ವಿಶ್ವದ 10 ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಮುಖ್ಯಸ್ಥ ಮುಖೇಶ್ ಅಂಬಾನಿಯವರು 9 ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅಲ್ಲದೇ 2025ರ ವೇಳೆಗೆ ಅವರ ಜಿಯೋ ನೆಟ್ವರ್ಕ್ ಭಾರತಕ್.48 ರಷ್ಟು ಮೊಬೈಲ್ ಚಂದಾದಾರರ ಮಾರುಕಟ್ಟೆ ಪಾಲನ್ನು ಪಡೆದುಕೊಳ್ಳುವ ಸಾಧ್ಯತೆಯಿದೆ ಎಂದು ಬರ್ನ್ಸ್ಟೈನ್ ಅಂದಾಜಿಸಿದ್ದಾರೆ.
ಬ್ಲೂಮ್ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ ಮುಖೇಶ್ ಅಂಬಾನಿಯವರ ನಿವ್ವಳ ಮೌಲ್ಯವು 64.5 ಬಿಲಿಯನ್ ಡಾಲರ್ಗೆ ಏರಿದೆ. ವಿಶ್ವದ ಅಗ್ರ 10 ಶ್ರೀಮಂತ ಜನರಲ್ಲಿ ಏಷ್ಯಾದ ಏಕೈಕ ಉದ್ಯಮಿ ಎಂಬ ಹೆಗ್ಗಳಿಕೆಗೆ ಅವರದಾಗಿದೆ. ಅವರು ಒರಾಕಲ್ ಕಾರ್ಪ್ನ ಲ್ಯಾರಿ ಎಲಿಸನ್ ಮತ್ತು ಶ್ರೀಮಂತ ಮಹಿಳೆ ಫ್ರಾನ್ಸ್ನ ಫ್ರಾಂಕೋಯಿಸ್ ಬೆಟೆನ್ಕೋರ್ಟ್ ಮೇಯರ್ಸ್ ಅವರನ್ನು ಹಿಂದಿಕ್ಕಿ 9 ನೇ ಸ್ಥಾನವನ್ನು ತಲುಪಿದ್ದಾರೆ.
ಆರ್ಥಿಕ ಕುಸಿತದೊಂದಿಗೆ ಹರಡಿದ ಕೊವೀಡ್ ಕಾರಣದಿಂದಾಗಿ ಬಹಳಷ್ಟು ಉದ್ಯಮಿಗಳು ನಷ್ಟಕ್ಕೊಳಕ್ಕಾಗಿದ್ದಾರೆ. ಭಾರತದ ಎಲ್ಲ ಟೆಲಿಕಾಂ ಕಂಪನಿಗಳು ನಷ್ಟದಲ್ಲಿದ್ದರೆ ಅಂಬಾನಿಯ ಜಿಯೋ ಮಾತ್ರ ನಿರಂತರ ಲಾಭಮಾಡುತ್ತಿದೆ. ಅಂಬಾನಿ ಷೇರುಗಳ ಬೆಲೆಯಲ್ಲಿ ಹೆಚ್ಚಳವಾಗುತ್ತಿದೆ. ಇದು ಹೇಗೆ ಸಾಧ್ಯ? ಹೋಗಲಿ ಅಂಬಾನಿ ಇಷ್ಟೆಲ್ಲಾ ಆಸ್ತಿ ಸಂಪಾದಿಸಿದ್ದಾದರೂ ಹೇಗೆ?
