HomeUncategorizedಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಭಾರತದ ಮುಸ್ಲಿಮರು ಏನು ಮಾಡುತ್ತಿದ್ದರು ಗೊತ್ತಾ?

ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಭಾರತದ ಮುಸ್ಲಿಮರು ಏನು ಮಾಡುತ್ತಿದ್ದರು ಗೊತ್ತಾ?

‘ಸಾರೇ ಜಹಾಂಸೆ ಅಚ್ಛಾ’ ಯಾರಿಗೆ ತಾನೇ ಗೊತ್ತಿಲ್ಲ. ಧರ್ಮ, ಗಡಿ, ಪ್ರಾಂತ್ಯಗಳಾಚೆಗೂ ಪ್ರತಿಯೊಬ್ಬರೂ ಹಾಡುವ ಗುನುಗುವ ದೇಶಭಕ್ತಿ ಗೀತೆಯಿದು. ಈ ಗೀತೆಯನ್ನು ಬರೆದವರು ‘ಮಹಮ್ಮದ್ ಇಕ್ಬಾಲ್’ ಎಂಬ ಮುಸ್ಲಿಂ ಉರ್ದು ಕವಿ.

- Advertisement -
- Advertisement -

| ಪರಿಮಳಾ ವಾರಿಯರ್ |

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆಯಲ್ಲಿ ಬ್ರಿಟಿಷರ ವಿರುದ್ಧ ತೊಡೆತಟ್ಟಿ ನಿಂತು ಬಡಿದಾಡಿದ ವೀರಕಲಿಗಳ ಬಗ್ಗೆ ನಾವೆಲ್ಲರೂ ಪಠ್ಯಪುಸ್ತಕಗಳಲ್ಲಿ ಓದಿದ್ದೇವೆ. ಗಾಂಧಿ, ನೆಹರೂ, ನೇತಾಜಿ ಇನ್ನಿತ್ಯಾದಿ ಜನಪ್ರಿಯ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ನಮಗೆಲ್ಲರಿಗೂ ಗೊತ್ತು. ಆದರೆ ಬ್ರಿಟಿಶರ ವಿರುದ್ಧದ ಹೋರಾಟಗಳಲ್ಲಿ ಭಾಗವಹಿಸಿಯೂ ನೇಪಥ್ಯಕ್ಕೆ ಸರಿಸಲ್ಪಟ್ಟ ಇದೇ ನೆಲದ ಮುಸ್ಲಿಂ ಹೋರಾಟಗಾರರ ಬಗ್ಗೆ ಭಾರತದ ಚರಿತ್ರಕಾರರು ಹೆಚ್ಚಾನೆಚ್ಚು ಬರೆದಿರುವುದು ದಾಖಲಿಸಿರುವುದು ತೀರಾ ಕಡಿಮೆ.

ಜೊತೆಗೆ ಸಂಘ ಪರಿವಾರದ ಹಿನ್ನೆಲೆಯ ಪ್ರಕಟಣಾ ಸಂಸ್ಥೆಗಳು ಮುನ್ನೆಲೆಗೆ ಬಂದು ಪ್ರಕಟಿಸಿದ ಇತಿಹಾಸದ ಪುಸ್ತಕಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರೆಂದರೆ ಹಿಂದೂ ಸಂಘಟನೆಗಳ ಜೊತೆಗೆ ಗುರುತಿಸಿಕೊಂಡವರೆಂದು ತಪ್ಪಾಗಿ ತಿರುಚಿದ್ದೂ ಮುಸ್ಲಿಂ ಹೋರಾಟಗಾರರು ಹಿನ್ನೆಲೆಗೆ ಸರಿಯಲು ಕಾರಣವಾಗಿದೆ. ಹೀಗೆ ಹಿನ್ನೆಲೆಗೆ ಒತ್ತಲ್ಪಟ್ಟ ಮುಸ್ಲಿಂ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಅವರು ಸ್ವಾತಂತ್ರ್ಯ ಸಂಗ್ರಾಮಕ್ಕೆ ಕೊಟ್ಟ ಕೊಡುಗೆಗಳು ಕಡಿಮೆಯೇನಲ್ಲ.

