ಇಂದು ವಿಶ್ವಕ್ಕೆ ಕೊರೊನಾ ಹಬ್ಬಿದೆ. ಅದರ ವಿರುದ್ಧ ಹೋರಾಟ ನಡೆಯುತ್ತಿದೆ. ಆದರೆ ಬಹುತೇಕರು ಇಂದು ಹೇಳುತ್ತಿರುವುದೇನೆಂದರೆ “ಕೊರೊನಾ ತಡೆಯಬಹುದು. ಅದು ಒಂದಲ್ಲ ಒಂದು ದಿನ ನಾಶವಾಗುತ್ತದೆ. ಆದರೆ ಸುಳ್ಳು ಸುದ್ದಿಗಳನ್ನು ತಡೆಯಲಾಗದು” ಎಂಬುದಾಗಿದೆ. ಅಷ್ಟು ಬೃಹತ್ ಮಟ್ಟಕ್ಕೆ ಸುಳ್ಳು ಸುದ್ದಿ ಬೆಳೆದುನಿಂತಿದೆ.
ಕೊರೊನಾ ವೈರಸ್ ರೀತಿ ಇನ್ನೊಂದು ವೈರಸ್ ಬೆಳೆದುನಿಂತಿದ್ದು ಸಮಾಜಕ್ಕೆ ಮಾರಕವಾಗಿದೆ. ಅದೇ ಕೋಮುದ್ವೇಷ ಮತ್ತು ಸುಳ್ಳು ಸುದ್ದಿಗಳಾಗಿವೆ. ಕೊರೊನಾ ಸಂಕಷ್ಟದಿಂದ ನಾವು ಮಹಾರಾಷ್ಟ್ರವನ್ನು ಕಾಪಾಡುತ್ತೇವೆ. ಆದರೆ ಸುಳ್ಳು ಸುದ್ದಿ ಹರಡುವವರನ್ನು ನಮ್ಮ ಸರ್ಕಾರ ಸುಮ್ಮನೆ ಬಿಡುವುದಿಲ್ಲ. ತಮಾಷೆಗಾದರೂ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕಿಡಿಕಾರಿದ್ದಾರೆ. ಈ ಕುರಿತು ಸಾಲು ಸಾಲು ಟ್ವೀಟ್ಗಳನ್ನು ಮಾಡಿದ್ದಾರೆ.
We will save Maharashtra from this crisis. But, if someone circulates fake news or videos like commodities or notes being smeared with saliva or with inflammatory content, my law will catch up with them. They will not be spared. Dont do this even for fun.
— CMO Maharashtra (@CMOMaharashtra) April 4, 2020
ಇನ್ನು ಕರ್ನಾಟಕದಲ್ಲಿ ಬಹುತೇಕ ಮುಖ್ಯವಾಹಿನಿ ಮಾಧ್ಯಮಗಳು ಕೊರೊನಾ ಬಂದಿರುವುದು ಮುಸ್ಲಿಮರಿಂದ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಸಂದರ್ಶನ ಮಾಡಿದ ಕನ್ನಡ ಎರಡು ಚಾನೆಲ್ಗಳು ಮುಸ್ಲಿಮರ ವಿರುದ್ಧ ಪ್ರಶ್ನೆ ಕೇಳಿದಾಗ ಯಡಿಯೂರಪ್ಪನವರು ಒಂದು ಕೋಮಿನ ವಿರುದ್ಧ ಮಾತಾಡಿದರೆ ಕ್ರಮ ಖಚಿತ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಯಾರೂ ಸಹ ಅಲ್ಪಸಂಖ್ಯಾತ ಮುಸ್ಲಿಂ ಬಂಧುಗಳ ಮೇಲೆ ಒಂದು ಶಬ್ಧ ಮಾತಾಡಕೂಡದು: ಯಡಿಯೂರಪ್ಪ
ಇಷ್ಟೆಲ್ಲ ಆದ ಮೇಲೂ ಸಹ ಕನ್ನಡದ ಫೇಕ್ ನ್ಯೂಸ್ ವೆಬ್ಸೈಟ್ ಎಂದೇ ಕುಖ್ಯಾತಿಯಾದ ಪೋಸ್ಟ್ಕಾರ್ಡ್ ಕನ್ನಡ ಮಾತ್ರ ತನ್ನ ಫೇಸ್ಬುಕ್ ಪೇಜ್ನಲ್ಲಿ ಮುಸ್ಲಿಮರ ವಿರುದ್ಧವಾಗಿ, ಮೋದಿಯವರ ಪರವಾಗಿ ಹಸಿ ಸುಳ್ಳುಗಳನ್ನು ಹರಡುವುದನ್ನು ಹೆಚ್ಚು ಮಾಡಿದೆ. ಈ ವಾರ ಅದು ಹರಡಿದ ಸುಳ್ಳುಗಳು ಮತ್ತು ಅವುಗಳ ಅಸಲಿಯತ್ತನ್ನು ನೋಡೋಣ ಬನ್ನಿ.
