ತುಮಕೂರಿನಲ್ಲಿ ಪ್ರಗತಿಪರ ಮಹಿಳಾ ಸಂಘಟನೆಗಳ ಒಕ್ಕೂಟದ ಪೌರತ್ವ ತಿದ್ದುಪಡಿ ಕಾಯ್ದೆ, ಎನ್ಆರ್ಸಿ ಮತ್ತು ಎನ್ಪಿಆರ್ ವಿರುದ್ಧ ಬೃಹತ್ ಪ್ರತಿಭಟನಾ ಸಮಾವೇಶ ಹಲವು ಕ್ರಾಂತಿಕಾರಕ ಪ್ರಸಂಗಗಳಿಗೆ ವೇದಿಕೆಯಾಯಿತು. ದೆಹಲಿಯ ಶಾಹಿನ ಬಾಗ್ ಮಾದರಿಯಲ್ಲಿ ಸಾವಿರಾರು ಮಹಿಳೆಯರು ಭಾರೀ ಪ್ರತಿಭಟನೆ ನಡೆಸಿದರೆ ಪುರುಷರು ಮತ್ತು ಯುವಕರು ಸ್ವಯಂಸೇವಕರಾಗಿ ದುಡಿದರು.
ಮೊದಲ ಬಾರಿಗೆ ಸಂಪ್ರದಾಯಿಕ ಮುಸ್ಲಿಂ ಮಹಿಳೆಯರು ಹೊಸಿಲು ದಾಟಿ ಬಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಅಜಾದಿ ಘೋಷಣೆ ಕೂಗಿದೆರು. ರಾಷ್ಟ್ರಗೀತೆ ಹಾಡಿದರು. ಹಿಂದೂಸ್ತಾನ ಹಮಾರ, ಹಮಾರ ಎಂದು ಒಕ್ಕೊರಲಿನಿಂದ ಕೂಗಿ ಹಾಡಿದರು. ಭಾಷಣಕಾರರ ನುಡಿಗಳಿಗೆ ಚಪ್ಪಾಳೆ ತಟ್ಟಿದರು. ಸುಮಾರು 2 ಗಂಟೆ ಅತ್ಯಂತ ಶಾಂತಿಯುತವಾಗಿ ಕುಳಿತು ಎಲ್ಲರ ಭಾಷಣ ಆಲಿಸಿದರು. ಮುಸ್ಲಿಮ್ ಸಮುದಾಯದ ಮಹಿಳೆಯರಲ್ಲಿ ಈ ಬದಲಾವಣೆಗಳಿಗೆ ವೇದಿಕೆ ಸಾಕ್ಷಿಯಾಯಿತು.
ವೇದಿಕೆ ಮೇಲೆಯೂ ಒಬ್ಬರೇ ಒಬ್ಬರು ಪುರುಷರು ಇರಲಿಲ್ಲ. ಸ್ವಾಗತ, ಕಾರ್ಯಕ್ರಮ ನಿರೂಪಣೆ, ವಂದನಾರ್ಪಣೆ, ಭಾಷಣ ಎಲ್ಲಾ ಕಾರ್ಯಗಳನ್ನು ಮಹಿಳೆಯರೇ ಅಚ್ಚುಕಟ್ಟಾಗಿ ನಿರ್ವಹಿಸಿದರು. ನಾವು ಭಾರತೀಯರು, ಇಲ್ಲೇ ಹುಟ್ಟಿ ಇಲ್ಲೇ ಬೆಳೆದಿದ್ದೇವೆ. ಸ್ವಾತಂತ್ರ್ಯ ಪೂರ್ವದಿಂದಲೂ ಇಲ್ಲಿ ಜೀವನ ನಡೆಸಿದ್ದೇವೆ. ಧರ್ಮ, ಜಾತಿ, ಆಧಾರದ ಮೇಲೆ ಪೌರತ್ವ ನೋಂದಣಿ ಪ್ರಕ್ರಿಯೆಯನ್ನು ಕೈಬಿಡಬೇಕು. ನಾವು ದಾಖಲೆಗಳನ್ನು ಯಾಕೆ ತೋರಿಸಬೇಕು ಎಂದು ಪ್ರಶ್ನಿಸಿದರು. ವೇದಿಕೆಯ ಮುಂದೆ ಕುಳಿತಿದ್ದ ಮಹಿಳೆಯರ ನಡುವಿನಿಂದ ಅಜಾದಿ ಘೋಷಣೆಗಳು ಮೊಳಗುತ್ತಿದ್ದವು.
