Homeಪುಸ್ತಕ ವಿಮರ್ಶೆಹಲವು ಮುತ್ತುಗಳ ಸಾಗರ ತಿರುವಳ್ಳುವರ್‍ರವರ ತಿರುಕ್ಕುರಳ್

ಹಲವು ಮುತ್ತುಗಳ ಸಾಗರ ತಿರುವಳ್ಳುವರ್‍ರವರ ತಿರುಕ್ಕುರಳ್

- Advertisement -
- Advertisement -

ತಿರು ಎಂದರೆ ಶ್ರೀ ಎಂದು ಗೌರವಿಸುವ ಪದ. ಕುರಳ್ ಎಂದರೆ ಚಿಕ್ಕ. ತಮಿಳಿನಲ್ಲಿ ಛಂದಸ್ಸಿನ ಹೆಸರೂ ಹೌದು. ಕುರಳ್ ವೆಣ್ಬಾ ಎಂಬುದು ಆ ಛಂದಸ್ಸಿನ ಪೂರ್ಣ ಹೆಸರು. ನಾವು ಚುಟುಕ ಎನ್ನುವುದಿಲ್ಲವೇ ಹಾಗೆ.

ಇನ್ನು ಪುಟ್ಟ ಗಾತ್ರದ್ದಾಗಿ, ಬರಿಯ ಎರಡೇ ಸಾಲಿನದುದಾಗಿರುವ ವಚನಗಳ ಸಂಕಲನವಾಗಿರುವ ತಿರುಕ್ಕುಳ್ ತಮಿಳು ನಾಡಿನ ಅತ್ಯಂತ ಪ್ರಸಿದ್ಧವಾದ ಮತ್ತು ನಾಡು ನುಡಿಯಲ್ಲಿ ಬೆರೆತು ಹೋಗಿರುವ ಕೃತಿ. ಭಾಷೆ, ರಚನೆ, ವಿಷಯ ಮತ್ತು ಆಶಯ ಎಲ್ಲಾ ವಿಚಾರಗಳಲ್ಲೂ ಅದು ಸಾಮಾಜಿಕವಾಗಿ ಮನ್ನಣೆ ಪಡೆದುಕೊಂಡಿದೆ.

ನಿಜ, ತಿರುವಳ್ಳುವರ್ ಕರ್ನಾಟಕದ ಸರ್ವಜ್ಞರಂತೆ ಪುಟ್ಟ ಪುಟ್ಟ ವಾಕ್ಯಗಳಲ್ಲಿ ಜೀವನ ದರ್ಶನವನ್ನು ಮಾಡಿಸುತ್ತಾರೆ. ಹಾಗೆಯೇ ಕಬೀರರಂತೆಯೇ ಇವರು ನೇಯ್ಗೆಯವರು. ನೇಯುವ ಕೆಲಸ ಮಾಡುತ್ತಿದ್ದ ತಿರುವಳ್ಳುವರ್ ಹೊಲಿಯುವ, ಬೆಸೆಯುವ, ಕೂಡಿಸುವ ಕೆಲಸವನ್ನೇ ತಮ್ಮ ಸಾಹಿತ್ಯದ ಮೂಲಕವೂ ಮಾಡುತ್ತಿದ್ದರು. ಅವರ ಸಾಹಿತ್ಯದ ವಸ್ತ್ರವು ಸಮಾಜ, ಅಧ್ಯಾತ್ಮ, ಆತ್ಮಾವಲೋಕನ, ವ್ಯವಸ್ಥೆಯ ವಿಮರ್ಶೆ, ಮನುಷ್ಯತ್ವ, ವಿನಯತೆ; ಹೀಗೆ ವ್ಯಕ್ತಿಗತವಾಗಿ ಒಬ್ಬನ ಹಿತವಾದ ಬದುಕು ಮತ್ತು ಸಮಾಜದಲ್ಲಿ ಹದವಾದ ಮಿಳಿತಗಳೊಂದಾಗಿರುವಂತೆ ಎಳೆಗಳು ಒಂದರೊಳಗೊಂದು ನೇಯ್ದುಕೊಂಡಿರುತ್ತಿದ್ದವು.

