ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳಕ್ಕೆ ನೀಡಿದ ಭೇಟಿಯನ್ನು ಕರ್ನಾಟಕ ಕಾಂಗ್ರೆಸ್ “ಡಬ್ಬಲ್ ಸ್ಟಾಂಡರ್ಡ್” ಎಂದು ಹೇಳಿದೆ. ಕಳೆದ ವರ್ಷ ದಕ್ಷಿಣ ರಾಜ್ಯಗಳೆಗೆ ಎರಗಿದ ಪ್ರವಾಹದ ಸಂದರ್ಭದಲ್ಲಿ ಅಂದು 90 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಆದರೆ ಅವರು ಕರ್ನಾಟಕಕ್ಕೆ ಭೇಟಿ ನೀಡಿರಲಿಲ್ಲ ಎಂದು ಟೀಕಿಸಿದೆ.
“ನಾವು ಚಂಡಮಾರುತ ಪೀಡಿತ ಪಶ್ಚಿಮ ಬಂಗಾಳದ ಜೊತೆಗೆ ನಿಲ್ಲುತ್ತೇವೆ. ಆದರೆ ನರೇಂದ್ರ ಮೋದಿ ಅವರ ಡಬ್ಬಲ್ ಸ್ಟಾಂಡರ್ಡ್ ಅನ್ನು ನಾವು ಖಂಡಿಸುತ್ತೇವೆ. ಸಮೀಕ್ಷೆಗಾಗಿ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡುವ ಮೂಲಕ ಪ್ರಧಾನಿ ಪ್ರತಿಕ್ರಿಯಿಸಿದ್ದಾರೆ. ಆದರೆ ಕರ್ನಾಟಕದಲ್ಲಿ ಪ್ರವಾಹ ಮತ್ತು ಭೂಕುಸಿತದ ಸಂದರ್ಭದಲ್ಲಿ ಅವರು ಭೇಟಿ ನೀಡಲಿಲ್ಲ. ಬಂಗಾಳವು ಮುಂದಿನ ವರ್ಷ ಚುನಾವಣೆಯನ್ನು ನಡೆಸುತ್ತಿರಬಹುದು ಆದರೆ ಇಲ್ಲಿಯೂ ಸಹ ಜನರು ಬಳಲುತ್ತಿದ್ದಾರೆ” ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಅಂಫಾನ್ ಚಂಡಮಾರುತದ ಹಿನ್ನೆಲೆಯಲ್ಲಿ ಅಲ್ಲಿನ ಪರಿಸ್ಥಿತಿಯ ತಿಳಿಯಲು ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳಿಗೆ ವೈಮಾನಿಕ ಸಮೀಕ್ಷೆ ನಡೆಸಲು ಪ್ರಧಾನಿ ಮೋದಿ ತೆರಳಿದ್ದಾರೆ. ಅಂಫಾನ್ ಚಂಡಮಾರುತದಿಂದಾಗಿ 76 ಜನರು ಮೃತಪಟ್ಟಿದ್ದಾರೆ.
We stand in solidarity with cyclone affected WB
We condemn double standards of @narendramodiPM has responded by visiting WB for survey
While he never visited Karnataka during floods & landslidesBengal may be having an election next year but people are suffering here as well
— Karnataka Congress (@INCKarnataka) May 22, 2020
ಇಂದು ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್, ಪ್ರಧಾನಿ ಮೋದಿ ಮತ್ತು ಮಮತ ಬ್ಯಾನರ್ಜಿ ವೈಮಾನಿಕ ಸಮೀಕ್ಷೆಯಲ್ಲಿ ಹಾರಾಟ ನಡೆಸಲಿದ್ದಾರೆ.
ಘಟನೆಯ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಿನ್ನೆ ಟ್ವೀಟ್ ಮಾಡಿ “ಈ ಸವಾಲಿನ ಸಮಯದಲ್ಲಿ ಚಂಡಮಾರುತದಿಂದ ಪೀಡಿತರಾದವರಿಗೆ ಸಹಾಯ ಮಾಡಲು ಇಡೀ ರಾಷ್ಟ್ರ ಬಂಗಾಳದ ಜೊತೆ ನಿಂತಿದೆ. ರಾಜ್ಯದ ಜನರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತಿದೆ. ಯಥಾಸ್ಥಿತಿಗಾಗಿ ಪ್ರಯತ್ನಗಳು ನಡೆಯುತ್ತಿವೆ” ಎಂದು ಹೇಳಿದ್ದರು.
ಕಳೆದ ವರ್ಷ ಆಗಸ್ಟ್ ನಲ್ಲಿ ಕರ್ನಾಟಕದ 22 ಜಿಲ್ಲೆಯ 103 ತಾಲ್ಲೂಕುಗಳ ಒಟ್ಟು 2,798 ಗ್ರಾಮಗಳು ಮಳೆ ಮತ್ತು ಪ್ರವಾಹದಿಂದ ಜರ್ಜರಿತವಾಗಿದ್ದವು, ಅಂದು ಸುಮಾರು ಏಳು ಲಕ್ಷ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿತ್ತು.
91 ಜನರು ಪ್ರಾಣ ಕಳೆದುಕೊಂಡು, ಸುಮಾರು 3,400 ಜಾನುವಾರುಗಳು ಕಾಣೆಯಾಗಿದ್ದವು.
ಕೇಂದ್ರವು ರಾಜ್ಯಕ್ಕೆ 1,200 ಕೋಟಿ ರೂ.ಗಳ ಮಧ್ಯಂತರ ಪರಿಹಾರವನ್ನು ಬಿಡುಗಡೆ ಮಾಡಿತು, ಆದರೆ ಪ್ರವಾಹ ಹಾನಿ 35,160.81 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಓದಿ: ಅಂಫಾನ್ ಹಾನಿಯ ಸಮೀಕ್ಷೆ: 83 ದಿನಗಳ ನಂತರ ಮೊದಲ ಪ್ರವಾಸ ಮಾಡಿದ ಮೋದಿ