Homeಅಂಕಣಗಳುಏನಿದು ಡಿಎನ್‍ಏ ಮಾನವ ಪ್ರೊಫೈಲಿಂಗ್ ಮಸೂದೆ?

ಏನಿದು ಡಿಎನ್‍ಏ ಮಾನವ ಪ್ರೊಫೈಲಿಂಗ್ ಮಸೂದೆ?

- Advertisement -
ಡಾ. ಸ್ವಾತಿ ಶುಕ್ಲಾ |
ಅನುವಾದ – ರಾಜಶೇಖರ್ ಅಕ್ಕಿ |
ನಾವೆಲ್ಲ ನಿರುದ್ಯೋಗ, ರಫೇಲ್ ಹಗರಣ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿಯ ಪ್ರಶ್ನೆಗಳಲ್ಲಿ ಮುಳುಗಿದ್ದಾಗ, ಜನೆವರಿ 8 ರಂದು ಡಿಎನ್‍ಏ ತಂತ್ರಜ್ಞಾನ (ಬಳಕೆ ಮತ್ತು ಅನ್ವಯ) ನಿಯಂತ್ರಣ ಮಸೂದೆ 2018 ಅಥವಾ ಡಿ ಎನ್ ಏ ಬಿಲ್ ಅನ್ನು ಯಾವುದೇ ಸದದ್ದಿಲ್ಲದೇ ಲೋಕಸಭೆಯಲ್ಲಿ ಅಂಗೀಕರಿಸಲಾಯಿತು.
ಡಿಎನ್‍ಎ ಪ್ರೊಫೈಲಿಂಗ್ ಅಥವಾ ಡಿಎನ್‍ಎ ಬೆರೆಳಚ್ಚು
ಡಿಆಕ್ಸಿರಿಬೋನ್ಯೂಕ್ಲಿಯಿಕ್ ಅಸಿಡ್ ಅಂದರೆ ಡಿಎನ್‍ಎ ಎನ್ನುವುದು ಎಲ್ಲಾ ಜೀವಿಗಳ ಮೂಲ ಅಂಶ ಎನ್ನಬಹುದು. ಇದರಲ್ಲಿ ಜೀವಿಗಳ ಬೆಳವಣಿಗೆ, ಕಾರ್ಯನಿರ್ವಹಣೆ ಮತ್ತು ಸಂತಾನೋತ್ಪತ್ತಿಗಾಗಿ ಬೇಕಿರುವ ಎಲ್ಲಾ ಜೆನೆಟಿಕ್ ಮಾಹಿತಿ ಇರುತ್ತದೆ. ಒಂದು ಜೀವಿಯ ನೀಲನಕ್ಷೆಯಂತಿರುವ ಈ ಡಿಎನ್‍ಎಅನ್ನು ಬೇರ್ಪಡಿಸಿದಲ್ಲಿ,  ಸಂಶೋಧನೆ, ಕೈಗಾರಿಕೆ, ಆರೋಗ್ಯಸೇವೆ ಮತ್ತು ಕೃಷಿಯ ಕ್ಷೇತ್ರಗಳಲ್ಲಿ ಅನೇಕ ಉಪಯೋಗಗಳನ್ನು ಹೊಂದಿದೆ. ಬೆರಳಚ್ಚಿಗಿಂತ ವಿಶಿಷ್ಟವಾಗಿರುವ ಡಿಎನ್‍ಎ ಅನ್ನು ವೈಯಕ್ತಿಕ ಗುಣಲಕ್ಷಣಗಳನ್ನು ಕಂಡುಹಿಡಿಯುವಲ್ಲಿ ಬಳಸಬಹುದು. ವೈಯಕ್ತಿಕ ಗುರುತನ್ನು ಧೃಡಪಡಿಸಿ ಅಪರಾಧ ಪತ್ತೆಯಲ್ಲೂ ಇದನ್ನು ಬಳಸಬಹುದಾಗಿದೆ. ಅಪರಾಧ ಸ್ಥಳದಲ್ಲಿಯ ರಕ್ತ, ವೀರ್ಯ, ತ್ವಚೆ, ಲಾಲಾರಸ ಮತ್ತು ಕೂದಲಿನಿಂದ ಡಿಎನ್‍ಎ ಪಡೆದು ಶಂಕಿತ ಅಪರಾಧಿಯ ಡಿಎನ್‍ಎ ಗೆ ಹೊಂದಿಸಬಹುದು.
