Homeಮುಖಪುಟತಾಳಿ, ರಾಖಿಗಳ ನಡುವೆ ಕಳೆದುಹೋಗುತ್ತವೆ ಹೆಣ್ಣಿನ ಘನತೆ ಮತ್ತು ಹಕ್ಕುಗಳು!

ತಾಳಿ, ರಾಖಿಗಳ ನಡುವೆ ಕಳೆದುಹೋಗುತ್ತವೆ ಹೆಣ್ಣಿನ ಘನತೆ ಮತ್ತು ಹಕ್ಕುಗಳು!

ಗುಜರಾತಿನಲ್ಲಿ ನೀರು ಕೇಳಿದ್ದಳೆಂದು ಶಾಸಕನೊಬ್ಬ ಮಹಿಳೆಯ ಮೇಲೆ ಅಮಾನವೀಯ ಥಳಿಸುವ ವಿಡಿಯೊ ವೈರಲ್ ಆಗಿತ್ತು. ಆದರೆ ಈಗ ಅದೇ ಮಹಿಳೆ ಆತನ ಕೈಗೆ ರಾಖೀ ಕಟ್ಟಿ ರಾಜೀ ಮಾಡಿಕೊಳ್ಳುವಂತೆ ಮಾಡಲಾಗಿದೆ. ಅಂದರೆ ಥಳಿಸಿದವೇ ರಕ್ಷಕನೆಂದು ಬಿಂಬಿಸುವ ಪರಿ ಏನನ್ನು ಸೂಚಿಸುತ್ತದೆ?

- Advertisement -
- Advertisement -

| ಮಲ್ಲಿಗೆ ಸಿರಿಮನೆ |

ಮಹಿಳೆಯರ ಮೇಲೆ ಅಥವಾ ಇನ್ನಿತರ ಶೋಷಿತರ ಮೇಲೆ ನಡೆಯುವ ದೌರ್ಜನ್ಯದ ಘಟನೆಗಳನ್ನು ಅನ್ಯಾಯದ ವಿರುದ್ಧದ ಹೋರಾಟದ ರೂಪ ಪಡೆಯದಂತೆ ತಡೆಯುವ ವಿಧಾನವನ್ನು ನಮ್ಮ ಶ್ರೇಣೀಕೃತ ಸಮಾಜ ವ್ಯವಸ್ಥೆ ಗಟ್ಟಿಯಾಗಿ ರೂಪಿಸಿಕೊಂಡಿದೆ. ತನ್ನ ಸ್ಥಾಪಿತ ಸಿದ್ಧ ಮಾದರಿಯೊಳಗೇ ಆ ದೌರ್ಜನ್ಯವನ್ನೂ ಅದಕ್ಕೆ ಬಲಿಯಾದವರನ್ನೂ ಸೆಳೆದುಕೊಂಡು, ಅರಗಿಸಿಕೊಂಡು ಏನೂ ಆಗಿಯೇ ಇಲ್ಲವೆಂಬಂತೆ ಯಥಾಸ್ಥಿತಿ ಕಾಪಾಡಿಕೊಳ್ಳುವ ತಂತ್ರಗಾರಿಕೆಯನ್ನು ರೂಢಿಸಿಕೊಂಡಿದೆ.

ಹೆಣ್ಣುಮಕ್ಕಳ ಮೇಲೆ ಯಾರಾದರೊಬ್ಬ ದುಷ್ಟ ಅತ್ಯಾಚಾರ ಎಸಗಿದರೆ, ಆತನ ಕೃತ್ಯವನ್ನು ಬಯಲಿಗೆಳೆದು ಶಿಕ್ಷಿಸುವ ಬದಲು, ಶೀಲ, ಮಾನ, ಮರ್ಯಾದೆಗಳ ಹೆಸರಿನಲ್ಲಿ ಆ ಹೆಣ್ಣುಮಗಳಿಗೆ ಆತನ ಕೈಯ್ಯಲ್ಲೇ ತಾಳಿ ಕಟ್ಟಿಸಲಾಗುತ್ತದೆ. ಆತನೋ, ತಾನೇನೋ ದೊಡ್ಡ ತ್ಯಾಗ ಮಾಡಿ ಆಕೆಗೆ ‘ಬಾಳು’ ಕೊಡುತ್ತಿದ್ದೇನೆಂಬ ಅಹಂನಲ್ಲಿ ತಾಳಿಕಟ್ಟುತ್ತಾನೆ. ಅಸಹನೀಯವಾದ ಕ್ರೌರ್ಯಕ್ಕೆ ತುತ್ತಾಗಿದ್ದು ಮಾತ್ರವಲ್ಲದೆ ಹೆಣ್ಣುಮಕ್ಕಳು ಜೀವನಪಯರ್ಂತ ಅದರ ನೆನಪು ಮತ್ತು ನೆರಳಿನಲ್ಲೇ ಕೊರಗುತ್ತಾ ಬದುಕು ಸವೆಸಬೇಕಾಗುತ್ತದೆ. ಆದರೆ, ಸಂಪ್ರದಾಯನಿಷ್ಠ ಮನಸ್ಥಿತಿ, ಕಟ್ಟುಪಾಡುಗಳ ಕಬಂಧ ಬಾಹುಗಳು ಎಷ್ಟು ಬಲವಾಗಿವೆಯೆಂದರೆ ಇದನ್ನು ವಿರೋಧಿಸುವ ಮಾನಸಿಕ ಸ್ಥೈರ್ಯವೂ ಮಹಿಳಾ ಸಮುದಾಯಕ್ಕೆ ದಕ್ಕುವುದು ಕಷ್ಟಸಾಧ್ಯ!

