ಮೋದಿ ಷಾ ಅವರ ಮಟ್ಟಿಗೆ ಕೊರೋನಾ ಒಂದು ವರವಾಗಿ ಪರಿಣಮಿಸಿತು. ಅವರ ಮೇಲಿನ ಹೋರಾಟ ಮುಂದಕ್ಕೆ ಹೋಯಿತು. ಮುಂದಕ್ಕೆ ಹೋಯಿತೇ ಹೊರತು ನಿಲ್ಲುವುದಲ್ಲ. ಕೊರೋನಾ ಬರದಿದ್ದರೆ ಈ ವೇಳೆಗೆ ಮೋದಿ ಮತ್ತು ಷಾ ಜನಗಣತಿ ಆರಂಭಿಸುತ್ತಿದ್ದರು. ಯಾರು ಯಾರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಬಹುದೆಂದು home work ಆರಂಭಿಸುತ್ತಿದ್ದರು. ಇದರ ಜೊತೆಜೊತೆಗೇ ಮೋದಿ ಸರ್ಕಾರದ ವಿರುದ್ಧ ಘರ್ಷಣೆ ಆರಂಭವಾಗುತ್ತಿತ್ತು. ಸಿಎಎ, ಎನ್ಆರ್ಸಿ, ಎನ್ಪಿಆರ್ ಇತ್ಯಾದಿಗಳನ್ನು ಹಿಂಪಡೆಯಿರಿ ಎಂದು ದಲಿತರು, ಅದಿವಾಸಿಗಳು, ಮುಸ್ಲಿಮರು ದೇಶವ್ಯಾಪ್ತಿ ಚಳುವಳಿ ಆರಂಭಿಸುತ್ತಿದ್ದರು. ಕೊರೋನಾ ಸೈತಾನನ ಸಲುವಾಗಿ ಹಿಂದುತ್ವ ಮಂತಾಧರ ವಿರುದ್ಧ, ನಿಷ್ಕ್ರಿಯ ಸರ್ಕಾರದ ವಿರುದ್ಧ ನಡೆಯಬೇಕಿದ್ದ ಧರ್ಮಯುದ್ದವನ್ನು ಮುಂದೂಡಬೇಕಾದ ಅನಿವಾರ್ಯ ಸೃಷ್ಟಿಯಾಯಿತು.
ಮೋದಿ ಷಾ ನಮಗೆಲ್ಲ 5, 5 ಸಾವಿರ ಕೊಟ್ಟರು ಎಂದು ಜನ ಅಂದುಕೊಂಡಾರು ಎಂಬ ಬ್ರಾಂತಿ ಮೋದಿ-ಷಾಗಳಿಗಿದೆ. ಕೊರೋನಾ ನಮ್ಮ ಅನ್ನ ಕಿತ್ತುಕೊಂಡಿತು, ನಮ್ಮ ಉದ್ಯೋಗ ಕಿತ್ತು ಕೊಂಡಿತು, ನಾವು ನಮ್ಮೂರಿಗೆ ಹೋಗುತ್ತೇವೆ ಎಂದು ವಲಸೆ ಬಂದ ಕಾರ್ಮಿಕರು, ಅಸಂಖ್ಯಾತ ಅಸಂಘಟಿತ ಕಾರ್ಮಿಕರು ಈ ಸಂದರ್ಭದಲ್ಲಿ ಅನುಭವಿಸಿದ ಕಷ್ಟ ಕೋಟಲೆಗಳನ್ನು ಈ ಜನ್ಮದಲ್ಲಿ ಅವರು ಮರೆಯುವುದಿಲ್ಲ. ಸರ್ಕಾರ ಇವರಿಗೆ ಅಷ್ಟೊ ಇಷ್ಟೋ ಹಣ ನೀಡಿದ್ದರೆ ಅದು ಸರ್ಕಾರದ ಹಣವೇ ಹೊರತು ಅವರ ಔದಾರ್ಯವಲ್ಲ. ಸರ್ಕಾರ ತಾನು ಎರಚಿದ ಪುಡಿಕಾಸಿನ ನೆರವನ್ನು ಮತಗಳಿಕೆಯ ಸಾಧನವನ್ನಾಗಿಸಿಕೊಳ್ಳುವುದರಲ್ಲಿ ಸಂದೇಹವಿಲ್ಲ. ಆದರೆ ಈ ಬಗೆಯ ನೆರವು ನೀಡಿದ ಸರ್ಕಾರ ಶಿಸ್ತುಬದ್ಧನಾಗಿ ಎಲ್ಲ ತರದ ಬಡವರಿಗು ಹಂಚಿದ್ದರೆ ಭೇಷ್ ಅನ್ನಬಹುದಾಗಿತ್ತು. ಮೋದಿಯವರು ನಮ್ಮ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹಣ ಹಂಚಿದಾರಾದರೂ ಅದು ಬಕಾಸುರನ ಬಾಯಿಗೆ ಅರೆ ಮಜ್ಜಿಗೆ ಸುರಿದಂತೆ ಎಲ್ಲ ಜನಕ್ಕೂ ತಲುಪಲಿಲ್ಲ.