ಸುಳ್ಳು 1 : ಕೊರೊನಾ ಸೋಂಕಿತ ತಬ್ಲಿಘಿಗಳು ಬೆತ್ತಲು ಓಡಾಡಿದರು.
ಉತ್ತರ ಪ್ರದೇಶದ ಗಾಜಿಯಾಬಾದ್, ಕಾನ್ಪುರ ಮೊದಲಾದೆಡೆ ಕ್ವಾರಂಟೈನ್ನಲ್ಲಿ ಬೆತ್ತಲೆ ಓಡಾಡಿದ ತಬ್ಲಿಘಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಯೋಗಿ ಆದಿತ್ಯನಾಥ್ರಂಥಾ ಖಡಕ್ ಮುಖ್ಯಮಂತ್ರಿ ಇದ್ದರೆ ಕೊರೋನಾ ನಿರ್ಮೂಲನೆ ಖಂಡಿತಾ ಸಾಧ್ಯ.
ಸತ್ಯ: ತಬ್ಲಿಘಿಗಳು ಬೆತ್ತಲೆ ಓಡಾಡಿದ್ದರೆ ಎಂದು ಮಾಧ್ಯಮಗಳು ತೋರಿಸಿದ ಆ ವಿಡಿಯೋ ಪಾಕಿಸ್ತಾನದ ಕರಾಚಿಯ ಮಸೀದಿಯೊಂದರಲ್ಲಿ ನಡೆದ ಘಟನೆಯಾಗಿದ್ದು ಈ ವಿಡಿಯೋವನ್ನು ಮೊದಲ ಬಾರಿಗೆ ಆಗಸ್ಟ್ 23, 2019ರಂದು ಯೂಟ್ಯೂಬ್ನಲ್ಲಿ ಪೋಸ್ಟ್ ಮಾಡಲಾಗಿದೆ. ಆ ವಿಡಿಯೋದಲ್ಲಿರುವ ವ್ಯಕ್ತಿ ಕರಾಚಿಯ ಪೋಲಿಸ್ ಕಮ್ಯಾಂಡೊ ಒಬ್ಬರ ಮಗನಾಗಿದ್ದು, ಆತನ ಹೆಸರು ಶಾಫಿಕ್ ಅಬ್ರೊ. ಆತ ಮನೋವೈಕಲ್ಯದಿಂದ ಬಳಲುತ್ತಿದ್ದು ಈ ಘಟನೆಯ ನಂತರ ಪೋಲಿಸರು ದಸ್ತಗಿರಿ ಮಾಡಿದ್ದರು ಎಂದು ಹಲವು ಫ್ಯಾಕ್ಟ್ ಚೆಕ್ ವೆಬ್ಸೈಟ್ಗಳು ವರದಿ ಮಾಡಿವೆ.
ವಿಡಿಯೋದಲ್ಲಿ ಚಿತ್ರತವಾಗಿರುವ ಮಸೀದಿಯ ಕರಾಚಿಯದ್ದು ಎಂಬುದಕ್ಕೆ ಮತ್ತೊಂದು ಸಾಕ್ಷಿ ಇಲ್ಲಿದೆ ನೋಡಿ.