ಅತ್ಯಾಚಾರದ ಪ್ರಕರಣ ಅಲ್ಲದಿದ್ದರೂ, ಇಂತಹದ್ದೇ ಕಟ್ಟುಪಾಡಿನ ಕಪಿಮುಷ್ಠಿಯೊಳಕ್ಕೆ ಮಹಿಳಾ ಹಕ್ಕುಗಳನ್ನು ಸೆಳೆದುಕೊಳ್ಳುವಂತಹ ಘಟನೆಯೊಂದು ಗುಜರಾತ್‍ನಿಂದ ವರದಿಯಾಗಿದೆ. ಗುಜರಾತ್‍ನ ಅಹಮದಾಬಾದ್‍ನ ನರೋಡಾ ವಿಧಾನಸಭಾ ಕ್ಷೇತ್ರದ ಶಾಸಕ ಬಲರಾಮ್ ತವಾನಿ ಮತ್ತು ಆತನ ಸಹೋದರ ಅಲ್ಲಿನ ಕಾರ್ಪೊರೇಟರ್ ಕಿಶೋರ್ ತವಾನಿ ಇಬ್ಬರೂ ಸೇರಿ, ಸ್ಥಳೀಯ ಎನ್‍ಸಿಪಿ ನಾಯಕಿ ನೀತು ತೇಜ್ವಾನಿ ಮೇಲೆ ಸಾರ್ವಜನಿಕವಾಗಿ ದಾಳಿ ಮಾಡಿ ಹಲ್ಲೆ ನಡೆಸಿದ್ದಾರೆ; ಅಮಾನುಷವಾಗಿ ನೆಲಕ್ಕೆ ತಳ್ಳಿ ಒದ್ದು ಹಾಕಿ ಸ್ಟಿಕ್‍ಗಳಿಂದ ಥಳಿಸಿದ್ದಾರೆ; ಇದರ ಮೇಲೆ ಗಂಭೀರವಾದ ಕಾನೂನು ಕ್ರಮ ನಡೆಯಬೇಕಿತ್ತು; ಅದರ ಬದಲು ಪತ್ರಿಕಾ ಗೋಷ್ಠಿಯಲ್ಲಿ ನೀತು ತೇಜ್ವಾನಿ ಕೈಯ್ಯಲ್ಲಿ ಬಲರಾಮ್ ತವಾನಿಗೆ ‘ರಾಖಿ ಕಟ್ಟಿಸುವ’ ಮೂಲಕ ಪ್ರಕರಣಕ್ಕೆ ಅಂತ್ಯ ಹಾಡಲಾಗಿದೆ!! ಆ ಮೂಲಕ, ಆಕ್ರಮಣ ನಡೆಸಿದವನ ಕೈಗೇ ದಾಳಿಗೆ ತುತ್ತಾದವಳನ್ನು ‘ರಕ್ಷಿಸುವ ಜವಾಬ್ದಾರಿ’ ನೀಡಲಾಗಿದೆ!?

