Homeಅಂಕಣಗಳುಕಾರ್ಮಿಕ ಹಿತದ ಕಾನೂನುಗಳಿಗೆ ಎಳ್ಳು ನೀರು ಬಿಡಲು ಸರ್ಕಾರವೇ ಮುಂದಾಗಿರುವುದು ಜನದ್ರೋಹದ ಕೃತ್ಯ

ಕಾರ್ಮಿಕ ಹಿತದ ಕಾನೂನುಗಳಿಗೆ ಎಳ್ಳು ನೀರು ಬಿಡಲು ಸರ್ಕಾರವೇ ಮುಂದಾಗಿರುವುದು ಜನದ್ರೋಹದ ಕೃತ್ಯ

- Advertisement -
- Advertisement -

ಸಾಮಾಜಿಕ-ರಾಜಕೀಯ ವ್ಯಾಖ್ಯಾನಕಾರ ಪ್ರೊ.ಯೋಗೇಂದ್ರ ಯಾದವ್ ಅವರು ಈ ವ್ಯಥೆಯ ವಿದ್ಯಮಾನವನ್ನು ಸರ್ಕಾರಿ ಕೃಪಾಪೋಷಿತ ಒತ್ತೆಯಾಳು ಪ್ರಹಸನ ಎಂದು ಬಣ್ಣಿಸಿದ್ದಾರೆ. ಮಹಾನಗರಗಳ ಆರ್ಥಿಕ ಚಟುವಟಿಕೆಗಳ ದೈತ್ಯಚಕ್ರವನ್ನು ತಿರುಗಿಸಲೆಂದು ವಲಸೆ ಕಾರ್ಮಿಕರನ್ನು ಕೈಗಾರಿಕೋದ್ಯಮಗಳ ಒತ್ತೆಯಾಳುಗಳನ್ನಾಗಿ ಕೈವಶ ಮಾಡಿಕೊಳ್ಳಲಾಗುತ್ತಿದೆ. ಈ ಕ್ರೂರ ಮಸಲತ್ತಿನಲ್ಲಿ ಸರ್ಕಾರವೇ ಮುಖ್ಯ ಪಾತ್ರಧಾರಿ. ನೈತಿಕ ದಿಕ್ಸೂಚಿಯನ್ನೇ ಕಳೆದುಕೊಂಡಿರುವ ಸಮಾಜ, ಅಶ್ಲೀಲ ಹಂತ ತಲುಪಿರುವ ವರ್ಗ ಅಸಮಾನತೆಗಳು, ಪಾಶ್ರ್ವವಾಯುಪೀಡಿತ ರಾಜಕಾರಣ ಹಾಗೂ ನಂಜುಭರಿತ ಮೀಡಿಯಾ ಸರ್ಕಾರದೊಂದಿಗೆ ಪ್ರತ್ಯಕ್ಷ-ಪರೋಕ್ಷವಾಗಿ ಕೈ ಕಲೆಸಿರುವ ಅಪರಾಧಿಗಳು.

ಲಾಕ್ ಡೌನ್ ಕಾರಣ ನೇರವಾಗಿ ಉದ್ಯೋಗ ಕಳೆದುಕೊಂಡಿರುವವರ ಸಂಖ್ಯೆ 12 ಕೋಟಿಗೂ ಅಧಿಕ. ಈ ಪೈಕಿ ವಲಸೆ ಕಾರ್ಮಿಕರು ನಾಲ್ಕು ಕೋಟಿ ಮಂದಿ. ತ್ರಿಶಂಕುಗಳಾಗಿ ಸಿಕ್ಕಿ ಹಾಕಿಕೊಂಡಿರುವ ವಲಸೆ ಕಾರ್ಮಿಕರ ಸ್ಥಿತಿಗತಿಗಳ ಕುರಿತು SWAN (Stranded Workers Action Network) ನಡೆಸಿದ ಸಮೀಕ್ಷೆಯಲ್ಲಿ ಹೊರಬಿದ್ದಿರುವ ಅಂಶಗಳು ಸಮಾಜದ ಆತ್ಮಸಾಕ್ಷಿಯನ್ನೂ ಚುಚ್ಚಿಲ್ಲ, ಇತ್ತ ಸರ್ಕಾರದ ಕಣ್ಣನ್ನೂ ತೆರೆಸಿಲ್ಲ. ದೀನದಲಿತರ ಪಾಲಿಗೆ ಸರ್ಕಾರದ ಕಣ್ಣುಗಳು ಶಾಶ್ವತವಾಗಿ ಕುರುಡಾಗಿವೆ ಎಂಬ ಹಳೆಯ ಸತ್ಯವನ್ನು ಈ ಪ್ರಹಸನ ಮತ್ತೊಮ್ಮೆ ಬಯಲಿಗೆಳೆದಿದೆ.

