ಬೆಕ್ಕಣ್ಣ ಯಾಕೋ ಬಲು ಬೇಜಾರಿನ ಮುಖ ಹೊತ್ತು ಮನೆಗೆ ಬಂದಿತು.
“ಏನಾತಲೇ… ಈರುಳ್ಳಿ ಇನ್ನೂ ಆಕಾಶದಾಗೆ ತೇಲಾಡಕಹತ್ತೈತಿ ಅಂತ ಬೇಜಾರಾಗಿಯೇನ್” ಅಂತ ಕೇಳಿದೆ.
‘ಅದಕ್ಯಾಕ್ ನಾ ಬೇಜಾರಾಗ್ಲಿ… ನಾ ಏನ್ ಈರುಳ್ಳಿ ತಿನ್ನಾಂವ ಅಲ್ಲ, ಹಾಲು ಕುಡಿಯಾಂವ. ಈರುಳ್ಳಿ ತಿನ್ನಾಕಿ ನೀ ಅಳಬಕು, ನಾ ಅಲ್ಲ’ ಎಂದು ಮುಗುಮ್ಮಾಗಿ ಉತ್ತರಿಸಿತು.
“ಮತ್ಯಾಕ ಹಿಂಗ ಗಡಗಿ ಮಾರಿ ಮಾಡೀ” ಎಂದು ತುಸು ಅನುನಯಿಸಿದೆ.
“ನಾ ಎಷ್ಟ್ ಬಡಕಂಡೆ… ನನ್ನೂ ಸಾಲಿಗಿ ಹಚ್ಚು, ನಾಕ್ ಅಕ್ಸರ ಕಲೀತೀನಿ ಅಂತ. ನೀ ಕೇಳಲಿಲ್ಲ…. ಪಂಕ್ಚರ್ ಅಂಗಡ್ಯಾಗ ಇಲಿ ಹಿಡಿಯೂ ಕೆಲಸಕ್ಕೆ ಹಚ್ಚಿದಿ. ಸಾಲಿ ಕಲಿತು ಏನ್ ಕಡಿತಿ, ದಗದ ಮಾಡಬಕು ಅಂತ್ಹೇಳಿ ನಾ ಮರಿ ಇದ್ದಾಗೇ ಕೆಲಸಕ್ಕೆ ಹಚ್ಚಿದಿ…ಈಗ ನೋಡು” ಎಂದು ಅಳುಮುಖ ಮಾಡಿತು.
“ಏನಾತಲೇ ಈಗ… ಮತ್ತ ಎಲ್ಲಾರೂ ಸಾಲಿ ಕಲಿತು ಶಾಣೇ ಆಗಿ, ಕಂಪ್ಯೂಟರ್ ಮುಂದ ಕುಂತ್ರ, ಪಂಕ್ಚರ್ ತಿದ್ದೋರು ಯಾರಲೇ… ಬೆಳಗ್ಗಿ ಬೆಳಗ್ಗಿ ಏನ್ ಗೋಳು ಹಚ್ಚಿ ಹೋಗಲೇ” ಎಂದು ಜಬರಿಸಿದೆ.
“ಎದೆ ಸೀಳಿದರೆ ನಾಕ್ ಅಕ್ಸರ ಇಲ್ಲದೋರು, ಪಂಕ್ಚರ್ ಅಂಗಡ್ಯಾಗ ಕೆಲಸ ಮಾಡೋರೆಲ್ಲ ಬೀದೀ ಬದಿ ಪ್ರತಿಭಟನೆ ನಡೆಸ್ಯಾರ ಅಂತ ತೇಜಣ್ಣ ವದರಾಕ ಹತ್ತಿದ್ದ…” ಸುಂಬಳ ಮೇಲೇರಿಸುತ್ತಲೇ ವಿವರಿಸಿತು.
“ಅಂವನ ಕಾರು ಪಂಕ್ಚರ್ ಆದಾಗ ಐಟಿ ಸೆಲ್ ವಳಗ ಕುತ್ತೋರು ಬಂದು ತಿದ್ದತಾರೇನು… ಮತ್ತ ಅವನಿಗೆ ವೋಟು ಹಾಕಿದೋರು ಬರೀ ಪಿಎಚ್ಡಿ ಮಂದಿ, ಕಂಪ್ಯೂಟರ್ ಕಲಿತ ಮಂದಿ ಅಷ್ಟೇ ಏನು…ನಿನಗ ಗೊತೈತಿಲ್ಲೋ, 2011 ಸೆನ್ಸಸ್ ಪ್ರಕಾರ ಬೆಂಗಳೂರು ದಕ್ಷಿಣದಾಗೆ 63 ಸಾವಿರ ಮಂದಿ ಅನಕ್ಷರಸ್ಥರು ಅದಾರ… ಅವನಿಗೆ ವೋಟು ಹಾಕಿದವ್ರಲ್ಲಿ ಒಂದ್ ಹತ್ ಪರ್ಸೆಂಟಾದ್ರೂ ಎದೆ ಸೀಳಿದ್ರ ಒಂದ್ ಅಕ್ಸರ ಇಲ್ಲದೋರೆ ಅದಾರ. ಅಂವ ಮಂಗ್ಯಾನಂಥಂವ ಹೇಳ್ತಾನ ಅಂತ ನೀನೂ ಅಳ್ತೀಯಲ್ಲಲ್ಲೇ… ಚಾ ಮಾರೂದು ಎಷ್ಟ್ ವಳ್ಳೆ ಕೆಲಸನೋ ಪಂಕ್ಚರ್ ತಿದ್ದೂದೂ ಅಷ್ಟೇ ವಳ್ಳೆ ಕೆಲಸ” ನಾನು ಇಷ್ಟುದ್ದ ಹೇಳಿ ಸಮಾಧಾನಿಸಲು ಯತ್ನಿಸಿದೆ.
“ಆದ್ರ ಚಾ ಮಾರೂ ಮಂದೀನೆ ಬ್ಯಾರೆ ಅಂತ, ಪಂಕ್ಚರ್ ತಿದ್ದೂ ಮಂದೀನೆ ಬ್ಯಾರೆ ಅಂತ. ನನಗೇನ್ ಅಷ್ಟ್ ತಿಳಿಯಂಗಿಲ್ಲ ಅಂತ ಮಾಡೀಯೇನ್. ಹೋಗ್ಲಿ, ನನ್ನುವು ಎಲ್ಲಾ ಡಾಕ್ಯುಮೆಂಟ್ಸ್ ಸರಿ ಇಟ್ಟೀಯಿಲ್ಲೋ… ಆಮ್ಯಾಗೆ ನಿನ್ ಮುತ್ತಜ್ಜಿ ಎಲ್ಲಿಂದ ಬಂದಾಳ ಅಂತ್ಲೇ ಗೊತ್ತಿಲ್ಲ, ನೀ ಬ್ಯಾರೆ ಪಂಕ್ಚರ್ ಅಂಗಡಿ ಮಂದಿ ಜೋಡಿ ಕೆಲಸ ಮಾಡಾಂವ, ನೀ ಹಿಂದೂಸ್ಥಾನದಂವ ಅಲ್ಲ ಅಂತೆಲ್ಲ ಹೇಳಿ ಕ್ಯಾಂಪಿಗೆ ಕಳಿಸಬ್ಯಾಡ್ರಿ” ಎನ್ನುತ್ತ ಮನೆಯಲ್ಲಿ ತನ್ನ ಡಾಕ್ಯುಮೆಂಟ್ಸ್ ಹುಡುಕತೊಡಗಿತು!