ಡಿಎನ್‍ಎ ತಂತ್ರಜ್ಞಾನ (ಬಳಕೆ ಮತ್ತು ಅನ್ವಯ) ನಿಯಂತ್ರಣ ಮಸೂದೆ ಎಂದರೇನು?
ಸದ್ಯಕ್ಕೆ ಭಾರತದಲ್ಲಿ ವ್ಯಕ್ತಿಗಳ ಗುರುತಿಗಾಗಿ ಡಿಎನ್‍ಎ ತಂತ್ರಜ್ಞಾನದ ಬಳಕೆ ನಿಯಂತ್ರಣಗೊಳಪಟ್ಟಿಲ್ಲ. ಅಪರಾಧಿಗಳ, ಸಂತ್ರಸ್ತರ, ಶಂಕಿತರ,  ವಿಚಾರಣಾಧೀನ ಕೈದಿಗಳನ್ನು ಒಳಗೊಂಡ ವ್ಯಕ್ತಿಗಳ ಗುರುತನ್ನು ಧೃಡೀಕರಿಸಲು ಡಿಎನ್‍ಎ ತಂತ್ರಜ್ಞಾನದ ಬಳಕೆಯ ನಿಯಂತ್ರಣೆಯನ್ನು ಡಿಎನ್‍ಎ ಬಿಲ್ 2018 ಪ್ರತಿಪಾದಿಸುತ್ತದೆ.  ಅಪರಾಧ ಮತ್ತು ವಂಶದ ವಿವಾದ, ವಲಸೆ, ಮಾನವ ಅಂಗಾಂಗ ಕಸಿ ಮಾಡುವ, ಸಂತಾನೋಪತ್ಪತಿ ಯಂತಹ ಸಿವಿಲ್ ಪ್ರಕರಣಗಳಲ್ಲಿ ಡಿಎನ್‍ಎ ತಂತ್ರಜ್ಞಾನ ಬಳಸಬಹುದಾಗಿದೆ. ಈ ಮಸೂದೆಯು ಭಾರತೀಯ ದಂಡ ಸಂಹಿತೆ 1860 ರ ಅಡಿಯಲ್ಲಿ ಬರುವ ಅಪರಾಧಗಳೊಂದಿಗೆ 1956ರ ಅಕ್ರಮ ಸಂಚಾರ(ನಿಯಂತ್ರಣ) ಕಾಯಿದೆ, 1971ರ ವೈದ್ಯಕೀಯ ಗರ್ಭಪಾತದ ಕಾಯಿದೆ, 1955 ರ ನಾಗರಿಕ ಹಕ್ಕುಗಳ ರಕ್ಷಣೆಯ ಕಾಯಿದೆ ಹಾಗೂ 1988 ರ ಮೋಟಾರು ವಾಹನ ಕಾಯಿದೆಗಳ ಅಡಿಯಲ್ಲಿ ಬರುವ ಅಪರಾಧಗಳನ್ನೂ ಒಳಗೊಂಡಿರುತ್ತದೆ. ಒಂದು ರಾಷ್ಟ್ರೀಯ ಡಿಎನ್‍ಎ ಡಾಟಾ ಬ್ಯಾಂಕ್ ಮತ್ತು ಪ್ರಾದೇಶಿಕ ಡಿಎನ್‍ಎ ಬ್ಯಾಂಕ್‍ಗಳ ಪ್ರತಿಷ್ಠಾಪನೆಗೆ ಅನುವು ಮಾಡಿಕೊಡುತ್ತದೆ. ಎನ್‍ಐಎ, ಸಿಬಿಐ, ಜೀವಶಾಸ್ತ್ರ ಕ್ಷೇತ್ರದ ತಜ್ಞರು ಹಾಗೂ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಒಬ್ಬ ಸದಸ್ಯರನ್ನು ಒಳಗೊಂಡ ಒಂದು ನಿಯಂತ್ರಣಾ ಮಂಡಳಿಯನ್ನು ಪ್ರತಿಷ್ಠಾಪಿಸಲು ಈ ಮಸೂದೆ ಹೇಳುತ್ತದೆ.
