Homeಕಂಡದ್ದು ಕಂಡಹಾಗೆಮನ ಮುಟ್ಟುವ ಪತ್ರಿಕೋದ್ಯಮದ  ಹಾದಿಯಲ್ಲಿ ಇನ್ನೊಂದು ಹೆಜ್ಜೆ

ಮನ ಮುಟ್ಟುವ ಪತ್ರಿಕೋದ್ಯಮದ  ಹಾದಿಯಲ್ಲಿ ಇನ್ನೊಂದು ಹೆಜ್ಜೆ

ಹೊಸ ಕಾಲದ ಮತ್ತು ಹೊಸ ಬಗೆಯ ಮಾಧ್ಯಮದ ವಿದ್ಯಾರ್ಥಿಯೆನ್ನುವಷ್ಟು ವಿನಯವನ್ನೂ, ದೀರ್ಘಕಾಲದ ಪತ್ರಿಕೋದ್ಯಮದ ಅನುಭವವನ್ನೂ ಎಲ್ಲಕ್ಕಿಂತ ಮುಖ್ಯವಾಗಿ ಮೌಲ್ಯಗಳಿಗೆ ಬದ್ಧತೆ ಹಾಗೂ ಪ್ರಾಮಾಣಿಕತೆಗಳನ್ನು ಮೈಗೂಡಿಸಿಕೊಂಡಿರುವ ಅವರು ನಮ್ಮ ಸಂಪಾದಕೀಯ ತಂಡದ ಮಾರ್ಗದರ್ಶಕರಾಗಿರುವುದು ಹೆಮ್ಮೆಯ ಸಂಗತಿ.

- Advertisement -
| ನ್ಯಾಯಪಥ ಸಂಪಾದಕೀಯ ತಂಡ |
- Advertisement -

ಮಾಧ್ಯಮಗಳು ಪ್ರಜಾತಂತ್ರದ ನಾಲ್ಕನೆಯ ಅಂಗವೆಂದು ಹೇಳುವುದು ಕೇವಲ ಕ್ಲೀಷೆಯಷ್ಟೇ ಅಲ್ಲ, ಅದೀಗ ಅಪಹಾಸ್ಯದ ವಸ್ತುವಾಗುತ್ತಿದೆ. ಒಂದೆಡೆ ನಿರ್ಭೀತ ಪತ್ರಕರ್ತರು ಅಲ್ಲಲ್ಲಿ ದಾಳಿಗೊಳಗಾಗಿ ಕೊಲೆಯಾಗುತ್ತಿದ್ದರೆ, ಇನ್ನೊಂದೆಡೆ ಕರ್ನಾಟಕದ ಕೆಲವು ಪತ್ರಕರ್ತರು ಬ್ಲಾಕ್‍ಮೇಲ್, ವಂಚನೆ ಇತ್ಯಾದಿ ಪ್ರಕರಣಗಳಲ್ಲಿ ಜೈಲು ಸೇರುತ್ತಿದ್ದಾರೆ. ರಾಜಕಾರಣಿಗಳನ್ನು ಓಲೈಸುವ ಸರಣಿ ಸರಣಿ ಕಾರ್ಯಕ್ರಮ ಮಾಡುವ ಪತ್ರಕರ್ತರು, ಐಸಿಯುಗೆ ನುಗ್ಗಿ ಮೆದುಳು ಜ್ವರ ಪೀಡಿತ ಮಕ್ಕಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಮೇಲೆ ವಾಗ್ದಾಳಿ ನಡೆಸುತ್ತಾರೆ. ಕಾಲ ಸರಿಯುತ್ತಿದ್ದ ಹಾಗೆ, ಹೆಚ್ಚೆಚ್ಚು ಮಾಧ್ಯಮ ಸಂಸ್ಥೆಗಳು ಬೆರಳೆಣಿಕೆಯ ಕಾರ್ಪೋರೇಟ್ ಕುಳಗಳ ಆಸ್ತಿಗಳಾಗುತ್ತಿವೆ.

