HomeUncategorizedಈ ಪತ್ರಗಳು ಹೆಚ್ಚಿಸುತ್ತಿರುವುದು ನಮ್ಮ ಸಂತಸವನ್ನಷ್ಟೇ ಅಲ್ಲ

ಈ ಪತ್ರಗಳು ಹೆಚ್ಚಿಸುತ್ತಿರುವುದು ನಮ್ಮ ಸಂತಸವನ್ನಷ್ಟೇ ಅಲ್ಲ

- Advertisement -
- Advertisement -

“ನಮ್ಮ ಗೌರಿ ಪತ್ರಿಕೆಯು ‘ನ್ಯಾಯಪಥ’ ಹೆಸರಿನಲ್ಲಿ ಮತ್ತೆ ಪ್ರಾರಂಭವಾಗಿರುವುದನ್ನು ಓದಿ ಬಹಳ ಸಂತೋಷವಾಗುತ್ತಿದೆ. ತಪ್ಪದೇ ನನ್ನ ವಿಳಾಸಕ್ಕೆ ಪತ್ರಿಕೆ ಕಳಿಸಿರಿ. ಅದರ ಚಂದಾ ಹಣ ಕಳಿಸುವೆನು. ತಾವು ನನ್ನ ವಿಳಾಸಕ್ಕೆ ಪತ್ರಿಕೆ ಕಳಿಸಿದ್ದಕ್ಕೆ ಧನ್ಯವಾದಗಳು. ಉಳಿದ ವಿಷ್ಯ ಆಮೇಲೆ ಪತ್ರಮುಖೇನ ಬರೆಯುವೆನು. ಮೊದಲು ಒಂದು ವರ್ಷದ ಚಂದಾ ಹಣ ಚೆಕ್ ಮೂಲಕ ಕಳಿಸಿ ನಂತರ ಉಳಿದೆಲ್ಲ ವ್ಯವಹರಿಸುತ್ತೇನೆ. ರೈತ ಗೆಳೆಯರಿಗೆ, ನನ್ನ ಮಕ್ಕಳಿಗೂ ಪತ್ರಿಕೆ ತರಿಸಿಕೊಳ್ಳಲು ಹೇಳುವೆನು.

46ನೇ ಸಂಚಿಕೆ ಬಂದಾಗಲಾದರೂ ವಿಷಯ ತಿಳಿಯಿತಲ್ಲ. ನನಗೆ ಆರೋಗ್ಯ ಸರಿಯಿಲ್ಲದೇ ಮೊದಲಿನಂತೆ ತಿರುಗಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿಯೂ ಈ ಪತ್ರಿಕೆ ಓದಲು ಇಷ್ಟು ತಡವಾಯಿತು. ಕ್ಷಮೆ ಇರಲಿ. ನನ್ನ ವಿಳಾಸ ತಿಳಿದು ಪತ್ರಿಕೆ ಕಳಿಸಿದ್ದಕ್ಕಾಗಿ ನೂರಲ್ಲ, ಸಾವಿರ ನಮಸ್ಕಾರಗಳು.’ – ಕಡಿದಾಳು ಶಾಮಣ್ಣ ರೈತ.

