ಕೃಪೆ: ದಿ ಕ್ವಿಂಟ್
ಅನುವಾದ: ಸೋಮಶೇಖರ್ ಚಲ್ಯ
40ಕ್ಕೂ ಹೆಚ್ಚು ಸಿ.ಆರ್.ಪಿ.ಎಫ್ ಯೋಧರನ್ನು ಬಲಿಪಡೆದ ಪುಲ್ವಾಮ ಘಟನೆ ನಡೆದ ಜಾಗದಿಂದ 15 ಕಿ.ಮೀ ದೂರದಲ್ಲಿರುವ ಅಚನ್ ಎಂಬ ಹಳ್ಳಿಯಲ್ಲಿ 80 ವರ್ಷದ ದೇವಾಲಯವನ್ನು ಹಿಂದೂ ಮುಸ್ಲೀಂ ಇಬ್ಬರು ಜೊತೆಯಾಗಿ ಜೀರ್ಣೋದ್ದಾರ ಮಾಡಲು ಮುಂದಾಗಿದ್ದಾರೆ. ಬಹಳ ಹಿಂದೆಯೇ ಹಿಂದೂ ಮುಸ್ಲೀಂ ಸೋದರರು ಹಮ್ಮಿಕೊಂಡಿದ್ದ ಈ ಜೀರ್ಣೋದ್ಧಾರ ಕಾರ್ಯಕ್ರಮವನ್ನು ಪುಲ್ವಾಮ ಘಟನೆಯ ನಂತರ ಉಂಟಾದ ಕಾಶ್ಮೀರಿಗಳ ಮೇಲಿನ ದಾಳಿ ಮತ್ತು ವ್ಯಾಪಕ ಒತ್ತಡದಿಂದ ಅರ್ಧಕ್ಕೆ ನಿಲ್ಲಿಸಲಾಗಿತ್ತು. ಜಮಾ ಮಸೀದಿಯ ಪಕ್ಕದಲ್ಲೇ ಇರುವ ಈ ದೇವಸ್ಥಾನದಲ್ಲಿ ಮೊನ್ನೆಯಷ್ಟೇ ನಡೆದ ಮಹಾಶಿವರಾತ್ರಿಯ ದಿನದಂದು ಮುಸ್ಲೀಮರು ಎಲ್ಲಾ ಭಕ್ತರಿಗೂ ಕಾಶ್ಮೀರಿ ಸಂಪ್ರದಾಯಿಕ ಕಹ್ವಾ ಚಹಾವನ್ನು ನೀಡಿವ ಮೂಲಕ ದೇವಾಲಯದ ಅಭಿವೃದ್ಧಿಗೆ ಮತ್ತೆ ಚಾಲನೆ ನೀಡಿದ್ದಾರೆ. ಸ್ಥಳೀಯ ಮುಸ್ಲೀಮರು ಅಝಾನ್ನ ಜೊತೆಗೆ ದೇವಾಲಯದ ಗಂಟೆಯ ನಾದವನ್ನೂ ಕೇಳ ಬಯಸುತ್ತಾರೆ ಎನ್ನುವುದು ಇಲ್ಲಿನ ವಿಶೇಷ.
30 ವರ್ಷಗಳ ಹಿಂದೆ ಇಲ್ಲಿ ಒಂದು ಕಡೆ ದೇವಸ್ಥಾನದ ಗಂಟೆಯ ಶಬ್ದ ಬರುತ್ತಿದ್ದರೆ ಮತ್ತೊಂದು ಕಡೆ ಮಸೀದಿಯಿಂದ ಅಝಾನ್ ಕೇಳಿ ಬರುತ್ತಿತ್ತು. ಈಗ ಮತ್ತೆ 30 ವರ್ಷಗಳ ನಂತರ ಮಸೀದಿಯ ಅಝಾನ್ನೊಂದಿಗೆ ದೇವಸ್ಥಾನದ ಸ್ವರವೂ ಜೊತೆಗೂಡುವ ಆ ಕ್ಷಣಕ್ಕಾಗಿ ನಮ್ಮ ಹೃದಯ ಬಯಸುತ್ತಿದೆ ಎಂದು ಸ್ಥಳೀಯ ನಿವಾಸಿ ಮೊಹಮ್ಮದ್ ಯೂನಸ್ ಹೇಳುತ್ತಾರೆ.
