ನಾವು 2021ರ ಜೂನ್ ವರೆಗೂ ಬಂಗಾಳದ ಜನರಿಗೆ ಉಚಿತ ಪಡಿತರ ನೀಡುತ್ತೇವೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ಪ್ರಧಾನಿ ಮೋದಿಯವರು ದೇಶವನ್ನುದ್ದೇಶಿಸಿದ ಭಾಷಣದಲ್ಲಿ ಈ ವರ್ಷ ನವೆಂಬರ್ವರೆಗೂ ಉಚಿತ ಪಡಿತರ ನೀಡುತ್ತೇವೆ ಎಂದು ಘೋಷಿಸಿದ ಕೆಲವೇ ನಿಮಿಷಗಳಲ್ಲಿ ಮಮತಾ ಬ್ಯಾನರ್ಜಿಯವರ ಹೇಳಿಕೆಯೂ ಬಂದಿದೆ. ಆ ಮೂಲಕ ಮಮತಾರವರು ಮೋದಿಯನ್ನೂ ಮೀರಿಸಿದ್ದಾರೆ.
ಈ ವರ್ಷ ಸೆಪ್ಟಂಬರ್ ಮತ್ತು ಅಕ್ಟೋಬರ್ನಲ್ಲಿ ಬಿಹಾರ ರಾಜ್ಯದ ಚುಣಾವಣೆ ನಡೆಯಲಿದೆ. ಅದೇ ರೀತಿ ಮುಂದಿನ ವರ್ಷ ಏಪ್ರಿಲ್ನಲ್ಲಿ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಮೋದಿ- ಮಮತಾರವರ ಹೇಳಿಕೆಗೆ ಭಾರೀ ಮಹತ್ವ ಬಂದಿದೆ.
ಭಾರತದ ಬಡ 80 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯಗಳನ್ನು ನೀಡುವ ಸರ್ಕಾರದ ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಅನ್ನ ಯೋಜನೆ ಯೋಜನೆಯನ್ನು ನವೆಂಬರ್ವರೆಗೆ ವಿಸ್ತರಿಸಲಾಗುವುದು. “ಮುಂದಿನ ಕೆಲವು ತಿಂಗಳುಗಳಲ್ಲಿ ಬರಲಿರುವ ಎಲ್ಲಾ ಹಬ್ಬಗಳನ್ನು ಗಮನದಲ್ಲಿಟ್ಟುಕೊಂಡು, 80 ಕೋಟಿ ಜನರಿಗೆ 5 ಕೆಜಿ ಉಚಿತ ಪಡಿತರ ಮತ್ತು ತಿಂಗಳಿಗೆ 1 ಕೆಜಿ ಬೇಳೆ ನೀಡುವ ಈ ಯೋಜನೆಯನ್ನು ಈಗ ದೀಪಾವಳಿ ಮತ್ತು ಛತ್ತ ಪೂಜೆಯವರೆಗೆ ಅಥವಾ ನವೆಂಬರ್ ಕೊನೆಯವರೆಗೂ ವಿಸ್ತರಿಸಲಾಗುವುದು. ಇದಕ್ಕಾಗಿ 90,000 ಕೋಟಿ ಖರ್ಚಾಗಲಿದೆ ” ಎಂದು ಪ್ರಧಾನಿ ಮೋದಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆಯಾಗಿ ಮಮತಾ ಬ್ಯಾನರ್ಜಿಯವರು “ನಾವು ಮುಂದಿನ ವರ್ಷದ ಜೂನ್ವರೆಗೂ ಉಚಿತ ಪಡಿತರ ನೀಡುತ್ತೇವೆ. ನಮ್ಮ ಪಡಿತರದ ಗುಣಮಟ್ಟವು ಕೇಂದ್ರಕ್ಕಿಂತ ಉತ್ತಮವಾಗಿದೆ. ಬಂಗಾಳದಲ್ಲಿ ಕೇವಲ 60 ಪ್ರತಿಶತದಷ್ಟು ಜನರು ಮಾತ್ರ ಕೇಂದ್ರದ ಪಡಿತರವನ್ನು ಪಡೆಯುತ್ತಾರೆ” ಎಂದಿದ್ದಾರೆ.
ಒಟ್ಟಿನಲ್ಲಿ ಚುನಾವಣೆಗಳನ್ನು ಮುಂದಿಟ್ಟುಕೊಂಡು ಜನರಿಗೆ ಉಚಿತ ಪಡಿತರ ನೀಡುವ ಭರವಸೆಗಳನ್ನು ಒಬ್ಬರಿಗಿಂತ ಒಬ್ಬರು ಮೀರಿಸುತ್ತಿದ್ದಾರೆ.
ಇದನ್ನೂ ಓದಿ: ನವೆಂಬರ್ವರೆಗೂ 80 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯ: ಪ್ರಧಾನಿ ಮೋದಿ