“ಸಾಸವೆಯ ಕೊರೆದು ಏಳ್ಕಡಲನೊಳಹೊಗಿಸಿ ಅಡಗುವೊಲು ಸಮರಿದುವು ಕುರಳು” ಅಂದರೆ ಸಾಸುವೆಯನ್ನು ಕೊರೆದು ಟೊಳ್ಳು ಮಾಡಿ ಏಳು ಸಮುದ್ರಗಳನ್ನೂ ಅದರೊಳಗೆ ನುಗ್ಗಿಸಿ ಅಡಗಿಸಿದ ಹಾಗೆ ಈ ಕುರಳು ಎಂದು ಅಭಿಮಾನದಿಂದ ವಿಮರ್ಶಕರೊಬ್ಬರು ಹೇಳುತ್ತಾರೆ. ಈ ಮಾತನ್ನು ಅತ್ಯುತ್ಪ್ರೇಕ್ಷೆ ಎಂದುಕೊಳ್ಳದೇ ರೂಪಕವೆಂದು ವ್ಯಾಕರಣದಲ್ಲಿ ಅಲಂಕಾರವೆಂದು ಬಗೆದರೆ ಒಪ್ಪಿಕೊಳ್ಳುವುದರಲ್ಲಿ ಸಮಸ್ಯೆಯೇನೂ ಇಲ್ಲ.

ಆಗಿನ ಸಮಾಜ ಸುಧಾರಣಾ ದೃಷ್ಟಿಯಿಂದ ಆಗಿನ ಸುಧಾರಕರು ತಮ್ಮ ಕೃತಿಗಳಲ್ಲಿ ವ್ಯವಸ್ಥೆಯ ಅಮಾನವೀಯತೆಯನ್ನು ಧಿಕ್ಕರಿಸಿರುತ್ತಾರೆ, ಅನ್ಯಾಯವನ್ನು ವಿರೋಧಿಸಿರುತ್ತಾರೆ, ಆಗ ಕೊರತೆಯಿರುವ ಮಾನವೀಯತೆಯನ್ನು ಎತ್ತಿ ಹಿಡಿದಿರುತ್ತಾರೆ, ವರ್ಣ ಮತ್ತು ವರ್ಗ ಬೇಧಗಳ ಶೋಷಣೆಯನ್ನು, ಮೌಢ್ಯ, ಅಂಧಾನುಕರಣೆ ಮತ್ತು ಶುಷ್ಕ ಆಚರಣೆಗಳನ್ನು ಖಂಡಿಸಿರುತ್ತಾರೆ. ಆ ಕೃತಿಗಳು ಈಗಲೂ ಪ್ರಸ್ತುತವಾಗಿವೆ ಎಂದರೆ ಆಗಿದ್ದ ಸಮಸ್ಯೆಗಳು ಇನ್ನೂ ಪರಿಹಾರವಾಗಿಲ್ಲ ಎಂದೇ ಅರ್ಥ. ಯಾವಾಗ ಪ್ರಾಚೀನ ಸಮಾಜ ಸುಧಾರಕರ ಕೃತಿಗಳು ಇಂದಿಗೂ ಪ್ರಸ್ತುತ ಎಂದು ಆ ಕೃತಿಕಾರರ ಆರಾಧಕರು ಅಭಿಮಾನದಿಂದ ಹೇಳಿಕೊಳ್ಳುವಾಗ ನನಗೆ ನಾಚಿಕೆಯಾಗುತ್ತದೆ. ಇಷ್ಟು ಹೊತ್ತಿಗೆ ಅವುಗಳು ಅಪ್ರಸ್ತುತವಾಗಬೇಕಿತ್ತು. ಆಗಿಲ್ಲ ಎಂದರೆ ನಮ್ಮ ಸಮಾಜ ಇನ್ನೂ ಸುಧಾರಿಸಿಲ್ಲ ಎಂದೇ ಅರ್ಥ. ಹಳೆಯ ಸಮಸ್ಯೆಗಳು ಹೊಸಹೊಸ ರೂಪಗಳನ್ನು ತಾಳಿಕೊಂಡು ನಮ್ಮೊಡನೆ ಇರುವುದರಿಂದ ಇನ್ನೂ ಬುದ್ಧ, ಬಸವ, ಸರ್ವಜ್ಞ, ತಿರುವಳ್ಳುವರ್, ಕಬೀರ್, ಅಂಬೇಡ್ಕರ್, ಗಾಂಧಿ ಎಲ್ಲಾ ಪ್ರಸ್ತುತವಾಗಿಯೇ ಇರುವುದು.