ಆತನ ಹೆಸರು ಕುನಾಲ್ ಕಮ್ರ. ಭಾರತದ ಹೆಸರಾಂತ ಸ್ಟ್ಯಾಂಡಪ್ ಕಾಮಿಡಿಯನ್. ಜನರ ಪರ ಮಿಡಿಯುವ ಆತನ ಮನಸ್ಸು ಸಹಜವಾಗಿಯೇ ಮೋದಿ ಆಡಳಿತದ ವಿರುದ್ಧ. ಈತ ತನ್ನ ಒಂದು ಶೋನಲ್ಲಿ ‘ಅಲ್ಲ ನಾವು ನೇರವಾಗಿ ಅಂಬಾನಿಗೆ ಯಾಕ್ ಓಟ್ ಹಾಕೋಕೆ ಆಗೋಲ್ಲ. ಮಧ್ಯದಲ್ಲಿ ಈ ಮೋದಿ ಯಾಕೆ? ನೇರವಾಗಿ ಅಂಬಾನಿಯೇ ಪ್ರಧಾನಮಂತ್ರಿ ಆಗಬಹುದಲ್ಲ?’ ಎಂದು ಪ್ರಶ್ನೆ ಮಾಡುತ್ತಾನೆ. ಇದು ಕಾಮಿಡಿ ಶೋ ಆದರೂ ಆತ ಹೇಳಿದ ಆ ಮಾತು ಮಾತ್ರ ಅಕ್ಷರಶಃ ಸತ್ಯ. ಇಂದು ಈ ನಮ್ಮ ದೇಶವನ್ನಾಳುತ್ತಿರುವುದು ಹೆಸರಿಗೆ ಮಾತ್ರ ಮೋದಿ, ಮನಮೋಹನ್ ಸಿಂಗ್ ಆದರೂ ನಿಜವಾಗಿಯೂ ಆಳುತ್ತಿರುವುದು ಮತ್ತು ಬೃಹತ್ ಮಟ್ಟದಲ್ಲಿ ಕೊಳ್ಳೆ ಹೊಡೆಯುತ್ತಿರುವುದು ಅಂಬಾನಿ, ಅದಾನಿ, ಟಾಟಾ ಥರದ ಬೆರಳೆಣಿಕೆಯ ಕ್ರೋನಿ ಬಂಡವಾಳಿಗರು ಎಂಬುದರಲ್ಲಿ ಯಾವುದೇ ಸಂದೇಹವೇ ಇಲ್ಲ. ಬನ್ನಿ ಇದರ ಸತ್ಯಾಸತ್ಯತೆ ಬಗ್ಗೆ ವಿಚಾರ ಮಾಡೋಣ.
ಬಡವನಾಗಿ ಹುಟ್ಟುವುದು ನಿಮ್ಮ ತಪ್ಪಲ್ಲ, ಆದರೆ ಬಡವನಾಗಿ ಸಾಯುವುದು ನಿಮ್ಮ ತಪ್ಪು ಎಂಬ ಹೇಳಿಕೆಗಳ ಮೂಲಕ ಯಾವುದೇ ಮಾರ್ಗವಾದರೂ ಸರಿ ಹಣ ಸಂಪಾದಿಸಿ ಎಂಬ ಕಡುಬಡತನದಿಂದ ಸಿರಿವಂತರಾದವರ ಕಥೆಗಳಲ್ಲಿ ಅಂಬಾನಿಯ ಕಥೆಯೂ ಒಂದಿದೆ. ಈ ದೇಶದಲ್ಲಿ ಭ್ರಷ್ಟಾಚಾರ ಇಲ್ಲದಿದ್ದರೆ ಏನಾಗುತ್ತಿತ್ತು? ಎಂಬ ಪ್ರಶ್ನೆಯನ್ನು ಪತ್ರಕರ್ತರೊಬ್ಬರು 1990ರ ದಶಕದಲ್ಲಿ ಧೀರೂಬಾಯಿ ಅಂಬಾನಿ ಎಂಬ ದೊಡ್ಡ ಉದ್ಯಮಿಗೆ ಕೇಳುತ್ತಾರೆ. ಆಗ ಆತ ‘ಭ್ರಷ್ಟಾಚಾರ ಇಲ್ಲದಿದ್ದರೆ ಈ ಧೀರೂಬಾಯಿ ಅಂಬಾನಿ ಇನ್ನೂ ಕೂಡ ಪೆಟ್ರೋಲ್ ಬಂಕ್ನಲ್ಲಿ ಪೆಟ್ರೋಲ್ ಹಾಕುವ ಕೆಲಸ ಮಾಡಿಕೊಂಡು ಇರಬೇಕಿತ್ತು ಅಷ್ಟೇ’ ಎನ್ನುತ್ತಾನೆ. ಅಂದರೆ ಅಷ್ಟರ ಮಟ್ಟಿಗೆ ಆತ ನೇರವಾಗಿ ಭ್ರಷ್ಟಾಚಾರವನ್ನು ಸಮರ್ಥಿಸಿಕೊಂಡು, ಅದರಿಂದಲೇ ನಾನಿಂದು ದೊಡ್ಡ ಉದ್ಯಮಿಯಾಗಿದ್ದೇನೆಂದು ಹೇಳಿದರೂ ಕೂಡ ಬಹುತೇಕ ಮಾಧ್ಯಮಗಳು ಆತನಿಗೆ ಬಹಪರಾಕ್ ಹೇಳಿ, ಆತನನ್ನು ನಮ್ಮೆಲ್ಲರ ಉದ್ದಾರಕನೆಂಬಂತೆ ಬಿಂಬಿಸಿ ಹೊಗಳಿ ಅಟ್ಟಕೇರಿಸುತ್ತಿವೆ. ಅವರ ಮಕ್ಕಳೇ ಇಂದು ಹೆಚ್ಚು ಸುದ್ದಿಯಲ್ಲಿರುವ ಮುಖೇಶ್ ಅಂಬಾನಿ ಮತ್ತು ಅನಿಲ್ ಅಂಬಾನಿ.
