ಜಾಗತೀಕರಣ ಯುಗದಲ್ಲಿ ಅತಿದೊಡ್ಡ ಅಂತರರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಒಂದಾದ ‘ಇಂಡಿಯಾ ಗ್ಲೋಬಲ್ ವೀಕ್ 2020’ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ‘ಇಲ್ಲಿನ ಆರ್ಥಿಕತೆಯು ಈಗಾಗಲೇ ಚಿಗುರುತ್ತಿದೆ, ಭಾರತದಲ್ಲಿ ಹೂಡಿಕೆ ಮಾಡಿ’ ಎಂದು ಜಗತ್ತನ್ನು ಆಹ್ವಾನಿಸಿದ್ದಾರೆ.
“ಎಲ್ಲಾ ಜಾಗತಿಕ ಕಂಪನಿಗಳು ಭಾರತದಲ್ಲಿ ತಮ್ಮ ಬಂಡವಾಳ ಹೂಡಲು ನಾವು ಮುಕ್ತ ಅವಕಾಶವನ್ನು ನೀಡುತ್ತಿದ್ದೇವೆ. ಇಂತಹ ಅವಕಾಶಗಳನ್ನು ನೀಡುವ ಕೆಲವೇ ದೇಶಗಳಲ್ಲಿ ಈಗ ಭಾರತವು ಒಂದಾಗಿದೆ” ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 5,000 ಕ್ಕೂ ಹೆಚ್ಚು ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, “ಕೃಷಿ ಕ್ಷೇತ್ರದಿಂದ ಹಿಡಿದು ರಕ್ಷಣಾ ಕ್ಷೇತ್ರ ಮತ್ತು ಬಾಹ್ಯಾಕಾಶ ಉದ್ಯಮದವರೆಗೆ ಎಲ್ಲಿಯಾದರೂ ಹೂಡಿಕೆ ಮಾಡಿ. ಅಸಾಧ್ಯವೆಂದು ನಂಬಿದ್ದನ್ನು ಸಾಧಿಸುವ ಮನೋಭಾವ ಭಾರತೀಯರಿಗೆ ಇದೆ. ಮತ್ತಷ್ಟು ಜಾಗತಿಕ ಒಳಿತಿಗಾಗಿ, ಸಮೃದ್ಧಿಗೆ ಭಾರತವು ಏನು ಬೇಕಾದರೂ ಮಾಡಲು ಸಿದ್ಧವಾಗಿದೆ. ಇದು ಸುಧಾರಣೆ, ಪರಿವರ್ತನೆಯಾಗುತ್ತಿರುವ ಭಾರತ” ಎಂದು ಹೇಳಿದರು.
ಈಗ “ರಕ್ಷಣಾ ಕ್ಷೇತ್ರದಲ್ಲಿ ಹೂಡಿಕೆಗೆ ಅವಕಾಶಗಳಿವೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಗೆ ಹೆಚ್ಚಿನ ಅವಕಾಶಗಳಿವೆ. ಜನರ ಅನುಕೂಲಕ್ಕಾಗಿ ಬಾಹ್ಯಾಕಾಶ ತಂತ್ರಜ್ಞಾನದ ವಾಣಿಜ್ಯಿಕ ಅಭಿವೃದ್ಧಿ ಮಾಡೋಣ” ಎಂದು ಅವರು ಹೇಳಿದರು.
“ಸಾಂಕ್ರಾಮಿಕ ರೋಗದಿಂದ ಭಾರತದ ಔಷಧ ಉದ್ಯಮವು ಭಾರತಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಒಂದು ಮೌಲ್ಯಯುತವಾದದ್ದು ಎಂದು ಮತ್ತೊಮ್ಮೆ ತೋರಿಸಿದೆ. ವಿಶೇಷವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಕಡಿಮೆ ಬೆಲೆಯಲ್ಲಿ ಔಷಧಿಗಳನ್ನು ನೀಡುವಲ್ಲಿ ಇದು ಪ್ರಮುಖ ಪಾತ್ರ ವಹಿಸಿದೆ” ಎಂದು ಪ್ರಧಾನಿ ಹೇಳಿದರು.
ಸುಮಾರು 250 ಭಾಷಣಕಾರರು ಭೌಗೋಳಿಕ ರಾಜಕೀಯ, ವ್ಯವಹಾರ, ತಂತ್ರಜ್ಞಾನ, ಬ್ಯಾಂಕಿಂಗ್ ಮತ್ತು ಹಣಕಾಸು, ಫಾರ್ಮಾ, ರಕ್ಷಣಾ ಮತ್ತು ಭದ್ರತೆ ಮತ್ತು ಕಲೆ ಮತ್ತು ಸಂಸ್ಕೃತಿಯ ಕುರಿತು ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪ್ರಧಾನ ಮಂತ್ರಿ ಕ್ಯಾಬಿನೆಟ್ ಸಹೋದ್ಯೋಗಿಗಳಾದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಕೂಡ ಸಭೆಯಲ್ಲಿ ಮಾತನಾಡಿದ್ದಾರೆ.
ಇದನ್ನೂ ಓದಿ : ಆದಿತ್ಯನಾಥ್ರ ’ಜಂಗಲ್ ರಾಜ್’ ಸರ್ಕಾರವನ್ನು ವಜಾಗೊಳಿಸಿ: ಕಾಂಗ್ರೆಸ್ ಆಗ್ರಹ