ವ್ಯಕ್ತಿ ಪೂಜೆಯ ಗಮ್ಮತ್ತಿನಲ್ಲಿ ಕೆಲವೊಮ್ಮೆ ಆ ಕೃತಿಕಾರರ ಎಡವಟ್ಟುಗಳಿಗೆ ನಾವು ಒಂದೋ ಕುರುಡರಾಗಿಬಿಡುತ್ತೇವೆ ಅಥವಾ ಸಮರ್ಥಿಸಿಕೊಂಡು ಬಿಡುತ್ತೇವೆ. ಕುರುಡರಾಗುವುದು ತಪ್ಪು ಆದರೆ ಸಮರ್ಥಿಸುವುದು ಅಪರಾಧ. ತಿರುವಳ್ಳುವರ್ ವಿಷಯದಲ್ಲೇ ತೆಗೆದುಕೊಂಡರೆ, ಅವರ ಹೆಂಡತಿ ವಾಸುಗಿ ತಾನು ಪತಿವ್ರತೆಯೆಂದು ನಿರೂಪಿಸಲು ಮರಳಿನಲ್ಲಿ ಅನ್ನವನ್ನು ಮಾಡುತ್ತಾಳಂತೆ. ಇದೊಂದು ದಂತಕತೆಯೇ ಆಗಿದ್ದರೂ, ತಿರುವಳ್ಳುವರ್ ಹೆಣ್ಣಿನ ಪಾತಿವ್ರತ್ಯವನ್ನು ಎತ್ತಿ ಹಿಡಿಯುವ ಧೋರಣೆ ತೋರುತ್ತಾರೆ. ಇನ್ನು ತಿರುಕ್ಕುರಳಿನಲ್ಲಿಯೂ ಹೆಣ್ಣಾದವಳು ಮನೆಗಷ್ಟೇ ಶೋಭೆ ಮತ್ತು ಅವಳ ಬದ್ಧತೆ ಅವಳ ಸಂಸಾರವನ್ನು ಕಾಪಾಡುವುದು ಎಂದೇ ಪ್ರತಿಪಾದಿಸಿಕೊಂಡು ಬಂದಿದ್ದಾರೆ. ಅವರ ಕಾಲಘಟ್ಟದ ಅಗತ್ಯವೇ ಅವರಿಗೆ ಹಾಗೆ ನುಡಿಸಿರುತ್ತದೆ. ಪುರುಷರು ವ್ಯಾಪಾರಕ್ಕೆ, ವ್ಯವಹಾರಕ್ಕೆ, ಯುದ್ಧಕ್ಕೆ, ಇನ್ನಿತರ ಕಾರ್ಯಗಳಿಗೆಂದು