SWAN ಸಮೀಕ್ಷೆಯ ಪ್ರಕಾರ ಶೇ.78ರಷ್ಟು ವಲಸೆ ಕಾರ್ಮಿಕರಿಗೆ ಲಾಕ್ ಡೌನ್ ಅವಧಿಯಲ್ಲಿ ಸಂಬಳ ಸಿಕ್ಕಿಲ್ಲ. ಶೇ.82ರಷ್ಟು ಮಂದಿಗೆ ಸರ್ಕಾರದಿಂದ ಯಾವುದೇ ಬಗೆಯ ದಿನಸಿ ದೊರೆತಿಲ್ಲ. ಶೇ.64ರಷ್ಟು ಕಾರ್ಮಿಕರ ಜೇಬುಗಳಲ್ಲಿ ಉಳಿದಿದ್ದ ಹಣ ನೂರು ರುಪಾಯಿಗೂ ಕಡಿಮೆ. ಯಾವ ಆಸರೆಯೂ ಇಲ್ಲದೆ ಹಸಿದು ಕಂಗೆಟ್ಟವರು ಸಾಯುವುದಿದ್ದರೂ ಅದು ಸ್ವಂತ ಊರಿನಲ್ಲೇ ಎಂದು ಹಂಬಲಿಸುವುದು ಅಪರಾಧವೇ? ಕೋಟಿ ಮಂದಿಗೂ ಹೆಚ್ಚು ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ನೋಂದಣಿ ಮಾಡಿಸಿಕೊಂಡಿದ್ದಾರೆ.

