HomeಮುಖಪುಟMSMEಗಳಿಗೆ ಮೂರುಲಕ್ಷ ಕೋಟಿ, MSMEಗಳನ್ನ ಉಳಿಸುತ್ತಾ?

MSMEಗಳಿಗೆ ಮೂರುಲಕ್ಷ ಕೋಟಿ, MSMEಗಳನ್ನ ಉಳಿಸುತ್ತಾ?

- Advertisement -
- Advertisement -

ಪ್ರಧಾನಿಯವರ ಕೊರೊನಾ ಪ್ಯಾಕೇಜ್ ಆದ ಇಪ್ಪತ್ತು ಲಕ್ಷ ಕೋಟಿಗಳಲ್ಲಿ ಸಣ್ಣ, ಅತಿಸಣ್ಣ ಮತ್ತು ಮದ್ಯಮ ಗಾತ್ರದ ಉದ್ದಿಮೆಗಳಿಗೆ (MSME – micro, small and medium enterprise) ಕೊಟ್ಟಿರುವ ಪ್ಯಾಕೇಜ್ ಈಗ ಬಹುಚರ್ಚಿತ ವಿಷಯವಾಗಿದೆ. ಕೆಲವರು ಈ ಪ್ಯಾಕೇಜ್ ಒಂದು ಗೇಮ್ ಚೇಂಜರ್ ಎಂದು ಹೇಳುತ್ತಿದ್ದರೆ, ಇನ್ನು ಹಲವರು ಈ ಪ್ಯಾಕೇಜ್ ವಾಸ್ತವದಲ್ಲಿ ಉಂಟುಮಾಡುವ ಪರಿಣಾಮ ನಗಣ್ಯ ಎಂದು ಹೇಳುತ್ತಿದ್ದಾರೆ.

ಈ MSMEಪ್ಯಾಕೇಜ್ ಬಗ್ಗೆ ಇಷ್ಟೊಂದು ಚರ್ಚೆ ಯಾಕೆ ನಡೀತಿದೆ? ನಿಜಕ್ಕೂ ಈ MSMEಗಳು ದೇಶದ ಎಕಾನಮಿಯೊಳಗೆ ಅಷ್ಟೊಂದು ಮುಖ್ಯಾನ? ಕೆಲ ಅಂಕಿಅಂಶಗಳನ್ನ ನೋಡಿದ್ರೆ ಇವುಗಳ ಪ್ರಾಮುಖ್ಯತೆ ಎಷ್ಟು ಅಂತ ನಮಗೆ ತಿಳಿಯುತ್ತೆ. ಇಂಡಿಯಾದಲ್ಲಿ ಒಟ್ಟು 6.3 ಕೋಟಿ MSMEಗಳು ಇವೆ. ಅವುಗಳು ಸೃಷ್ಟಿಮಾಡಿರುವ ಒಟ್ಟು ನೇರ ಉದ್ಯೋಗಗಳು ಬರೋಬ್ಬರಿ ಹನ್ನೊಂದು ಕೋಟಿಗಳಷ್ಟು. ಈ ದೇಶದ ಒಟ್ಟು ಜಿಡಿಪಿಯಲ್ಲಿ 30% ರಷ್ಟು ಅಂದ್ರೆ 60 ಲಕ್ಷ ಕೋಟಿಗಳಿಗಿಂತ ಹೆಚ್ಚು ಈ MSMEಗಳಿಂದನೇ ಬರುತ್ತೆ. ಈ ದೇಶದ ಒಟ್ಟು ತಯಾರಿಕೆಯಲ್ಲಿ (manufacturing) 45% ರಷ್ಟು MSMEಗಳೇ ಮಾಡುತ್ವೆ. ಹಾಗೂ ದೇಶದಿಂದ ಆಗುವ ಒಟ್ಟು ರಫ್ತಿನಲ್ಲಿ 50% ನಷ್ಟು MSMEಗಳಿಂದಲೇ ಆಗುತ್ತೆ.

