ಸುಳ್ಳು ಸುದ್ದಿಗಳ ಹರಡವಿಕೆ ಎಗ್ಗಿಲ್ಲದೇ ನಡೆಯುತ್ತಿದೆ. ಅದರಲ್ಲಿಯೂ ಕೊರೊನಾ ಸೋಂಕಿನ ನಂತರವಂತು ಅವುಗಳ ಸಂಖ್ಯೆ ದ್ವಿಗುಣವಾಗಿದೆ. ಈ ನಿಟ್ಟಿನಲ್ಲಿ ನಾವು ನಂಬಿಯೇಬಿಟ್ಟಿದ್ದ ಈ ವಾರದ 5 ಫೇಕ್ನ್ಯೂಸ್ಗಳು ಮತ್ತು ಅದರಿಂದಿರುವ ವಾಸ್ತವಾಂಶಗಳು ಇಲ್ಲಿವೆ.
- ಐಸಿಎಂಆರ್ ನೀಡಿದ ಪ್ರಮುಖ ಮುನ್ನೆಚ್ಚರಿಕೆಗಳು ನಿಜವೇ?
ಐಸಿಎಂಆರ್ ನವದೆಹಲಿ ಕೊರೊನಾ ತಡೆಯಲು ನೀಡಿದ ಪ್ರಮುಖ ಮುನ್ನೆಚ್ಚರಿಕೆಗಳು ಎಂಬ ಬರಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಕುರಿತು ಐಸಿಎಂಆರ್ ನಿರ್ದೇಶಕರಾದ ಡಾ.ರಜನಿಕಾಂತ್ರವರ ಸ್ಪಷ್ಟನೆ ನೀಡಿ ವೈರಲ್ ಬರಹ ಸಂಪೂರ್ಣ ಸುಳ್ಳು ಎಂದಿದ್ದಾರೆ. ನಾವು ಆ ರೀತಿಯ ಯಾವುದೇ ಮುನ್ನೆಚ್ಚರಿಕೆಗಳನ್ನು ನೀಡಿಲ್ಲ. ನಮ್ಮ ಪತ್ರಿಕಾ ಹೇಳಿಕೆಗಳು ವೆಬ್ಸೈಟ್ನಲ್ಲಿ ಮೀಡಿಯಾ ವಿಭಾಗದಲ್ಲಿದ್ದು ಅವು ಮಾತ್ರ ಸತ್ಯ ಎಂದು ಸ್ಪಷ್ಟಪಡಿಸಿದ್ದಾರೆ.
2 ಕೊರೊನಾ ಕಾಲದಲ್ಲಿಯೂ ತೆಲಂಗಾಣದಲ್ಲಿ ಸರ್ಕಾರದಿಂದ ಈದ್ ಮುಬಾರಕ್ ಗಿಫ್ಟ್ ಹಂಚಿಕೆ?
ಸುದರ್ಶನ್ ನ್ಯೂಸ್ನ ಸಂಪಾದಕ ಸುರೇಶ್ ಚವಾಂಕೆಯವರು ಕಳೆದ ಭಾನುವಾರ ಟ್ವೀಟ್ ಮಾಡಿ “ತೆಲಗಾಂಣ ಸರ್ಕಾರ ಈದ್ ಹಬ್ಬಕ್ಕಾಗಿ ಮುಸ್ಲಿಮರಿಗೆ ಗಿಫ್ಟ್ ನೀಡುತ್ತಿದೆ. ಆದರೆ ಹಿಂದೂಗಳ ಹಬ್ಬವಾದ ರಾಮನವಮಿ, ಯುಗಾದಿ, ಹನುಮಾನ್ ಜಯಂತಿಯ ದಿನ ಹಿಂದೂಗಳನ್ನು ಮನೆಯಿಂದ ಹೊರಗೆ ಬರಲು ಸಹ ಬಿಡಲಿಲ್ಲ” ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಗಾಳಿಸುದ್ದಿಗಳು ಹಬ್ಬಿದಾಗ ತೆಲಂಗಾಣ ಸರ್ಕಾರ ಸುತ್ತೋಲೆಯೊಂದನ್ನು ಹೊರಡಿಸಿ “ಕೊರೊನಾ ಕಾರಣದಿಂದ ಈ ವರ್ಷ ರಂಜಾನ್ ಹಬ್ಬಕ್ಕೆ ಸರ್ಕಾರದಿಂದ ಯಾವುದೇ ಗಿಫ್ಟ್ ನೀಡುತ್ತಿಲ್ಲ” ಎಂದು ಸ್ಪಷ್ಟೀಕರಣ ನೀಡಿದೆ.