ಈ ಮಸೂದೆಯು ಅಮೇರಿಕ ಮತ್ತು ಇಂಗ್ಲೆಂಡಿನಲ್ಲಿರುವ ಡಿಎನ್‍ಎ ಪ್ರೊಫೈಲಿಂಗ್ ಕಾಯಿದೆಗಳ ಮಾದರಿಯನ್ನೇ ಅನುಸರಿಸಿದೆ ಆದರೆ ಅಲ್ಲಿರುವ ರಕ್ಷಣಾಕ್ರಮಗಳು ಇದರಲ್ಲಿಲ್ಲ. ಈ ಮಸೂದೆಯನ್ನು ಅನೇಕ ಸಲ ಪರಿಷ್ಕರಿಸಲಾಗಿದ್ದರೂ ಹಲವಾರು ತೊಂದರೆಗಳಿಂದ ಕೂಡಿದೆ. ಈ ಮಸೂದೆಯ ಕಾನೂನಾತ್ಮಕ ಸಮಸ್ಯೆಗಳ ಮೇಲೆ ಮೊದಲು ಕಣ್ಣು ಹಾಯಿಸುವ.
1. ಸಮ್ಮತಿ ಮತ್ತು ಘನತೆ – ಸಿವಿಲ್ ಪ್ರಕರಣಗಳಲ್ಲಿ ಈ ಮಸೂದೆಯಲ್ಲಿ ಒಪ್ಪಿಗೆ/ಸಮ್ಮತಿಯ ಆಯ್ಕೆಯೇ ಇಲ್ಲ. ಮರಣದಂಡನೆ ಮತ್ತು 7 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷೆಯಿರುವ ಅಪರಾಧ ಪ್ರಕರಣಗಳಲ್ಲೂ ಒಪ್ಪಿಗೆಯ ಅವಶ್ಯಕತೆ ಇಲ್ಲ. ಅಸ್ಪಷ್ಟವಾದ, ಮಾಹಿತಿ ನೀಡದೇ ಪಡೆದಿರುವ ಹಾಗೂ ಬಲವಂತವಾಗಿ ಪಡೆದಿರುವ ಒಪ್ಪಿಗೆಯ ವಿರುದ್ಧ ಯಾವುದೇ ಸುರಕ್ಷತಾ ಕ್ರಮಗಳಿಲ್ಲ. ಒಬ್ಬ ವ್ಯಕ್ತಿ ತನ್ನ ಡಿಎನ್‍ಎ ಅನ್ನು ಸಂಗ್ರಹಿಸಲು ಒಪ್ಪಿಕೊಳ್ಳಲು ನಿರಾಕರಿಸಿದಲ್ಲಿ ಮಾಜಿಸ್ಟ್ರೇಟರ ಆದೇಶದಿಂದ ಮುಂದುವರೆಯಬಹುದು. ಡಿಎನ್‍ಎ ಸಂಗ್ರಹದ ಉದ್ದೇಶ ಮತ್ತು ಪರಿಣಾಮಗಳ ಬಗ್ಗೆ ಆರೋಪಿಗೆ ಮಾಹಿತಿ ನೀಡಬೇಕಾದ ಅಗತ್ಯವಿಲ್ಲ, ಅದು ಆ ವ್ಯಕ್ತಿಯ ಘನತೆಯನ್ನು ಉಲ್ಲಂಘಿಸಿದಂತಾಗುತ್ತದೆ
2. ಗೌಪ್ಯತೆಯ ಹಕ್ಕು – ಒಬ್ಬ ವ್ಯಕ್ತಿಯ ಗುರುತನ್ನು ಡಿಎನ್‍ಎ ಪುಷ್ಟೀಕರಿಸುವುದರೊಂದಿಗೆ, ಅವನ/ಳ ವೈದ್ಯಕೀಯ ಮತ್ತು ದೈಹಿಕ ಗುಣಲಕ್ಷಣಗಳ ಮಾಹಿತಿಯನ್ನೂ ನೀಡುತ್ತದೆ, ಇದರಿಂದ ಆ ವ್ಯಕ್ತಿಯ ಗೌಪ್ಯತೆಯ ಮೇಲೆ ಪರಿಣಾಮವಾಗಬಹುದು. ಇದೇ ಕಾರಣಕ್ಕಾಗಿ, ಅನೇಕ ದೇಶಗಳಲ್ಲಿ, ಒಬ್ಬ ವ್ಯಕ್ತಿಯ ಇತರೆ ಹೆಚ್ಚುವರಿ ಮಾಹಿತಿಯನ್ನು ಪಡೆಯದಂತೆ ಡಿಎನ್‍ಎ ದ ಒಂದು ಅಂಶ ಮಾತ್ರ ಪಡೆದುಕೊಂಡು ಡಿಎನ್‍ಎ ಪ್ರೊಫೈಲಿಂಗ್ ಮಾಡಲಾಗುತ್ತದೆ. 2017ರಲ್ಲಿ ಈ ಮಸೂದೆಯನ್ನು ರಚಿಸುವಾಗ ಕಾನೂನು ಆಯೋಗವೂ ಇದನ್ನೇ ಸೂಚಿಸಿತ್ತು. ಆದರೆ ಈಗಿರುವ ಡಿಎನ್‍ಎ ಮಸೂದೆಯಲ್ಲಿ ಹೆಚ್ಚುವರಿ ಮತ್ತು ಸೂಕ್ಷ್ಮವಾದ ವೈಯಕ್ತಿಕ ಡಾಟಾ ಬಗ್ಗೆ ಸ್ಪಷ್ಟತೆ ಇಲ್ಲ.
