ಸಿನಿಮಾ ಇಂಡಸ್ಟ್ರಿ ಆರಂಭಗೊಂಡಾಗಿನಿಂದಲೂ ತನ್ನ ಬೇಡಿಕೆಯನ್ನೂ ಎಂದೂ ಕಳೆದುಕೊಂಡಿಲ್ಲ. ಸಿನಿಮಾ ಪ್ರೇಕ್ಷಕರಲ್ಲಿ ಎಂದೂ ಸಿನಿಮಾ ನೋಡುವ ಗೀಳು ಕಡಿಮೆಯಾಗಿದ್ದೇ ಇಲ್ಲ. ಕಳೆದ ಒಂದು ದಶಕದ ಹಿಂದೆ
ಕನ್ನಡ ಸಿನಿಮಾಗಳ ನಿರ್ಮಾಣ ತೀರಾ ಕಡಿಮೆ ಅಲ್ಲದಿದ್ದರೂ, ಇಂದಿಗೆ ಹೋಲಿಸಿದರೆ ಅಂದು ತಿಂಗಳಲ್ಲಿ ತೆರೆಕಾಣುತ್ತಿದ್ದ ಸಿನಿಮಾಗಳು ನಾಲ್ಕೈದಕ್ಕಿಂತ ಹೆಚ್ಚೇನೂ ಇರುತ್ತಿರಲಿಲ್ಲ. ಅವುಗಳಲ್ಲಿ ಒಳ್ಳೆಯ ಸಿನಿಮಾಗಳು ಬಂದರಂತೂ ವರ್ಷಾನುಗಟ್ಟಲೇ ಬದಲಾಗದೇ ಪ್ರದರ್ಶನವಾಗುತ್ತಿದ್ದವು. ಅಂತಹ ಸಿನಿಮಾಗಳನ್ನು ನೋಡಲು ಹೋಗುವುದೇ ಸಿನಿ ಪ್ರೇಕ್ಷಕರಲ್ಲಿ ಸಡಗರವನ್ನು ತಂದಿಡುತ್ತಿತ್ತು. ಹಳ್ಳಿಗಾಡಿನ ಜನರೋ ಆಟೋ ಮಾಡಿಕೊಂಡೋ ಅಥವಾ ಎತ್ತಿನ ಬಂಡಿ ಕಟ್ಟಿಕೊಂಡೋ ದೌಡಾಯಿಸುತ್ತಿದ್ದರು. ಈಗ ಆ ಟ್ರೆಂಡ್ ಬದಲಾಗಿದ್ದರೂ ಸಿನಿ ಪ್ರೇಕ್ಷಕರ ಸಂಖ್ಯೆಯಂತೂ ದುಪ್ಪಟ್ಟಾಗಿದೆ.
ಅಂದಹಾಗೆ ಈ ವರ್ಷದಲ್ಲಿ 163 ಕನ್ನಡ ಸಿನಿಮಾಗಳು ಥಿಯೇಟರ್ಗಳ ಮುಂದೆ ಬಂದು ನಿಂತಿದ್ದವು. ಅಂದರೆ ತಿಂಗಳಿಗೆ ಬರೋಬ್ಬರಿ 13-14 ಸಿನಿಮಾಗಳು ಬಿಡುಗಡೆಗೊಂಡಿವೆ. ಅವುಗಳಲ್ಲಿ ಸಕ್ಷಸ್ ಕಂಡಿದ್ದು ಮಾತ್ರ ಎರಡೇ ಸಿನಿಮಾಗಳು. ಟಿ.ಕೆ.ದಯನಂದ್ರವರ ಕ್ರಿಯೇಟಿವಿಯೊಂದಿಗೆ ಹೊಸ ರೀತಿಯಲ್ಲಿ ಕತೆ ಎಣೆಯಲಾಗಿದ್ದ, ರಿಷಬ್ ಶೆಟ್ಟಿ ಅಭಿನಯದ “ಬೆಲ್ ಬಾಟಂ” ಮತ್ತು ದರ್ಶನ್ ಅಭಿನಯದ ‘ಯಜಮಾನ’ ಸಿನಿಮಾಗಳು ನೂರು ದಿನಗಳ ಗಡಿ ಮುಟ್ಟಿದ್ದವು. ಸಿನಿಮಾದಲ್ಲಿನ ಹೊಸತನದೊಂದಿಗೆ ಈ ವರ್ಷದ ಬೆಸ್ಟ್ ಸಿನಿಮಾ ಎನಿಸಿಕೊಂಡಿರುವ ಬೆಲ್ ಬಾಟಂ ಕಥೆ ಬಾಲಿವುಡ್ಗೂ ರಿಮೇಕ್ ಆಗುತ್ತಿರುವುದು ವಿಶೇಷ.