ಸಾವಿರಾರು ಜನರ ಷೇರುಗಳ ಆಧಾರದಲ್ಲಿ ಧೀರೂಬಾಯಿ ಅಂಬಾನಿ 1977ರಲ್ಲಿ ಕಟ್ಟಿದ ವಾಣಿಜ್ಯ ಕಂಪನಿಯ ಹೆಸರೇ ರಿಲಯನ್ಸ್ ಇಂಡಸ್ಟ್ರೀಸ್. ಷೇರುಗಳು, ಮೊಬೈಲ್, ಸಿಮ್, ಟಿವಿಯಿಂದ ಆರಂಭವಾಗಿ ಕೊತ್ತಂಬರಿ ಸೊಪ್ಪು, ಮೀನು ಮಾಂಸದವರೆಗೂ ಸಾವಿರಾರು ವಸ್ತುಗಳನ್ನು ಮಾರಾಟ ಮಾಡುವಷ್ಟರ ಮಟ್ಟಿಗೆ ಈ ಕಂಪನಿ ಬೆಳೆದು ನಿಂತಿದೆ. ಅಪರಿಮಿತ ಭ್ರಷ್ಟಾಚಾರ, ಆಳುವವರೊಂದಿಗಿನ ಅಪವಿತ್ರ ಮೈತ್ರಿ, ಸ್ವಜನ ಪಕ್ಷಪಾತತನದಿಂದ ಹೆಚ್ಚು ಲಾಭ ಗಳಿಸಿ ಬೆಳೆದ ಕಂಪನಿ 2002ರಲ್ಲಿ ಧೀರೂಭಾಯಿ ಅಂಬಾನಿಯ ಮರಣದ ನಂತರ ಅವರ ಮಕ್ಕಳಿಬ್ಬರ ನಡುವೆ ಪಾಲಾಯಿತು. ರಿಲಯನ್ಸ್ ಇಂಡಸ್ಟ್ರಿಸ್, ಪೆಟ್ರೋಲಿಯಂ ಮುಖೇಶ್ ಪಾಲಿಗೆ ಬಂದರೆ, ರಿಲಯನ್ಸ್ ಕಮ್ಯುನಿಕೇಶನ್ಸ್, ಟೆಲಿಕಾಂ ಅನಿಲ್ ಪಾಲಾಯಿತು. ಇನ್ನು ನೀನಾ ಕೊಥಾರಿ ಮತ್ತು ದೀಪ್ತಿ ಸಾಲ್ಗೋಂಕರ್ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದರೂ ಸಹ ಯಥಾ ಭಾರತೀಯರಂತೆ ಅವರಿಗೇನೂ ಆಸ್ತಿಯಲ್ಲಿ ಪಾಲು ದಕ್ಕಲಿಲ್ಲ ಅಷ್ಟೆ.