3. ಡಾಟಾ ಉಳಿಸಿಕೊಳ್ಳುವಿಕೆ ಮತ್ತು ಡಾಟಾ ರಕ್ಷಣೆ – ಡಿಎನ್‍ಎ ಚಿತ್ರಣಗಳನ್ನು ಡಿಎನ್‍ಎ ಪ್ರಯೋಗಾಲಯಗಳಲ್ಲಿ ತಯಾರಿಸಲಾಗಿ, ಅವುಗಳನ್ನು ಡಿಎನ್‍ಎ ಡಾಟಾ ಬ್ಯಾಂಕ್‍ಗಳಿಗೆ ನೀಡಲಾಗುತ್ತದೆ. ಪ್ರಕರಣ ಇತ್ಯರ್ಥವಾದ ನಂತರ ಡಿಎನ್‍ಎ ಬ್ಯಾಂಕುಗಳಿಂದ ಆ ಡಿಎನ್‍ಎ ಚಿತ್ರಣಗಳನ್ನು ತೆಗೆದುಹಾಕುವ ಬಗ್ಗೆ ಯಾವುದೇ ಸ್ಪಷ್ಟತೆಗಳನ್ನು ಈ ಮಸೂದೆ ಹೊಂದಿಲ್ಲ. ಡಾಟಾ ಸುರಕ್ಷತೆಯ ಬಗ್ಗೆ ನಿಯಂತ್ರಣ ಅಥವಾ ಸುರಕ್ಷತಾ ಕ್ರಮಗಳ ಹಾಗೂ ಅವುಗಳನ್ನು ಮತ್ತೇ ಬಳಸುವ ಬಗ್ಗೆಯೂ ಸ್ಪಷ್ಟತೆಗಳಿಲ್ಲ.
2018 ರಲ್ಲಿ ಬಂದ ವೈಯಕ್ತಿಕ ಡಾಟಾ ರಕ್ಷಣೆ ಮಸೂದೆಯು (ಪರ್ಸನಲ್ ಡಾಟಾ ಪ್ರೊಟೆಕ್ಷನ್ ಬಿಲ್, ಪಿಡಿಪಿ ಬಿಲ್)  ‘ಸೂಕ್ಷ್ಮವಾದ ವೈಯುಕ್ತಿಕ ಡಾಟಾ’ ಎಂದರೇನು ಎಂದು ವ್ಯಾಖ್ಯಾನಿಸುತ್ತದೆ ಮತ್ತು ಬಯೋಮೆಟ್ರಿಕ್ ಡಾಟಾ, ಜೆನೆಟಿಕ್ ಡಾಟಾ ಮತ್ತು ಆರೋಗ್ಯ ಡಾಟಾ ಗಳನ್ನು ಸೂಕ್ಷ್ಮ ಎಂದು ಪರಿಗಣಿಸುವಂತೆ ಒಂದು ದೊಡ್ಡ ಪಟ್ಟಿಯನ್ನು ನೀಡುತ್ತದೆ. ಈ ಮಸೂದೆಯ ಅಡಿಯಲ್ಲಿ ಮಾಹಿತಿ ಸಂಗ್ರಹಣೆಗೆ ಮತ್ತು ಸಂಗ್ರಹಣೆಗೆ ನಿರ್ದಿಷ್ಟವಾದ, ಸ್ಪಷ್ಟವಾದ ಒಪ್ಪಿಗೆಯುಳ್ಳ ಸಮ್ಮತಿ/ಒಪ್ಪಿಗೆಯನ್ನು ಒಳಗೊಂಡಂತೆ ಅನೇಕ ಮಾನದಂಡಗಳಿವೆ. ಆದರೆ ಡಿಎನ್‍ಎ ಮಸೂದೆಯಲ್ಲಿ ಇವು ಕಾಣಿಸಿಕೊಳ್ಳುವುದಿಲ್ಲ. ಗೌಪ್ಯತೆಯ ಶಾಸನಬದ್ಧ ಹಕ್ಕಿಗೆ ಅನುಗುಣವಾಗಿ, ಪಿಡಿಪಿ ಬಿಲ್‍ನಂತೆ ಇರುವಂತೆ ನೋಡಿಕೊಂಡು ಈ ಮಸೂದೆಯನ್ನು ಅಂಗೀಕರಿಸಬೇಕಿತ್ತು.