ಸುಳ್ಳು 2: ಅಮೆರಿಕ ಭಾರತಕ್ಕೆ ಶರಣಾಗಿ ಸಹಾಯ ಕೇಳುತ್ತಿದೆ. ಭಾರತ ಮೂರು ಷರತ್ತುಗಳನ್ನು ಮುಂದಿಟ್ಟಿದೆ
ಅಂದು ಬಾರ್ಡರ್ನಲ್ಲಿ ಗುಂಡು ಹೊಡಿಯೋಕೂ ಅಮೆರಿಕಾ ಅಪ್ಪಣೆ ಕೇಳುತ್ತಿದ್ದ ನಾವು, ಇಂದು ಅಮೆರಿಕಾನೇ ಬಂದು ನಮ್ಮ ಸಹಾಯ ಕೇಳುವಂತೆ ದೇಶವನ್ನು ಅಭಿವೃದ್ಧಿ ಮಾಡಿದ ನರೇಂದ್ರ ಮೋದಿಯವರಿಗೆ ಧನ್ಯವಾದಗಳು ಎಂದು ಪೋಸ್ಟ್ ಕಾರ್ಡ್ ಹೇಳಿದೆ.
ಭಾರತ ಸರ್ಕಾರ ಹೈಡ್ರಾಕ್ಸಿಕ್ಲೋರೋಕ್ವಿನ್ ರಪ್ತು ಮಾಡಲು ಅಮೇರಿಕಾಗೆ ವಿಧಿಸಿದ ಷರತ್ತುಗಳು
1 ಭಾರತೀಯ ಔಷಧೀಯ ಕಂಪನಿಗಳಿಗೆ ಅಮೇರಿಕಾದಲ್ಲಿ ಮಾರುಕಟ್ಟೆಯನ್ನು ತೆರೆಯಬೇಕು.
2 FDA ಹೆಸರಿನಲ್ಲಿ ವಿಧಿಸಲಾದ ಎಲ್ಲಾ ನಿರ್ಬಂಧಗಳನ್ನು ತೆಗೆದುಹಾಕಬೇಕು.
3 ಇನ್ನು ಮುಂದೆ ಭಾರತೀಯ ಔಷಧಿಯ ಕಂಪನಿಗಳಿಗೆ ಯಾವುದೇ ತೊಂದರೆಯಾಗದಂತೆ ಕಾನೂನಿನ ಭದ್ರತೆ ಒದಗಿಸಬೇಕು
ಅಮೆರಿಕ ಈ ಮೂರು ಷರತ್ತುಗಳನ್ನು 24 ಘಂಟೆಯ ಒಳಗಾಗಿ ಒಪ್ಪಿಕೊಂಡಿತ್ತು.
ಭಾರತ ಈಗ ಯಾರಿಗೂ ಬಗ್ಗುವುದಿಲ್ಲ ಭಾರತದೆದುರು ಎಲ್ಲರೂ ಬಾಗಲೇಬೇಕು ಎಂದೂ ಸಹ ಪೋಸ್ಟ್ ಕಾರ್ಡ್ ಕೊಚ್ಚಿಕೊಂಡಿದೆ.
ಸತ್ಯ: ಇದು ಸಂಪೂರ್ಣ ಸುಳ್ಳಾಗಿದೆ. ಮೊದಲಿಗೆ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಲೇರಿಯಾ ನಿರೋಧಕ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳ ಮೇಲಿನ ರಫ್ತು ತೆರವುಗೊಳಿಸದಿದ್ದರೆ ಪ್ರತಿಕಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಧಮಕಿ ಹಾಕಿದ್ದರು. ಅದಕ್ಕೆ ಬೆದರಿದ ಮೋದಿಯವರು ಕೂಡಲೇ ನಿರ್ಬಂಧ ತೆರವುಗೊಳಿಸಿದರು. ನಂತರವಷ್ಟೇ ಅಮೆರಿಕಾ ಭಾರತಕ್ಕೆ ಧನ್ಯವಾದ ಹೇಳಿದ್ದು.
ಟ್ರಂಪ್ರವರ ಮಾತುಗಳಲ್ಲೇ ಕೇಳಿ
I spoke to him (PM Modi), Sunday morning & I said we appreciate it that you are allowing our supply (of Hydroxychloroquine) to come out, if he doesn't allow it to come out, that would be okay, but of course, there may be retaliation, why wouldn't there be?: US Pres Donald Trump pic.twitter.com/kntAqATp4J
— ANI (@ANI) April 6, 2020
ಸುಳ್ಳು 3:ಚೀನಾ ನಂಬರ್ ಒನ್ ಆಗಬೇಕೆಂದು ಜೈವಿಕ ಅಸ್ತ್ರ ಬಳಸಿ ಕೊರೊನಾ ಹರಡುತ್ತಿದೆ.