ಬಂಗಾಲದ ಮುಸ್ಲಿಂ ಅರಸ ಸಿರಾಜ್ ಉದ್ ದೌಲನ 1757ರ ಪ್ಲಾಸಿ ಕದನದಿಂದ ಶುರುವಾಗುವ ಬ್ರಿಟಿಶರ ವಿರುದ್ಧದ ಬಂಡಾಯವು ನಂತರದ ಕಾಲಘಟ್ಟದಲ್ಲಿ ಹಲವು ಕವಲುಗಳಾಗಿ ಬ್ರಿಟಿಶರೊಡನೆ ನಡೆದ ಸಂಘರ್ಷಗಳಿಗೆ ಮುನ್ನುಡಿ ಬರೆಯುತ್ತದೆ. 1857ರಿಂದ 58ರವರೆಗೆ ದೆಹಲಿ ಪ್ರಾಂತ್ಯದಲ್ಲಿ ಬ್ರಿಟಿಶರೆದುರು ಬಂಡೆದ್ದ ‘ಅಸ್ಗರಿ ಬೇಗಂ’ ಎಂಬ ಮುಸ್ಲಿಂ ಮಹಿಳೆ ಬ್ರಿಟಿಶರ ವಿರುದ್ಧ ಸಾರಿದ ವೀರೋಚಿತ ಯುದ್ಧದಲ್ಲಿ ಜೀವತ್ಯಾಗ ಮಾಡುತ್ತಾಳೆ. ಸೆರೆಸಿಕ್ಕ ‘ಅಸ್ಗರಿ ಬೇಗಂ’ಳನ್ನು ಬ್ರಿಟಿಶರು ಜೀವಂತವಾಗಿ ಸುಟ್ಟು ಹಾಕುತ್ತಾರೆ.

ಈ ಯುದ್ಧದಲ್ಲಿ 27 ಸಾವಿರಕ್ಕೂ ಹೆಚ್ಚು ಮುಸ್ಲಿಂ ಬಂಡಾಯಗಾರರನ್ನು ಬ್ರಿಟಿಶರ ಸೇನೆ ಕೊಲ್ಲುತ್ತದೆ.
1857ರಲ್ಲಿ ‘ದೆಹಲಿ ಅಖಬಾರ್’ ಪತ್ರಿಕೆಯಲ್ಲಿ ಬ್ರಿಟಿಶರ ದಬ್ಬಾಳಿಕೆಗಳ ಬಗ್ಗೆ ಬರೆಯುತ್ತ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೋತ್ಸಾಹ ನೀಡುತ್ತಿದ್ದ ಆ ಪತ್ರಿಕೆಯ ಸಂಪಾದಕ ‘ಮಹಮ್ಮದ್ ಬಖಾರ್’ ಎಷ್ಟರಮಟ್ಟಿಗೆ ಬ್ರಿಟಿಶರ ನಿದ್ದೆಗೆಡಿಸಿದ್ದರೆಂದರೆ ಅವರನ್ನು ನಿವಾರಿಸಿಕೊಳ್ಳದೆ ದೆಹಲಿಯಲ್ಲಿ ಉಳಿಯುವುದೇ ಬ್ರಿಟಿಶರಿಗೆ ಅಸಾಧ್ಯವೆನ್ನುವಷ್ಟರ ಮಟ್ಟಿಗೆ.

ಕೊನೆಗೆ ಮಹಮ್ಮದ್ ಬಖಾರ್‌ರನ್ನು ‘ಜನರಲ್ ಹಡ್ಸನ್’ ಎಂಬ ಬ್ರಿಟಿಶ್ ಅಧಿಕಾರಿ ಮರಾಮೋಸದಿಂದ ಬಂಧಿಸಿ ಜೈಲಿಗೆ ಹಾಕುತ್ತಾನೆ. ‘ಬಖಾರ್’ ಬಿಡುಗಡೆಗೆ ಸ್ವಾತಂತ್ರ್ಯ ಸೇನಾನಿಗಳಿಂದ ಆಗ್ರಹ ಜಾಸ್ತಿಯಾದಾಗ ‘ಹಡ್ಸನ್’ ಬಖಾರ್‌ರನ್ನು ಜೈಲಿನಲ್ಲೆ ಗುಂಡಿಟ್ಟು ಕೊಲ್ಲುತ್ತಾನೆ. ಬ್ರಿಟಿಶರಿಗೆ ತಮ್ಮ ಲೇಖನಿ, ಲೇಖನಗಳಿಂದಲೇ ಸಿಂಹಸ್ವಪ್ನವಾಗಿದ್ದ ಬಖಾರ್ ಹೀಗೆ ಹುತಾತ್ಮರಾಗುತ್ತಾರೆ.