1. ಮರೆತುಬಿಡುವ ಹಕ್ಕು (ರೈಟ್ ಟು ಬಿ ಫಾರ್ಗೊಟನ್)– ಭಾರತೀಯ ನಾಗರಿಕರ ಗೌಪ್ಯತೆಯ ಹಕ್ಕಿನ ಒಂದು ಭಾಗವು ಮರೆತುಬಿಡುವ ಹಕ್ಕನ್ನು ಒಳಗೊಂಡಿದೆ. ಸದ್ಯದ ಡಿಎನ್‍ಎ ಮಸೂದೆ ಸಂಗ್ರಹಿಸಿದ ಮಾಹಿತಿ ಎಷ್ಟು ಸಮಯದ ತನಕ ಇಟ್ಟುಕೊಳ್ಳಬೇಕು ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲ.
2. ವ್ಯಕ್ತಿಗಳ ಡಿಎನ್‍ಎ ಚಿತ್ರಣಗಳನ್ನು ತೆಗೆದುಹಾಕಲು ದೂರು ನೀಡುವ, ಪರಿಹಾರ ಪಡೆಯುವ ವ್ಯವಸ್ಥೆ ಇಲ್ಲ – ಡಿಎನ್‍ಎ ಡಾಟಾ ಬ್ಯಂಕುಗಳಿಂದ ಸಿವಿಲ್ ಪ್ರಕರಣಗಳ ಡಿಎನ್‍ಎ ಚಿತ್ರಣಗಳನ್ನು ತೆಗೆದುಹಾಕಲು ಯಾವುದೇ ಅವಕಾಶವಿಲ್ಲ. ಡಾಟಾ ಬ್ಯಂಕುಗಳಿಂದ ಡಿಎನ್‍ಎ ಚಿತ್ರಣವನ್ನು ತೆಗೆದು ಹಾಕದಿದ್ದಲ್ಲಿ, ಅಂತಹ ಪ್ರಕರಣದಲ್ಲಿ ದೂರು ನೀಡುವುದಕ್ಕೆ ಯಾವುದೇ ವ್ಯವಸ್ಥೆ ಇಲ್ಲ.
ಕಾನೂನಾತ್ಮಕ, ಗೌಪ್ಯತೆಯ ಸಮಸ್ಯೆಗಳೊಂದಿಗೆ, ಹಲವಾರು ವ್ಯವಹಾರಿಕ, ನೈತಿಕ ಮತ್ತು ಸಾಮಾಜಿಕ ಸಮಸ್ಯೆಗಳೂ ಈ ಮಸೂದೆಯಲ್ಲಿ ಅಡಗಿವೆ. ಒಬ್ಬ ಸಾಮಾನ್ಯ ವ್ಯಕ್ತಿಗೆ ದೇಶದ ಎಲ್ಲಾ ಅಪರಾಧಗಳನ್ನು ತಡೆಗಟ್ಟಲು ಒಂದು ಮಂತ್ರ ದಂಡವಾಗಿ ಕಾಣಿಸಬಹುದು. ಆದರೆ ಸೂಕ್ಷ್ಮ ವಿವರಗಳೆಡೆಗೆ ಹೋದಾಗ ಮಾತ್ರ ಸ್ಪಷ್ಟ ಚಿತ್ರಣ ಸಿಗುವುದು.