ತಾನು ಚಹಾ ಮಾರಿದ ಬಡವನೆಂದು ಹೇಳಿಕೊಳ್ಳುತ್ತಲೇ ಸುಖ ಸುಪ್ಪತ್ತಿಗೆಗಳಲ್ಲಿ ಓಲಾಡುವ ಪ್ರಧಾನಮಂತ್ರಿಯವರು ಬಡ ಕಾರ್ಮಿಕರನ್ನು ಲೆಕ್ಕಕ್ಕೇ ಇಡದಿರುವುದು ಅತ್ಯಂತ ಸೋಜಿಗದ ಮತ್ತು ಆಘಾತಕಾರಿ ಅಂಶ. ಈ ವಿಶಾಲ ದೇಶದಲ್ಲಿ ಕೋಟ್ಯಂತರ ವಲಸೆ ಕಾರ್ಮಿಕರು ನಾನಾ ರಾಜ್ಯಗಳಲ್ಲಿ ಹೊಟ್ಟೆಪಾಡಿಗಾಗಿ ಹರಡಿ ಹಬ್ಬಿದ್ದಾರೆ. ಆರ್ಥಿಕ ಚಟುವಟಿಕೆಯ ರಥಚಕ್ರಗಳನ್ನು ತಿರುಗಿಸುತ್ತಿದ್ದಾರೆ ಎಂಬ ಕಿಂಚಿತ್ ಅರಿವು ಅವರಿಗೆ ಇದ್ದಿದ್ದರೆ ಲಾಕ್ ಡೌನ್ ಅನ್ನು ಯೋಜಿಸಿಕೊಂಡು ಘೋಷಿಸುತ್ತಿದ್ದರು. ಟ್ರಂಪ್‍ಗೆ ರತ್ನಗಂಬಳಿ ಹಾಸಲೆಂದು, ಮಧ್ಯಪ್ರದೇಶದ ಸರ್ಕಾರ ಕೆಡವಲೆಂದು ಕರೋನಾ ಮಹಾಮಾರಿಯನ್ನು ನಿರ್ಲಕ್ಷಿಸಿದ್ದು ಸರ್ಕಾರದ ಅಪರಾಧ. ಇಲ್ಲವಾದರೆ ಲಾಕ್ ಡೌನನ್ನು ಮುಂಚಿತವಾಗಿಯೇ ಯೋಜಿಸಿ ವಲಸೆ ಕಾರ್ಮಿಕರು ಬಯಸಿದರೆ ಅವರ ರಾಜ್ಯಗಳು- ಊರುಗಳಿಗೆ ಮರಳಲು ವಾರದೊಪ್ಪತ್ತು ಅವಕಾಶ ಕಲ್ಪಿಸಬಹುದಿತ್ತು. ಸರ್ಕಾರದ ಈ ಬೇಜವಾಬ್ದಾರಿತನಕ್ಕೆ ಕೋಟ್ಯಂತರ ಕಾರ್ಮಿಕರು ಯಾಕೆ ಬೆಲೆ ತೆರಬೇಕಿತ್ತು? ಲಾಕ್ ಡೌನ್ ಘೋಷಣೆಗೆ ಮುನ್ನ ಮೋದಿಯವರು ನೀಡಿದ ಕಾಲಾವಕಾಶ ನಾಲ್ಕು ದಿನಗಳಲ್ಲ, ಬದಲಾಗಿ ಕೇವಲ ನಾಲ್ಕು ತಾಸುಗಳು!

ಈ ಬೇಜವಾಬ್ದಾರಿ ಘೋಷಣೆಯ ನಂತರ ಕಾರ್ಮಿಕರಿಗೊಂದು ಕನಿಷ್ಠ ಭದ್ರತೆ ಒದಗಿಸುವ ಕೆಲಸವನ್ನಾದರೂ ಮಾಡಬೇಕಿತ್ತು. ಆದರೆ ಈ ಕೋಟ್ಯಂತರ ಕಾರ್ಮಿಕರು ಅಸ್ತಿತ್ವದಲ್ಲೇ ಇಲ್ಲ ಎಂಬಂತೆ ನಡೆದುಕೊಂಡಿತು ಮೋದಿ ಸರ್ಕಾರ. ಅಂತಹ ಜೀವಿಗಳು ನಮ್ಮ ನಡುವೆ ಇದ್ದಾರೆಂದೂ, ಹಸಿವು ನಿದ್ರೆ ನೀರಡಿಕೆಗಳು ಅವರನ್ನೂ ಬಾಧಿಸುತ್ತವೆಂದೂ ಸರ್ಕಾರ ಮತ್ತು ಸಮಾಜ ಗಮನಿಸಿದ್ದು ಅವರು ಲಕ್ಷ ಲಕ್ಷ ಸಂಖ್ಯೆಯಲ್ಲಿ ಹೆದ್ದಾರಿಗಳಿಗೆ ಇಳಿದಾಗಲೇ. ಆಗಲೂ ಅವರ ಘನತೆಯನ್ನು ಕಾಲಕಸವಾಗಿ ಕಾಣಲಾಯಿತು. ಅಂದು ಶುರುವಾದ ಪೊಲೀಸರ ಲಾಠಿ ಬೂಟುಗಳ ಹೊಡೆತಗಳು, ಅಮ್ಮ ಅಕ್ಕ ಪತ್ನಿಯ ಪ್ರಸ್ತಾಪಿಸಿ ಬೈಯ್ಯುವ ಕೆಟ್ಟ ಬೈಗಳು ಈಗಲೂ ನಿಂತಿಲ್ಲ. ಯಾವ ಅಪರಾಧಕ್ಕೆ ಅವರಿಗೆ ಇಂತಹ ಶಿಕ್ಷೆ?