ಧೀರೂಭಾಯಿ ಅಂಬಾನಿ ಸಾಮಾನ್ಯ ಮನುಷ್ಯನಾಗಿದ್ದವನು ತಾನು ಸಾಯುವ 2002ರ ವೇಳೆಗೆ 6.1 ಬಿಲಿಯನ್ ಡಾಲರ್ (ಆಗಲೇ ಸುಮಾರು 60ಸಾವಿರ ಕೋಟಿ ರುಪಾಯಿಗಳು) ಆಸ್ತಿಯ ಒಡೆಯನಾಗಿದ್ದನು. ಇದು ಹೇಗೆ ಸಾಧ್ಯ ಎಂದು ಅನುಮಾನ ಬಂದರೆ ಗೂಗಲ್ನಲ್ಲಿ ಧೀರೂಭಾಯಿ ಅಂಬಾನಿ ಬಗೆಗಿನ ಟೀಕೆಗಳು ಎಂದು ಟೈಪ್ ಮಾಡಿ ನೊಡಿ ಸಾಕು. ಭ್ರಷ್ಟ ವ್ಯಾವಹಾರಿಕ ನಡವಳಿಕೆಗಳು, ತನ್ನ ಅಗತ್ಯಗಳಿಗಾಗಿ ಸರ್ಕಾರಿ ನೀತಿಗಳ ತಿರುಚುವಿಕೆ, ದಬ್ಬಾಳಿಕೆ ವರ್ತನೆ, ಚುನಾವಣೆಗಳಲ್ಲಿ ರಾಜಕೀಯ ಪ್ರಭಾವ ಬೀರುವುದು, ತನ್ನ ಪರವಾಗಿ ಮಾಧ್ಯಮಗಳಿಂದ ರಕ್ಷಣೆ ಮುಂತಾದ ಕ್ರಮಗಳಿಂದಲೇ ಮತ್ತು ತಾನೇ ಒಪ್ಪಿಕೊಂಡಂತೆ ಪರಮ ಭ್ರಷ್ಟಾಚಾರದ ಕಾರಣಕ್ಕಾಗಿ ಅವರು ಅಷ್ಟು ದೊಡ್ಡ ಮಟ್ಟದ ಆಸ್ತಿ ಮಾಡಲು ಸಾಧ್ಯವಾಯಿತು.
ತನ್ನ ತಂದೆಯ ಹಾದಿಯಲ್ಲಿ ಮತ್ತಷ್ಟು ಮುನ್ನಡೆದ ಮಕ್ಕಳು ಸಾಮ್ರಾಜ್ಯ ವಿಸ್ತರಣೆಗೆ ಹಲವು ಬಗೆಯ ಭ್ರಷ್ಟ ದಾರಿಗಳನ್ನು ಹಿಡಿದರು. ನೋಡುನೋಡುತ್ತಲೇ ಮುಖೇಶ್ ಅಂಬಾನಿ ದೇಶದ ನಂ.1 ಶ್ರೀಮಂತನಾಗಿ ಬೆಳೆದ. ಮೊದಮೊದಲು 20 ಶ್ರೀಮಂತರ ಪಟ್ಟಿಯಲ್ಲಿರುತ್ತಿದ್ದ ಅಣ್ಣನಿಂದ ಪೂರ್ಣವಾಗಿ ದೂರ ಸರಿದ ಅನಿಲ್ ಅಂಬಾನಿ, ನಿಧಾನಕ್ಕೆ ಕೆಳಗಿಳಿದಿದ್ದಾನೆ. ಆ ರೀತಿ ದೂರ ಸರಿಯಲು ಕಾರಣವಾದ ಒಂದು ಮುಖ್ಯವಾದ ಸಂಗತಿಯನ್ನು ನೋಡೋಣ.