ಚೀನಾ ತನ್ನ ಸಾಮಾಜಿಕ ಹೊಣೆಗಾರಿಕೆಯನ್ನು ಮರೆತು ನಿಯಮಗಳ ಉಲ್ಲಂಘಿಸಿದೆ. ನಂಬರ್ ಒನ್ ಆಗಬೇಕೆಂದು ಜೈವಿಕ ಅಸ್ತ್ರ ಬಳಸಿ ಕೊರೊನಾ ಹರಡುತ್ತಿದೆ ಎಂದು ಇದೇ ಪೋಸ್ಟ್ ಕಾರ್ಡ್ ಕನ್ನಡ ಸುಳ್ಳು ಹಬ್ಬಿಸಿದೆ.
ಸತ್ಯ: ವೈರಸ್ ಅನ್ನು ವಿನ್ಯಾಸಗೊಳಿಸಲಾಗಿದೆ ಅಥವಾ ಉದ್ದೇಶಪೂರ್ವಕವಾಗಿ ಬಿಡುಗಡೆ ಮಾಡಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ” ಎಂದು ಸ್ವಿಟ್ಜರ್ಲೆಂಡ್ನ ಬಾಸೆಲ್ ವಿಶ್ವವಿದ್ಯಾಲಯದ ಆಣ್ವಿಕ ಸಾಂಕ್ರಾಮಿಕ ರೋಗಶಾಸ್ತ್ರಜ್ಞೆ ಎಮ್ಮಾ ಹಾಡ್ಕ್ರಾಫ್ಟ್ ಹೇಳುತ್ತಾರೆ.
ಕ್ಯಾಲಿಫೋರ್ನಿಯಾದ ಲಾ ಜೊಲ್ಲಾದಲ್ಲಿರುವ ಸ್ಕ್ರಿಪ್ಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್ನ ಸಾಂಕ್ರಾಮಿಕ ರೋಗ ಸಂಶೋಧಕ ಆಂಡರ್ಸನ್ ಇದರ ಬಗ್ಗೆ ಸಂಶೋಧನೆ ನಡೆಸಿ ಇದು ಮಾನವ ನಿರ್ಮತವಲ್ಲ ನೈಸರ್ಗಿಕ ಎಂದು ಸಾರಿದ್ದಾರೆ. ಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್ ಮಾಡಿ.
ಇನ್ನೊಂದು ಕಡೆ ಕೊರೊನಾ ವೈರಸ್ ತಯಾರಿಸಿ ಚೀನಾಕ್ಕೆ ಮಾರಾಟ ಮಾಡಿದ್ದಕ್ಕಾಗಿ ಯುಎಸ್ ಅಧಿಕಾರಿಗಳು ಹಾರ್ವರ್ಡ್ ಪ್ರಾಧ್ಯಾಪಕ ಡಾ. ಚಾರ್ಲ್ಸ್ ಲೈಬರ್ ಅವರನ್ನು ಬಂಧಿಸಿದ್ದಾರೆ ಎಂಬ ಸಂದೇಶವುಳ್ಳ ವಿಡಿಯೋ ಕ್ಲಿಪ್ ಫೇಸ್ಬುಕ್, ಟ್ವಿಟರ್ ಮತ್ತು ವಾಟ್ಸಾಪ್ನಲ್ಲಿ ಹರಿದಾಡುತ್ತಿದೆ.
ಡಾ. ಲೈಬರ್ ಅವರನ್ನು 2020 ರ ಜನವರಿಯಲ್ಲಿ ಯುಎಸ್ ಫೆಡರಲ್ ಅಧಿಕಾರಿಗಳು ಚೀನಾದಿಂದ ಪಡೆದ ಹಣದ ಮೇಲೆ “ಸುಳ್ಳು, ಕಾಲ್ಪನಿಕ ಮತ್ತು ಮೋಸದ ಹೇಳಿಕೆ ನೀಡಿದ್ದಕ್ಕಾಗಿ” ಬಂಧಿಸಿದ್ದರೆ ಹೊರತು ಅವರಿಗೂ ಕೊರೊನಾಗೂ ಸಂಬಂಧವಿಲ್ಲ.