ನಡೆದದ್ದಿಷ್ಟು

ನರೋಡದ ಎನ್‍ಸಿಪಿ ನಾಯಕಿ ನೀತು ಅವರ ಮನೆಯ ಹತ್ತಿರ ಒಂದಷ್ಟು ಹೆಣ್ಣುಮಕ್ಕಳು ನೀರಿನ ಸಮಸ್ಯೆ ಹೇಳಿಕೊಂಡು ಬಂದಿದ್ದಾರೆ. ಹಲವು ದಿನಗಳಿಂದ ತಮ್ಮ ಮನೆಗಳಿಗೆ ನೀರಿನ ಸಂಪರ್ಕ ಕಡಿತಗೊಂಡಿದ್ದು, ನೀರಿನ ತೊಂದರೆ ತೀವ್ರವಾಗಿದೆಯೆಂದೂ, ಆ ಪ್ರದೇಶದ ಮಹಿಳಾ ನಾಯಕಿಯಾದ ನೀತು ಈ ಬಗ್ಗೆ ಏನಾದರೂ ಮಾಡಿ ಸಮಸ್ಯೆ ಪರಿಹರಿಸಬೇಕೆಂದೂ ಕೇಳಿದ್ದಾರೆ. ಅದಕ್ಕೆ ಸ್ಪಂದಿಸಿದ ನೀತು ತೆಜ್ವಾನಿಯವರು, ಸ್ಥಳೀಯ ಕಾರ್ಪೊರೇಟರ್ ಕಿಶೋರ್ ತವಾನಿಯನ್ನು ಭೇಟಿಯಾಗಿ ಸಮಸ್ಯೆ ಹೇಳಿಕೊಳ್ಳಲು ಈ ಹೆಣ್ಣುಮಕ್ಕಳನ್ನೂ ಕರೆದುಕೊಂಡು ಹೋಗಿದ್ದಾರೆ.

ನಿತು ತೇಜ್ವಾನಿ, ಚಿತ್ರ ಕೃಪೆ: ಎ.ಎನ್.ಐ

ಆದರೆ, ಸ್ಥಳೀಯ ಜನಪ್ರತಿನಿಧಿಯಾದ ಕಿಶೋರ್ ತವಾನಿ (ನರೋಡಾದ ಎಂಎಲ್‍ಎ ಬಲರಾಮ್ ತವಾನಿಯ ಸಹೋದರ), ಹೆಣ್ಣುಮಕ್ಕಳ ಮಾತನ್ನೂ ಪೂರ್ತಿ ಕೇಳದೆಯೇ ನೀತು ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಅತ್ಯಂತ ಅವಾಚ್ಯವಾಗಿ ನಿಂದಿಸುತ್ತಾ ಅಮಾನುಷವಾಗಿ ನೀತು, ಆಕೆಯ ಪತಿ ಮತ್ತು ಜೊತೆಗೆ ಬಂದಿದ್ದ ಮಹಿಳೆಯರ ಮೇಲೆ ದೈಹಿಕ ಹಲ್ಲೆ ನಡೆಸಿದ ಕಿಶೋರ್ ಮೇಲೆ ಇವರುಗಳು ಸ್ಥಳೀಯ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ, ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ.

ಇದರಿಂದ ಆಕ್ರೋಶಗೊಂಡ ನೀತು ತೇಜ್ವಾನಿ ಮತ್ತು ಸಂಗಡಿಗರು, ಕಾರ್ಪೊರೇಟರ್‍ನ ಸಹೋದರನೇ ಆದ ಎಂಎಲ್‍ಎಯನ್ನು ಭೇಟಿಯಾಗಿ ನ್ಯಾಯ ಕೇಳಲಿಕ್ಕೆಂದು ಭಾನುವಾರ ಬೆಳಿಗ್ಗೆ ಸ್ಥಳೀಯ ಬಿಜೆಪಿ ಕಛೇರಿಗೆ ಹೋಗಿದ್ದಾರೆ. ಎಂಎಲ್‍ಎ ಇಲ್ಲದ್ದರಿಂದ ಕಾಯುತ್ತಿದ್ದಾಗ, ಕಛೇರಿಯಲ್ಲಿದ್ದ ಬಿಜೆಪಿ ಕಾರ್ಯಕರ್ತರ ಉದ್ಧಟ ನಡವಳಿಕೆಯಿಂದ ರೋಸಿ ಹೋಗಿ, ಕಿಶೋರ್ ವಿರುದ್ಧ ನೀತು ಮತ್ತು ಇತರ ಮಹಿಳೆಯರು ಘೋಷಣೆಗಳನ್ನು ಕೂಗಲಾರಂಭಿಸಿದ್ದಾರೆ.

