Homeಅಂಕಣಗಳುಹಣ ಇರುವೆಡೆ ಮನುಷ್ಯರ ಗುಣ ಎಂಥದ್ದು? ಗೌರಿ ಲಂಕೇಶರ ಚಿಂತನಾರ್ಹ ಬರಹ

ಹಣ ಇರುವೆಡೆ ಮನುಷ್ಯರ ಗುಣ ಎಂಥದ್ದು? ಗೌರಿ ಲಂಕೇಶರ ಚಿಂತನಾರ್ಹ ಬರಹ

ಹೊಸ ಯೋಜನೆಗಳನ್ನು ಜಾರಿಗೆ ತರುವ ಹುಮ್ಮಸ್ಸಿನಲ್ಲಿದ್ದ ಅಜಯ್, ಐಶಾರಾಮಿ ಬದುಕಿನ ಕನಸ್ಸು ಕಾಣುತ್ತಿದ್ದ ಪ್ರೀತಿ, ತನ್ನ ಗಂಡ ನಲ್ಲೆಯೋರ್ವಳನ್ನು ಇಟ್ಟುಕೊಂಡಿದ್ದು ಗೊತ್ತಾಗಿರುವ ಸ್ವರ್ಣ ಎಲ್ಲರೂ ಸದಾನಂದನ ವಿಲ್‍ನಲ್ಲಿರುವ ಶರತ್ತುಗಳನ್ನು ಕೇಳಿ ದಂಗುಬಡಿದುಹೋಗುತ್ತಾರೆ.

- Advertisement -
- Advertisement -

ಶ್ರಮಜೀವಿಯಾದ ಸದಾನಂದ ಪಟೇಲ್ ಕಷ್ಟಪಟ್ಟು ದುಡಿದು ಕೋಟ್ಯಾಂತರ ರೂಪಾಯಿಗಳ ಆಸ್ತಿಯ ಮಾಲೀಕನಾಗಿದ್ದಾನೆ. ತನ್ನ ಸಾಧನೆ ಬಗ್ಗೆ ಆತನಿಗೆ ತುಂಬಾ ಹೆಮ್ಮೆ ಇದೆ. ಹಾಗೆಯೇ ಅಶಿಕ್ಷಿತಳಾದ ಹೆಂಡತಿ ಸ್ವರ್ಣಳ ಬಗ್ಗೆ, ಇನ್ನೂ ಉಂಡಾಡಿ ಗುಂಡನಂತಾಡುವ ಮಗ ಅಜಯ್ ಬಗ್ಗೆ ಮತ್ತು ಸೌಮ್ಯ ಸ್ವಭಾವದವಳಂತೆ ಕಂಡರೂ ಒಳಗೊಳಗೆ ಕುತಂತ್ರಿಯಾದ ಸೊಸೆ ಪ್ರೀತಿ ಬಗ್ಗೆ ಸದಾನಂದನಿಗೆ ಇನ್ನಿಲ್ಲದಷ್ಟು ಕೋಪ, ಅಸಹನೆ ಮತ್ತು ಸೇಡಿನ ಭಾವನೆ. ಈ ಮೂವರೂ ತನ್ನ ಮರಣದ ನಂತರ ತಾನು ಕಷ್ಟಪಟ್ಟು ದುಡಿದಿದ್ದ ಆಸ್ತಿಯನ್ನೆಲ್ಲ ಮಜಾ ಮಾಡುತ್ತಾ ಕರಗಿಸುತ್ತಾರೆ ಎಂಬ ಗುಮಾನಿ. ಅದಕ್ಕಿಂತ ಮುಖ್ಯವಾಗಿ ಇವರೆಲ್ಲರಿಂದಾಗಿ ತನ್ನದು ಎಂಬುದು ಯಾವುದೂ ಈ ಭೂಮಿಯ ಮೇಲೆ ಉಳಿದಿರುವುದಿಲ್ಲ ಎಂಬ ಜಿಗುಪ್ಸೆ.