ಇದೇ ಸಮಯದಲ್ಲಿ ದೇಶಾದ್ಯಂತ ಮುಸ್ಲಿಮ್ ಅರಸೊತ್ತಿಗೆಗಳು ಮತ್ತು ಹೋರಾಟಗಾರರು ಬ್ರಿಟಿಶರ ವಿರುದ್ಧ ಬಂಡಾಯದ ಬಾವುಟ ಹಾರಿಸಿ ಬ್ರಿಟಿಶರ ಸೈನ್ಯ, ಆಯುಧಾಗಾರ, ಅಧಿಕಾರಿಗಳ ಮೇಲೆ ಒಂದು ಕಡೆಯಿಂದ ಧಾಳಿಯಿಡಲು ಶುರುವಿಡುತ್ತಾರೆ. ಬ್ರಿಟಿಶರು ಈ ಕಾಲಘಟ್ಟದ ಬಂಡಾಯವನ್ನು ಮುಸ್ಲಿಂದಂಗೆಯೆಂದೇ ಕರೆಯುತ್ತಾರೆ.

ಈ ಮುಸ್ಲಿಂದಾಳಿಗಳಿಂದ ತಪ್ಪಿಸಿಕೊಳ್ಳಲು ಮುಸ್ಲಿಮರನ್ನು ಭಾರತದ ಹಿಂದೂಗಳಿಂದ ಪ್ರತ್ಯೇಕಗೊಳಿಸುವುದೇ ಅತ್ಯುತ್ತಮ ಉಪಾಯವೆಂದೆಣಿಸಿದ ಬ್ರಿಟಿಶರು ಮುಸ್ಲಿಮರನ್ನು ಹಿಂದೂಗಳ ವಿರುದ್ಧ ಎತ್ತಿಕಟ್ಟುವ ಮೊದಲ ಪ್ರಯತ್ನಕ್ಕೆ ಕೈಯಿಡುತ್ತಾರೆ. ಬ್ರಿಟಿಶ್ ಅಧಿಕಾರಿ ‘ವಿಲಿಯಂ ಹಂಟ್’ ಈ ನಿಟ್ಟಿನಲ್ಲಿ ಮುಸ್ಲಿಮರು ಮತ್ತವರ ದೊರೆಗಳನ್ನು ಕೆಟ್ಟದಾಗಿ ಚಿತ್ರಿಸಿ ಅವರ ಆಳ್ವಿಕೆಯಲ್ಲಿ ಭಾರತ ನರಳುತ್ತಿತ್ತು, ಅವರಿಂದ ಮುಕ್ತಿ ಕೊಡಿಸಲು ಬ್ರಿಟನ್ನಿನಿಂದ ಬಂದ ದೈವಸಂಭೂತರಾಗಿ ಬ್ರಿಟಿಶರನ್ನು ಚಿತ್ರಿಸಿ ‘ಇಂಡಿಯನ್ ಮುಸ್ಲಿಮ್ಸ್’ ಎಂಬ ಪುಸ್ತಕವೊಂದನ್ನು ಬರೆದು ವಿಲಿಯಂ ಹಂಟ್ ಪ್ರಚಾರಕ್ಕೆ ಬಿಡುತ್ತಾನೆ.

ಭಾರತದ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ದೊಡ್ಡಮಟ್ಟದಲ್ಲಿ ಬಿತ್ತಿದ ಚಾರಿತ್ರಿಕ ಅಪನಂಬಿಕೆಯ ಬೀಜವಿದು. ಇದೇ ವಾದ ಮತ್ತು ವಾದಸರಣಿಯನ್ನು ಬ್ರಿಟಿಶರ ಆಸ್ಥಾನ ಗುಲಾಮರಾಗಿ ಕಂಗೊಳಿಸುತ್ತಿದ್ದ ಸಂಘಿಗಳು ದೊಡ್ಡಮಟ್ಟದಲ್ಲಿ ಜನರ ನಡುವೆ ಹರಿಯಬಿಟ್ಟರು. ಬ್ರಿಟಿಶರ ವಿರುದ್ಧ ಹೋರಾಡಿ ನಿಮ್ಮ ಶಕ್ತಿ ವೇಸ್ಟ್ ಮಾಡಿಕೊಳ್ಳಬೇಡಿ ಅದನ್ನು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು-ಕಮ್ಯುನಿಸ್ಟರ ವಿರುದ್ಧ ಹೋರಾಡಲು ಬಳಸಿ ಎಂದು ಬ್ರಿಟಿಶರ ಆಸ್ಥಾನ ಗುಲಾಮರಾಗಿದ್ದ ಸಂಘಿಗಳು ಕರೆಕೊಟ್ಟರು. ಸ್ವಾತಂತ್ರ್ಯ ಹೋರಾಟದೊಳಗೂ ಧರ್ಮದ ಆಧಾರದಲ್ಲಿ ಎರಡು ಗುಂಪಾಗಿ ಒಡೆಯುವಲ್ಲಿ ಬ್ರಿಟಿಶ್ ಮತ್ತವರ ಗುಲಾಮರ ಪಡೆ ಯಶಸ್ವಿಯಾಯಿತು.