ಹಾಗಾದರೆ ಸುರೇಶ್ ಚವಾಂಕೆಯವರು ಮಾಡಿರುವ ಟ್ವೀಟ್ನಲ್ಲಿ ಫೋಟೊ ಯಾವುದೆಂದು ಹುಡುಕಿದಾಗ ಅದು 5 ವರ್ಷದ ಹಳೆಯ ಫೋಟೊ ಎಂದು ತಿಳಿದುಬಂದಿದೆ. ಜೊತೆಗೆ ಅವರು ಹೇಳಿದಂತೆ ಕೇವಲ ಮುಸ್ಲಿಮರ ಹಬ್ಬಕ್ಕೆ ಮಾತ್ರ ಸರ್ಕಾರ ಗಿಫ್ಟ್ಗಳನ್ನು ನೀಡದೇ ಹಿಂದೂಗಳ ಭತುಕಮ್ಮ ಹಬ್ಬ ಮತ್ತು ಕ್ರಿಶ್ಚಿಯನ್ನರ ಕ್ರಿಸ್ಮಸ್ ಹಬ್ಬಕ್ಕೂ ಸರ್ಕಾರ ಗಿಫ್ಟ್ಗಳನ್ನು ನೀಡಿದೆ. ಈ ಕೆಳಗಿನ ಪತ್ರಿಕಾ ವರದಿಗಳನ್ನು ಗಮನಿಸಿ.
3 ಗಿಲ್ಗಿಟ್-ಬಾಲ್ಟಿಸ್ತಾನ್ ಸ್ವತಂತ್ರ ಅಫಿಶಿಯಲ್ ಟ್ವಿಟ್ಟರ್ ಅಕೌಂಟ್ ಹೊಂದಿದೆಯೇ?
ಮೇ 4 ರಂದು ವಿದೇಶಾಂಗ ಸಚಿವಾಲಯ (ಎಂಎಚ್ಎ) ಗಿಲ್ಗಿಟ್-ಬಾಲ್ಟಿಸ್ತಾನ್ ಸೇರಿದಂತೆ “ಭಾರತದ ಭೂಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ಪಾಕಿಸ್ತಾನ ಆಕ್ರಮಿತ ಪ್ರದೇಶಗಳನ್ನು” ಖಾಲಿ ಮಾಡುವಂತೆ ಪಾಕಿಸ್ತಾನವನ್ನು ಕೇಳಿದೆ. ಮೇ 12 ರಂದು, ಗಿಲ್ಗಿಟ್-ಬಾಲ್ಟಿಸ್ತಾನ್, ಲಡಾಖ್ ಕೇಂದ್ರಾಡಳಿತ ಪ್ರದೇಶದ ಅಧಿಕೃತ ಖಾತೆಯನ್ನು ಸರ್ಕಾರವು ಸ್ಥಾಪಿಸಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ನಡೆದಿತ್ತು.
ಮೋದಿ ಸರ್ಕಾರವೂ ಪಾಕ್ ಆಕ್ರಮಿತ ಪ್ರದೇಶಗಳಲ್ಲಿ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶವನ್ನು ವಾಪಸ್ ಪಡೆದಿದೆ ಎಂದೆಲ್ಲಾ ಸಂಭ್ರಮಿಸಲಾಗಿತ್ತು.
ಪಿಐಬಿ (ಪ್ರೆಸ್ ಇನ್ಫರ್ಮೇಷನ್ ಬ್ಯೂರೋದ ಫ್ಯಾಕ್ಟ್ ಚೆಕ್ ವಿಂಗ್) ಇದು ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದೆ. ಅಲ್ಲದೇ ವಿದೇಶಾಂಗ ಸಚಿವಾಲಯವು ಕೂಡ ಸ್ಪಷ್ಟನೆ ನೀಡಿದ್ದು, ಲಡಾಖ್ ಪ್ರದೇಶವು ಕೇವಲ 2 ಅಧಿಕೃತ ಟ್ವಿಟರ್ ಹ್ಯಾಂಡಲ್ಗಳನ್ನು ಹೊಂದಿದೆ, ಅಂದರೆ @DIPR_Leh & @ InformationDep4. ಗಿಲ್ಗಿಟ್-ಬಾಲ್ಟಿಸ್ತಾನ್ ಖಾತೆಯೂ ನಕಲಿ ಖಾತೆಯಾಗಿದೆ ಎಂದಿದೆ.