ಶಿಥಿಲಗೋಂಡಿರುವ ದೇವಸ್ಥಾನವಿರುವ ಈ ಹಳ್ಳಿಯಲ್ಲಿ ಕೇವಲ ಒಂದೇ ಒಂದು ಪಂಡಿತ್ ಕುಟುಂಬವಿದ್ದು, ಅವರಿಗಾಗಿ ಮಸೀದಿಯ ಔಖಾಫ್ ಸಮಿತಿಯು ಅವರೊಂದಿಗೆ ದೇವಸ್ಥಾನವನ್ನು ಮರುಸ್ಥಾಪಿಸಲು ಮುಂದಾಗಿದ್ದಾರೆ. ಅಂತೆಯೇ ಮುಸ್ಲೀಮರು ಅಕ್ಕಪಕ್ಕದ ಹಳ್ಳಿಯ ಸಂಬಂಧಿಕರಿಗಿಂತ ಹೆಚ್ಚಾಗಿ ಮುಖ್ಯವೆನಿಸುತ್ತಾರೆ, ಇವರ ಅಪೂರ್ವ ಪ್ರೀತಿ ನಮ್ಮ ಸಂಬಂಧಿಕರಿಗಿಂತ ಮಿಗಿಲಾದುದು, ನಾವೆಲ್ಲರೂ ಒಂದೇ ಕುಟುಂಬದವರಂತೆ ಬದುಕುತ್ತಿದ್ದೇವೆ ಎಂದು ಸ್ಥಳೀಯ ನಿವಾಸಿ ಸಂಜಯ್ಕುಮಾರ್ ಮುಸ್ಲೀಮರ ಜೊತೆಗಿನ ಅನುಬಂಧವನ್ನು ಹೇಳಿಕೊಂಡಿದ್ದಾರೆ.
ಇಂತಹ ಬಾಂದವ್ಯ ತುಂಬಿದ ಸೌಹಾರ್ದ ಬದುಕಿಗಾಗಿ ತಮ್ಮ ಜೊತೆಗಿರುವ ಅಣ್ಣ-ತಮ್ಮಂದಿರಂತಿರುವ ಕಾಶ್ಮೀರಿ ಪಂಡಿತರ ಆಚರಣೆಗಾಗಿ ದೇವಾಲಯವನ್ನು ತಮ್ಮಿಂದಾಗುವಷ್ಟು ಶ್ರಮ ಹಾಕಿ ಪುನರಾರಂಭಿಸುತ್ತೇವೆ, ಅದನ್ನು ಅರ್ಧಕ್ಕೆ ಬಿಟ್ಟು ತಮ್ಮೊಡನಿರುವ ಪಂಡಿತರಿಗೆ ನಿರಾಶೆ ಮೂಡಿಸುವುದಿಲ್ಲವೆಂದು ಮಹಮ್ಮೊದ್ ಮಕ್ಬುಲ್ ಹೇಳುತ್ತಾರೆ.
ಕಾಶ್ಮೀರ ಸ್ವಾತಂತ್ರ್ಯ ಪೂರ್ವದಿಂದಲೂ ಹಿಂದೂ ಮುಸ್ಲೀಮರು ಸಹೋದರೆಯ ವಿಶ್ವಾಸ ಹೊಂದಿರುವ ಪ್ರದೇಶವಿದು. ಕಾಶ್ಮೀರಿ ಪಂಡಿತರು ಕಡಿಮೆ ಸಂಖ್ಯೆಯಲ್ಲಿರುವ ಈ ಭಾಗದಲ್ಲಿ ಅಮರನಾಥ ಯಾತ್ರೆ ಯಶಸ್ವಿಯಾಗುವುದು ಮುಸ್ಲೀಮರ ಕಾರ್ಯಶ್ರಮದಿಂದ, ಯಾತ್ರೆಗೆ ಬರುವ ಪ್ರವಾಸಿಗರಿಗೆ ಯಾವುದೇ ತೊಂದರೆಗಳಾದಂತೆ ವ್ಯವಸ್ಥೆ ಮಾಡುವುದು ಮುಸ್ಲೀಮರೆ. ಇಂದಿಗೂ ಅದು ಮುಂದುವೆರೆದುಕೊಂಡು ಬಂದಿದೆ. ಧರ್ಮದ ಹಂಗಿಲ್ಲದೆ ಸಹಬಾಳ್ವೆ ಜೀವನವನ್ನು ಬಯಸಿ ಬದುಕುತ್ತಿರುವ ಈ ಪ್ರದೇಶ, ನಮ್ಮ ಮಧ್ಯೆ ಸುಳಿದಾಡುತ್ತಿರುವ ಕೋಮುವಾದಿ ಭಯೋತ್ಪಾದಕರ ಕೆಂಗಣ್ಣಿಗೆ ಗುರಿಯಾಗದಿರಲಿ, ಪ್ರೀತಿ ತುಂಬಿದ ಸೌಹಾರ್ದತೆ ದೇಶದ ತುಂಬಾ ಹಬ್ಬಲಿ, ಕಾಶ್ಮೀರಿ ಹಿಂದೂ ಮುಸ್ಲೀಮರ ಸಹಬಾಳ್ವೆ ಎಲ್ಲರಿಗೂ ಮಾದರಿಯಾಗಲಿ.