ಆತ್ಮನಿರ್ಭರತೆ ಅಥವಾ ಸ್ವಾವಲಂಬನೆಯ ಪಾಠವನ್ನು ಪ್ರಧಾನಿ ಹೇಳಿದ್ದಾರೆ. ಆದರೆ ತಮ್ಮನ್ನು ಸದಾ ತುಳಿದು ಅಂಚಿಗೆ ಅಟ್ಟುತ್ತಿರುವ ಅಸಮಾನ ವ್ಯವಸ್ಥೆಯ ವಿರುದ್ಧ ನಿರ್ಗತಿಕ ಶ್ರಮಿಕ ವರ್ಗ ತನ್ನ ಅಸ್ತಿತ್ವಕ್ಕಾಗಿ ಸೆಣೆಸುತ್ತಲೇ ಬಂದಿದೆ. ಅದು ಆರಂಭದಿಂದಲೂ ಸ್ವಾವಲಂಬಿ. ಅಳಿದುಳಿದ ತನ್ನ ಪಾಪಪ್ರಜ್ಞೆಯನ್ನು ತೊಳೆದುಕೊಳ್ಳಲು ಈ ವರ್ಗಕ್ಕೆ ಭಿಕ್ಷೆಯ ಕಾಸು ಎಸೆಯುತ್ತ ಬಂದಿರಬಹುದು ಸರ್ಕಾರಗಳು.

ಈ ದೇಶದ ಬಂಡವಾಳಶಾಹಿ ಕಾರ್ಪೊರೇಟ್ ವಲಯಕ್ಕೆ ವರ್ಷ ವರ್ಷ ಬಜೆಟ್ಟಿನಲ್ಲಿ ಬಿಟ್ಟುಕೊಡಲಾಗುವ ಲಕ್ಷಾಂತರ ಕೋಟಿ ತೆರಿಗೆಗಳಿಗೆ ಹೋಲಿಸಿದರೆ ಶ್ರಮಿಕ ವರ್ಗಕ್ಕೆ ಸರ್ಕಾರ ನೀಡುವುದು ಬಿಡಿಗಾಸಲ್ಲದೆ ಇನ್ನೇನೂ ಅಲ್ಲ. ಮನೆಗಳಿಗೆ ಮರಳಲು ಈ ಜನವರ್ಗ ರೇಲುಗಾಡಿಯ ಟಿಕೆಟ್ ದರವನ್ನು ಕಾಸಿಗೆ ಕಾಸು ತೆತ್ತು ಭರಿಸಿದೆ ಎಂಬುದು ನೆನಪಿರಲಿ.

ಸಮಾನತೆಯ ಆಧಾರದ ಮೇಲೆ ಕಟ್ಟಲಾದ ಸಮಾಜಗಳಲ್ಲಿ ಬಂಡವಾಳದ ಹೆಗಲನ್ನು ಬೆವರು ಸವಾರಿ ಮಾಡಬೇಕು. ಆದರೆ ವಾಸ್ತವವಾಗಿ ಬೆವರಿನ ಬಡ ಹೆಗಲುಗಳು ಬಂಡವಾಳದ ಒಜ್ಜೆಯಡಿ ತತ್ತರಿಸಿವೆ.