ಭಾರತದ ಕೃಷ್ಣ ಗೋದಾವರಿ ನದಿ ಪಾತ್ರದಲ್ಲಿರುವ ಹೇರಳವಾದ ನೈಸರ್ಗಿಕ ಮತ್ತು ತೈಲೋತ್ಪನ್ನ ಸಂಪನ್ಮೂಲಗಳ ಮೇಲೆ ಈ ಅಂಬಾನಿ ಸಹೋದರರ ಕಣ್ಣು ಬಿದ್ದಿತು. ನೆಹರೂರವರು ಪ್ರಧಾನಿಯಾಗಿದ್ದಾದ ಸ್ಥಾಪಿಸಿದ್ದ ಸರ್ಕಾರಿ ಸ್ವಾಮ್ಯದ ಒಎನ್ಜಿಸಿ ಅಲ್ಲಿ ತೈಲ ಮತ್ತು ಅನಿಲ ಸಂಪನ್ಮೂಲಗಳನ್ನು ಹೊರತೆಗೆದು ಸಂಸ್ಕರಣೆ ಮತ್ತು ಮಾರಾಟದ ಕಾರ್ಯನಿರ್ವಹಿಸುವ ಮೂಲಕ ಅಪಾರ ಲಾಭದ ಉದ್ದಿಮೆಯಾಗಿತ್ತು. ಅಲ್ಲಿ 2006-07 ರಿಂದ ನೆಲಬಗೆದು ಲೂಟಿ ಹೊಡೆಯಲು ಆರಂಭಿಸಿತು ಮುಖೇಶ್ ಅಂಬಾನಿ ನೇತೃತ್ವದ ರಿಲೆಯನ್ಸ್. ಅಲ್ಲಿನ ತೈಲಸಂಸ್ಕರಣಗೆ ನನಗೆ ಅವಕಾಶಕೊಡಬೇಕೆಂದು ತಮ್ಮ ಅನಿಲ್ ಅಂಬಾನಿ ತಗಾದೆ ತೆಗೆದನು. ಅಣ್ಣ ತಮ್ಮಂದಿರಿಬ್ಬರ ನಡುವೆ ಅಲ್ಲಿಂದ ಆರಂಭವಾದ ಜಗಳ ಯಾವ ಮಟ್ಟಕ್ಕೆ ಹೋಯಿತೆಂದರೆ ಅದನ್ನು ಬಗೆಹರಿಸಲು ಲಾಲ್ ಕೃಷ್ಣ ಅಡ್ವಾಣಿ ಥರದವರು ಮಧ್ಯಸ್ಥಿಕೆ ವಹಿಸಬೇಕಾಗಿ ಬಂದಿತ್ತು. ಅಂದರೆ ಈ ದೇಶದ ಸಮಸ್ತ ಜನರಿಗೂ ಹಕ್ಕಿರುವ ಕೃಷ್ಣ ಗೋದಾವರಿ ನದಿಪಾತ್ರದಲ್ಲಿ ತೈಲ ಲೂಟಿ ಹೊಡೆಯಲು ‘ಅವರಪ್ಪನ ಮನೆ ಆಸ್ತಿ’ ಎಂಬಂತೆ ಅಂಬಾನಿ ಸಹೋದರರಿಬ್ಬರು ಮುಗಿಬಿದ್ದರು.
ಕೊನೆಗೆ ಅದನ್ನು ತನ್ನ ವಶಕ್ಕೆ ಪಡೆಯಲು ಯಶಸ್ವಿಯಾದ ಮುಖೇಶ್ ಅಂಬಾನಿ ಈ ದೇಶದ ಕಾನೂನಗಳನ್ನೆಲ್ಲಾ ಗಾಳಿಗೆ ತೂರಿ ಮನಸ್ಸಿಗೆ ಬಂದ ಹಾಗೆ ತೈಲ ಲೂಟಿ ಹೊಡೆಯಲು ಮುಂದಾದ. ಪೆಟ್ರೋಲಿಯಂ ಖಾತೆಯ ಜಂಟಿ ಕಾರ್ಯದರ್ಶಿಯಾಗಿದ್ದ ನಜೀಬ್ ಜಂಗ್ರವರು ಸರ್ಕಾರದ ಪರವಾಗಿ ಅಂಬಾನಿಯ ರಿಲೆಯನ್ಸ್ನೊಂದಿಗಿನ ಒಪ್ಪಂದಕ್ಕೆ ಸಹಿ ಹಾಕಿದರು. ಅದಾದ ಕೆಲವೇ ದಿನಗಳಲ್ಲಿ ಅವರು ತಮ್ಮ ಹುದ್ದೆಯಿಂದ ಸ್ವಯಂ ನಿವೃತ್ತಿ ಹೊಂದಿ, ಅದೇ ರಿಲೆಯನ್ಸ್ ಸೇರಿದರು ಎಂದರೆ ಅಂಬಾನಿಯ ಕುಟಿಲತೆ ಎಷ್ಟಿರಬೇಡ ನೀವೇ ಹೇಳಿ? ಲಕ್ಷಾಂತರ ಕೋಟಿ ಬೆಲೆ ಬಾಳುವ ಅಲ್ಲಿನ ಕಚ್ಛಾ ತೈಲ ಸಂಪತ್ತನ್ನು ಸರ್ಕಾರಿ ಸ್ವಾಮ್ಯದ ಒಎನ್ಜಿಸಿಗೆ ಕೊಡುವುದು ಬಿಟ್ಟು ಆಗಿನ ಯುಪಿಎ ಸರ್ಕಾರ ಮುಖೇಶ್ ಅಂಬಾನಿಗೆ ಬಿಡಿಗಾಸಿಗೆ ಹರಾಜು ಹಾಕಿತ್ತು.
