Homeಗೌರಿ ಕಣ್ಣೋಟರಾಜಕಾರಣಿಗಳು ಮಾಡಲಾಗದ ಸಹಾಯವನ್ನು ಜನ ಮಾಡಿದ ಗಳಿಗೆ...

ರಾಜಕಾರಣಿಗಳು ಮಾಡಲಾಗದ ಸಹಾಯವನ್ನು ಜನ ಮಾಡಿದ ಗಳಿಗೆ…

ವಿಭಜನೆಯ ಸಮಯದಲ್ಲಿ ಭಾರತಕ್ಕೆ ವಲಸೆ ಬಂದ ಕೈಗಾರಿಕೋದ್ಯಮಿಯೊಬ್ಬರು ಅನಾಮಧೇಯವಾಗಿ ಈ ನಿಧಿಗೆ 12 ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ.

- Advertisement -
- Advertisement -

ಭಾರತ-ಪಾಕಿಸ್ತಾನ ಗಡಿಯಲ್ಲಿರುವ ವಾಘಾದಲ್ಲಿ ಪ್ರತಿ ಸಂಜೆ ವಿಚಿತ್ರವಾದ ಒಂದು ಸಾಂಪ್ರದಾಯಿಕ ಆಚರಣೆ ನಡೆಯುತ್ತದೆ. ಸುಮಾರು ಐದಡಿ ಅಂತರದಲ್ಲಿ ಎರಡೂ ದೇಶಗಳ ಪ್ರವೇಶದ್ವಾರ (ಗೇಟ್)ಗಳಿವೆ. ಅದರ ಬಳಿಯೇ ಎರಡೂ ದೇಶಗಳ ಧ್ವಜಗಳು ಹಾರಾಡುತ್ತಿರುತ್ತವೆ. ಎರಡೂ ಕಡೆಯ ಸೈನಿಕರು “ಗುಡ್ ಡೇ, ಹೇಗಿದ್ದೀರಿ?” ಎಂದು ಕೆಲವೊಮ್ಮೆ ಒಬ್ಬರನ್ನೊಬ್ಬರು ವಿಚಾರಿಸಿಕೊಳ್ಳುತ್ತಾರೆ. ನಾನಲ್ಲಿಗೆ ಹೋಗಿದ್ದಾಗ ಭಾರತದ ಹಿರಿಯ ಸೈನ್ಯಾಧಿಕಾರಿಯೊಬ್ಬರು ನನ್ನನ್ನು ಪಾಕಿಸ್ತಾನದ ಸೈನ್ಯಾಧಿಕಾರಿಗೆ ಪರಿಚಯ ಮಾಡಿಕೊಟ್ಟಿದ್ದರು ಎರಡೂ ದೇಶಗಳ ನಡುವಿನ ನೋ ಮ್ಯಾನ್ಸ್ ಲ್ಯಾಂಡ್‍ನಲ್ಲಿ ನಾನೊಂದು ಹೆಜ್ಜೆಯಿಟ್ಟೆ. ಪಾಕಿಸ್ತಾನ ಸೈನ್ಯಾಧಿಕಾರಿಯೂ ಮುಂದೆ ಬಂದರು. ಇಬ್ಬರೂ ಕೈಕುಲುಕಿದೆವು. ಅದೂ ಕಾರ್ಗಿಲ್‍ನಲ್ಲಿ ಎರಡೂ ದೇಶಗಳ ನಡುವೆ ಸಂಘರ್ಷ ನಡೆಯುತ್ತಿದ್ದಾಗ.

ಹೀಗೆ ಸೌಹಾರ್ದತೆಯಿಂದಲೇ ವಾಘಾದಲ್ಲಿ ತಮ್ಮ ದಿನಗಳನ್ನು ಕಳೆಯುವ ಎರಡೂ ಕಡೆಯ ಸೈನಿಕರು ಸಂಜೆಯಾಗುತ್ತಿದ್ದಂತೆ ಒಂದು ರೀತಿಯ ಪೈಪೋಟಿಗೆ ಇಳಿಯುತ್ತಾರೆ. ಎರಡೂ ಗೇಟ್‍ಗಳ ಹತ್ತಿರ ಸಾರ್ವಜನಿಕರು ಸೇರುತ್ತಿದ್ದಂತೆ, ಧ್ವಜ ಕೆಳಗಿಳಿಸುವ ಕಾರ್ಯಕ್ರಮ ಪ್ರಾರಂಭವಾಗುತ್ತದೆ. ಯಾವ ಕಡೆಯ ಸೈನಿಕರು ಹೆಚ್ಚು ಆಕ್ರಮಣಿಶೀಲತೆಯನ್ನು ಪ್ರದರ್ಶಿಸುತ್ತಾರೆ, ಯಾರು ಹೆಚ್ಚು ರಭಸದಿಂದ ಕಿವಿಗಪ್ಪಳಿಸುವಂತೆ ತಮ್ಮ ಬೂಟುಗಳನ್ನು ನೆಲಕ್ಕೆ ಅಪ್ಪಳಿಸುತ್ತಾರೆ ಎಂದೆಲ್ಲಾ ಗಮನಿಸುವ ಸಾರ್ವಜನಿಕರು ತಮ್ಮ ಕಡೆಯವರನ್ನು ಚಪ್ಪಾಳೆ ತಟ್ಟುತ್ತಾ, ಘೋಷಣೆಗಳನ್ನು ಕೂಗುತ್ತಾ ಹುರಿದುಂಬಿಸುತ್ತಾರೆ. ಎರಡೂ ಕಡೆಯ ಸೈನಿಕರ ನಡುವೆ ಒಂದು ಸಣ್ಣ ಯುದ್ಧ ನಡೆಯುತ್ತಿದೆಯೇನೋ ಎಂಬ ವಾತಾವರಣ ನಿರ್ಮಾಣವಾಗುತ್ತದೆ.