ತಕ್ಷಣ ಸ್ಥಳಕ್ಕೆ ಬಂದ ಎಂಎಲ್‍ಎ ಬಲರಾಮ್ ಮತ್ತು ಆತನ ಸಂಗಡಿಗರು ಏಕಾಏಕಿ ನೀತು ಅವರ ಮುಖಕ್ಕೆ ಹೊಡೆದು ಅವರನ್ನು ನೆಲಕ್ಕೆ ಕೆಡವಿದ್ದಲ್ಲದೆ ಕಾಲಿನಿಂದ ಪದೇ ಪದೇ ಬಲವಾಗಿ ಒದ್ದಿದ್ದಾರೆ. ನಂತರ ಹಾಕಿ ಸ್ಟಿಕ್‍ಗಳನ್ನು ತರಿಸಿಕೊಂಡು ಕಾಲುಗಳನ್ನು ಥಳಿಸಿದ್ದಾರೆ. ಇವೆಲ್ಲವನ್ನೂ ನೀತು ಅವರ ಪತಿ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಯಾವಾಗ ನೀತು ಅವರನ್ನು ಸ್ಟಿಕ್‍ಗಳಿಂದ ಥಳಿಸಲಾರಂಭಿಸಿದರೋ ಅವರನ್ನು ಬಿಡಿಸಿಕೊಳ್ಳಲೆಂದು ಮುನ್ನುಗ್ಗಿದ ಆಕೆಯ ಪತಿಯನ್ನು ಕೂಡಾ ಬಿಜೆಪಿ ಕಾರ್ಯಕರ್ತರು ಥಳಿಸಿದ್ದಾರೆ. ಈ ಬಗ್ಗೆ ನೀತು ಪೊಲೀಸ್ ಠಾಣೆಯಲ್ಲಿ ಎಂಎಲ್‍ಎ ಬಲರಾಮ್ ತವಾಣಿ ವಿರುದ್ಧ ದೂರು ದಾಖಲಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆದ ನಂತರ, ಪತ್ರಿಕಾ ಗೋಷ್ಠಿ ನಡೆಸಿದ ಶಾಸಕ ತವಾನಿ, ಮೊದಲಿಗೆ ತನ್ನನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದಾನೆ, ಆದರೆ ನಂತರ ಇದು ಉದ್ವಿಗ್ನ ಮನಸ್ಥಿತಿಯಲ್ಲಿ ಆದ ಘಟನೆ, ಅದಕ್ಕಾಗಿ ಕ್ಷಮೆ ಕೋರುವುದಾಗಿಯೂ ಹೇಳಿದ್ದಾನೆ. ಅಂದರೆ, ತಾನು ಆಕ್ರಮಣ ನಡೆಸಿದ್ದು ನಿಜವೆಂದು ಮಾಧ್ಯಮಗಳ ಮುಂದೆಯೇ ಒಪ್ಪಿಕೊಂಡಿದ್ದಾನೆ. ಅಷ್ಟಾದರೂ ಗುಜರಾತಿನ ಕಾನೂನು ಪರಿಪಾಲಕರು ಕಣ್ಣು ಮುಚ್ಚಿಕೊಂಡು ಸುಮ್ಮನೆ ಕೂತಿದ್ದಾರೆ. ರಾಜ್ಯ ಬಿಜೆಪಿ ಮುಖಂಡರು ತಮ್ಮ ಪಕ್ಷದ ಶಾಸಕನ ಕೃತ್ಯವನ್ನು ಖಂಡಿಸುವ ಅನಿವಾರ್ಯತೆ ಬಂದಿದೆ. ಈ ಹಂತದಲ್ಲಿ ಆಘಾತಕಾರಿ ರೀತಿಯಲ್ಲಿ ತಕ್ಷಣದಲ್ಲೇ ಒಂದು ಸಾರ್ವಜನಿಕ ಸಭೆಯನ್ನು ಏರ್ಪಡಿಸಿದ ಶಾಸಕ, ಆ ಸಭೆಯಲ್ಲಿ ತನ್ನಿಂದ ಹಲ್ಲೆಗೊಳಗಾಗ ನೀತು ತವಾನಿಯ ಕೈಯಿಂದ ರಾಖಿ ಕಟ್ಟಿಸಿಕೊಳ್ಳುತ್ತಾನೆ ಮತ್ತು ಆಕೆ ತನ್ನ ಸಹೋದರಿಯಿದ್ದಂತೆ, ಆಕೆಯ ರಕ್ಷಣೆ ತನ್ನ ಹೊಣೆಯೆಂದು ಭಾಷಣ ಕೊಡುತ್ತಾನೆ!!!