ಈತನ ಹೆಸರು ಸದಾನಂದ ಎಂಬುದಾದರೂ ಈತ ಕೋಪಿಷ್ಟ. ಈತ ನಕ್ಕಿದ್ದನ್ನು ನೋಡಿದವರೇ ಇಲ್ಲ. ಇತರರ ಬಗ್ಗೆ ಅಸೂಕ್ಷ್ಮವಾಗಿ ವರ್ತಿಸುವ, ಸದಾ ತನ್ನ ಬಗ್ಗೆ ಮಾತ್ರ ಯೋಚಿಸುವ ಸದಾನಂದ ಆಫೀಸಿನಲ್ಲೂ, ಮನೆಯಲ್ಲೂ ಸರ್ವಾಧಿಕಾರಿ ಧೋರಣೆಯನ್ನು ಮೆರೆಯುವವನು. ಇದರಿಂದ ಬೇಸರವಾದರೂ ಸಂಪ್ರದಾಯಸ್ಥ ಗೃಹಿಣಿಯಾದ ಸ್ವರ್ಣ ಪ್ರತಿಭಟಿಸುವುದಿಲ್ಲ. ಆದರೆ ಅವರ ಮಗ ಅಜಯ್ ಹಾಗಲ್ಲ. ಕಾರಣವಿದ್ದರೂ, ಇರದಿದ್ದರೂ ತನ್ನ ಅಪ್ಪ ಸದಾನಂದ ತಾಳಿರುವ ನಿಲುವಿಗೆ ವಿರುದ್ಧವಾದ ನಿಲುವನ್ನು ತೆಗೆದುಕೊಳ್ಳುವುದು ಅಜಯ್‍ನ ಸ್ವಭಾವ. ಆ ಮೂಲಕವಾದರೂ ತನ್ನನ್ನು ಸದಾ ಅವಮಾನಿಸುವ ಅಪ್ಪನ ವಿರುದ್ಧ `ಕ್ರಾಂತಿ’ ಸಾಧಿಸಿದ್ದೇನೆಂಬ ಭಾವನೆ ಅವನಿಗೆ.

ಸದಾನಂದನ ಸೊಸೆ ಪ್ರೀತಿ ಮೇಲುನೋಟಕ್ಕೆ ತಗ್ಗಿಬಗ್ಗಿ ನಡೆಯುವ ಯುವತಿಯಂತೆ ಕಂಡರೂ ಆಕೆ ಧನಪಿಶಾಚಿ. ಮುಂದೊಂದು ದಿನ ಸದಾನಂದ ಸತ್ತು ಆತನ ಆಸ್ತಿಯೆಲ್ಲಾ ಅಜಯ್ ಪಾಲಿಗೆ ಬರುತ್ತೆ ಎಂಬ ಕಾರಣಕ್ಕೇ ಆ ಉಂಡಾಡಿಗುಂಡನನ್ನು ಮದುವೆ ಆಗಿರುವವಳು.

ಈ ಮೂವರಲ್ಲದೆ ಸದಾನಂದನ ಬದುಕಿನಲ್ಲಿ ಪ್ರಮುಖ ಪಾತ್ರವಹಿಸುತ್ತಿರುವವಳು ಮಧ್ಯವಯಸ್ಕಿನ ಮಹಿಳೆ ಕಿರಣ್ ಮೆಣಸಿನಕಾಯಿ. ಸದಾನಂದನ ಕಂಪನಿಯ ಬೋರ್ಡ್‍ನಲ್ಲಿ ಪ್ರಮುಖ ಸದಸ್ಯೆಯಾಗಿರುವ ಕಿರಣ್ ಸದಾನಂದನ ಪ್ರೇಯಸಿ ಕೂಡ ಹೌದು. ಬೇರೆಯವರ ಬದುಕನ್ನು ನಿಯಂತ್ರಿಸುವಲ್ಲಿ ಎತ್ತಿದ ಕೈಯಾದ ಸದಾನಂದ ತನ್ನ ಮತ್ತು ಕಿರಣ್ ನಡುವಿನ ಸಂಬಂಧದ ಬಗ್ಗೆ ಬೇರೆಯವರಿಗೆ ಸುಳಿವು ಸಿಗಕೂಡದೆಂದು ಆಕೆಗೆ ಕುಡುಕನೊಬ್ಬನೊಂದಿಗೆ ಮದುವೆ ಮಾಡಿರುತ್ತಾನೆ. ಹಾಗೆ ಮಾಡುವ ಮೂಲಕ ಆಕೆಗೆ ಸಮಾಜದಲ್ಲಿ ಸ್ಥಾನಮಾನ, ಆಕೆಯ ಗಂಡನಿಗೆ ದಿನನಿತ್ಯ ಗುಂಡು ಮತ್ತು ತನಗೆ ಓರ್ವ ಸುಂದರ ಮತ್ತು ದಕ್ಷ ನಲ್ಲೆ ಸಿಗುವಂತೆ ಏರ್ಪಾಡು ಮಾಡಿಕೊಂಡಿರುತ್ತಾನೆ.