ಮರಳಿ ಬರುವ ಭರವಸೆಯೇ ಇಲ್ಲದಂತೆ ಹೋಗುತ್ತಿದ್ದ ಸಂದರ್ಭದಲ್ಲಿ ಹೆಣ್ಣು ಮನೆಯಲ್ಲಿ ಹಿರಿಯರನ್ನು, ಮಕ್ಕಳನ್ನು, ಆಸ್ತಿಪಾಸ್ತಿಗಳನ್ನು ನೋಡಿಕೊಳ್ಳಬೇಕಾದ ಅನಿವಾರ್ಯತೆ ಮತ್ತು ಅಗತ್ಯತೆಗಳು ಇರುತ್ತಿದ್ದವು. ಆದರೆ ಅವು ಈಗ ನಮಗೆ ಪ್ರಸ್ತುತವಲ್ಲ. ಹಾಗೆಯೇ ಮನಸ್ಸಿನ ನಿಯಂತ್ರಣದ ಬಗ್ಗೆ, ಕೋಪವು ಉಂಟು ಮಾಡುವ ಕೆಡಕುಗಳ ಬಗ್ಗೆ ಹೇಳುವಂತಹ, ಆತ್ಮಾವಲೋಕನದ ಕುರಿತಾದ ಮಾತುಗಳು, ಅಲ್ಲಲ್ಲಿ ಒಂದಿಷ್ಟು ವ್ಯತ್ಯಾಸಗಳಿದ್ದರೂ, ಸಾಕಷ್ಟು ಅನ್ವಯವಾಗುವಂತವೇ ಆಗಿರುತ್ತವೆ. ಒಟ್ಟಾರೆ ಅವರೆಂತಹ ಮಹಾತ್ಮರೇ ಆಗಿರಲಿ, ಅವರೆಷ್ಟೇ ಜನಪ್ರಿಯರೇ ಆಗಿರಲಿ, ಅವರ ಮಾತುಗಳನ್ನು ಮತ್ತು ಅಭಿಪ್ರಾಯಗಳನ್ನು ತೆಗೆದುಕೊಳ್ಳುವಾಗ ಪ್ರಸ್ತುತ ಕಾಲದ ನಮ್ಮ ಬದುಕಿನಲ್ಲಿ, ನಾವಿರುವ ವ್ಯವಸ್ಥೆಯಲ್ಲಿ ಎಷ್ಟರಮಟ್ಟಿಗೆ ಪ್ರಸ್ತುತ ಎಂಬುದನ್ನು ಗಮನಿಸುವಷ್ಟರ ಮಟ್ಟಿಗಿನ ಪ್ರಜ್ಞೆಯ ಅವಶ್ಯಕತೆಯಂತೂ ಇದ್ದೇ ಇರುತ್ತದೆ.