ಉಳಿದಂತೆ ಭಾರಿ ನಿರೀಕ್ಷೆ ಹುಟ್ಟಿಸಿದ್ದ, ಬಿಡುಗಡೆಗೂ ಮುನ್ನ ಭಾರಿ ಸದ್ದು ಮಾಡಿದ್ದ ಪೈಲ್ವಾನ್, ನಟಸಾರ್ವಭೌಮ, ಕುರುಕ್ಷೇತ್ರ ಸಿನಿಮಾಗಳು ಬಿಡುಗಡೆಯಾದ ನಂತರ ಸದ್ದು-ಸುದ್ದಿಯಿಲ್ಲದೆ ತೆರೆಹಿಂದೆ ಸರಿದವು. ಅದರಲ್ಲೂ ಪೈಲ್ವಾನ್ ಸದ್ದು ಮಾಡಿದ್ದು ಮಾತ್ರ ಪೈರಸಿ ವಿಚಾರಕ್ಕಷ್ಟೇ. ಅಲ್ಲದೆ ಸದ್ದೇ ಮಾಡದೆ ಬಂದ ‘ಕೆಮಿಸ್ಟ್ರಿ ಆಫ್ ಕರಿಯಪ್ಪಾ’ ಸಿನಿಮಾ ಮಾತ್ರ 75 ದಿನಗದ ಗಡಿ ಮುಟ್ಟಿತ್ತಷ್ಟೇ.
ಹಿಂದೆ ಒಂದೊಳ್ಳೆ ಎಮೋಷನಲ್ ಫ್ಯಾಮಿಲಿ ಸೆಂಟಿಮೆಂಟ್ ಕತೆಯಿಟ್ಟು ಸಿನಿಮಾ ಮಾಡಿದರೆ ಸಾಕು ಸಿನಿ ಪ್ರೇಮಿಗಳ ಭಾವ ಉಕ್ಕಿದಂತೆ, ನಿರ್ಮಾಪಕರ ಖಜಾನೆಯೂ ಉಕ್ಕುತ್ತಿತ್ತು. ಅದನ್ನೇ ನೆಚ್ಚಿ ಕೊಂಡಿದ್ದ ಸೆಂಟಿಮೆಂಟಲ್ ಸಿನಿಮಾಗಳಿಗೆ ಹೆಸರಾಗಿದ್ದ ಶಿವರಾಜ್ಕುಮಾರ್ ಅಭಿನಯದ ‘ಕವಚ’ ಸಿನಿಮಾ ಒಳ್ಳೆ ಹೆಸರು ಪಡೆದುಕೊಂಡರೂ ಈಗಿನ ಜನರೇಷನ್ನಲ್ಲಿ ಸೆಂಟಿಮೆಂಟ್ ವರ್ಕ್ ಔಟ್ ಆಗೋದಿಲ್ಲ ಎಂಬ ಪಾಠ ಕಲಿಸಿದೆ. ಅಲ್ಲದೆ 99, ಗೀತಾ, ರಂಗನಾಯಕಿಯಂತಹ ಕೆಲವು ಸಿನಿಮಾಗಳು ಫಲ ಕೊಡಲಿಲ್ಲ ಪಾಪ.
ಒಟ್ಟಿನಲ್ಲಿ ಬದಲಾಗುತ್ತಿರುವ ಸಿನಿ ಪ್ರಿಯರ ನಿರೀಕ್ಷೆ ಏನೆಂಬುದನ್ನು ಅರ್ಥ ಮಾಡಿಕೊಳ್ಳದ ಕನ್ನಡ ಚಿತ್ರರಂಗದ 163 ಸಿನಿಮಾಗಳ ಪೈಕಿ 160 ಸಿನಿಮಾಗಳು ಮಕಾಡೆಯಾಗಿರುವುದು ಬೇಸರದ ಸಂಗತಿ.