ದೇಶದ ಅತೀ ದೊಡ್ಡ ಮಾಧ್ಯಮ ಸಂಸ್ಥೆಗಳಲ್ಲಿ ಒಂದಾದ ಟೈಮ್ಸ್ ಗುಂಪಿನ ಹಿರಿಯ ಸ್ಥಾನದಲ್ಲಿರುವ ವ್ಯಕ್ತಿ, ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮತ್ರ್ಯಸೆನ್‍ರ ಕುರಿತ ಸುಳ್ಳುಗಳನ್ನು ಖುದ್ದು ಪ್ರಚಾರ ಮಾಡುತ್ತಾರೆ. ಅದರ ಕುರಿತು ಮಾತನಾಡಿದ ಸೆನ್, ಇಷ್ಟು ಪುಟ್ಟ ಲೇಖನದೊಳಗೆ ಅಷ್ಟೊಂದು ಸುಳ್ಳುಗಳನ್ನು ಪೇರಿಸಿರುವ ಅವರ ಸಾಮಥ್ರ್ಯವನ್ನು ಅಭಿನಂದಿಸಬೇಕು ಎಂದರಂತೆ. ಇನ್ನೂ ಯಾವ್ಯಾವ ಬಗೆಯ ಕಿರೀಟಗಳನ್ನು ದೇಶದ ಮಾಧ್ಯಮಗಳು ಪಡೆದುಕೊಳ್ಳುತ್ತವೋ ಗೊತ್ತಿಲ್ಲ.

ಪರಿಸ್ಥಿತಿ ಹೀಗಿರುವಾಗ, 2 ದಶಕಕ್ಕೂ ಹೆಚ್ಚು ಕಾಲ ದೆಹಲಿಯಲ್ಲಿದ್ದ ಕರ್ನಾಟಕದ ಪತ್ರಕರ್ತರೊಬ್ಬರು ನಮ್ಮಲ್ಲಿ ವಿಸ್ಮಯ ಮೂಡಿಸಿದರು. ಗೌರಿ ಲಂಕೇಶರ ಆಶಯಗಳ ಮುಂದುವರಿಕೆಯ ನ್ಯಾಯಪಥ ಪತ್ರಿಕೆಗೆ ಮಾರ್ಗದರ್ಶನ ಮಾಡಬೇಕೆಂದು ಅವರಲ್ಲಿ ಟ್ರಸ್ಟ್‍ನ ಹಿರಿಯರು ಮನವಿ ಮಾಡಿದರು. ಅದಕ್ಕೆ ಅವರು ವಿಧಿಸಿದ ಷರತ್ತುಗಳು ಆಶ್ಚರ್ಯಕರವಾಗಿತ್ತು. ಅದರಲ್ಲಿ ಮುಖ್ಯವಾದುದು, ತನ್ನ ಆಸ್ತಿ ವಿವರಗಳನ್ನು ಟ್ರಸ್ಟ್‍ನ ಹಿರಿಯರು ಖುದ್ದಾಗಿ ಕೇಳಿಸಿಕೊಳ್ಳಬೇಕು ಮತ್ತು ತಾನು ಇದುವರೆಗೆ ‘ಮಾಡಿರಬಹುದಾದ’ ತಪ್ಪುಗಳ ಕುರಿತ ವರದಿಯನ್ನು ಒಪ್ಪಿಸುತ್ತೇನೆ. ಆ ನಂತರ ಟ್ರಸ್ಟ್‍ಗೆ ಒಪ್ಪಿಗೆಯಿದ್ದರೆ, ಇದರೊಂದಿಗೆ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದರು. ಡಿ.ಉಮಾಪತಿಯವರನ್ನು ಬಲ್ಲ ಯಾರಿಗೂ ಇಂತಹ ವಿಚಾರಗಳಲ್ಲಿ ಯಾವ ಹುಳುಕೂ ಇರುವುದಿಲ್ಲ ಎಂಬ ಖಚಿತ ವಿಶ್ವಾಸವಿತ್ತು. ಆದರೂ ಅಪಾರ ಮುಜುಗರ, ಕಟು ಪ್ರಾಮಾಣಿಕತೆಯ ಅವರು ಸಂಪೂರ್ಣ ಪಾರದರ್ಶಕವಾಗಿ ತಮ್ಮ ಅನಿಸಿಕೆಗಳನ್ನು ಮುಂದಿಟ್ಟರು. ಅದು ಅವರ ಬಗ್ಗೆ ವಿಶ್ವಾಸ ಹೆಚ್ಚಿಸಿದ್ದಷ್ಟೇ ಅಲ್ಲದೇ, ಇತರರಿಗೂ ಒಂದು ಮಾದರಿ ನಿರ್ಮಾಣವಾದಂತಾಯಿತು.