ತಿರುವಳ್ಳುವರ್ ದೇವರ ಹಿರಿಮೆಯನ್ನು ವೈಭವೀಕರಿಸುವುದನ್ನು ನೋಡಿದಾಗ ಮನುಷ್ಯನ ಅಹಂಕಾರವನ್ನು ಮಣಿಸಿ ವಿನಯ ವಿಧೇಯತೆಯನ್ನು ತೋರಲು ಪ್ರಯತ್ನಿಸುವಂತೆ ತೋರುತ್ತದೆ. ತಿರುಕ್ಕುರಳ್ ಕೂಡಾ ಸುಂದರವಾದ ಮತ್ತು ಮೌಲ್ಯಗಳಿಂದ ಕೂಡಿರುವ ಕೃತಿಯೇ. ನಮ್ಮ ಈಗಿನ ಮಣ್ಣಿನಲ್ಲಿ ಬಿತ್ತಬೇಕಾದ ಬೀಜಗಳನ್ನು ಗೌರವದಿಂದಲೇ ಆಯ್ದುಕೊಳ್ಳಬೇಕು.

“ಮನದಲ್ಲಿ ತೊರೆಯದವರು, ತೊರೆದವರ ಹಾಗೆ ವಂಚಿಸುತ”
“ಬಾಳುವವರು, ಇವರಿಗಿಂತಲು ಬೇರೆ ಕಟುಕರಿಲ್ಲ.”
ಇದು ಮನಸ್ಸಿನಲ್ಲಿ ವೈರಾಗ್ಯವಿಲ್ಲದೇ ಹೆಸರಿಗೆ ಸಂನ್ಯಾಸಿಗಳಾಗಿರುವವರನ್ನು ಕುರಿತು ಮಾಡುವ ಟೀಕೆ.
“ತನ್ನ ತಾನ್ ಕಾಪಾಡಿಕೊಳ್ಳುವರೆ ಮುನಿಸ ತಡಕೊಳಬೇಕು
ತಡೆಯದಿರೆ ನನ್ನನೆ ಕೊಲ್ಲುವುದು ಮುನಿಸು”
“ತನಗೆ ಅಹಿತ ಎಂಬುದನು ತಾನು ಅರಿತವನು
ಬೇರೆ ಪ್ರಾಣಿಗೆ ಅಹಿತ ಮಾಡುವುದದೆಂತೊ.”
“ನುಣ್ಣನೆಯ ಶಾಸ್ತ್ರಗಳ ಹಲವ ಕಲಿತರೂ ತನ್ನ
ಸಹಜದರಿವೇ ಮತ್ತೆ ಮಿಕ್ಕು ನಿಲ್ಲುವುದು.”
ತಿರುವಳ್ಳುವರ್ ಸಂತೆಯಲ್ಲಿ ತಾವು ನೇಯ್ದ ವಸ್ತ್ರವನ್ನು ಮಾರಲು ಹೋದಾಗ ಮದಿಸಿದ ಯುವಕನೊಬ್ಬ ಬೆಲೆ ಕೇಳುತ್ತಾನೆ. ಅವರು ಎರಡು ಪಣ ಎನ್ನುತ್ತಾರೆ. ಅವನು ವಸ್ತ್ರವನ್ನು ಅರ್ಧಕ್ಕೆ ಹರಿದು ಕೇಳುತ್ತಾನೆ. ಅವರು ಒಂದು ಪಣವೆನ್ನುತ್ತಾರೆ. ಅದನ್ನೂ ಹರಿದ ಮೇಲೆ ಅರ್ಧ ಪಣ ಎನ್ನುತ್ತಾರೆ. ಆ ಯುವಕನು ವಸ್ತ್ರವನ್ನು ಸಂಪೂರ್ಣ ಹರಿದು ಚೂರು ಚೂರು ಮಾಡಿದ ಮೇಲೆ ಇದಕ್ಕೆ ಬೆಲೆ ಇಲ್ಲ. ನೀನೇ ತೆಗೆದಿಕೋ ಎನ್ನುತ್ತಾರೆ ತಿರುವಳ್ಳುವರ್. ನಿಮಗೇಕೆ ಕೋಪ ಬರಲಿಲ್ಲ ಎಂದು ಯುವಕ ಕೇಳಿದಾಗ ‘ತಾಳ್ಮೆ ಮತ್ತು ಕ್ಷಮೆಯ ಪಾಠ ನಿನಗೆ ಈಗ ಸಿಕ್ಕಿದೆ. ಅದರ ಮುಂದೆ ಈ ವಸ್ತ್ರದ ಬೆಲೆ ಏನು’ ಎಂದರಂತೆ. ಆತನಿಗೆ ತನ್ನ ಕೃತ್ಯದ ಬಗ್ಗೆ ನಾಚಿಕೆ ಎನಿಸಿ ಕ್ಷಮೆ ಕೇಳಿದನಂತೆ.

ಆಯ್ದಾದುಕೊಂಡಂತೆ ಹಲವು ಮುತ್ತುಗಳು ತಿರುಕ್ಕುರಳ್ಳಿನ ಸಾಗರದಲ್ಲಿ ಸಿಕ್ಕೇ ಸಿಗುವವು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...