ಜನವಾದಿ ಮಹಿಳಾ ಸಂಘಟನೆಯ ಕೆ.ಎಸ್. ವಿಮಲ ಮಾತನಾಡಿದರು. ದೇಶದಲ್ಲಿ ಹಲವು ಸಮಸ್ಯೆಗಳಿವೆ. ಬಡತನ, ನಿರುದ್ಯೋಗ, ಕೆಲಸ ಇಲ್ಲದೆ ಜನ ನರಳುತ್ತಿದ್ದಾರೆ. ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ. ಉದ್ದಿಮೆಗಳು ಬಾಗಿಲು ಮುಚ್ಚಿವೆ. ಇಂತಹ ಹೊತ್ತಿನಲ್ಲಿ ಸಮಸ್ಯೆಗಳನ್ನು ನಿವಾರಿಸುವ ಬದಲು ಕೇಂದ್ರ ಸರ್ಕಾರ ಜನವಿರೋಧಿ ನೀತಿಗಳನ್ನು ಜಾರಿಗೆ ತರಲು ಹೊರಟಿದೆ. ಎನ್ಆರ್ಸಿ, ಸಿಎಎಯಂತಹ ಕಾನೂನುಗಳು ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸುವ ಕೆಲಸ ಮಾಡುತ್ತಿದೆ. ತಲೆತಲಾಂತರದಿಂದ ಇಲ್ಲಿಯೇ ಹುಟ್ಟಿ ಬದುಕಿ ಮಣ್ಣುಸೇರಿದ್ದಾರೆ. ತಂದೆತಾಯಿಗಳ ದಾಖಲೆಗಳನ್ನು ತೋರಿಸಿ ಎಂದರೆ ಹೇಗೆ? ನಾವು ಈ ದೇಶದ ಪೌರರಲ್ಲವೇ? ಜನರನ್ನು ಅನುಮಾನದಿಂದ ನೋಡುವ ದೃಷ್ಟಿಯನ್ನು ಸರ್ಕಾರ ಕೈಬಿಡಬೇಕು. ಸಿಎಎ, ಎನ್.ಆರ್.ಸಿ ಮತ್ತು ಎನ್.ಪಿ.ಆರ್ ಅನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಈ ದೇಶದಲ್ಲಿ ಅಲೆಮಾರಿಗಳು ಇದ್ದಾರೆ. ಬಡವರು ಬದುಕುತ್ತಿದ್ದಾರೆ. ಎಷ್ಟೋ ಗ್ರಾಮಗಳಿಗೆ ಅಸ್ತಿತ್ವವೇ ಇಲ್ಲ. ಆದಿವಾಸಿಗಳು, ವೇಶ್ಯಯರ ಮಕ್ಕಳು, ದೇವದಾಸಿಯರ ಮಕ್ಕಳು, ದ್ವಿಲಿಂಗಿಗಳು, ದಲಿತರು ಯಾರಿಗೂ ಸೂಕ್ತ ದಾಖಲೆಗಳು ಇಲ್ಲ. ಎನ್.ಆರ್.ಸಿ ಜರುಗಿಸಿದ ಅಸ್ಸಾಂನಲ್ಲೇ 13 ಲಕ್ಷ ಮುಸ್ಲೀಮೇತರರು ಪಟ್ಟಿಯಿಂದ ಹೊರಗೆ ಇದ್ದಾರೆ. ಇನ್ನು ಬೇರೆ ಮಹಿಳೆಯರಿಗೆ ಎಲ್ಲಿಂದ ದಾಖಲೆ ಬರಬೇಕು. ಸಮಾಜದಲ್ಲಿ ಅತ್ಯಂತ ಶೋಷಿತರೆಂದರೆ ಮಹಿಳೆಯರು. ಅವರು ದಾಖಲೆಗಳನ್ನು ಎಲ್ಲಿ ಇಟ್ಟುಕೊಂಡಿರುತ್ತಾರೆ. ಸರ್ಕಾರಕ್ಕೆ ಸಾಮಾನ್ಯ ಜ್ಞಾನವೂ ಇಲ್ಲವೇ ಎಂದು ಭಾಷಣಕಾರರು ಪ್ರಶ್ನಿಸಿದರು.
ಮಹಾನಗರ ಪಾಲಿಕೆ ಸದಸ್ಯೆ ಫರೀದಾ ಬೇಗಂ, ಎಐಎಂಎಸ್ಎಸ್ ರಾಜ್ಯ ಉಪಾಧ್ಯಕ್ಷೆ ಹರಿಣಿ ಆಚಾರ್ಯ, ಶೀ ಮೊಹಸೀನ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಝೈನಬ್ ಮೊಹಮ್ಮದಿ, ಕಲ್ಯಾಣಿ, ಹರ್ಷಿಯಾ ಹರ್ಷಫ್, ತಾಹೇರಾ ಬಾನು, ಉಲ್ಪತ್ ಸಮಾವೇಶದ ನೇತೃತ್ವವನ್ನು ವಹಿಸಿ ಅಚ್ಚುಕಟ್ಟಾಗಿ ನಿರ್ವಹಿಸಿದರು.