ಗುಂಡು, ಸಿಗರೇಟು ಹವ್ಯಾಸಗಳನ್ನು ಹೊಂದಿರುವ ಸದಾನಂದ ಹೈ ಬಿಪಿ, ಡಯಾಬಿಟೀಸ್ ಮತ್ತು ಹೈ ಕೊಲೆಸ್ಟರಾಲ್ ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆ. ತಾನು ಬದುಕಿರುವಾಗ ತನ್ನ ಸುತ್ತಲಿನವರನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಸುತ್ತಿರುವ ಸದಾನಂದ ತಾನು ಸತ್ತ ಮೇಲೂ ಅವರೆಲ್ಲರ ಮೇಲೆ ನಿಯಂತ್ರಣ ಹೊಂದಿರುವುದು ಹೇಗೆ ಎಂದು ಯೋಚಿಸುತ್ತಾನೆ. ತನ್ನ ಅಪಾರ ಸಂಪತ್ತಿನಲ್ಲಿ ನಯಾಪೈಸೆಗೂ ತನ್ನ ಪತ್ನಿ ಸ್ವರ್ಣ, ಮಗ ಅಜಯ್, ಸೊಸೆ ಪ್ರೀತಿ ಮತ್ತು ಕೊನೆಗೆ ನಲ್ಲೆ ಕಿರಣ್ ಕೂಡ ಅರ್ಹರಲ್ಲ ಎಂದೇ ನಂಬಿರುವ ಸದಾನಂದ ಸಾಯುವ ಮುನ್ನ ಒಂದು ವಿಚಿತ್ರ ವಿಲ್ ಬರೆದಿಡುತ್ತಾನೆ.

ಆ ವಿಲ್‍ನಲ್ಲಿ ತನ್ನ ಸರ್ವ ಸಂಪತ್ತನ್ನು ಒಂದು ಟ್ರಸ್ಟ್‍ಗೆ ಬರೆದಿರುತ್ತಾನೆ. ಆ ಟ್ರಸ್ಟ್‍ಗೆ ಕಿರಣ್‍ಳನ್ನೇ ಟ್ರಸ್ಟೀ ಮಾಡಿರುತ್ತಾನೆ. ತನ್ನ 23ರ ಹರೆಯದ ಮಗ ಅಜಯ್‍ಗೆ 45 ವರ್ಷ ವಯಸ್ಸು ತುಂಬಿದಾಗ ಟ್ರಸ್ಟ್ ಅನ್ನು ಇಲ್ಲವಾಗಿಸಿ ತನ್ನ ಇಡೀ ಆಸ್ತಿ ಮಗನಿಗೆ ಬರಬೇಕು ಎಂದು ಆದೇಶಿಸಿರುತ್ತಾನೆ. ಆದರೆ ಅದಕ್ಕೂ ಹತ್ತಾರು ಶರತ್ತುಗಳನ್ನು ವಿಧಿಸಿರುತ್ತಾನೆ. ಪ್ರತಿದಿನ ಅಜಯ್ ಆಫೀಸಿಗೆ ಹಾಜರಾಗಬೇಕೆಂದೂ, ತನಗೆ ಇಷ್ಟವಾದ ಹಲ್ವಾವನ್ನು ಸಕ್ಕರೆ ಕಾಯಿಲೆಯಿಂದಾಗಿ ತಿನ್ನಲಾಗಿದ್ದರಿಂದ ಮಗನೂ ತನ್ನ ಜೀವಮಾನವಿಡೀ ಹಲ್ವಾ ತಿನ್ನಬಾರದೆಂದೂ ಶರತ್ತು ಹಾಕಿರುತ್ತಾನೆ. ಮನೆ ನಿರ್ವಹಣೆಗೆ, ಕೈಕಾಸಿಗೆ ತನ್ನ ಕುಟುಂಬದ ಮೂವರಿಗಲ್ಲದೆ ಟ್ರಸ್ಟಿ ಆಗಿರುವ ಕಿರಣ್‍ಳಿಗೂ ಮಾಸಾಶನವನ್ನು ನಿಗದಿ ಮಾಡಿರುತ್ತಾನೆ. ಹೀಗೆ ತನ್ನ ಸಮಾಧಿಯಿಂದಲೂ ತನ್ನ ಕುಟುಂಬದ ಮೇಲೆ ನಿಯಂತ್ರಣವನ್ನು ಸ್ಥಾಪಿಸಲು ಹವಣಿಸುವ ಸದಾನಂದ ತನ್ನ ನಲ್ಲೆ ಕಿರಣ್‍ಳನ್ನು ಸುಮ್ಮನೆ ಬಿಡುತ್ತಾನೆಯೇ? ಆಕೆ ಕೂಡ ತನ್ನ ಕುಡುಕ ಗಂಡನನ್ನು ತೊರೆದು ತನ್ನ ಮನೆಯಲ್ಲೇ ತನ್ನ ಸಂಸಾರದ ಸದಸ್ಯೆಯಂತೆ ವಾಸಿಸಬೇಕು ಎಂದು ಆದೇಶಿಸಿರುತ್ತಾನೆ. ತಾನು ವಿಧಿಸಿರುವ ಶರತ್ತುಗಳಲ್ಲಿ ಒಂದೇ ಒಂದನ್ನೂ ತನ್ನ ಕುಟುಂಬದ ಸದಸ್ಯರು ಪಾಲಿಸದಿದ್ದರೆ ತನ್ನ ಇಡೀ ಆಸ್ತಿಯನ್ನು ತಾನು ಪಟ್ಟಿ ಮಾಡಿರುವ ಸಂಘ ಸಂಸ್ಥೆಗಳಿಗೆ ದಾನ ಮಾಡಿ ತನ್ನ ಕುಟುಂಬಕ್ಕೆ ನಯಾಪೈಸೆ ಸಿಗಕೂಡದೆಂದು ಹೇಳಿರುತ್ತಾನೆ. ಆದರೆ ಈ ವಿಲ್‍ಅನ್ನು ಸದಾನಂದ ಗೌಪ್ಯವಾಗಿಟ್ಟಿರುತ್ತಾನೆ.