4. ಈ ವೈರಲ್ ಫೋಟೊ ವಲಸೆ ಕಾರ್ಮಿಕರದ್ದಲ್ಲ. ಮತ್ತೆ?
ಲಾಕ್ಡೌನ್ ಘೋಷಣೆಯಾದಾಗಿನಿಂದ ವಲಸೆ ಕಾರ್ಮಿಕರು ಬೀದಿಗೆ ಬಿದ್ದಿದ್ದು, ನೂರಾರು, ಸಾವಿರಾರು ಕಿ.ಮೀ ಗಟ್ಟಲೇ ನಡೆದು ಸಾಗುತ್ತಿರುವ ಮನಕಲಕುವ ಫೋಟೊಗಳು ಎಲ್ಲೆಡೆ ವೈರಲ್ ಆಗಿವೆ. ಅದರಲ್ಲಿಯೂ ರೈಲು ಸೇವೆ ಪ್ರಾರಂಭಿಸುತ್ತೇವೆ ಎಂದು ಹೇಳಿ ಸಮರ್ಪಕ ವ್ಯವಸ್ಥೆ ಮಾಡದೇ ಹೋದಾಗ ಮತ್ತಷ್ಟು ಕಾರ್ಮಿಕರು ನಡೆದು ಹೊರಟಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ತುಂಬಿ ಹೋಗಿವೆ. ಈ ನಡಿಗೆಯಲ್ಲಿ ಬಹಳಷ್ಟು ಜನರು ಪ್ರಾಣ ಕಳೆದುಕೊಂಡಿದ್ದಾರೆ ಕೂಡ.
ಅದೇ ರೀತಿಯಲ್ಲಿ ವಯಸ್ಸಾದ ವ್ಯಕ್ತಿಯೊಬ್ಬ ಮಹಿಳೆಯೊಬ್ಬರನ್ನು ತನ್ನ ಬೆನ್ನಿನ ಮೇಲೆ ಹೊತ್ತುಕೊಂಡು ನಡೆಯುತ್ತಿರುವ ಚಿತ್ರ ಎಲ್ಲರ ಮನಕರಗಿಸಿತ್ತು. ಇದು ವಲಸೆ ಕಾರ್ಮಿಕರ ಸ್ಥಿತಿಗತಿಯೆಂದು ಸಾವಿರಾರು ಜನ ಅದನ್ನು ಹಂಚಿಕೊಂಡಿದ್ದರು.
ಈ ಕುರಿತು ಫ್ಯಾಕ್ಟ್ಚೆಕ್ ನಡೆಸಿದಾಗ ಅದು ವಲಸೆ ಕಾರ್ಮಿಕರ ಫೋಟೊ ಅಲ್ಲ ಎಂದು ತಿಳಿದುಬಂದಿದೆ. ಅದು 2017ರ ಚಿತ್ರವಾಗಿದ್ದು ಬಾಂಗ್ಲಾದೇಶದ ರೋಹಿಂಗ್ಯ ಮುಸ್ಲಿಂ ನಿರಾಶ್ರಿತರ ಫೋಟೊ ಆಗಿದೆ. ರೋಹಿಂಗ್ಯಾ ಮುಸ್ಲಿಂ ಒಸಿಯೂರ್ ರೆಹಮಾನ್ ಎಂದು ಗುರುತಿಸಲ್ಪಟ್ಟ ವ್ಯಕ್ತಿಯು ತನ್ನ ತಾಯಿಯನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಮ್ಯಾನ್ಮಾರ್ನಿಂದ ಬಾಂಗ್ಲಾದೇಶಕ್ಕೆ ಹೊರಟಾಗಿನ ಫೋಟೊ ಇದಾಗಿದೆ. ಈ ಕುರಿತ ವಿಡಿಯೋ ಸಾಕ್ಷ್ಯ ಇಲ್ಲಿದೆ.
#টেকনাফ সীমান্তের হোয়াইক্যং লম্বাবিল সীমান্ত দিয়ে মা'কে কাঁধে নিয়ে বাংলাদেশে প্রবেশ করা এক রোহিঙ্গার কান্না। #লম্বাবিল সীমান্ত থেকে সরওয়ার আলম শাহীন।
Posted by UkhiyaNews.Com on Wednesday, September 6, 2017
5. ಡಿಎಂಕೆ ಮುಖಂಡ ವೈದ್ಯೆಯೊಬ್ಬಳಿಗೆ ಕಾಲಿನಿಂದ ಒದ್ದರೆ? ಈ ಸುದ್ದಿ ನಿಜವಲ್ಲ..