ಪೋಸ್ಟ್ ಕಾರ್ಡ್‍ನಲ್ಲಿ ನಮಗೆ ಈ ಪತ್ರ ಬಂದಿತು. ರೈತಸಂಘದ ಹಿರಿಯರಲ್ಲಿ ಹಲವರು ರೂಢಿಸಿಕೊಂಡಿರುವಂತೆ ಹಸಿರು ಇಂಕಿನಲ್ಲಿ ಬರೆದ ಪತ್ರವದು. ಶಾಮಣ್ಣನವರಂತಹ ಹಿರಿಯರಿಗೆ ಇಷ್ಟು ಕಾಲ ಪತ್ರಿಕೆ ತಲುಪಿಸದಿದ್ದಕ್ಕೆ ನಾವು ನಾಚಿಕೆ ಪಟ್ಟುಕೊಳ್ಳಬೇಕು. ಆದರೆ, ಅವರು ತಾನು ಹೆಚ್ಚು ತಿರುಗಾಡದೇ ಇರುವುದರಿಂದ ಪತ್ರಿಕೆಯ ಬಗ್ಗೆ ತಾನೇ ತಿಳಿಯದಿದ್ದುದು ತಪ್ಪು ಎಂದು ಭಾವಿಸುವ ದೊಡ್ಡ ಮನಸ್ಸಿನವರು.
ಇದೇ ರೀತಿಯಲ್ಲಿ ಹೆಚ್ಚು ಓಡಾಡಲು ಆಗದ ಹೇಮಕ್ಕನವರು ನಮ್ಮ ಪತ್ರಿಕೆಯ ಓದನ್ನು ಒಂದು ವಾರವೂ ತಪ್ಪಿಸಿಲ್ಲ. ಪತ್ರಿಕೆಯ ಅಖಂಡ ಅಭಿಮಾನಿಯಾದ ಅವರು ಕಳೆದ ವಾರದ ಸಂಚಿಕೆಯಲ್ಲಿದ್ದ ಪ್ರೂಫ್ ತಪ್ಪುಗಳ ಪಟ್ಟಿ ಮಾಡಿ ಕಳಿಸಿದ್ದಾರೆ.

ನಮ್ಮ ಕನ್ಸಲ್ಟಿಂಗ್ ಎಡಿಟರ್ ಉಮಾಪತಿಯವರು, ಪತ್ರಿಕೆಯನ್ನು ನೋಡಿದಕೂಡಲೇ ಸಗಟಾಗಿ ಸಾಕಷ್ಟು ಹೊಗಳಿ ನಮ್ಮ ಸ್ಫೂರ್ತಿ ಹೆಚ್ಚಿಸುತ್ತಾರೆ. ನಂತರ ನಾವು ಮಾಡಿರುವ ತಪ್ಪುಗಳನ್ನು ಒಂದಾದಮೇಲೆ ಒಂದು ಹೇಳುತ್ತಾರೆ. ಮೂಲೆಯಲ್ಲಿದ್ದ ಕವನದಲ್ಲಿ ಬಚ್ಚಿಟ್ಟುಕೊಂಡಿರುವ ಒಂದು ಪ್ರೂಫ್ ತಪ್ಪು ಸಹ ಅವರಿಗೆ ಕಾಣಿಸಿರುತ್ತದೆ. ಆಯಾ ವಾರದ ಸಂಚಿಕೆ ರೂಪಿಸುವಾಗ ತಾನು ತಲೆ ಮೇಲೆ ಕೂರಬಾರದು ಎಂಬ ಬಗ್ಗೆ ಅವರು ಬಹಳ ಪ್ರಜ್ಞಾಪೂರ್ವಕವಾಗಿರುತ್ತಾರೆ. ಆದರೆ, ಹಿಂದಿನ ಸಂಚಿಕೆಗಳ ಅವರ ರಿವ್ಯೂ ಮುಂದಿನ ಸಂಚಿಕೆಗಳನ್ನೂ ರೂಪಿಸುತ್ತಿರುತ್ತದೆ. ಈ ವಾರ ಉದ್ಯಮಿ ಸಿದ್ದಾರ್ಥ ಹೆಗಡೆಯ ಮಿಸ್ಸಿಂಗ್ ಕುರಿತು ಬರೆಯುವಾಗ ಆತನ ಬದುಕಿನ ಮಾನವೀಯ ಅಂಶಗಳು ಮತ್ತು ರಾಜಕೀಯ ಬಲದ ಮೂಲಕ ಮಾಡಿರಬಹುದಾದ ಹಗರಣಗಳನ್ನು ಎರಡನ್ನೂ ಯಾವ ಬ್ಯಾಲೆನ್ಸ್‍ನಲ್ಲಿ ಬರೆಯಬೇಕೆಂಬ ಕುರಿತು ವಿಶೇಷ ಕಿವಿಮಾತು ಹೇಳಿದರು.

