ಇಂದು ದೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡಿದ್ದಾರೆ. ಆದರೆ ಅದರಲ್ಲಿ ಚೀನಾ, ಲಡಾಖ್ ಸಂಘರ್ಷ, ಸೈನಿಕರ ಸಾವಿನ ಕುರಿತು ಒಂದೂ ಮಾತನಾಡಿಲ್ಲ ಏಕೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಎಲ್ಲಾ ಸುದ್ದಿವಾಹಿನಿಗಳು ಸಹ ಇಂದು ಸಂಜೆ ನಾಲ್ಕು ಗಂಟೆಗೆ ಪ್ರಧಾನಿ ಮೋದಿಯವರು ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕೊರೊನಾ ಎದುರಿಸುವಿಕೆ, ಅನ್ಲಾಕ್ ಮತ್ತು ಚೀನಾದೊಂದಿಗೆ ಸಂಘರ್ಷದ ಕುರಿತು ಚರ್ಚಿಸಲಿದ್ದಾರೆ ಎಂದು ವರದಿ ಮಾಡಿದ್ದವು. ಆದರೆ ಮೋದಿಯವರು ಇಂದಿನ ಭಾಷಣದಲ್ಲಿ ಚೀನಾದ ಕುರಿತು ಸೊಲ್ಲೆತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಪ್ರಧಾನಿಯವರು ತಮ್ಮ ಭಾಷಣವನ್ನು ಉಚಿತ ಆಹಾರ ಧಾನ್ಯ ವಿತರಣೆ ಮತ್ತು ಕೊರೊನಾ ಕುರಿತು ಮುಂಜಾಗ್ರತೆಗೆ ಸೀಮಿತಗೊಳಿಸಿದ್ದಾರೆ. ಭಾರತದ ಬಡ 80 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯಗಳನ್ನು ನೀಡುವ ಸರ್ಕಾರದ ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಅನ್ನ ಯೋಜನೆ ಯೋಜನೆಯನ್ನು ನವೆಂಬರ್ವರೆಗೆ ವಿಸ್ತರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
“ಮುಂದಿನ ಕೆಲವು ತಿಂಗಳುಗಳಲ್ಲಿ ಬರಲಿರುವ ಎಲ್ಲಾ ಹಬ್ಬಗಳನ್ನು ಗಮನದಲ್ಲಿಟ್ಟುಕೊಂಡು, 80 ಕೋಟಿ ಜನರಿಗೆ 5 ಕೆಜಿ ಉಚಿತ ಪಡಿತರ ಮತ್ತು ತಿಂಗಳಿಗೆ 1 ಕೆಜಿ ಬೇಳೆ ನೀಡುವ ಈ ಯೋಜನೆಯನ್ನು ಈಗ ದೀಪಾವಳಿ ಮತ್ತು ಛತ್ತ ಪೂಜೆಯವರೆಗೆ ಅಥವಾ ನವೆಂಬರ್ ಕೊನೆಯವರೆಗೂ ವಿಸ್ತರಿಸಲಾಗುವುದು. ಇದಕ್ಕಾಗಿ 90,000 ಕೋಟಿ ಖರ್ಚಾಗಲಿದೆ ” ಎಂದು ಪ್ರಧಾನಿ ಮೋದಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದಾರೆ.
ಈ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದು “ಲಡಾಖ್ನಿಂದ ಚೀನಾದ ಸೇನೆಯನ್ನು ಯಾವಾಗ ಹೊರಹಾಕುತ್ತೀರಿ?” ಎಂದು ಕೇಳಿದ್ದಾರೆ.
ಇನ್ನು ಕಾತರದಿಂದ ಕಾಯುತ್ತಿದ್ದ ನರೇಂದ್ರ ಮೋದಿಯವರ ಭಾಷಣವು ಕೇವಲ 17 ನಿಮಿಷಗಳಲ್ಲಿ ಮುಗಿದುಹೋಗಿದೆ. ನಮ್ಮ ಸೈನಿಕರ ಪರಿಸ್ಥಿತಿ ಕುರಿತು ಅವರು ಮಾತನಾಡಲೇ ಇಲ್ಲ ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.
“5 ಕೆ.ಜಿ.ಧಾನ್ಯ! ಪ್ರಧಾನ ಮಂತ್ರಿಗಳಿಂದ ಘೋಷಣೆ. ದೇಶದೆಲ್ಲ ಚಾನಲ್ಲುಗಳ ನೇರ ಪ್ರಸಾರ.” ಎಂದು ಕನ್ನಡದ ಸಾಹಿತಿ ಬಿ ಪೀರ್ಭಾಷಾರವರು ಪ್ರತಿಕ್ರಿಯಿಸಿದ್ದಾರೆ.
ಸಿದ್ಧರಾಮಯ್ಯ ಫ್ರೀ ಅಕ್ಕಿ ಕೊಟ್ರೆ ಜನರು ಸೋಮಾರಿ ಆಗ್ತಾರೆ, ಮೋದಿ ಫ್ರೀ ಅಕ್ಕಿ ಕೊಟ್ರೆ ಜನರು ಆತ್ಮನಿರ್ಭರ್ ಆಗ್ತಾರೆ ಎಂದು ದೀಪಕ್ ನವುಂದರವರು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ನವೆಂಬರ್ವರೆಗೂ 80 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯ: ಪ್ರಧಾನಿ ಮೋದಿ