ದೇಶದ 45 ಕೋಟಿ ಕಾರ್ಮಿಕರ ಪೈಕಿ ಸಂಘಟಿತ ವಲಯದ ಶ್ರಮಿಕರ ಸಂಖ್ಯೆ ಕೇವಲ 1.10 ಕೋಟಿ. ಉಳಿದವರಿಗೆ ಕಾಯಿದೆ ಕಾನೂನುಗಳ ರಕ್ಷಣೆ ಇಲ್ಲ. ಈಗ ಮಹಾಮಾರಿಯ ಹಿನ್ನೆಲೆಯಲ್ಲಿ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಲು, ಸಂಘಟಿತ ವಲಯದ ಕಾರ್ಮಿಕರಿಗೂ ಕಾನೂನು ರಕ್ಷಣೆಯ ನೆರಳನ್ನು ಕಿತ್ತುಕೊಳ್ಳಲಾಗುತ್ತಿದೆ. ಕಾರ್ಮಿಕ ಕಾನೂನುಗಳನ್ನು ಕಾರ್ಮಿಕರ ಹಿತದ ವಿರುದ್ಧ ಬಗ್ಗಿಸಲಾಗುತ್ತಿದೆ. ಈಗಾಗಲೆ ಜರ್ಝರಿತಗೊಂಡಿರುವ ಶ್ರಮಿಕ ಶಕ್ತಿಯ ಹೊಟ್ಟೆ ಮತ್ತು ಬೆನ್ನುಗಳ ಮೇಲೆ ಬಾರಿಸಲಾಗುತ್ತಿದೆ.

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾಯಿದೆ, ಜೀತದಾಳು ಪದ್ಧತಿ ರದ್ದು ಕಾಯಿದೆ ಹಾಗೂ ಸಕಾಲಕ್ಕೆ ಕೂಲಿ ಪಾವತಿ ಮಾಡುವ ಕಾನೂನನ್ನು ಹೊರತುಪಡಿಸಿ ಉಳಿದೆಲ್ಲ ಕಾರ್ಮಿಕ ರಕ್ಷಣಾ ಕಾಯಿದೆ ಕಾನೂನುಗಳನ್ನು ಉತ್ತರಪ್ರದೇಶ ಸರ್ಕಾರ ಮೂರು ವರ್ಷಗಳ ಕಾಲ ರದ್ದು ಮಾಡಿದೆ. ಗುಜರಾತ್ ಸರ್ಕಾರ 1,200 ದಿನಗಳ ಕಾಲ ಈ ಕಾಯಿದೆಗಳಿಂದ ಕೈಗಾರಿಕೆಗಳಿಗೆ ವಿನಾಯಿತಿ ಘೋಷಿಸಿದೆ. ಹಾಲಿ ಎಂಟು ತಾಸುಗಳ ದುಡಿಮೆ ಹನ್ನೆರಡು ತಾಸುಗಳಿಗೆ ಹೆಚ್ಚಲಿದೆ. ಮಧ್ಯಪ್ರದೇಶ ಸರ್ಕಾರ ಮುಂದಿನ ಸಾವಿರ ದಿನಗಳ ಅವಧಿಯಲ್ಲಿ ಅರಂಭಿಸುವ ಕೈಗಾರಿಕೆಗಳಿಗೆ ಎಲ್ಲ ಕಾರ್ಮಿಕ ಕಲ್ಯಾಣ ಕಾನೂನುಗಳಿಂದ ವಿನಾಯಿತಿ ನೀಡಿದೆ.

ರಾಜಸ್ತಾನ, ಪಂಜಾಬ್, ಮಧ್ಯಪ್ರದೇಶ, ಹರಿಯಾಣ ಇದೇ ಹಾದಿ ತುಳಿದಿವೆ. ಮುಂಬರುವ ದಿನಗಳಲ್ಲಿ ಕರ್ನಾಟಕವೂ ಸೇರಿದಂತೆ ಹೆಚ್ಚು ಹೆಚ್ಚು ರಾಜ್ಯಗಳು ಈ ಸಾಲನ್ನು ಸೇರಲಿವೆ.

ಬಡ ಕಾರ್ಮಿಕ ವರ್ಗವನ್ನು ಬಂಡವಾಳಕ್ಕೆ ಒತ್ತೆಯಾಳಾಗಿ ಇರಿಸಲು ಸರ್ಕಾರವೇ ಮುಂದಾಗಿರುವುದು ವಿಕಟ ವಿಡಂಬನೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...