ಶನಿವಾರ, ಭಾನುವಾರ ಮಂಡ್ಯದಲ್ಲಿ ನಡೆದ ಮನುಜಮತ ಸಿನಿಯಾನ ಸಿನೆಮಾ ಹಬ್ಬದಲ್ಲಿ ಮೈಸೂರಿನ ಗೆಳೆಯರೊಬ್ಬರು ಸಿಕ್ಕರು. ಸಿನೆಮಾ ಕ್ಷೇತ್ರದ ಕುರಿತು ಅಪಾರ ಆಸಕ್ತಿ ಮತ್ತು ವಿಶೇಷ ಒಳನೋಟಗಳಿರುವ ಅವರು ‘ನಾನು ಇತ್ತೀಚೆಗೆ ನ್ಯೂಸ್ ಫಾಲೋ ಮಾಡಲು ಬೇರೆ ಯಾವುದನ್ನೂ ನೋಡುತ್ತಿಲ್ಲ ಸರ್. ನಾನುಗೌರಿ.ಕಾಂ ಮಾತ್ರ ನೋಡುತ್ತೇನೆ’ ಎಂದರು. ಅದರಲ್ಲಿ ನಮ್ಮ ಬಗೆಗಿನ ಮೆಚ್ಚುಗೆಗಿಂತ ನ್ಯೂಸ್ ಚಾನೆಲ್‍ಗಳ ಕುರಿತ ಸಿಟ್ಟೇ ಹೆಚ್ಚಿರಬಹುದು ಎನಿಸಿತು.

ಚಿತ್ರದುರ್ಗ ಮತ್ತು ದಾವಣಗೆರೆಗಳಲ್ಲಿ ನಡೆದ ಪತ್ರಿಕಾ ಬಳಗದ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದ ಗಿರೀಶ್ ತಾಳಿಕಟ್ಟೆಯವರಿಗೆ ಆಶ್ಚರ್ಯವಾಗಿತ್ತು. ಅಷ್ಟೂ ವಾರಗಳಲ್ಲಿ ನಮ್ಮಲ್ಲಿ ಯಾವ ಇಶ್ಯೂ ಕುರಿತು ಹೆಚ್ಚು ಲೇಖನಗಳು ಬಂದಿಲ್ಲ ಎಂದು ಕೆಲವು ಓದುಗರು ಗುರುತಿಸಿ ಹೇಳಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಈಗಲೂ ಅವರೆಲ್ಲರಿಗೆ ಲಂಕೇಶರು ಸಂಪಾದಿಸುತ್ತಿದ್ದ ‘ಲಂಕೇಶ್ ಪತ್ರಿಕೆ’ಯೇ ಗುಣಮಟ್ಟದ ಟ್ಯಾಬ್ಲಾಯ್ಡ್ ಹೇಗಿರಬೇಕು ಎಂಬುದಕ್ಕೆ ಅಳತೆಗೋಲು! ಈ ಎರಡು ಜಿಲ್ಲೆಗಳ ಸಭೆಗಳ ಅನುಭವದ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸಮಾಲೋಚನಾ ಸಭೆಗಳು ನಿಗದಿಯಾಗಿವೆ. ಬಿಜಾಪುರದ ಸಭೆಯಲ್ಲಿ ಭಾಗವಹಿಸಲು ಬಸ್ ಹತ್ತುವ ಮುನ್ನ ಇದನ್ನು ಬರೆಯುತ್ತಿದ್ದೇನೆ.