ಇದನ್ನೂ ಓದಿ: ಕೊರೊನಾ ತಯಾರಿಸಿ ಚೈನಾಗೆ ಮಾರಿದ ಹಾರ್ವಡ್ ಪ್ರಾಧ್ಯಾಪಕನ ಬಂಧನ: ಮತ್ತೊಂದು ಸುಳ್ಳು ಸುದ್ದಿ
ಒಟ್ಟಿನಲ್ಲಿ ಪೋಸ್ಟ್ ಕಾರ್ಡ್ ಕನ್ನಡ ಕೋಮುದ್ವೇಷ ಹರಡುವ ಹಲವು ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುತ್ತಲೇ ಇದೆ. ಆದರೂ ಸಹ ಅವರ ಮೇಲೆ ಕ್ರಮ ಕೈಗೊಳ್ಳಲು ಆಗಿಲ್ಲ ಏಕೆ?
ಅನಂತ್ ಕುಮಾರ್ ಹೆಗಡೆ, ಶೋಭಾ ಕರಂದ್ಲಾಚೆ ಮತ್ತು ಬಸನಗೌಡ ಯತ್ನಾಳ್ ಥರಹದ ಬಿಜೆಪಿಯ ಜನಪ್ರತಿನಿಧಿಗಳೆ ದಿನನಿತ್ಯ ಮುಸ್ಲಿಂ ಸಮಾಜದ ವಿರುದ್ಧ ಹೇಳಿಕೆ ಕೊಡುವ ಕೆಲಸ ಮಾಡುತ್ತಿದ್ದಾರೆ. ಇನ್ನು ಅವರ ಮೇಲೆ ಈ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದು ನಂಬಬೇಕೆ? ಸರಿ ಸರ್ಕಾರ ಮಾಡುತ್ತೋ ಬಿಡುತ್ತೋ. ಸುಳ್ಳು ಸುದ್ದಿಗಳ ವಿರುದ್ಧ ಹೋರಾಡಲು ನಾವೇನು ಮಾಡಬೇಕು ಯೋಚಿಸೋಣ ಅಲ್ಲವೇ?
ಸುಳ್ಳು ಸುದ್ದಿಗಳನ್ನು ಪತ್ತೆ ಹಚ್ಚುವುದು ಹೇಗೆ?
ಕಾನೂನಿನ ವ್ಯಾಪ್ತಿಯಲ್ಲಿ ಪೋಲಿಸ್ ಮತ್ತು ಇತರ ತನಿಖಾ ಏಜೆನ್ಸಿಗಳು ಇದರ ಸತ್ಯಾಸತ್ಯತೆ ಪತ್ತೆಹಚ್ಚುವ ಕೆಲಸ ಮಾಡುತ್ತಿರುತ್ತವೆ. ಜನ ಸಾಮಾನ್ಯರು ಮಾಡಬೇಕಾಗಿರುವುದು ಇಷ್ಟೇ:
- ಸುದ್ದಿ ಮೂಲ ಪರೀಕ್ಷಿಸಿ. ಸಂದೇಶವನ್ನು ಬಿಟ್ಟು ಅದರ ಮೂಲದ ಬಗ್ಗೆ ಹುಡುಕಿ. ಯಾರು ಇದನ್ನು ನಿಮಗೆ ಕಳುಹಿಸಿದ್ದಾರೆ ಅವರು ಕೇವಲ ಸ್ನೇಹಿತರೇ, ಯಾವುದೋ ಗುಂಪಿನ ಸದಸ್ಯರೇ, ನಂಬಿಕಸ್ಥರೇ ತಿಳಿಯಿರಿ.
- ಜಾಲತಾಣದ ಉದ್ದೇಶವೇನು, ಅವರ ಸಂಪರ್ಕ ವಿಳಾಸ ದೂರವಾಣಿ ಸಂಖ್ಯೆ ಇದೆಯೇ ನೋಡಿ.
- ಕೇವಲ ಸುದ್ದಿಯ ತಲೆಬರಹ ಓದಬೇಡಿ, ಅವು ರೋಚಕವಾಗಿರುತ್ತವೆ, ಇಡೀ ಸುದ್ದಿ ಓದಿ ನೋಡಿ.