ಮಹೇಶ್ ದತ್ತಾನಿ

ಒಂದು ದಿನ ಸದಾನಂದ ಹೃದಯಘಾತದಿಂದ ಸತ್ತೇ ಹೋಗುತ್ತಾನೆ. ತಾನು ಬರೆದಿಟ್ಟಿರುವ ವಿಲ್‍ಗೆ ತನ್ನ ಕುಟುಂಬದ ಸದಸ್ಯರು ಹೇಗೆ ಪ್ರತಿಕ್ರಿಯಿಸುತ್ತಾರೆಂದು ನೋಡಲು ಆತನ ಆತ್ಮ ಅಲ್ಲೇ ಅವರೆಲ್ಲರ ಮಧ್ಯೆ ಸುಳಿದಾಡುತ್ತಿರುತ್ತದೆ. ಆದರೆ ಅವರು ಯಾರಿಗೂ ಆತನ ಆತ್ಮ ತಮ್ಮ ಮಧ್ಯೆ ಇರುವುದು ಗೊತ್ತಿರುವುದಿಲ್ಲ.

ಹೊಸ ಯೋಜನೆಗಳನ್ನು ಜಾರಿಗೆ ತರುವ ಹುಮ್ಮಸ್ಸಿನಲ್ಲಿದ್ದ ಅಜಯ್, ಐಶಾರಾಮಿ ಬದುಕಿನ ಕನಸ್ಸು ಕಾಣುತ್ತಿದ್ದ ಪ್ರೀತಿ, ತನ್ನ ಗಂಡ ನಲ್ಲೆಯೋರ್ವಳನ್ನು ಇಟ್ಟುಕೊಂಡಿದ್ದು ಗೊತ್ತಾಗಿರುವ ಸ್ವರ್ಣ ಎಲ್ಲರೂ ಸದಾನಂದನ ವಿಲ್‍ನಲ್ಲಿರುವ ಶರತ್ತುಗಳನ್ನು ಕೇಳಿ ದಂಗುಬಡಿದುಹೋಗುತ್ತಾರೆ. ಅವರು ಇಂತಹ ಪರಿಸ್ಥಿತಿಯಲ್ಲಿರುವಾಗಲೇ ಅವರೊಂದಿಗೆ ವಾಸಿಸಲು ಕಿರಣ್ ಬರುತ್ತಾಳೆ.