ಇದನ್ನು ಓದಿ: ಮನ ಮುಟ್ಟುವ ಪತ್ರಿಕೋದ್ಯಮದ ಹಾದಿಯಲ್ಲಿ ಇನ್ನೊಂದು ಹೆಜ್ಜೆ

ಮೇಲಿನವೆಲ್ಲವೂ ನಮ್ಮ ಮೇಲಿರುವ ಜವಾಬ್ದಾರಿಯ ಪ್ರಮಾಣವನ್ನು ತೋರುತ್ತಿವೆ. ಇದನ್ನು ಪ್ರೀತಿಯಿಂದ ಸ್ವೀಕರಿಸಲು ಬಹಳಷ್ಟು ಜನರಿದ್ದಾರೆ. ಅದಕ್ಕೆ ಅನುಗುಣವಾಗಿ ರಂಜನೆ, ಬೋಧನೆ, ಪ್ರಚೋದನೆಗಳ ಸರಿಯಾದ ಮಿಶ್ರಣದ ಎರಕ ಹೊಯ್ದು ಪ್ರತೀವಾರವೂ ಪತ್ರಿಕೆ ಸಿದ್ಧಪಡಿಸಬೇಕು. 20 ವರ್ಷಗಳಲ್ಲಿ ಬದಲಾಗಿರುವ ರಾಜಕೀಯ, ಸಾಮಾಜಿಕ, ಸಾಂಸ್ಕøತಿಕ ಪರಿಸ್ಥಿತಿ ಮತ್ತು ಅಭಿರುಚಿಗಳನ್ನು ಅರ್ಥಮಾಡಿಕೊಂಡು, ಈ ಹೊತ್ತಿನ ಜಾಣ ಜಾಣೆಯರಿಗೂ ಇದನ್ನು ತಲುಪಿಸಬೇಕು.

ಸಾಕಷ್ಟು ಸವಾಲುಗಳನ್ನು ಎದುರಿಸುತ್ತಲೇ ಅದನ್ನು ಮಾಡಬೇಕಿದೆ. ಉದಾಹರಣೆಗೆ ಪ್ರೂಫ್ ತಪ್ಪುಗಳ ಬಗ್ಗೆ ನಮಗೂ ಅರಿವಿದೆ. ನಮ್ಮ ಕಚೇರಿಯಲ್ಲಿ ಎ 3 ಸೈಜಿನ ಪ್ರಿಂಟರ್ ಸಹ ಇಲ್ಲ. ಹಾಗಾಗಿ ಕಿರಿದಾದ ಅಕ್ಷರಗಳ ನಡುವೆ ತಪ್ಪುಗಳು ನುಸುಳುತ್ತಲೇ ಇವೆ. ಈ ಸಂಚಿಕೆಯಿಂದ ಮೂರು ಬಾರಿ ಪ್ರೂಫ್ ತಿದ್ದುವ ಮೂಲಕ ಅದನ್ನು ಸರಿಪಡಿಸಿಕೊಳ್ಳುತ್ತೇವೆ. ಪ್ರತೀ ವಾರವೂ ಹೊಸಬರು ಬರೆಯಲಿದ್ದಾರೆ. ಬರಹಗಳ ವೈವಿಧ್ಯ, ನಮ್ಮ ಪ್ರಸಾರ ವ್ಯಾಪ್ತಿ ಮತ್ತು ಆರ್ಥಿಕ ಬಲ ಹೆಚ್ಚಾಗಲು ನೀವೆಲ್ಲರೂ ಇನ್ನಷ್ಟು ಕೈ ಜೋಡಿಸುವ ಅಗತ್ಯವಿದೆ.

ನಿಮ್ಮೆಲ್ಲರ ಪ್ರೀತಿ ಹೆಚ್ಚಾದಂತೆ ಕೆಲವರ ಅಸೂಯೆ ಮತ್ತು ದಾಳಿಯೂ ಹೆಚ್ಚಾಗುತ್ತಾ ಹೋಗುತ್ತದೆ. ಅದನ್ನೂ ಸಮತೋಲನದಿಂದ ಎದುರಿಸುತ್ತಾ ನಮ್ಮ ಕರ್ತವ್ಯವನ್ನು ಮುಂದುವರೆಸುತ್ತೇವೆಂಬ ಭರವಸೆಯನ್ನು ನಮ್ಮ ತಂಡದ ಪರವಾಗಿ ನೀಡುತ್ತೇನೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್, ಕೆ. ಕವಿತಾಗೆ ನೋ ರಿಲೀಫ್‌: ನ್ಯಾಯಾಂಗ ಬಂಧನ ಮೇ 7ರವರೆಗೆ ವಿಸ್ತರಣೆ

0
ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನವನ್ನು...