ಇವತ್ತು ಇದೇ ಸಂಘಿ ಗುಲಾಮರ ಪಡೆಯು ಹೆಮ್ಮೆಯಿಂದ ಜಪಿಸುವ ರಾಷ್ಟ್ರೀಯತೆಯ ದ್ಯೋತಕಗಳಾದ ಘೋಷಣೆಗಳನ್ನೂ ಸಹ ಹುಟ್ಟು ಹಾಕಿದ್ದು ಮತ್ತು ಸ್ವಾತಂತ್ರ್ಯ ಹೋರಾಟಗಾರರ ನಡುವೆ ಅದನ್ನು ಜನಪ್ರಿಯಗೊಳಿಸಿದ್ದು ಮುಸ್ಲಿಮರು ಎಂಬುದಕ್ಕೆ ಇತಿಹಾಸದಲ್ಲೇ ಹಲವಾರು ಸಾಕ್ಷಿಗಳಿವೆ. ‘ಜೈ ಹಿಂದ್’ ಈ ಘೋಷಣೆಯಿಲ್ಲದೆ ಅಕ್ಷರಶಃ ಯಾವ ಭಾಷಣವೂ ಮುಕ್ತಾಯವಾಗುವುದಿಲ್ಲ.

ಈ ಜೈಹಿಂದ್ ಘೋಷಣೆಯನ್ನು ದೇಶಕ್ಕೆ ಕೊಟ್ಟಿದ್ದು ನೇತಾಜಿ ಸುಭಾಶ್ ಚಂದ್ರ ಬೋಸ್ ಎಂದೇ ಮುಕ್ಕಾಲುಪಾಲು ಭಾರತೀಯರು ನಂಬಿದ್ದಾರೆ. ಆದರೆ ಸತ್ಯ ವಿಷಯ ಬೇರೆಯದೇ ಇದೆ. ಜೈ ಹಿಂದ್ ಘೋಷಣೆಯನ್ನು ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕೊಡುಗೆಯಾಗಿ ಕೊಟ್ಟಿದ್ದು ನೇತಾಜಿಯ ‘ಆಜಾದ್ ಹಿಂದ್ ಫೌಜ್’ ಸೇನೆಯಲ್ಲಿದ್ದ ಓರ್ವ ಮುಸ್ಲಿಂ ವ್ಯಕ್ತಿ. ಇವರ ಹೆಸರು ‘ಅಬೀದ್ ಹಸನ್ ಸಫ್ರಾನಿ’.

ಜರ್ಮನಿಯಲ್ಲಿ ಎಂಜಿನಿಯರಿಂಗ್ ಕಲಿಯುತ್ತಿದ್ದ ‘ಸಫ್ರಾನಿ’ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಜರ್ಮನ್ನರ ನೆರವು ಬಯಸಿ ಜರ್ಮನಿಯಲ್ಲಿದ್ದ ನೇತಾಜಿಯವರ ವಿಚಾರಧಾರೆಯನ್ನು ಒಪ್ಪಿ ಓದುತ್ತಿದ್ದ ಎಂಜಿನಿಯರಿಂಗ್ ಪದವಿಯನ್ನು ತ್ಯಜಿಸಿ ನೇತಾಜಿಯವರ ಸೆಕ್ರೆಟರಿ ಮತ್ತು ಭಾಷಾಂತರಕಾರರಾಗಿ ಭಾರತಕ್ಕೆ ಬರುತ್ತಾರೆ. ನಂತರ ನೇತಾಜಿಯವರ ಆಪ್ತವಲಯಕ್ಕೆ ಸೇರುವ ಸಫ್ರಾನಿ ನೇತಾಜಿಯವರ ಸೈನ್ಯದಲ್ಲಿ ಮೇಜರ್ ಆಗಿ ಸೇವೆ ಸಲ್ಲಿಸುತ್ತಾರೆ.