ಸರ್ಕಾರದ ವಿಚಾರದಲ್ಲಿ ಬಡಜನರ ಆಕ್ರೋಶ ಇದೆ. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಹಚ್ಚಿರುವುದು ಇಡೀ ಸಮಾಜಕ್ಕೆ ಗೊತ್ತಾಗಿದೆ. ವಿವಿಧ ರಾಜ್ಯಗಳಿಂದ ಬಂದ ಅಸಂಘಟಿತ ಲಕ್ಷಾಂತರ ಕಾರ್ಮಿಕರು ತಮ್ಮ ಸಂಪಾದನೆ ನಿಂತುಹೋದ ಕಾರಣದಿಂದ ನಮ್ಮನ್ನು ನಮ್ಮ ಊರುಗಳಿಗೆ ಕಳುಹಿಸಿ ಕೊಡಿ ಎಂದು ದುಂಬಾಲು ಬಿದ್ದರು. ಕೊರೋನಾ ಆರಂಭವಾದ ಹೊತ್ತಿನಲ್ಲೆ ಪ್ರಾರ್ಥಿಸಿದರೂ ಸರ್ಕಾರ ಅವರಿಗೆ ಹೋಗಲು ತಡೆಹಾಕಿತು. ಕೊನೆಯ ಪಕ್ಷ ಕೊರೋನಾ ಸೋಂಕಿಲ್ಲದವರನ್ನಾದರು ಕಳುಹಿಸಬೇಕಾಗಿತ್ತು. ಸರ್ಕಾರ ಅವರನ್ನೆಲ್ಲ ಇಲ್ಲೆ ಬಂಧನದಲ್ಲಿಟ್ಟಂತೆ ಇಟ್ಟು ಅವರಿಗೆ ಅತ್ತ ಕೂಲಿಯೂ ಇಲ್ಲ ಇತ್ತ ಪರಿಹಾರವೂ ಇಲ್ಲ ಎಂದು ಸರ್ಕಾರ ಕೈಚೆಲ್ಲಿತು. ಇವರಲ್ಲಿ ಕೆಲವರಿಗೆ ಪರಹಾರ ಸಿಕ್ಕಿರುವುದೂ ಕೊರೋನಾ ಅಮರಿಕೊಂಡ 2-3 ತಿಂಗಳ ಮೇಲೆ? ಅವರು ಅರೆಜೀವ, ಕೊರೆಜೀವ ಇಟ್ಟುಕೊಂಡೆ ಆ ದಿನಗಳನ್ನು ಕಳೆದರು.
ಆನಂತರ 2 ತಿಂಗಳ ಮೇಲೆ ಕರ್ನಾಟಕದ ವಲಸೆ ಕಾರ್ಮಿಕರನ್ನು ಅವರ ಊರಿಗೆ ಕಳುಹಿಸುವ ನಿರ್ಧಾರಕ್ಕೆ ಸರ್ಕಾರ ಬಂತು. ಕೆಎಸ್ಆರ್ಟಿಸಿ ಬಸ್ಗಳಲ್ಲಿ ಡಬಲ್ ಛಾರ್ಜ್ ವಸೂಲಿ ಮಾಡಿ ಎಂದು ಸರ್ಕಾರ ಹೇಳಿತು. ಅದಕ್ಕೆ ಪ್ರತಿಭಟನೆ ಬಂತು. ಆಗ ಸರ್ಕಾರ ಹೋಗುವ ಚಾರ್ಜ್ ಕೊಟ್ಟರೆ ಸಾಕು ಎಂದಿತು. ಕಾರ್ಮಿಕರು ನಾವೆಲ್ಲಿಂದ ತರೋಣ ಹಣ ಎಂದರು. ಸರ್ಕಾರ ತನ್ನ ಪಟ್ಟು ಬಿಡಲಿಲ್ಲ. ಆಗ ಕಾಂಗ್ರೆಸ್ ಸಂಸ್ಥೆಯವರು ನಾವು ಒಂದು ಕೋಟಿ ಚೆಕ್ ನೀಡುತ್ತೇವೆ ಅವರಿಂದ ಹಣ ವಸೂಲಿ ಮಾಡದೆ ಮರ್ಯಾದೆಯಿಂದ ಕಳುಹಿಸಿಕೊಡಿ ಎಂದು ಸವಾಲೊಡ್ಡಿತು. ಸರ್ಕಾರಕ್ಕೆ ಪೀಕಲಾಟ ಬಂತು.
ಟಿಕೆಟ್ ಹಣ ವಸೂಲಿ ಮಾಡದಿದ್ದರೆ ಕಾಂಗ್ರೆಸ್ಸಿನ ಒತ್ತಡಕ್ಕೆ ಸಿಲುಕಿದಂತಾಗುತ್ತದೆ. ವಸೂಲಿ ಮಾಡಿದರೆ ಆ ಜನ ಶಾಪ ಹಾಕುತ್ತಾರೆ. ಮುಂದಿನ ಚುನಾವಣೆಯಲ್ಲಿ ನಮಗೆ ಮತ ಹಾಕದೆಯೂ ಇರಬಹುದು. ಇತ್ತ ಪುಲಿ ಅತ್ತ ದರಿ ಎನ್ನುವ ಸನ್ನಿವೇಶಕ್ಕೆ ಕಾಂಗ್ರೆಸ್ ನಮ್ಮನ್ನು ದೂಡಿದೆ. ಇದರ ಫಲವಾಗಿ ಕಾರ್ಮಿಕ ವರ್ಗ ಚುನಾವಣೆ ವೇಳೆಯಲ್ಲಿ ನಮ್ಮ ಎದುರು ಬಿದ್ದರೆ ಗತಿ ಏನು? ಎಂದು ಯೋಚಿಸಿ ಉಚಿತವಾಗಿ ಅವರನ್ನು ಸಾಗಿಸುವುದೇ ಬುದ್ಧಿವಂತಿಕೆ ಎಂಬ ತೀರ್ಮಾನಕ್ಕೆ ಬಂದರು. ಕಾಂಗ್ರೆಸ್ ಈ ಸಂದರ್ಭದಲ್ಲಿ ಟ್ರಂಪ್ಕಾರ್ಡ್ ಹಾಕಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸಿದಲ್ಲದೆ ಕಾರ್ಮಿಕರ ಕೃತಜ್ಞತೆಗೂ ಪಾತ್ರವಾಯಿತು.
ಕೊರೋನಾ ಆದಷ್ಟು ಬೇಗ ಮುಕ್ತಾಯಗೊಳ್ಳಲಿ ನಮ್ಮ ಮೋದಿ ಷಾ ವಿರುದ್ಧ ಹೋರಾಟ ಆರಂಭವಾಗಲಿ ಎಂದು ಆಶಿಸುತ್ತೇನೆ.
ಇದನ್ನೂ ಓದಿ: ಹಸಿದವರ ಮುಂದೆ ಮೃಷ್ಟಾನ್ನದ ಕತೆ ಹೇಳಿದವರು…