯಿ ವಿಜಯನ್ ಮತ್ತು ನಾರಾಯಣಸಾಮಿಯವರು ಏಪ್ರಿಲ್ 5ರಂದು ತಮ್ಮ ನಿವಾಸಗಳ ದೀಪ ಆರಿಸಿ ಕ್ಯಾಂಡಲ್ ಹಚ್ಚಿದ್ದು ಬೇರೆಲ್ಲಿಯೂ ವರದಿಯಾಗಿಲ್ಲ ಎಂದು ಬೂಮ್ ಲೈವ್ ಫ್ಯಾಕ್ಟ್ಚೆಕ್ ನಡೆಸಿ ತಿಳಿಸಿದೆ.
ಈ ವಿಚಾರದ ಕುರಿತು ಬಿಜೆಪಿಯ ಎಸ್.ಜಿ ಸೂರ್ಯರನ್ನು ನುರಾರು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಸುಳ್ಳು ಸುದ್ದಿಗಳನ್ನು ಪ್ರಕಟಿಸುವ ಮುನ್ನವೇ ಪರಿಶೀಲಿಸಬೇಕು ಎನ್ನುವ ಕಾಮನ್ ಸೆನ್ಸ್ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಅವರು ನಾನು ಕೊಚ್ಚಿಯ ಟೈಮ್ಸ್ ಆಫ್ ಇಂಡಿಯಾದ ವರದಿಯನ್ನು ಟ್ವೀಟ್ ಮಾಡಿದ್ದೇನೆ. ಅದು ತಪ್ಪಾಗಿದ್ದರೆ ನೀವು ನನ್ನನ್ನು ದೂರಬೇಡಿ, ಟೈಮ್ಸ್ ಆಫ್ ಇಂಡಿಯಾವನ್ನು ದೂರಿ ಎಂದು ಜಾರಿಕೊಳ್ಳಲು ಪ್ರಯತ್ನಿಸಿದ್ದಾರೆ. ಇನ್ನೊಂದು ಕಡೆ ಟೈಮ್ಸ್ ಆಫ್ ಇಂಡಿಯಾ ಆ ಚಿತ್ರವನ್ನು ಡಿಲಿಟ್ ಮಾಡಿದೆ.
ಪಿಣರಾಯಿ ವಿಜಯನ್ರವರ ಫೋಟೊದ ಕೀವರ್ಡ್ ಆಧಾರದಲ್ಲಿ ರಿವರ್ಸ್ ಸರ್ಚ್ ಮಾಡಿದಾಗ ಅದು 2018ರ ಫೋಟೊ ಎಂದು ಕಂಡುಬಂದಿದೆ. ಕ್ಲಿಫ್ ಹೌಸ್ ಎಂದು ಕರೆಯಲ್ಪಡುವ ತನ್ನ ಅಧಿಕೃತ ನಿವಾಸದ ವರಾಂಡಾದಲ್ಲಿ ವಿಜಯನ್ರವರು ತನ್ನ ಹೆಂಡತಿ, ಮಗಳು ಮತ್ತು ಮೊಮ್ಮಗನೊಂದಿಗೆ ಕುಳಿತಿರುವ ಚಿತ್ರ ಇದಾಗಿದೆ.
2018ರಲ್ಲಿ ಅರ್ಥ್ ಅವರ್ ಎಂಬ ಕಾರ್ಯಕ್ರಮ ನಡೆದಾಗ ತೆಗೆದ ಚಿತ್ರ ಅದಾಗಿದ್ದು ಈ ಚಿತ್ರವನ್ನು ಮಾರ್ಚ್ 25, 2018 ರಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ನ ಕೇರಳ ಆವೃತ್ತಿಯು ಪ್ರಕಟಿಸಿದೆ. ಶೀರ್ಷಿಕೆಯು “ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಪತ್ನಿ ಕಮಲಾ, ಮಗಳು ವೀಣಾ ಮತ್ತು ಮೊಮ್ಮಗ ಇಶಾನ್ ಅರ್ಥ್ ಅವರ್ ಪ್ರಯುಕ್ತ ಮೇಣದಬತ್ತಿಯ ಬೆಳಕಿನಲ್ಲಿ ಕುಳಿತುಕೊಳ್ಳುತ್ತಾರೆ ಎಂದು ಬರೆದಿದೆ.