ಈ ಸಂದರ್ಭದಲ್ಲಿ ಪರಸ್ಪರರನ್ನು ಗ್ರೀಟ್ ಮಾಡಲು ನೇತಾಜಿಯವರ ಸೈನ್ಯಕ್ಕೆ ‘ಜೈಹಿಂದ್’ ಘೋಷವನ್ನು ಪರಿಚಯಿಸುತ್ತಾರೆ. ಇದು ನಂತರ ಸ್ವಾತಂತ್ರ್ಯ ಹೋರಾಟಗಾರರ ನೆಚ್ಚಿನ ಘೋಷಪದವಾಗಿ ಜನಪ್ರಿಯಗೊಳ್ಳುತ್ತದೆ. ಇವತ್ತಿಗೂ ಜನಪ್ರಿಯವಾಗಿರುವ ಈ ‘ಜೈಹಿಂದ್’ ಘೋಷಪದದ ಮೂಲಕರ್ತೃ ‘ಅಬಿದ್ ಹಸನ್ ಸಫ್ರಾನಿ.’

ಅಬೀದ್ ಹಸನ್ ಸಫ್ರಾನಿ

‘ಸಾರೇ ಜಹಾಂಸೆ ಅಚ್ಛಾ’ ಯಾರಿಗೆ ತಾನೇ ಗೊತ್ತಿಲ್ಲ. ಧರ್ಮ, ಗಡಿ, ಪ್ರಾಂತ್ಯಗಳಾಚೆಗೂ ಪ್ರತಿಯೊಬ್ಬರೂ ಹಾಡುವ ಗುನುಗುವ ದೇಶಭಕ್ತಿ ಗೀತೆಯಿದು. ಈ ಗೀತೆಯನ್ನು ಬರೆದವರು ‘ಮಹಮ್ಮದ್ ಇಕ್ಬಾಲ್’ ಎಂಬ ಮುಸ್ಲಿಂ ಉರ್ದು ಕವಿ.

ಮಹಮ್ಮದ್ ಇಕ್ಬಾಲ್

ಅಲ್ಲಾಮ ಇಕ್ಬಾಲ್ ಎಂದೂ ಹೆಸರಾಗಿರುವ ಈ ಕವಿ ಪರ್ಶಿಯನ್ ಮತ್ತು ಉರ್ದು ಭಾಷೆಯಲ್ಲಿ ಕವಿತೆಗಳನ್ನು ಬರೆಯುತ್ತಿದ್ದವರು. ದೇಶ ವಿಭಜನೆಯಾದ ನಂತರ ಪಾಕಿಸ್ತಾನ ಸರ್ಕಾರವು ಇವರನ್ನು ರಾಷ್ಟ್ರೀಯ ಕವಿ ಎಂದು ಕರೆಯಿತು. 1906ನೇ ಇಸವಿಯಲ್ಲಿ ಯೂನಿವರ್ಸಿಟಿ ಆಫ್ ಕೇಂಬ್ರಿಡ್ಜ್ನಲ್ಲಿ ಆರ್ಟ್ಸ್ ವ್ಯಾಸಂಗ ಮುಗಿಸಿದ್ದ ಇಕ್ಬಾಲರು ನಂತರ ಲುಡ್ವಿಗ್‌ನ ಮ್ಯಾಕ್ಸ್ ಮಿಲನ್ ವಿವಿಯಲ್ಲಿ ಡಾಕ್ಟರ್ ಆಫ್ ಫಿಲಾಸಫಿ ವ್ಯಾಸಂಗ ಮಾಡಿದವರು. ವ್ಯಾಸಂಗ ಮುಗಿದ ನಂತರ ಭಾರತಕ್ಕೆ ಬಂದ ಇಕ್ಬಾಲ್ ಸಾಗರೋಪಾದಿಯಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟವನ್ನು ಉತ್ತೇಜಿಸುವ ಹಲವಾರು ಗೀತೆಗಳನ್ನು ಬರೆದು ಜನರ ನಡುವೆ ಜನಪ್ರಿಯಗೊಳಿಸಿದರು. ಅವುಗಳಲ್ಲಿ ಮುಖ್ಯವಾದ ಕವಿತೆಯೇ ‘ಸಾರೇ ಜಹಾಂಸೆ ಅಚ್ಛ, ಹಿಂದೂಸ್ಥಾನ್ ಹಮಾರ’ ಕವಿತೆ.