ಡಿಎನ್‍ಎ ಅನ್ನು 70 ರ ದಶಕದಿಂದ ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆಗಾಗಿ ಬಳಸಲಾಗುತ್ತಿದೆ. ಆದರೆ, ಆ ಸಂಶೋಧನೆ ಬ್ಯಾಕ್ಟೀರಿಯಾ, ವೈರಸ್ ಮತ್ತು ಲಸಿಕೆ, ಹಾರ್ಮೋನು ಹಾಗೂ ಇನ್ಸುಲಿನ್‍ನಂತಹ ಔಷಧಿ ತಯಾರಿಕೆಯ ಪ್ರಕ್ರಿಯೆಯಲ್ಲಿ ಬಳಸಲಾಗುತ್ತಿತ್ತು. 2000ದಿಂತ ಇತ್ತೀಚಿಗೆ ಬಯೋಟೆಕ್ನಾಲಜಿ ಮತ್ತು ಮಾಹಿತಿ ತಂತ್ರಜ್ಞಾನದದ ಕ್ಷೇತ್ರದಲ್ಲಿ ಆದ ಬೆಳವಣಿಗೆಗಳಿಂದಾಗಿ ಇಂದು ಕ್ಲಿಷ್ಟಕರವಾದ ಜೆನೆಟಿಕ್ ಮಾಹಿತಿಯನ್ನು ಡಾಟಾ ಆಗಿ ಪರಿವರ್ತಿಸಿ, ಅದರಿಂದ ಒಬ್ಬ ವ್ಯಕ್ತಿಯ ದೈಹಿಕ ಮತ್ತು ವೈದ್ಯಕೀಯ ಗುಣಲಕ್ಷಣಗಳನ್ನು ಅದರಿಂದಲೇ ತಿಳಿದುಕೊಳ್ಳಬಹುದಾಗಿದೆ ಮತ್ತು ಮಾನವನ ಸಂಕೀರ್ಣ ವರ್ತನೆ ಮತ್ತು ಗುಣಲಕ್ಷಣಗಳನ್ನು ಅರ್ಥಮಾಡಿಕೊಳ್ಳಬಹುದಾಗಿದೆ. ತಲೆತಲಾಂತರದಿಂದ ಬಂದ ಎಲ್ಲಾ ಜೆನೆಟಿಕ್ ಮಾಹಿತಿಯನ್ನು ಡಿಎನ್‍ಎ ಹೊಂದಿರುವುದರಿಂದ ವಿಜ್ಞಾನಿಗಳಿಗೆ, ಇತಿಹಾಸಕಾರರಿಗೆ, ಮಾನವಶಾಸ್ತ್ರಜ್ಞರಿಗೆ ಅತ್ಯಮೂಲ್ಯ ನಿಧಿಯಾಗಿ ಕಾಣುತ್ತದೆ.
ಅಮೇರಿಕದಲ್ಲಿ ಈಗಾಗಲೇ ಪೂರ್ವಜರ ಮತ್ತು ಪಿತೃತ್ವ ವಿವಾದಗಳಲ್ಲಿ ಜೆನೆಟಿಕ್ ಪರೀಕ್ಷೆಯನ್ನು ಬಳಸಲಾಗುತ್ತದೆ ಹಾಗೂ ಅದರ ವ್ಯಾಪಾರೀಕರಣವೂ ಆಗಿದೆ. 2018ರ ಹೊತ್ತಿಗೆ ಡಿಎನ್‍ಎ ಪರೀಕ್ಷಿಸುವ ಕಂಪನಿಗಳ ಹತ್ತಿರ ಒಂದು ಕೋಟಿ 80 ಲಕ್ಷ ಡಿಎನ್‍ಎ ಚಿತ್ರಣಗಳಿದ್ದವು. ಕೆಲವು ಕಂಪನಿಗಳು ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸಿ ಡಿಎನ್‍ಎ ಮಾಹಿತಿಯನ್ನು ತಮ್ಮಲ್ಲೇ ಉಳಿಸಿಕೊಂಡಿದ್ದೂ ಬೆಳಕಿಗೆ ಬಂದಿದೆ. ಈಗ 130 ಕೋಟಿ ಜನಸಂಖ್ಯೆ ಹೊಂದಿರುವ, ಅದೂ ಜನಾಂಗೀಯ ವೈವಿಧ್ಯವನ್ನು ಹೊಂದಿರುವ, ಜಾತಿ, ಧರ್ಮ, ವರ್ಗಗಳಿಂದ ವಿಭಜಿತವಾದ, ತಮ್ಮ ಹಕ್ಕುಗಳ ಅರಿವನ್ನು ಹೊಂದದೇ ಇರುವ  ಭಾರತದಲ್ಲಿ ಏನಾಗಬಹುದು ಎನ್ನುವುದನ್ನು ಊಹಿಸುವುದೂ ಕಷ್ಟ.