ತಮಿಳುನಾಡಿನ ಡಿಎಂಕೆ ಮುಖಂಡ ವೈದ್ಯೆಯೊಬ್ಬಳಿಗೆ ಕಾಲಿನಿಂದ ಒದ್ದು ಅವಮಾನಿಸಿದ್ದಾರೆ ಎಂಬ ವಿಡಿಯೋ ವೈರಲ್ ಆಗಿದೆ.
ಆ ವಿಡಿಯೋದಲ್ಲಿ ಬಿಳಿಅಂಗಿ ಮತ್ತು ಬಿಳಿ ಪಂಚೆ ತೊಟ್ಟ ವ್ಯಕ್ತಿಯೊಬ್ಬ ಮಹಿಳೆಗೆ ಒದೆಯುತ್ತಿರುವ ದೃಶ್ಯಗಳನ್ನು ವೈದ್ಯೆಯ ಮೇಲೆ ಹಲ್ಲೆ ಎಂದು ಸುದ್ದಿ ಹರಡಲಾಗಿದೆ.
ಈ ಕುರಿತು ಫ್ಯಾಕ್ಟ್ಚೆಕ್ ನಡೆಸಿದಾಗ ಹಲ್ಲೆನಡೆಸಿದ ವ್ಯಕ್ತಿ ಡಿಎಂಕೆ ಪಕ್ಷದ ಕೌನ್ಸಿಲರ್ ಸೆಲ್ವಕುಮಾರ್ ಎಂದು ತಿಳಿದುಬಂದಿದೆ. ಆದರೆ ಹಲ್ಲೆಗೊಳಗಾದ ಮಹಿಳೆ ವೈದ್ಯಳಲ್ಲ ಬದಲಿಗೆ ಡಿಎಂಕೆ ಪಕ್ಷದ ಪ್ರಾಥಮಿಕ ಸದಸ್ಯತ್ವ ಹೊಂದಿರುವ ಬ್ಯೂಟಿಪಾರ್ಲರ್ ನಡೆಸುವ ಮಹಿಳೆಯಾಗಿದ್ದಾರೆ. ಅಲ್ಲದೇ ಇದು ಎರಡು ವರ್ಷಗಳಷ್ಟು ಹಿಂದಿನ ಹಳೆಯ ವಿಡಿಯೋವಾಗಿದೆ. ಇವರಿರ್ವರ ನಡುವೆ ವಯಕ್ತಿಕ ಹಣಕಾಸಿನ ವಿಷಯಕ್ಕೆ ಜಗಳವಿದ್ದ ಕಾರಣ ಹಲ್ಲೆ ನಡೆಸಲಾಗಿದೆ ಎಂದು ದಿ ನ್ಯೂಸ್ ಮಿನಿಟ್ ಮತ್ತು ಎಎನ್ಐ 2018ರಲ್ಲಿಯೇ ವರದಿ ಮಾಡಿವೆ.
#WATCH Former DMK Corporator Selvakumar hits a woman at a beauty salon in Tamil Nadu's Perambalur. The incident took place on 25th May' 18. He has been arrested by the police and has been suspended from primary membership of the party (Source: CCTV footage) pic.twitter.com/B623qaLc0k
— ANI (@ANI) September 13, 2018
ಇವಿಷ್ಟು ಈ ವಾರದವು. ನಾವು ಮೋಸ ಹೋಗಬಾರದು. ಯಾವುದೇ ಸುದ್ದಿ ಹಂಚುವ ಮುನ್ನ ಪರಿಶೀಲಿಸಿ ಹಂಚಿ.
ನಾನು ಗೌರಿ.ಕಾಂ ನಲ್ಲಿ ಬರುತ್ತಿರುವ ಸುದ್ದಿಗಳು ಎಲ್ಲವೂ ನೂರಕ್ಕೆ 98 ಭಾಗ BJP ಪಕ್ಷ ದವರು ವಿರುದ್ಧ ಆರೋಪಗಳನ್ನು ಮಾಡುತ್ತಿದಿರಿ ಇದು ಸರಿ ಯಗಿ ಇಲ್ಲ ನೀವು ನಿಮ್ಮ ನಡುವಳಿಕೆ ಬದಲಾಯಿಸ ಬೇಕು ಇಲ್ಲ ಅಂದ್ರೆ ನಿಮ್ಮ ಭವಿಷ್ಯ ನೋಡಲು ಯಾರು ಕಾಣಿಸಲಿಲ್ಲ