ಸದಾನಂದನ ವಿಲ್‍ನಿಂದಾಗಿ ಆತನ ಕುಟುಂಬದ ಸದಸ್ಯರ ಬದುಕೇ ಉಲ್ಟಾ ಪಲ್ಟಾ ಅಗಿದೆ. ಆದರೆ ವಿಧಿ ಇಲ್ಲ. ಆತನ ಕೋಟ್ಯಾಂತರ ರೂಪಾಯಿಗಳ ಆಸ್ತಿ ಬರಬೇಕೆಂದರೆ ಆತನ ಎಲ್ಲಾ ಶರತ್ತುಗಳನ್ನು ಪಾಲಿಸಬೇಕು. ಅಜಯ್ ಕೊನೆಗೂ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದನ್ನು ಕಲಿಯುತ್ತಾನೆ. ಆತನ ಹೆಂಡತಿ ಸ್ವರ್ಣ ಗೃಹಿಣಿಯಾಗಿ, ಹೆಂಡತಿಯಾಗಿ ತನ್ನ ಮಿತಿಗಳನ್ನು ಅರ್ಥಮಾಡಿಕೊಳ್ಳುತ್ತಾಳೆ. ಸೊಸೆ ಪ್ರೀತಿ ಕೂಡ ಬದುಕಿನಲ್ಲಿ ಹಣವೇ ಮುಖ್ಯವಲ್ಲ ಎಂದು ಮನಗಾಣುತ್ತಾಳೆ. ಇನ್ನು ಕಿರಣ್‍ಳಲ್ಲೂ ಬದಲಾವಣೆಗಳಾಗುತ್ತವೆ. ಸದಾನಂದ ಹೇಗೆ ತನ್ನನ್ನು ಮತ್ತು ತನ್ನ ಕುಟುಂಬದವರನ್ನು ಮರಣೋತ್ತರವೂ ನಿಯಂತ್ರಿಸುತ್ತಿದ್ದಾನೆ ಎಂದು ಗೊತ್ತಾಗುತ್ತದೆ. ಕೊನೆಗೆ ಅವರೆಲ್ಲ ಜೊತೆಗೂಡಿ ಸದಾನಂದನ ಕೀಲುಬೊಂಬೆಗಳಾಗಿ ಬದುಕುವುದನ್ನು ನಿಲ್ಲಿಸುವ ಮೂಲಕ ಆತನ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾನೆ.

-ಇದು ಯಾವುದೋ ಸಿನಿಮಾದ ಕತೆಯಲ್ಲ. ಬದಲಾಗಿ ನನ್ನ ಹಲವಾರು ವರ್ಷಗಳ ಸ್ನೇಹಿತನೂ, ಸಾಹಿತಿಯೂ ಆಗಿರುವ ಮಹೇಶ್ ದತ್ತಾನಿ ಬರೆದಿರುವ ಒಂದು ನಾಟಕದ ಕಥಾಸಾರಾಂಶ. ಇದನ್ನು ಒಂದು ಸೀರಿಯಸ್ ವಿಷಯದ ಸುತ್ತ ಹೆಣೆದಿದ್ದರೂ ಡೈಲಾಗ್‍ಗಳು ತುಂಬಾ ಮಜವಾಗಿದ್ದು ಇದೊಂದು ಕಾಮಿಡಿ ನಾಟಕವಾಗಿದೆ. ಈ ಇಂಗ್ಲಿಷ್ ನಾಟಕದ ಹೆಸರು `Where there is a will’. ಈಗ ಈ ನಾಟಕವು ಬೆಂಗಳೂರು ಮತ್ತು ಅಲಹಾಬಾದ್ ವಿಶ್ವವಿದ್ಯಾಲಯಗಳಲ್ಲಿ ಪಠ್ಯವಾಗಿದೆ.

ಆಗಸ್ಟ್ 14, 2013


ಇದನ್ನು ಓದಿ: ನೆರೆಯ ಕೇರಳ ಮಾದರಿ ಅನುಸರಿಸಲು ಸರ್ಕಾರ ಸಿದ್ದವಿಲ್ಲವೇಕೆ? : ಕುಮಾರಸ್ವಾಮಿ ಪ್ರಶ್ನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಜಾಗತಿಕ ಮಾದ್ಯಮಗಳಲ್ಲಿ ಸುದ್ದಿಯಾದ ಪ್ರಧಾನಿಯ ದ್ವೇಷ ಭಾಷಣ: ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಟೀಕೆಗೆ ಗುರಿಯಾದ...

0
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಜಸ್ಥಾನದ ಬನ್ಸ್ವಾರಾದಲ್ಲಿ ಮುಸ್ಲಿಮರ ವಿರುದ್ಧ ಮಾಡಿದ್ದ ದ್ವೇಷ ಭಾಷಣ ಜಾಗತಿಕ ಮಾದ್ಯಮಗಳಲ್ಲಿ ಭಾರೀ ಸುದ್ದಿಯಾಗಿದ್ದು, ಮೋದಿ ಮತ್ತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೆ ಗುರಿಯಾಗಿದ್ದಾರೆ. 'ಕೊಳಕು ಭಾಷಣ’ ಆದರೆ...