- ಸುದ್ದಿಯ ಲೇಖಕರ/ಪ್ರಕಾಶಕರ ಬಗ್ಗೆ ಸ್ವಲ್ಪ ಹುಡುಕಿ, ಅವರು ಪೂರ್ವಗ್ರಹಪೀಡಿತರಾಗಿರಬಹುದು.\
- ಸುದ್ದಿಗೆ ಏನಾದರೂ ಬೆಂಬಲಿಸುವಂತಹ ಮೂಲದ ಲಿಂಕ್ ಇದ್ದರೆ ಅದನ್ನು ಜಾಲಿಸಿ ನೋಡಿ. ಪೂರಕವಾಗಿದೆಯೇ ಇಲ್ಲವೇ ಎಂದು. ಎಷ್ಟೋ ಬಾರಿ ಅಂತಹ ಜಾಲತಾಣವೇ ಇರುವುದಿಲ್ಲ.
- ಕೇವಲ ಒರ್ವ ದೊಡ್ಡ ವ್ಯಕ್ತಿಯ ಭಾವಚಿತ್ರವಿದೆ ಮತ್ತು ಅದರೊಂದಿಗೆ ಏನೋ ಹೇಳಿಕೆ ಇದೆ ಎಂದ ಮಾತ್ರಕ್ಕೆ ಅದು ನಿಜವಾಗುವುದಿಲ್ಲ. ಚಾಣಕ್ಯ, ನಾಟ್ರಡ್ಯಾಮಸ್, ಚರ್ಚಿಲ್, ಮೆಕಾಲೆ ಮುಂತಾದವರ ಭಾವಚಿತ್ರದ ಜೊತೆ ಏನೇನೋ ಸಂದೇಶಗಳು ಹರಿದಾಡುತ್ತಿವೆ.
- ಸುದ್ದಿಯ ದಿನಾಂಕ ನೋಡಿ. ಹಳೆಯ ಸುದ್ದಿಗಳು ಹೊಸ ತಲೆಬರಹದೊಂದಿಗೆ ಮತ್ತೆ ಮತ್ತೆ ಕಾಣಸಿಗುತ್ತವೆ.
- ಸುದ್ದಿಯೋ ಕೇವಲ ತಮಾಷೆಯೋ ಸರಿಯಾಗಿ ನೋಡಿ. ಏಪ್ರಿಲ್ 1ರ ಸಂದೇಶಗಳು ವರ್ಷವಿಡೀ ಸುತ್ತುತ್ತಿರುತ್ತವೆ.
- ನಿಮ್ಮ ಸ್ವಂತ ಪೂರ್ವನಿರ್ಧಾರಿತ ನಂಬಿಕೆಗಳು ಸುಳ್ಳನ್ನೇ ನಿಜ ಎಂದು ನಂಬುವಂತೆ ಮಾಡಬಹುದು. ಅದನ್ನು ಸರಿಪಡಿಸಿಕೊಳ್ಳಿ.
- ತಜ್ಞರನ್ನು ಸಂಪರ್ಕಿಸಿ. ಸಂದೇಶ ನಿಜವೋ ಸುಳ್ಳೋ ಎಂದು ಸಂದೇಹವಿದ್ದಲ್ಲಿ ಅದನ್ನು ಮುಂದಕ್ಕೆ ಪಸರಿಸದೇ ಅದನ್ನು ನಂಬಿಕಸ್ಥ ಸತ್ಯಾಸತ್ಯತೆ ಪರಿಶೀಲಿಸುವ ಜಾಲತಾಣಗಳಿಗೆ ಕಳುಹಿಸಿ (ಆಲ್ಟ್-ನ್ಯೂಸ್, ಬೂಮ್ಲೈವ್, ಕ್ವಿಂಟ್ ವೆಬ್ಖೂಫ್, ಫ್ಯಾಕ್ಟ್-ಚೆಕರ್, ಎಸ್.ಎಂ.ಹೋಕ್ಸ್ ಸ್ಲೇಯರ್ ಇತ್ಯಾದಿ). ಸತ್ಯವನ್ನು ಬೆಂಬಲಿಸುವ ಜಾಲತಾಣಗಳನ್ನು ಬೆಂಬಲಿಸಿ.
ಸುಳ್ಳು ಸುದ್ದಿ/ಅಪಪ್ರಚಾರ ಪಸರಿಸಬೇಡಿ. ಇದರಿಂದ ದೇಶಕ್ಕೆ ಯಾವ ಪ್ರಯೋಜನವೂ ಇಲ್ಲ.