ಈ ಮೇಲಿನ ಅಂಕಿಅಂಶಗಳು MSMEಗಳು ಈ ದೇಶದ ಎಕಾನಮಿಯ ಆರೋಗ್ಯಕ್ಕೆ ಎಷ್ಟು ಮುಖ್ಯ ಅಂತ ಯಾರಿಗೇ ಆದ್ರೂ ಸುಲಭವಾಗಿ ಗೊತ್ತಾಗುತ್ತೆ. ಅದರಲ್ಲೂ ಈ ದೇಶದ ವರ್ಕ್ ಫೋರ್ಸಿನ ಶೇಖಡಾ ಇಪ್ಪತ್ತರಷ್ಟು ಮಂದಿ MSMEಗಳಲ್ಲೇ ಕೆಲಸ ಮಾಡ್ತಿದಾರೆ ಅಂದರೆ ಉದ್ಯೋಗ ಸೃಷ್ಟಿಯಲ್ಲಿ ಇವುಗಳ ಮಹತ್ವ ಎಂಥದು ಅಂತ ಅರಿವಾಗುತ್ತೆ. ಆದರೆ, ಬಹುತೇಕ MSMEಗಳ ಅತಿಮುಖ್ಯವಾದ ಪ್ರಾಬ್ಲಮ್ ಏನು ಅಂದ್ರೆ ಶೇಕಡಾ ತೊಂಬತ್ತರಷ್ಟು MSMEಗಳು ಅತ್ಯಂತ ಕಡಿಮೆ ಹೆಚ್ಚುವರಿ ನಗದಿನ ಲಭ್ಯತೆಯಲ್ಲಿಯೇ ಉದ್ಯಮ ನಿರ್ವಹಣೆ ಮಾಡಬೇಕಾದ ಸ್ಥಿತಿಯಲ್ಲಿವೆ. ಹಾಗಾಗಿ, ಇವುಗಳಿಗೆ ನಗದಿನ ಹರಿವು ಸ್ವಲ್ಪ ಕಡಿಮೆಯಾದರೂ workkng capital ಇಲ್ಲದಂತಾಗಿ ಈ MSMEಗಳು ಸಂಕಷ್ಟಕ್ಕೆ ಸಿಲುಕುತ್ತವೆ.

ನಮಗೆ ತಿಳಿದಿರುವಂತೆ ದೇಶದ ಕಡೆಯ ಎರಡು ತ್ರೈಮಾಸಿಕಗಳಲ್ಲಿ ಜಿಡಿಪಿಯ ಬೆಳವಣಿಗೆ ಶೇ.5 ಮತ್ತು ಶೇ.4.5 ಕ್ಕಿಳಿದಿತ್ತು. ಅದಕ್ಕೆ ಮುಖ್ಯ ಕಾರಣ ಮಾರುಕಟ್ಟೆಯಲ್ಲುಂಟಾದ ಬೇಡಿಕೆಯ ಕೊರತೆ. ಅಂದರೆ ಜನಗಳ ಕೈಯಲ್ಲಿ ಹಣವಿಲ್ಲದ ಕಾರಣ ಅವರ ಕೊಳ್ಳುವ ಶಕ್ತಿ ಕಡಿಮೆಯಾಗಿದ್ದು. ಇದರ ಹೊಡೆತ ಅತಿ ಬೇಗನೆ ಬಿದ್ದಿದ್ದೇ ಈ MSMEಗಳಿಗೆ ಮತ್ತು ಅದರಿಂದಾಗಿಯೇ ಅನೇಕವು ಮುಚ್ಚುವ ಸ್ಥಿತಿಗೆ ಬಂದಿದ್ದವು. ಆದರೆ, ಈಗ ಕೊರೋನಾ ಲಾಕ್‍ಡೌನಿಂದಾಗಿ ಕೋಟ್ಯಂತರ ಜನ ಕೆಲಸ ಕಳೆದುಕೊಂಡಿದ್ದು ಅವರ ಕೊಳ್ಳುವ ಶಕ್ತಿ ಶೂನ್ಯವಾಗಿದೆ. ಇದರಿಂದಾಗಿ ಅತಿ ಹೆಚ್ಚು ಮತ್ತು ಅತಿ ಶೀಘ್ರವಾಗಿ ಹೊಡೆತ ತಿನ್ನುತ್ತಿರುವುದು MSMEಗಳೇ. ತಾತ್ಕಾಲಿಕವಾಗಿಯಾದರೂ ಅತಿ ಹೆಚ್ಚು ಉದ್ಯೋಗ ನಷ್ಟವಾಗಿರುವುದೂ ಕೂಡ MSMEಗಳಲ್ಲಿಯೇ.

ಈ ಎಲ್ಲ ಹಿನ್ನೆಲೆಯಲ್ಲಿ ಕೇಂದ್ರಸರ್ಕಾರ ಈ MSMEಗಳ ಪುನಶ್ಚೇತನಕ್ಕೆಂದೇ ಪ್ಯಾಕೇಜ್ ಘೋಷಣೆ ಮಾಡಿದೆ. ಈ ಪ್ಯಾಕೇಜು ಒಟ್ಟಾರೆಯಾಗಿ MSMEಗಳಿಗೆ ಸುಲಭವಾಗಿ ಸಾಲಕೊಡುವ ಯೋಜನೆಯಾಗಿದ್ದು ಇದರಲ್ಲಿ ನಾಲ್ಕೈದು ಅಂಶಗಳಿದ್ದರೂ ಅವುಗಳಲ್ಲಿ ಅತಿದೊಡ್ಡ ಪ್ಯಾಕೇಜಿನ ಪರಿಣಾಮದ ಬಗ್ಗೆ ಇಲ್ಲಿ ಚರ್ಚಿಸೋಣ. ಅದು ನೂರು ಕೋಟಿಯ ತನಕ ಟರ್ನೋವರ್ ಇರುವ MSMEಗಳಿಗೆ ಮೂರುಲಕ್ಷ ಕೋಟಿಗಳಷ್ಟು ಸಾಲವನ್ನು ಪ್ರಕಟಿಸಿರುವ ಪ್ಯಾಕೇಜ್. ಈ ಸಾಲ ತೆಗೆದುಕೊಂಡರೆ ಒಂದು ವರ್ಷದವರೆಗೆ moratorium ಅಂದರೆ ಅಸಲು ಮತ್ತು ಬಡ್ಡಿಯನ್ನು ಕಟ್ಟುವಂತಿಲ್ಲ. ನಾಲ್ಕು ವರ್ಷಗಳ ಅವಧಿ ಇರುತ್ತದೆ.

ಇಲ್ಲಿ ಮುಖ್ಯ ಅಂಶವೆಂದರೆ ಈ ಸಾಲಕ್ಕೆ ಮತ್ತು ಇದರ ಮೇಲಿನ ಬಡ್ಡಿ ಗೆ ಸರ್ಕಾರವೇ ಸಂಪೂರ್ಣ ಗ್ಯಾರಂಟಿ ಕೊಡುತ್ತದೆ. ಇದರಿಂದಾಗಿ ಬ್ಯಾಂಕುಗಳು ಸುಲಭವಾಗಿ ಸಾಲ ಕೊಡುತ್ತವೆ ಮತ್ತು ಈ ಕ್ರಮದಿಂದಾಗಿ ಸುಮಾರು 45 ಲಕ್ಷ MSMEಗಳಿಗೆ ಈ ರೀತಿಯ ಅಡಮಾನ ಕೇಳದ ಸಾಲ ಸಿಗಲಿದೆ. ಅದೇ ರೀತಿ ಈಗಾಗಲೇ ಸಾಲದ ಸುಳಿಯಲ್ಲಿರುವ MSMEಗಳಿಗೆ 20000 ಕೋಟಿ ರೂಗಳ ಸಾಲ ನೀಡುವ ವ್ಯವಸ್ಥೆ ಮಾಡಲಾಗಿದ್ದು ಅದಕ್ಕೆ ಸರ್ಕಾರ 4000 ಕೋಟಿ ರೂಗಳಷ್ಟು ಗ್ಯಾರಂಟಿ ನೀಡಲಿದೆ. ಇದರಿಂದ ಒಟ್ಟು ಎರಡು ಲಕ್ಷ MSMEಗಳಿಗೆ ಸಹಾಯವಾಗಲಿದೆ.

ಇದರ ಉದ್ದೇಶ: ಇದು ಅಡಮಾನರಹಿತ ಸಾಲವಾಗಿರುವುದರಿಂದ MSMEಗಳು ಈ ಸಾಲವನ್ನು ತೆಗೆದುಕೊಳ್ಳುತ್ತವೆ. ಈ ಹಣವನ್ನು ಬೇಕಾದ ಕಚ್ಚಾವಸ್ತು ಖರೀದಿಗೆ, ಉತ್ಪಾದನಾ ಸಾಮಥ್ರ್ಯ ಹೆಚ್ಚಿಸುವಿಕೆಗೆ ಮತ್ತು ಸಿಬ್ಬಂದಿಗಳಿಗೆ ಮೂರ್ನಾಲ್ಕು ತಿಂಗಳ ವೇತನ ಕೊಡಲು ಬಳಸುತ್ತವೆ. ಇದರಿಂದ ಈ MSMEಗಳು ತಡೆರಹಿತ ಉತ್ಪಾದನೆ ಮಾಡುವಂತಾಗಿ ಇಡೀ ಈ ವಲಯವು ಮತ್ತಷ್ಟು ಉದ್ಯೋಗವನ್ನೂ ಸೃಷ್ಟಿಸಿ ದೇಶದ ಎಕಾನಮಿ ಮತ್ತೆ ಪುಟಿದೇಳಲು ಸಹಾಯವಾಗುತ್ತದೆ ಎಂಬುದು.

