ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ಸಾರ್ವಜನಿಕ ಕರ್ಫ್ಯೂಗಾಗಿ ಕರೆ ನೀಡಿದ್ದನ್ನು ಗಮನದಲ್ಲಿಟ್ಟುಕೊಂಡು ಆರೆಸ್ಸೆಸ್ ಶಾಖೆಗಳನ್ನು ಬೆಳಿಗ್ಗೆ 6.30 ಕ್ಕೆ ಮೊದಲು ಅಥವಾ ಭಾನುವಾರ ರಾತ್ರಿ 9.30 ರ ನಂತರ ನಡೆಸಲಾಗುವುದು ಎಂದು ಆರ್ಎಸ್ಎಸ್ ಪ್ರಧಾನ ಕಾರ್ಯದರ್ಶಿ ಸುರೇಶ್ ಭಯಾಜಿ ಜೋಶಿ ಹೇಳಿಕೆ ನೀಡಿದ್ದಾರೆ.
“ಸ್ವಯಂಸೇವಕರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ತಮ್ಮ ಪ್ರದೇಶಲ್ಲಿ ಒಟ್ಟುಗೂಡಬಹುದು ಮತ್ತು ಪ್ರಾರ್ಥಿಸಬಹುದು” ಎಂದು ಜೋಶಿ ಹೇಳಿದ್ದಾರೆ. ಭಾನುವಾರ ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ 14 ಗಂಟೆಗಳ ಕಾಲ ಜನತಾ ಕರ್ಫ್ಯೂ ಸಮಯದಲ್ಲಿ ಜನರು ರಸ್ತೆ ಮತ್ತು ಸಾರ್ವಜನಿಕ ಸ್ಥಳಗಳಿಂದ ದೂರವಿರಲು ಪ್ರಧಾನ ಮಂತ್ರಿ ತಮ್ಮ ಭಾಷಣದಲ್ಲಿ ತಿಳಿಸಿದ್ದರು.
ವೈರಸ್ ಹರಡುವುದನ್ನು ತಡೆಯಲು ಸಭೆಗಳನ್ನು ರದ್ದುಗೊಳಿಸುವ ಸರ್ಕಾರದ ನಿರ್ದೇಶನದ ನಂತರ ಆರ್ಎಸ್ಎಸ್ ಅಖಿಲ ಭಾರತೀಯ ಪ್ರತಿನಿಧಿ ಸಭೆಯನ್ನು ಕಳೆದ ವಾರ ರದ್ದುಗೊಳಿಸಿತ್ತು. ವೈರಸ್ ಹರಡುವುದನ್ನು ತೆಡೆಗಟ್ಟಲು ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಲು ಎಲ್ಲಾ ರಾಜ್ಯ ಘಟಕಗಳಿಗೆ ಸೂಚನೆಗಳನ್ನು ಆರೆಸ್ಸೆಸ್ ನೀಡಿದೆ ಎನ್ನಲಾಗಿದೆ. ಆದರೆ ಕೆಲವು ಪ್ರದೇಶಗಳ ಜಿಲ್ಲೆ ಹಾಗೂ ರಾಜ್ಯ ಘಟಕಗಳು ಭಾನುವಾರ ಶಾಖೆಗಳಲ್ಲಿ ಅನುಸರಿಸಬೇಕಾದ ಕಾರ್ಯಕ್ರಮಗಳು ರೂಪಿಸಿದೆ.
ಇಡೀ ದೇಶವೇ ಕೊರೊನ ಭೀತಿಯಲ್ಲಿರುವಾಗ ಇವರು ಶಾಖೆಗಳನ್ನು ನಡೆಸುವುದಾದರೂ ಏಕೆ? ಇವರು ಶಾಖೆಗಳನ್ನು ಜನತಾ ಕರ್ಫ್ಯೂ ಪ್ರಾರಂಭ ಅಥವಾ ಮುಗಿದ ನಂತರ ಮಾಡಿದರೆ ಸೋಂಕು ಹರಡುವುದಿಲ್ಲವೇ ? ಸರಕಾರದ ಆದೇಶವನ್ನು ಮೀರಿ ಸಭೆ ಸೇರುವುದು ಸರಿಯೇ? ಸಾರ್ವಜನಿಕರಿಗೊಂದು ನ್ಯಾಯ? ಆರ್ಎಸ್ಎಸ್ಗೆ ಒಂದು ನ್ಯಾಯ ಸರಿಯೇ? ಶಾಖೆಗಳಲ್ಲಿ ನೂರಾರು ಜನ ಸೇರುವುದು ಅಪಾಯಕ್ಕೆ ಆಸ್ಪದವಲ್ಲವೇ ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಎದ್ದಿವೆ.