ಆದರೆ ವಿಚಿತ್ರ ಸಂಗತಿಯೇನೆಂದರೆ, ಈ ಧ್ವಜ ಕೆಳಗಿಳಿಸುವ ಆಚರಣೆ ಮುಗಿದ ಮರುಕ್ಷಣವೇ ಎರಡೂ ಕಡೆಯ ಸಾರ್ವಜನಿಕರು ಗೇಟ್‍ಗಳ ಹತ್ತಿರ ಧಾವಿಸುತ್ತಾರೆ. ಒಬ್ಬರನ್ನೊಬ್ಬರು ಕುತೂಹಲದಿಂದ ನೋಡುತ್ತಿರುತ್ತಾರೆ. ಅಲ್ಲಿ ಯಾವುದೇ ರೀತಿಯ ಪೈಪೋಟಿ ಇರುವುದಿಲ್ಲ. ಬದಲಾಗಿ ‘ನಮ್ಮಂತೆಯೇ ಇದ್ದೀರಲ್ಲಾ ನೀವು’ ಎಂಬ ಭಾವನೆ ಮೂಡಿರುತ್ತದೆ. ದೇಶ ವಿಭಜನೆಯ ಸಮಯದಲ್ಲಿ ಬೇರೆಯಾದ ತಮ್ಮ ಬಂಧುಗಳನ್ನು ಮತ್ತೆ ಕಾಣಬಹುದೇನೋ ಎಂಬ ತವಕದಿಂದ ಕೆಲವರು ವಾಘಾ ಗಡಿಗೆ ಪದೇಪದೇ ಬರುತ್ತಿರುತ್ತಾರೆ. ಈ ಕಡೆಯಿಂದ ಇವರು, ಆ ಕಡೆಯಿಂದ ಅವರು ಹೀಗೆ ಮೌನವಾಗಿ ನೋಡುತ್ತಲೇ ನಿಲ್ಲುವ ಜನ ಮತ್ತೆ ತಮ್ಮ ಮನೆಯತ್ತ ಮರುಳುವುದು ಎರಡೂ ಕಡೆಯ ಸೈನಿಕರು ಅವರನ್ನು ಅಲ್ಲಿಂದ ಓಡಿಸಿದಾಗಲೇ!

ಇದೆಲ್ಲವನ್ನು ನೆನಪು ಮಾಡಿಕೊಟ್ಟಿದ್ದು ನೂರ್ ಫಾತಿಮಾ ಎಂಬ ಮುದ್ದು ಮಗು. ಈ ಕೂಸಿನ ಶಸ್ತ್ರಚಿಕಿತ್ಸೆ ಬಗ್ಗೆ ಈಗಾಗಲೇ ಸಾಕಷ್ಟು ಸುದ್ದಿಗಳು ಎಲ್ಲ ಕಡೆಯೂ ಪ್ರಕಟವಾಗಿದೆ. ಆದರೆ ನನಗೆ ಇಷ್ಟವಾದದ್ದು ಆಕೆಗೆ ಭಾರತೀಯರು ನೀಡಿದ ಭಾವನಾತ್ಮಕ ಹಾಗೂ ಆರ್ಥಿಕ ಬೆಂಬಲ. ರಾಜಕಾರಣಿಗಳಿಗೆ ಸಾಧ್ಯವಾಗದಂತಹ ಸಹಾಯವನ್ನು ಜನ ನೀಡಿದ್ದಾರೆ. ನೂರ್‍ಳ ತಂದೆತಾಯಿ ಅದನ್ನು ಅಷ್ಟೇ ಸೌಜನ್ಯದಿಂದ ಸ್ವೀಕರಿಸಿದ್ದಾರೆ.