ಇವರಷ್ಟೇ ಅಲ್ಲದೆ ತಾವು ಬದುಕಿದ್ದ 95 ವರ್ಷಗಳಲ್ಲಿ 45 ವರ್ಷ ಬ್ರಿಟಿಶರ ಜೈಲುಗಳಲ್ಲೇ ಸೆರೆಯಾಳಾಗಿ ಕಳೆದ ಖಾನ್ ಅಬ್ದುಲ್ ಗಫಾರ್ ಖಾನ್, ಸ್ವಾತಂತ್ರ್ಯ ಹೋರಾಟದ ಹಣಕಾಸಿನ ನೆರವಿಗೆಂದು ಗಾಂಧಿಗೆ ತಮಗೆ ಎಷ್ಟು ಹಣದ ಅವಶ್ಯಕತೆಯಿದೆಯೋ ಅಷ್ಟು ಹಣವನ್ನು ಬರೆದುಕೊಳ್ಳಿ ಎಂದು ಬ್ಲಾಂಕ್ ಚೆಕ್ ಕೊಟ್ಟಿದ್ದ ಅಂದಿನ ಬಾಂಬೆಯ ಉದ್ಯಮಿ ಮತ್ತು ಕೋಟ್ಯಧಿಪತಿ ಉಮರ್ ಸುಭಾನಿ, ಹಲವಾರು ಸ್ವಾತಂತ್ರ್ಯ ಹೋರಾಟದ ಗೀತೆಗಳನ್ನು ಬರೆದ ಮೌಲಾನ ಹಸರತ್ ಮೊಹಾನಿ, ಮಜ್ನು ಷಾ ಫಕೀರ್ ನೇತೃತ್ವದಲ್ಲಿ ‘ಫಕೀರ್-ಸನ್ಯಾಸಿ ದಂಗೆ’ಯ ಮೂಲಕ ಬ್ರಿಟಿಶರ ವಿರುದ್ದ ಹೋರಾಡಿದ ಬೆಂಗಾಲಿ ಫಕೀರರು, 1921ರಲ್ಲಿ ಇಂಕ್ವಿಲಾಬ್ ಜಿಂದಾಬಾದ್ ಘೋಷಣೆ ಕೊಟ್ಟ ‘ಹಸ್ರತ್ ಮೊಹಾನಿ’, ಬ್ರಿಟಿಶರೇ ಭಾರತ ಬಿಟ್ಟು ತೊಲಗಿ ಘೋಷಣೆ ಪರಿಚಯಿಸಿದ ‘ಯೂಸುಫ್ ಮೆಹರ್ ಅಲಿ’, ಹೀಗೆ ನೂರಾರು-ಸಾವಿರಾರು ಹೆಸರುಗಳನ್ನು ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಿಂತು ಬಡಿದಾಡಿದವರ ಹೆಸರುಗಳನ್ನು ಉಲ್ಲೇಖಿಸಬಹುದು. ಈ ಎಲ್ಲ ಮುಸ್ಲಿಂ ಹೋರಾಟಗಾರರ ವೀರೋಚಿತ ಹೋರಾಟ ಮತ್ತು ಅವರು ನೀಡಿದ ಸಾಹಿತ್ಯಿಕ ಕೊಡುಗೆಗಾಗಿ ನಾವು ಇವರೆಲ್ಲರನ್ನೂ ನೆನೆಯಲೇಬೇಕು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣಾ ಆಯೋಗ ಪಕ್ಷಾತೀತವಾಗಿ ನಡೆದುಕೊಳ್ಳುತ್ತಿಲ್ಲ: ಪಿಣರಾಯಿ ವಿಜಯನ್

0
ಪ್ರಧಾನಮಂತ್ರಿ ನರೇಂದ್ರ ಮೋದಿ ಇತ್ತೀಚೆಗೆ ಮುಸ್ಲಿಮರ ವಿರುದ್ಧ ನೀಡಿದ್ದ ಹೇಳಿಕೆಗಳಿಗೆ ಸಂಬಂಧಿಸಿದಂತೆ ತಕ್ಷಣ ಕ್ರಮ ಕೈಗೊಳ್ಳುವ ಮೂಲಕ ಚುನಾವಣಾ ಆಯೋಗವು ಪಕ್ಷಾತೀತವಾಗಿ ವರ್ತಿಸದಿರುವುದು ದುರದೃಷ್ಟಕರ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಮೋದಿಯ...