ಜನವರಿ 5 ರಂದು ಜೆಎನ್ಯು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಸದಸ್ಯರ ಮೇಲೆ ನಡೆದ ದಾಳಿಯ ವಿಡಿಯೋಗಳಲ್ಲಿ ಕಂಡುಬರುವ ಮುಖವಾಡ ಧರಿಸಿದ್ಧ ಹುಡುಗಿಯನ್ನು ಎಬಿವಿಪಿ ಸದಸ್ಯೆ, ದೆಹಲಿ ವಿಶ್ವವಿದ್ಯಾಲಯದ ಕೋಮಲ್ ಶರ್ಮಾ ಎಂದು ದೆಹಲಿ ಪೊಲೀಸರು ಗುರುತಿಸಿದ್ದಾರೆ.
ಇಂಡಿಯನ್ ಎಕ್ಸ್ಪ್ರೆಸ್ ಪ್ರಕಾರ, ಶರ್ಮಾ ದೌಲತ್ ರಾಮ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಆರ್ಎಸ್ಎಸ್ ಸಂಯೋಜಿತ ಅಖಿಲ್ ಭಾರತೀಯ ವಿದ್ಯಾಾರ್ಥ ಪರಿಷತ್ (ಎಬಿವಿಪಿ) ಸದಸ್ಯರಾಗಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಜನವರಿ 5 ರಂದು ಹಲ್ಲೆಗೊಳಗಾದ ಅನೇಕ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಹಲ್ಲೆ ನಡೆಸಿದ ಗೂಂಡಾಗಳು ಎಬಿವಿಪಿ ಸದಸ್ಯರು ಎಂದು ಆರೋಪಿಸಿದ್ದರು.
ಅಷ್ಟು ಮಾತ್ರವಲ್ಲ ಈಗ ಪೊಲೀಸರು ಯಾವುದನ್ನು ಒಪ್ಪಿಕೊಂಡಿದ್ದಾರೆ ಅದನ್ನು ಘಟನೆ ನಡೆದ ಕೆಲವೇ ಘಂಟೆಗಳಲ್ಲಿ ಹಲವಾರು ಕಾರ್ಯಕರ್ತರು ದಾಳಿ ನಡೆಸಿದವರು ಎಬಿವಿಪಿಯವರು ಎಂದು ಸಾಕ್ಷಿ ಸಮೇತ ಬಹಿರಂಗಗೊಳಿಸಿದ್ದರು.
ವೈರಲ್ ಆದ ವೀಡಿಯೊಗಳಲ್ಲಿ, ಶರ್ಮಾ ಚೆಕ್ ಶರ್ಟ್ ಧರಿಸಿ, ಮುಖವನ್ನು ತಿಳಿ ನೀಲಿ ಬಣ್ಣದ ಸ್ಕಾರ್ಫ್ನಿಂದ ಮುಚ್ಚಿರುತ್ತಾಳೆ. ಸಬರಮತಿ ಹಾಸ್ಟೆಲ್ ಒಳಗೆ ಅವಳು ಕೋಲು ಹಿಡಿದುಕೊಂಡಿದ್ದಾಳೆ ಮತ್ತು ಇತರ ಇಬ್ಬರು ಪುರುಷರೊಂದಿಗೆ ವಿದ್ಯಾರ್ಥಿಗಳನ್ನು ಬೆದರಿಸುವುದನ್ನು ಕೇಳಬಹುದು. ಅಲ್ಲಿ ಅನೇಕ ವಿದ್ಯಾರ್ಥಿಗಳನ್ನು ಥಳಿಸಲಾಯಿತು ಮತ್ತು ಕೊಠಡಿಗಳನ್ನು ಧ್ವಂಸಗೊಳಿಸಲಾಯಿತು.
ಪೊಲೀಸರು ಶರ್ಮಾ ಮತ್ತು ಇತರ ಇಬ್ಬರು ಅಕ್ಷತ್ ಅವಸ್ಥಿ ಮತ್ತು ರೋಹಿತ್ ಷಾ ಅವರಿಗೆ ಐಪಿಸಿ ಸೆಕ್ಷನ್ 160(ಶಾಂತಿಗೆ ಭಂಗ ತರುವುದುಕ್ಕಾಗಿ ಸಾರ್ವಜನಿಕ ಸ್ಥಳದಲ್ಲಿ ಗುಂಪು ಹಲ್ಲೆ)ರ ಅಡಿಯಲ್ಲಿ ನೋಟಿಸ್ ನೀಡಿದ್ದಾರೆ.
ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ ಮತ್ತು ಅವರ ಫೋನ್ಗಳನ್ನು ಸ್ವಿಚ್ ಆಫ್ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಅವಸ್ಥಿ ಮತ್ತು ಷಾ ಇಂಡಿಯಾ ಟುಡೆ ಸ್ಟಿಂಗ್ ಆಪರೇಷನ್ನಲ್ಲಿ ಸಿಕ್ಕಿಬಿದ್ದಿದ್ದರು. ಅವರು ಎಬಿವಿಪಿ ಸದಸ್ಯರು ಮತ್ತು ಜನವರಿ 5 ರ ದಾಳಿಯಲ್ಲಿ ಭಾಗವಹಿಸಿದ್ದರು ಎಂದು ಒಪ್ಪಿಕೊಂಡಿದ್ದರು.
ಇಂಡಿಯನ್ ಎಕ್ಸ್ಪ್ರೆಸ್ನೊಂದಿಗೆ ಮಾತನಾಡಿದ ಎಬಿವಿಪಿ ದೆಹಲಿ ರಾಜ್ಯ ಕಾರ್ಯದರ್ಶಿ ಸಿದ್ಧಾರ್ಥ್ ಯಾದವ್, ಶರ್ಮಾ ತಮ್ಮ ವಿದ್ಯಾರ್ಥಿ ಸಂಘಟನೆಯ ಸದಸ್ಯೆ ಎಂದು ಒಪ್ಪಿಕೊಂಡಿದ್ದಾರೆ. ನಾವು ಅವಳನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ನನಗೆ ಕೊನೆಯದಾಗಿ ಬಂದ ಮಾಹಿತಿಯೆಂದರೆ ಅವಳು ತನ್ನ ಕುಟುಂಬದೊಂದಿಗೆ ಇದ್ದಾಳೆ. ಅವಳು ಪೊಲೀಸರಿಂದ ಸಮನ್ಸ್ ಪಡೆದಿದ್ದೀರಾ ಎಂದು ಕೇಳಲು ಪ್ರಯತ್ನಿಸಿದ್ದೆ” ಎಂದು ಅವರು ಹೇಳಿದ್ದಾರೆ.
ಆದರೆ ಎಬಿವಿಪಿಯು ರೋಹಿತ್ ಷಾ ಅವರೊಂದಿಗೆ ನಮಗೆ ಸಂಬಂಧ ಹೊಂದಿಲ್ಲ ಎಂದು ಹೇಳಿದೆ. ಅದೇ ರೀತಿಯಲ್ಲಿ ಅವಸ್ಥಿ ಎಬಿವಿಪಿ ಸದಸ್ಯ ಅಲ್ಲ ಎಂದು ಅದು ಮೊದಲೇ ನಿರಾಕರಿಸಿತ್ತು. ಆದರೆ ಆಲ್ಟ್ ನ್ಯೂಸ್ ನಡೆಸಿದ ತನಿಖೆಯಲ್ಲಿ ಎಬಿವಿಪಿ ಸುಳ್ಳು ಹೇಳುತ್ತಿದೆ ಮತ್ತು ಅವಸ್ಥಿ ಎಬಿವಿಪಿಯ ಸಕ್ರಿಯ ಸದಸ್ಯ ಎಂಬುದು ಸಾಬೀತಾಗಿತ್ತು.
ದೆಹಲಿ ಪೊಲೀಸರು ರಚಿಸಿದ ವಿಶೇಷ ತನಿಖಾ ತಂಡ (ಎಸ್ಐಟಿ) ಈ ದಾಳಿಗೆ ಸಂಬಂಧಿಸಿದಂತೆ ಇನ್ನೂ ಇಬ್ಬರು ಜೆಎನ್ಯು ವಿದ್ಯಾರ್ಥಿಗಳನ್ನು ಪ್ರಶ್ನಿಸಿದೆ. ಸುಚೇತಾ ತಾಲೂಕ್ದಾರ್ ಮತ್ತು ಪ್ರಿಯಾ ರಂಜನ್ ಅವರನ್ನು ತಲಾ ಎರಡು ಗಂಟೆಗಳ ಕಾಲ ಪ್ರಶ್ನಿಸಲಾಗಿದೆ ಎಂದು ಹೆಚ್ಚುವರಿ ಪಿಆರ್ಒ (ದೆಹಲಿ ಪೊಲೀಸ್) ಅನಿಲ್ ಮಿತ್ತಲ್ ತಿಳಿಸಿದ್ದಾರೆ. ಇಂಡಿಯನ್ ಎಕ್ಸ್ಪ್ರೆಸ್ ಪ್ರಕಾರ, ತಾಲ್ಲೂಕ್ದಾರ್ ಅಖಿಲ ಭಾರತ ವಿದ್ಯಾರ್ಥಿಗಳ ಸಂಘದ (ಎಐಎಸ್ಎ) ಜೆಎನ್ಯುಎಸ್ಯು ಕೌನ್ಸಿಲರ್ ಆಗಿದ್ದು, ರಂಜನ್ ಅವರ ರಾಜಕೀಯ ಸಂಬಂಧಗಳು ಸ್ಪಷ್ಟವಾಗಿಲ್ಲ.
ಎಸ್ಐಟಿಗೆ ಒಂದೂವರೆ ಪುಟದ ಹೇಳಿಕೆ ನೀಡಿದ್ದಾರೆ ಎಂದು ತಾಲ್ಲೂಕಾರ್ ಹೇಳಿದ್ದಾರೆ. “ಅವರು ಜನವರಿ 5 ರ ಘಟನೆಯ ಬಗ್ಗೆ ನನ್ನನ್ನು ಕೇಳಿದರು, ಆ ದಿನ ನಾನು ಎಲ್ಲಿದ್ದೆ, ಗಾಯಗೊಂಡ ವಿದ್ಯಾರ್ಥಿಗಳ ವಿವರಗಳು ಮತ್ತು ನಾನು ಬೇರೆಯವರನ್ನು ಗುರುತಿಸಬಹುದೇ” ಎಂದು ಅವರು ಹೇಳಿದರು. ತಾಲೂಕ್ದಾರ್ಗೆ ಫೋಟೋವೊಂದನ್ನು ತೋರಿಸಿ ನೀನೆ ಎಂದು ಕೇಳಿದಾಗ ಅವಳು ನಿರಾಕರಿಸಿದ್ದಲ್ಲದೇ, ದಾಳಿಯಲ್ಲಿ ನಾನು ಭಾಗಿಯಾಗಿಲ್ಲ ಮತ್ತು ಫೋಟೋ ತುಂಬಾ ಮಸುಕಾಗಿದೆ ಎಂದು ಹೇಳಿದ್ದಾಳೆ.
ಜನವರಿ 5 ರಂದು ತಾನು ಇರುವ ಸ್ಥಳದ ಬಗ್ಗೆ ಪೊಲೀಸರಿಗೆ ಒಂದು ಪುಟದ ಹೇಳಿಕೆ ನೀಡಿದ್ದೇನೆ ಎಂದು ಸ್ಕೂಲ್ ಆಫ್ ಲ್ಯಾಂಗ್ವೇಜ್, ಲಿಟರೇಚರ್ ಮತ್ತು ಕಲ್ಚರ್ ಸ್ಟಡೀಸ್ನ ಬಿಎ ಮೂರನೇ ವರ್ಷದ ವಿದ್ಯಾರ್ಥಿ ರಂಜನ್ ತಿಳಿಸಿದರು.