ಆದರೆ ಇಲ್ಲಿ ಸರ್ಕಾರ ಅರ್ಥ ಮಾಡಿಕೊಳ್ಳದಂತೆ ನಟಿಸುತ್ತಿರುವ ಬಹುಮುಖ್ಯ ಅಂಶವೊಂದಿದೆ. ಕೊರೋನಾಕ್ಕೂ ಮೊದಲು ಈ ದೇಶದ ಆರ್ಥಿಕತೆ ತಗ್ಗಿದ್ದು ಜನರ ಕೊಳ್ಳುವ ಶಕ್ತಿ ಕಡಿಮೆಯಾಗಿದ್ದರಿಂದ. ಅದು MSMEಗಳ ಮೇಲೂ ಭಾರೀ ನಕಾರಾತ್ಮಕ ಪರಿಣಾಮ ಬೀರಿತ್ತು. ಈಗ ಕೊರೊನಾ ಅಟ್ಯಾಕ್ ನಂತರವಂತೂ ಜನರ ಕೊಳ್ಳುವ ಶಕ್ತಿ ಪಾತಾಳಕ್ಕಿಳಿದಿದೆ. ಇಂಥಾ ಸನ್ನಿವೇಶದಲ್ಲಿ MSMEಗಳು ಸಾಲ ತೆಗೆದುಕೊಂಡು ಉತ್ಪಾದನೆ ಮಾಡಿದರೂ ಕೂಡ ಆ ಉತ್ಪನ್ನಗಳನ್ನು ಕೊಳ್ಳುವವರಿಲ್ಲದೆ ಆ ಸಾಲವೆಲ್ಲ ಮತ್ತಷ್ಟು NPA ಆಗುವುದಲ್ಲದೆ ಈ MSMEಗಳು ಮತ್ತೆ ಏಳಲಾರದಂತೆ ಮುಗಿದುಹೋಗುವ ಸಾಧ್ಯತೆಗಳಿವೆ.

ಇದರಿಂದಾಗಿಯೇ ಈ MSMEಗಳ ಹಲವು ಪ್ರಮುಖ ಉದ್ದಿಮೆದಾರರು ನಮಗೆ ಈ ಸಾಲಕ್ಕಿಂತ ಸಿಬ್ಬಂದಿಗಳ ಕನಿಷ್ಟ ಮೂರು ತಿಂಗಳ ವೇತನಕ್ಕೆ ಮತ್ತು ಕಚ್ಚಾ ವಸ್ತು ಖರೀದಿಗೆ ಸರ್ಕಾರ ಫ್ರೀಯಾಗಿ ಹಣಕೊಟ್ಟಿದ್ದರೆ ಅದು ನಿಜಕ್ಕೂ ಅತ್ಯುತ್ತಮ ಕ್ರಮವಾಗುತ್ತಿತ್ತು ಎಂದಿದ್ದಾರೆ. ಆಗ ಅದು ಒಂದೇ ಸಲ ಉತ್ಪಾದನೆ ಮತ್ತು ಬೇಡಿಕೆ ಎರಡನ್ನೂ ಹೆಚ್ಚಿಸುತ್ತಿತ್ತು ಎಂಬ ಕಾರಣಕ್ಕೆ. ಒಟ್ಟಿನಲ್ಲಿ ಸರ್ಕಾರ MSMEಗಳಿಗೆ ಅಡಮಾನ ರಹಿತ ಸಾಲ ಕೊಡಲು ವ್ಯವಸ್ಥೆ ಮಾಡುವುದು MSMEಗಳಿಗೆ ಒಳ್ಳೆಯ ಉತ್ತೇಜನಾ ಕ್ರಮವೇ ಆದರೂ ಕೂಡ ಆ ಕ್ರಮ ಫಲಪ್ರದವಾಗಬೇಕಾದರೆ ಸರ್ಕಾರ ಜನರ ಕೈಗೆ ನೇರ ಮತ್ತು ಪರೋಕ್ಷ ಕ್ರಮಗಳ ಮೂಲಕ ನಗದು ಸಿಗುವಂತೆ ಮಾಡಬೇಕಿದೆ.
ಈಗಾಗಲೇ ತುಂಬಾ ವಿಳಂಬವಾಗಿದ್ದರೂ, ಈಗಲಾದರೂ ಜನರಿಗೆ ನಗದು ಸಿಗುವಂತ ಕ್ರಮಗಳನ್ನ ತೆಗೆದುಕೊಂಡರೆ ಮಾತ್ರ MSMEಗಳಿಗೆ ಅಡಮಾನ ರಹಿತ ಸಾಲ ಕೊಡುವ ಈ ಕ್ರಮ ನಿರಿಕ್ಷಿತ ಫಲ ಕೊಡುವ ಸಾಧ್ಯತೆಯಿದೆ ಅಷ್ಟೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...