ಮುಖೇಶ್ ತನ್ನ ಪಾಲಿನ ಜಾಗದಲ್ಲಿ ತೈಲ ಹೊರತೆಗೆಯುವುದಲ್ಲದೇ ಒಎನ್ಜಿಸಿಯ ಕೊಳವೆಗಳಿಗೂ ಕನ್ನ ಹಾಕಿ ಲಕ್ಷಾಂತರ ಕೋಟಿ ಬೆಲೆ ಬಾಳುವ ತೈಲವನ್ನು ಕದ್ದುಬಿಟ್ಟಿದ್ದರು. ಅದಕ್ಕೆ ವಿರೊಧ ವ್ಯಕ್ತಪಡಿಸಿದ ಕಾರಣಕ್ಕಾಗಿ ಆಗಿನ ಸರ್ಕಾರದಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ಸಚಿವರಾಗಿದ್ದ ಮಣಿಶಂಕರ್ ಅಯ್ಯರ್ ರನ್ನು ಬದಲಿಸಿ ಮುರಳಿ ದೇವ್ರಗೆ ಕೊಡಲಾಯಿತು. ಅದೂ ಸಾಲದೆಂಬಂತೆ ವೀರಪ್ಪ ಮೋಯ್ಲಿಯನ್ನು ತರಲಾಯಿತು. ಅರಣ್ಯ ಮತ್ತು ಪರಿಸರ ಸಚಿವರಾಗಿದ್ದ ಜೈರಾಂ ರಮೇಶ್ ಮತ್ತು ಜೈಪಾಲ್ ರೆಡ್ಡಿಯವರು ಅಂಬಾನಿ ಲೂಟಿಯನ್ನು ಸುತಾರಂ ಒಪ್ಪಲಿಲ್ಲ ಮಾತ್ರವಲ್ಲ ಅಂಬಾನಿಯ ಅವ್ಯವಹಾರಗಳಿಗೆ ಕಡಿವಾಣ ಹಾಕಲು ಬಯಸಿದರು. ಆದರೆ ಈ ಅಂಬಾನಿ ಎಷ್ಟು ಪ್ರಭಾವಿಯಾಗಿದ್ದ ಎಂದರೆ ಅವರೆಲ್ಲರನ್ನು ಕೆಳಗಿಳಿಸಿ, ಇಂಧನ ಸಚಿವ ವೀರಪ್ಪ ಮೋಯ್ಲಿಯನ್ನೆ ಅರಣ್ಯ ಖಾತೆಗೂ ಸಚಿವರನ್ನಾಗಿಸಿ, ತನ್ನೆಲ್ಲಾ ಅವ್ಯವಹಾರಗಳನ್ನು ಕಾನೂನುಬದ್ಧಗೊಳಿಸಿಕೊಂಡ.
2013ರಲ್ಲಿ ತನ್ನ ಬ್ಲಾಕ್ಗಳಿಂದ ತೈಲ ಮತ್ತು ಅನಿಲ್ ಕಳ್ಳತನ ಮಾಡಿದ್ದಕ್ಕಾಗಿ ಒಎನ್ಜಿಸಿಯು ಅಂಬಾನಿ ರಿಲೆಯನ್ಸ್ ವಿರುದ್ಧ ದೆಹಲಿ ಹೈಕೋರ್ಟ್ನಲ್ಲಿ ದಾವೆ ಹೂಡಿತ್ತು. ಡಿ ಅಂಡ್ ಎಂ ಕನ್ಸಲ್ಟಿಂಗ್ ಕಂಪನಿಯ ವರದಿ ಆಧಾರದಲ್ಲಿ ಎ.ಪಿ ಶಾ ಸಮಿತಿಯು ತೈಲ ಮತ್ತು ಅನಿಲ ಕಳ್ಳತನವಾಗಿದೆ ಎಂದು ವರದಿ ನೀಡಿತ್ತು. ಹಾಗಾಗಿ ಕೋರ್ಟ್ 10,300 ಕೋಟಿ ರೂಗಳ ದೊಡ್ಡ ಮೊತ್ತದ ದಂಡವನ್ನು ಅಂಬಾನಿಯ ರಿಲೆಯನ್ಸ್ಗೆ ಹಾಕಿತ್ತು. ಮೋದಿ ಕೃಪೆಯಿಂದಾಗಿ ಸರ್ಕಾರ ಮತ್ತು ಒಎನ್ಜಿಸಿ ಈ ಕೇಸಿನಲ್ಲಿ ಸರಿಯಾಗಿ ವಾದಿಸದೇ ಸಾಕ್ಷಿಗಳನ್ನು ನಾಶಮಾಡಿ ಕೊನೆಗೆ ಅಂಬಾನಿ ದಂಡ ಕಟ್ಟದಂತೆ ನೋಡಿಕೊಂಡರು.