ರಾಖೀ ಕಟ್ಟುತ್ತಿರುವ ದೃಶ್ಯ

ಅದೇ ರೀತಿ, ಅದೇ ದಿನ ಡೆಹ್ರಾಡೂನ್‍ನ ಅತ್ಯಾಚಾರಕ್ಕೊಳಗಾದ ದಲಿತ ಬಾಲಕಿಯ ವಿಚಾರದಲ್ಲೂ ಸಾರಾಸಗಟು ಕಾನೂನು ಉಲ್ಲಂಘನೆ ನಡೆದಿರುವುದು ಪತ್ರಿಕೆಯಲ್ಲಿ ವರದಿಯಾಗಿದೆ. ಮೇಲ್ಜಾತಿ ಗಂಡಸೊಬ್ಬನಿಂದ ಅತ್ಯಾಚಾರಕ್ಕೊಳಗಾಗಿದ್ದ, ಡೆಹ್ರಾಡೂನ್‍ನ ತೆಹರಿ ಜಿಲ್ಲೆಯ 9 ವರ್ಷದ ದಲಿತ ಬಾಲಕಿಯನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲು ಆರೋಪಿಯೂ ಇದ್ದ ಅದೇ ಪೊಲೀಸ್ ಜೀಪಿನಲ್ಲಿ ಪೊಲೀಸರು ಕರೆದೊಯ್ದಿದ್ದಾರೆ.

ಹೀಗೆ ಅಪ್ರಾಪ್ತ ಸಂತ್ರಸ್ತೆಯರನ್ನು ಆರೋಪಿಯ ಕೈಯಳತೆಗೆ ನಿಲುವುಕುವಂತೆ ಸಿಲುಕಿಸಬಾರದೆಂಬ ಸ್ಪಷ್ಟವಾದ ನಿರ್ದೇಶನಗಳನ್ನು ಮಕ್ಕಳ ರಕ್ಷಣೆಗಿರುವ ಪೊಕ್ಸೋ ಕಾಯ್ದೆ ನೀಡಿದೆಯಾದರೂ, ಎಲ್ಲ ನಿಯಮಗಳನ್ನೂ ಗಾಳಿಗೆ ತೂರಿ, ಪೊಲೀಸರೇ ಹೀಗೆ ನಡೆದುಕೊಳ್ಳುತ್ತಾರೆ. ಜೀಪಿನಲ್ಲಿ ಏನು ನಡೆಯಿತೋ ಗೊತ್ತಿಲ್ಲ. ಒಟ್ಟಿನಲ್ಲಿ ನ್ಯಾಯಾಧೀಶರ ಎದುರು ಹಾಜರುಪಡಿಸುವ ಹೊತ್ತಿಗೆ ತಮ್ಮ ಮಗಳು ಮಾನಸಿಕವಾಗಿ ಅತ್ಯಂತ ಕ್ಷೋಭೆಗೊಳಗಾಗಿದ್ದಳು, ಅದರಿಂದ ಆಕೆಗೆ ಸರಿಯಾಗಿ ಹೇಳಿಕೆ ದಾಖಲಿಸಲೂ ಸಾಧ್ಯವಾಗಲಿಲ್ಲ ಎಂದು ಸಂತ್ರಸ್ತೆಯ ಪೋಷಕರು ನೊಂದು ನುಡಿದಿದ್ದಾರೆ.

ಇದೆಲ್ಲವೂ, ಕಾನೂನಿನ ನೆರಳಿನಲ್ಲೇ ನಡೆದು ಮುಗಿದು ಹೋಗುತ್ತದೆ!? ದಾಳಿ ಮಾಡಿದವರು ನೊಂದವರ ರಕ್ಷಕರಾಗಿ ಪ್ರೊಮೋಷನ್ ದೊರಕಿಸಿಕೊಳ್ಳುವ ಈ ವ್ಯವಸ್ಥೆಯಲ್ಲಿ ಕಾನೂನುಗಳಿಗೆ ಅರ್ಥವಾದರೂ ಏನಿದೆ?
ದೌರ್ಜನ್ಯಕ್ಕೊಳಗಾದವರಿಗೆ ನ್ಯಾಯದ ಬದಲು, ತಮ್ಮನ್ನು ತುಳಿದವರಿಂದಲೇ ‘ತಾಳಿ ಭಾಗ್ಯ’ಗಳು, ‘ರಾಖಿ ಭಾಗ್ಯ’ಗಳು ದೊರಕಿಸಲ್ಪಡುವ ಈ ವ್ಯವಸ್ಥೆಗೆ ಒಂದು ಧಿಕ್ಕಾರ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...