ನೂರ್‍ಳ ತಂದೆ ಬಡ ಮಕ್ಕಳಿಗೆಂದೇ ಶುರು ಮಾಡಿರುವ ‘ದೋಸ್ತಿ ಫಂಡ್’ (ಸ್ನೇಹನಿಧಿ)ಗೆ ಎಷ್ಟೋ ಭಾರತೀಯರು ಹಣ ನೀಡಿದ್ದಾರೆ. ಹಿಂದೆ ಲಾಹೋರ್‌ನಲ್ಲಿ ವಾಸಿಸುತ್ತಿದ್ದ, ಆದರೆ ವಿಭಜನೆಯ ಸಮಯದಲ್ಲಿ ಭಾರತಕ್ಕೆ ವಲಸೆ ಬಂದ ಕೈಗಾರಿಕೋದ್ಯಮಿಯೊಬ್ಬರು ಅನಾಮಧೇಯವಾಗಿ ಈ ನಿಧಿಗೆ 12 ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ. ಪಾಕಿಸ್ತಾನದ ಮುಸ್ಲಿಂ ಒಬ್ಬರು ಶುರುಮಾಡಿರುವ ಈ ನಿಧಿಗೆ ಭಾರತದ ಹಿಂದೂ ಒಬ್ಬರು ಇಂತಹ ದೊಡ್ಡ ಮೊತ್ತದ ದಾನ ನೀಡಿರುವುದು ಎರಡೂ ದೇಶಗಳ ಜನರಿಗೆ ಬೇಕಿರುವುದು ಸ್ನೇಹ ಮತ್ತು ಸೌಹಾರ್ದತೆಯ ಬಾಳು ಎಂಬುದನ್ನು ತೋರಿಸುತ್ತದೆ.

ದೇಶದಲ್ಲಿ ಜಾತಿ, ಧರ್ಮದ ಆಧಾರದ ಮೇಲೆ ಜನರನ್ನು ಒಡೆಯುವ ಪ್ರಯತ್ನಗಳು ನಡೆಯುತ್ತಿರುವಾಗಲೇ, ಜನಸಾಮಾನ್ಯರು ತಮಗೆ ಧಾರ್ಮಿಕ ಭಿನ್ನತೆ ಮುಖ್ಯ ಅಲ್ಲವೇ ಅಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಪಾಕಿಸ್ತಾನದ ವಿರುದ್ಧ ಭಾರತದ ವೈರತ್ವವಿರುವುದು ನಮ್ಮ ದೇಶದ ಸುಭದ್ರತೆಯ ರಕ್ಷಣೆಗಾಗಿಯೇ ಹೊರತು, ಆ ದೇಶದ ಜನರ ವಿರುದ್ಧವಲ್ಲ, ಅವರ ಧರ್ಮದ ವಿರುದ್ಧವೂ ಅಲ್ಲ ಎಂದು ನೂರ್ ಪ್ರಕರಣ ತೋರಿಸುತ್ತದೆ.

ನೂರ್ ಎಂಬ ಬಾಲಕಿ ಬೇರೆ ದೇಶದವಳು, ಬೇರೆ ಧರ್ಮದವಳು ಎಂಬ ಭೇದಭಾವವನ್ನು ಅಲಕ್ಷಿಸಿದ್ದಾರೆ ಭಾರತೀಯರು. ಗುಜರಾತಿನಲ್ಲಿ ನಡೆದ ಕೋಮುದಳ್ಳುರಿಗೆ ತುತ್ತಾದ ಮುಸ್ಲಿಮರ ನೆರವಿಗೆ ಬಹಿರಂಗವಾಗಿ ಬರಲು ಹಿಂಜರಿದಿದ್ದ ಭಾರತೀಯರು ಪಾಕಿಸ್ತಾನದ ಮುಸ್ಲಿಂ ಬಾಲಕಿಗೆ ನೆರವಾಗಿದ್ದಾರೆ.

ತಮ್ಮ ಎದೆಯಲ್ಲಿ ಬರೀ ದ್ವೇಷವನ್ನೇ ತುಂಬಿಕೊಂಡಿರುವವರಿಲ್ಲದಿದ್ದಾಗ, ಮಾನವನ ಮುಖ್ಯಲಕ್ಷಣವೇ ಮಾನವೀಯತೆ… ಇದು ನೂರ್‌ ನಿಂದಾಗಿ ನಮ್ಮ ಜನರೇ ಅರಿತುಕೊಂಡ ಸತ್ಯ.

– ಗೌರಿ ಲಂಕೇಶ್
ಕಂಡಹಾಗೆ (ಸಂಗ್ರಹ) 1

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...