ಈ ‘ಪ್ರಕ್ರಿಯೆ’ ಪೂರ್ಣಗೊಂಡ ನಂತರವೇ ಡಿ.ಉಮಾಪತಿಯವರು ಇದರ ‘ಕನ್ಸಲ್ಟಿಂಗ್ ಎಡಿಟರ್’ ಆಗಲು ಒಪ್ಪಿಕೊಂಡರು. ಹೊಸ ಕಾಲದ ಮತ್ತು ಹೊಸ ಬಗೆಯ ಮಾಧ್ಯಮದ ವಿದ್ಯಾರ್ಥಿಯೆನ್ನುವಷ್ಟು ವಿನಯವನ್ನೂ, ದೀರ್ಘಕಾಲದ ಪತ್ರಿಕೋದ್ಯಮದ ಅನುಭವವನ್ನೂ ಎಲ್ಲಕ್ಕಿಂತ ಮುಖ್ಯವಾಗಿ ಮೌಲ್ಯಗಳಿಗೆ ಬದ್ಧತೆ ಹಾಗೂ ಪ್ರಾಮಾಣಿಕತೆಗಳನ್ನು ಮೈಗೂಡಿಸಿಕೊಂಡಿರುವ ಅವರು ನಮ್ಮ ಸಂಪಾದಕೀಯ ತಂಡದ ಮಾರ್ಗದರ್ಶಕರಾಗಿರುವುದು ಹೆಮ್ಮೆಯ ಸಂಗತಿ. ಕರ್ನಾಟಕದ ಮೂರು ಪ್ರಮುಖ ದಿನಪತ್ರಿಕೆಗಳಲ್ಲಿ (ಕನ್ನಡಪ್ರಭ, ವಿಜಯಕರ್ನಾಟಕ ಮತ್ತು ಪ್ರಜಾವಾಣಿ) ದೆಹಲಿ ವರದಿಗಾರರಾಗಿ ಕೆಲಸ ಮಾಡಿರುವ ಉಮಾಪತಿಯವರು, ಕಳೆದ ಕೆಲ ಕಾಲದಿಂದ ಬರೆದ ಅಂಕಣ ಬರಹಗಳು ರಾಜ್ಯದ ಪ್ರಜ್ಞಾವಂತರನ್ನು ತಟ್ಟಿರುವ ಪರಿ ಅನನ್ಯವಾದುದು.

ಇದರೊಂದಿಗೆ, ಪತ್ರಿಕೆಯ ಜವಾಬ್ದಾರಿಯಲ್ಲಿ ಇನ್ನೂ ಕೆಲವು ಬದಲಾವಣೆಗಳು ಆಗುತ್ತಲಿವೆ. ಹಲವು ಹಿರಿಯರು ಬೇರೆ ಬೇರೆ ರೀತಿಯಲ್ಲಿ ಇದರ ಜೊತೆಗೂಡಲಿದ್ದಾರೆ. ಮುಂಬರುವ ಸಂಚಿಕೆಗಳಲ್ಲಿ ಅಧಿಕೃತವಾಗಿ ನಿಮ್ಮೊಂದಿಗೆ ಅದನ್ನು ವಿಸ್ತೃತವಾಗಿ ಹಂಚಿಕೊಳ್ಳಲಿದ್ದೇವೆ.