ಬಿಳಿಯರ ಮೇಲಿರಿಮೆಯನ್ನು ಪುಷ್ಟೀಕರಿಸಲು ಡಿಎನ್‍ಎ ವಿಜ್ಞಾನವನ್ನು ಬಳಸಿದ ಪ್ರಕರಣಗಳಿವೆ. ಹಾಗಿರುವಾಗ, ಪಟ್ಟಭದ್ರ ಹಿತಾಸಕ್ತಿಗಳ ಕೈಯಲ್ಲಿ ಸಿಕ್ಕು ಧಾರ್ಮಿಕ ಮೇಲಿರಿಮೆಯನ್ನೋ ಅಥವಾ ಜಾತಿ ಮೇಲಿರಿಮೆಯನ್ನು ಸಮರ್ಥಿಸಲು ಬಳಸಲಾಗದು ಎಂದು ಹೇಳಲು ಹೇಗೆ ಸಾಧ್ಯ?.
2016 ರಲ್ಲಿ, ಒಂದು ವರ್ಷದಲ್ಲೇ ಭಾರತದಲ್ಲಿ 29,75,711 ಅಪರಾಧ ಪ್ರಕರಣಗಳು ವರದಿಯಾಗಿದ್ದವು. ಇಂತಹ ಸಂದರ್ಭದಲ್ಲಿ ಅಪರಾಧ ಮತ್ತು ಕೆಲವು ನಿರ್ದಿಷ್ಟ ಸಿವಿಲ್ ಪ್ರಕರಣಗಳಲ್ಲಿ ಸಂಗ್ರಹಿಸಲಾಗುವ ಡಿಎನ್‍ಎ ಚಿತ್ರಣಗಳ ಸಂಖ್ಯೆ ಮತ್ತು ಮಾಹಿತಿ ಎಷ್ಟಿರಬಹುದೆಂದು ಊಹೆ ಮಾಡಲು ಮಾತ್ರ ಸಾಧ್ಯ. ಅದರೊಂದಿಗೆ, ಇಷ್ಟು ಬೃಹತ್ ಡಾಟಾ ಅನ್ನು ಶೇಖರಿಸಿಡಲು ಬೇಕಾಗುವ ಮೂಲಸೌಕರ್ಯಗಳು ಮತ್ತು ಸುಸಜ್ಜಿತ ಡಾಟಾ ಬ್ಯಾಂಕುಗಳನ್ನು ಸ್ಥಾಪಿಸಲು ಬೇಕಾಗಿರುವ ಹೆಚ್ಚುವರಿ ವೆಚ್ಚ ಬೇರೆ.
ನಿಜವಲ್ಲದ ಸಕಾರಾತ್ಮಕ ಅಂಶಗಳು – ಡಿಎನ್‍ಎ ಚಿತ್ರಣದ ವಿಧಾನ ವಿಶ್ವಾಸಾರ್ಹವಾಗಿದ್ದರೂ, ಅಪರಾಧ ಸ್ಥಳ ಹಲವಾರು ಜನರ ಡಿಎನ್‍ಎ ದಿಂದ ಕಲೂಷಿತವಾಗಿದ್ದಲ್ಲಿ ಅಪರಾಧಿಯನ್ನು ಪತ್ತೆಹಚ್ಚುವುದು ಜಟಿಲಗೊಳ್ಳುತ್ತದೆ. ಅಪರಾಧ ಸ್ಥಳಗಳಲ್ಲಿ ಬೇರಾವುದೋ ಡಿಎನ್‍ಎ ಸ್ಯಾಂಪಲ್ ಅನ್ನು ತಂದಿಡುವುದು ಎಷ್ಟು ಸುಲಭ ಎನ್ನುವುದನ್ನು ಹಲವು ಪ್ರಯೋಗಾಲಯಗಳು ತೋರಿಸಿಕೊಟ್ಟಿವೆ. ಡಿಎನ್‍ಎ ಪರೀಕ್ಷೆಯಲ್ಲೂ  ದೋಷಗಳಾಗಬಹುದು ಎಂದು ಕೆಲವು ಪ್ರಕರಣಗಳು ಮತ್ತು ಕೆಲವು ಅಧ್ಯಯನಗಳಿಂದ ಸಾಬೀತಾಗಿದೆ. ಡಿಎನ್‍ಎ ಚಿತ್ರಣಗಳ ಬಳಕೆ, ಸಂಗ್ರಹಣೆ, ಶೇಖರಣೆಯ ಬಗ್ಗೆ ಸರಿಯಾದ ತರಬೇತಿ ನೀಡಿ, ಸಂವೇದನೆಯನ್ನು ಬೆಳೆಸಬೇಕಿದೆ ಹಾಗೂ ಡಿಎನ್‍ಎ ಪರೀಕ್ಷೆಗಳನ್ನು ಪೂರಕವಾದ ಸಾಕ್ಷ್ಯ ಎಂದು ಬಳಸಬೇಕೇ ಹೊರತು ಅದೇ ಕೊನೆಯಲ್ಲ ಮತ್ತು ಡಿಎನ್‍ಎ ಪರೀಕ್ಷೆಗಳೂ ತಪ್ಪಾಗಬಹುದು ಎನ್ನುವ ಜಾಗೃತಿಯನ್ನು ಮೂಡಿಸಬೇಕಿದೆ.