ಇನ್ನು ಇದೇ ಅಂಬಾನಿ 2016ರಲ್ಲಿ ಟೆಲಿಕಾಂ ಕ್ಷೇತ್ರಕ್ಕೆ ಲಗ್ಗೆಯಿಟ್ಟು ಜಿಯೋ ಸಿಮ್ ಹೊರತಂದಾಗ ಪತ್ರಿಕೆಗಳ ಮುಖಪುಟದಲ್ಲಿ ಜಾಹೀರಾತು ನೀಡಿದ್ದು ಪ್ರಧಾನ ಸೇವಕ ನರೇಂದ್ರ ಮೋದಿಯವರು. ಜಿಯೋ ಲಾಭಕ್ಕಾಗಿ ಯಶಸ್ವಿಯಾಗಿ ನಡೆಯುತ್ತಿದ್ದ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಅನ್ನು ಮುಳುಗಿಸಲಾಯಿತು. ಲಕ್ಷಕ್ಕೂ ಅಧಿಕ ನೌಕರರು ಈಗ ಬೀದಿಗೆ ಬಿದ್ದಿದ್ದಾರೆ. ಈ ದೇಶದ ಕೃಷಿ ಸಾಲಕ್ಕಾಗಿ ನಿಗಧಿಯಾದ ಹಣದಲ್ಲಿ ಮುಖೇಶ್ ಅಂಬಾನಿ ಇದುವರೆಗೂ ಒಂದು ಲಕ್ಷ ಕೋಟಿಗೂ ಅಧಿಕ ಸಾಲ ಪಡೆದು ಸದ್ದಿಲ್ಲದೇ ಮನ್ನಾವಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಮುಖೇಶ್ ಅಂಬಾನಿಗೆ ನೀಡಿದ ತೆರಿಗೆ ವಿನಾಯಿತಿಗಳಿಗೆ ಲೆಕ್ಕವಿಲ್ಲ. ಅಂಬಾನಿಗೆ ನೆರವಾಗಲೆಂದು ಭೂಸ್ವಾದೀನ ಕಾಯ್ದೆಗೆ ಸುಗ್ರಿವಾಜ್ಞೆ ಮೂಲಕ ತಿದ್ದುಪಡಿ ತರಲು ಮೋದಿ ಮುಂದಾಗಿದ್ದರು ಅಲ್ಲವೇ?
–ಮುತ್ತುರಾಜು
(ಲೇಖಕರು ಪತ್ರಕರ್ತರು, ಅಭಿಪ್ರಾಯಗಳು ವೈಯಕ್ತಿಕವಾದವುಗಳು)
ಮತ್ತಷ್ಟು ಸುದ್ದಿಗಳು
ಮುಖೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಲಿ. ವಿಶ್ವದ 6ನೇ ಅತಿದೊಡ್ಡ ತೈಲ ಕಂಪನಿ…!
ಯೆಸ್ ಬ್ಯಾಂಕ್ ಪತನಕ್ಕೆ ಮುನ್ನುಡಿ ಬರೆದ ಮೂವರು ಮಾಜಿ ಬಿಲಿಯಾಧಿಪತಿಗಳು: ಅಂಬಾನಿ, ವಾಧ್ವಾನ್ ಮತ್ತು ಚಂದ್ರ!
ಮೋದಿಗೆ ಅಂಬಾನಿ ‘ಕಂಪನಿ’ ಕೊಡುತ್ತಿದ್ದಾರೋ, ಅಥವಾ ಅಂಬಾನಿಗೇ ಮೋದಿ ‘ಕಂಪನಿ’ ಕೊಡುತ್ತಿದ್ದಾರೋ?