ಹೊಸ ಕಾಲದ ಜನಪರ ಮಾಧ್ಯಮದ ಹಲವು ಪ್ರಯೋಗಗಳು ದೇಶಾದ್ಯಂತ ಜಾರಿಯಲ್ಲಿದೆ. ‘80ರ ದಶಕದಲ್ಲಿ ಕರ್ನಾಟಕದ ರಾಜಕಾರಣ, ಸಾಹಿತ್ಯ ಸಂಸ್ಕೃತಿಗಳನ್ನು ಮತ್ತು ಯುವತಲೆಮಾರನ್ನು ಗಾಢವಾಗಿ ಪ್ರಭಾವಿಸಿದ ಲಂಕೇಶ್ ಪತ್ರಿಕೆಯು ಈ ನಾಡಿನ ವಿಶಿಷ್ಟ ಟ್ಯಾಬ್ಲಾಯ್ಡ್ ಆಗಿತ್ತು. ಇಂದು ಅದೇ ಬಗೆಯ ಟ್ಯಾಬ್ಲಾಯ್ಡ್ ಅದೇ ರೀತಿಯ ಪಾತ್ರ ನಿರ್ವಹಿಸಲಾರದು. ಮುದ್ರಣ ಮಾಧ್ಯಮದ ಸಾಧ್ಯತೆಗಳು ಇನ್ನೂ ಮುಗಿದು ಹೋಗಿಲ್ಲ; ಆದರೆ, ವೆಬ್ ಮೀಡಿಯಾದಲ್ಲಿ ಅಪಾರವಾದ ಸಾಧ್ಯತೆಗಳು ತೆರೆದುಕೊಂಡಿವೆ. ಇವೆಲ್ಲವನ್ನೂ ಬೆಸೆದು, ಹೊಸ ನುಡಿಗಟ್ಟು, ಭಾಷೆ-ಪರಿಭಾಷೆಗಳೊಂದಿಗೆ ಈ ಕಾಲದ ಯುವತಲೆಮಾರನ್ನು ಒಳಗೊಳ್ಳುವ ರೀತಿ-ನೀತಿಗಳನ್ನು ರೂಪಿಸುವ ಹಂತದಲ್ಲಿ ನಾವಿದ್ದೇವೆ. ಅದಕ್ಕಾಗಿ ಪ್ರಯೋಗಗಳು ನಡೆಯುತ್ತಿವೆ. ಇದರಲ್ಲಿ ನೀವೆಲ್ಲರೂ ಪಾಲುದಾರರು.

ಈ ಪತ್ರಿಕೆಯು ಒಂದು ಗುಂಪಿನ, ಒಂದು ಪಂಥದ, ಒಂದು ಸೈದ್ಧಾಂತಿಕ ಧಾರೆಯ ಮುಖವಾಣಿಯಲ್ಲ; ದೇಶ ಮತ್ತು ಜನಪರ ಹಿತಾಸಕ್ತಿಯ ಹೊರತಾಗಿ ಬೇರೆ ಆಸಕ್ತಿಗಳೂ ಇಲ್ಲ. ಪ್ರಜಾತಂತ್ರ ಮತ್ತು ಜೀವಪರತೆಯ ಆಶಯಗಳುಳ್ಳ ಎಲ್ಲ ಪಂಥಗಳೂ ಒಟ್ಟುಗೂಡಿ ಒಂದು ಪಂಥವಾಗಲಿ ಎಂಬ ಆಶಯವಷ್ಟೇ ನಮ್ಮದು.

ಇವತ್ತಿನ ಜಾಣಜಾಣೆಯರನ್ನು ಒಳಗೊಳ್ಳುವ ರಂಜನೆ, ಬೋಧನೆ, ಪ್ರಚೋದನೆಗಳು ಎಂದಿನಂತೆ ಪತ್ರಿಕೆಯ ಹೂರಣ ಹಾಗೂ ಸ್ವರೂಪವನ್ನು ನಿರ್ಧರಿಸಬೇಕು. ಹಾಗಾಗಿ ಪತ್ರಿಕೆಯು ನಿಮ್ಮೆಲ್ಲರ ಅಭಿವ್ಯಕ್ತಿಯ ವೇದಿಕೆಯೂ ಆಗಲಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

- Advertisment -

Must Read

FACT CHECK : ಕಾಂಗ್ರೆಸ್ ಪ್ರಣಾಳಿಕೆ ಕುರಿತು ಬಿಜೆಪಿ ಹಾಕಿರುವ ಪೋಸ್ಟ್ ಸುಳ್ಳು

0
"ಕಾಂಗ್ರೆಸ್ ಪ್ರಾಣಾಳಿಕೆಯಾ ಅಥವಾ ಮುಸ್ಲಿಂ ಲೀಗ್ ಪ್ರಣಾಳಿಕೆಯಾ?" "ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಜಾರಿ, ಮುಸ್ಲಿಮರಿಗೆ ಸಂಪತ್ತಿನ ಹಂಚಿಕೆ, ಮುಸ್ಲಿಮರಿಗೆ ವಿಶೇಷ ಮೀಸಲಾತಿ, ವೈಯಕ್ತಿಕ ಕಾನೂನುಗಳನ್ನು ಅಭ್ಯಾಸ ಮಾಡುವ ಸ್ವಾತಂತ್ರ್ಯ, ಮುಸ್ಲಿಮರನ್ನು ನೇರವಾಗಿ ನ್ಯಾಯಾಧೀಶರಾಗಿ ನೇಮಿಸಬೇಕು,...