ಡಿಎನ್‍ಎ ಪರೀಕ್ಷೆ ಒಂದು ಸಾಮಾನ್ಯ ವಿಧಾನವಾಗಿರುವ ದೇಶಗಳಲ್ಲಿ ಅಪರಾಧ ನಿರ್ಣಯದ ಪ್ರಮಾಣದಲ್ಲಿ(ಕನ್ವಿಕ್ಷನ್ ರೇಟ್) ಸುದಾರಣೆ ಆಗಿಲ್ಲ ಎಂದೂ ಕೆಲವರು ವಾದಿಸುತ್ತಾರೆ. ಅದರೊಂದಿಗೆ, ನಮ್ಮ ನ್ಯಾಯಲಯಗಳು ಸಾಕ್ಷ್ಯ ಸಂಗ್ರಹಣೆ ಮತ್ತು ಅಪರಾಧಿಗಳ ಪತ್ತೆ ಹಚ್ಚುವಲ್ಲಿ ಆಗುವ ಅಸಾಮಥ್ರ್ಯದಿಂದ ಮಿತಿಮೀರಿದ ಹೊರೆಹೊತ್ತಿವೆಯೇ? ಅಥವಾ, ಶ್ರೀಮಂತರು ಮತ್ತು ಬಲಾಢ್ಯರು ಸದಾಕಾಲ ದಕ್ಕಿಸಿಕೊಂಡು, ಬಡವರು ಮತ್ತು ದುರ್ಬಲರು ಮಾತ್ರ ಶಿಕ್ಷೆಗೆ ಗುರಿಯಾಗುತ್ತಿರುವುದರಿಂದ ನ್ಯಾಯಾಲಯಗಳ ಹೊರೆ ಹೆಚ್ಚಿದಿಯೇ? ಸಾಕ್ಷ್ಯಗಳನ್ನು ತಿರುಚಬಹುದು, ಡಾಟಾ ಅನ್ನು ಫೋರ್ಜರಿ ಮಾಡಬಹದು ಎನ್ನುವುದೂ ವಾಸ್ತವ. ಲೈಂಗಿಕ ದೌರ್ಜನ್ಯದ ಪ್ರಕರಣಗಳಲ್ಲಿ ಡಿಎನ್‍ಎ ಸ್ಯಾಂಪಲ್ ಇದ್ದಾಗಲೂ ರೇಪಿಸ್ಟ್ ಖುಲಾಸೆಯಾಗಿರುವ ಪ್ರಕರಣಗಳಿರುವಾಗ, ಕೋಟಿಗಟ್ಟಲೆ ಜನರ ಡಾಟಾಬೇಸ್‍ನಿಂದ ನ್ಯಾಯ ಹೇಗೆ ಸಿಗಬಹುದು? ಇನ್ನೂ ಬೆಳವಣಿಗೆ ಆಗುತ್ತಿರುವ ತಂತ್ರಜ್ಞಾನದಲ್ಲಿ ದೇಶದ ಸಮಯ, ಹಣ ಮತ್ತು ಸಂಪನ್ಮೂಲಗಳನ್ನು ತೊಡಗಿಸುವುದು ಯೋಗ್ಯವೇ? ಅಥವಾ, ನಮಗೆ ನಿಜವಾಗಿಯೂ ಅವಶ್ಯಕವಿಲ್ಲದ ತಂತ್ರಜ್ಞಾನವನ್ನು ತಂದಲ್ಲಿ, ಅದು  ಸರಕಾರದ ಕೈಯಲ್ಲಿ  ಕಣ್ಗಾವಲಿನ ಒಂದು ಸಾಧನ ಮತ್ತು ಕಾರ್ಪೋರೇಟ್‍ಗಳಿಗಾಗಿ ಒಂದು ಮಾರ್ಕೆಟಿಂಗ್ ಸಾಧನವಾಗಿ ಪರಿಣಮಿಸುವುದೇ?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...